ಪ್ರಕೃತಿಯಲ್ಲಿನ ಈ ಗಿಡಮರಗಳು ನಮಗೆ ಏನೆಲ್ಲಾ ಕಲಿಸುತ್ತಿವೆ?
ಪರಿಸರ ವ್ಯವಸ್ಥೆಯಲ್ಲಿ ಮನುಜರು, ಪ್ರಾಣಿ ಪಕ್ಷಿಗಳು ಇತ್ಯಾದಿ ಇರುವಂತೆ ಅತ್ಯಂತ ಪ್ರಮುಖವಾದ ಮತ್ತೊಂದು ಅಂಶವೆಂದರೆ ಗಿಡಮರಗಳು... ದಿನನಿತ್ಯದಲ್ಲಿ ನಮ್ಮ ಜೊತೆ ನಮ್ಮಂತೆಯೇ ಇರುವ ಈ ಜೀವಿಗಳನ್ನು ಕಂಡೂ ಕಾಣದಂತೆ ಇದ್ದು ಬಿಡುವ ಜೀವಿ ಎಂದರೆ ಮನುಜ. ಜೀವನ ಸಾಗಿಸುವ ತಂತ್ರವನ್ನು ಪರಿಸರದ ಈ ಜೀವಿಯಿಂದ ಕಲಿಯೋದು ಬಹಳಷ್ಟಿದೆ.
ಮೊದಲಿಗೆ, ಭೂಗರ್ಭದಲ್ಲಿ ಹೂತ ಒಂದು ಬೀಜ ಅಂಕುರಿಸುವುದರಿಂದ ಹಿಡಿದು ಅದರ ಜೀವನವನ್ನು ಪರಿಶೀಲಿಸುತ್ತಾ ಹೋದರೆ ಮನುಜ, ಪ್ರಾಣಿ ಪಕ್ಷಿಗಳ ಜೀವನಕ್ಕೆ ಬಹಳ ಹತ್ತಿರದ ಸಂಬಂಧವಿದೆ ಅನ್ನಿಸುತ್ತೆ. ಹೂತಿಟ್ಟ ಒಂದು ಬೀಜ ಅಂಕುರಿಸಿ ಭುವಿಯನ್ನು ಭೇದಿಸಿ ಹೊರಗೆ ಬರುತ್ತದೆ. ಮೊಟ್ಟೆಯೊಡೆದು ಹೊರಗೆ ಬರುವ ಮರಿಯಂತೆ ಈ ಸಸಿಗೂ ಯಾವ ರೀತಿಯ ಸಹಾಯವನ್ನೂ ಮಾಡದೇ ಬಿಟ್ಟರೆ ತಾನೇ ಶಕ್ತಿ ಪಡೆದು ಛೇದಿಸಿ ಹೊರಗೆ ಬರುತ್ತದೆ. ಒಮ್ಮೆ ಅದು ಹೊರಗೆ ಬಂದ ಮೇಲೆ ಪರಿಸರದಲ್ಲಿ ಒಂದಾಗಿ ಆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗುತ್ತದೆ. ಚಳಿಗೆ ನಡುಗಬಹುದು, ಬಿಸಿಲಿಗೆ ನಲುಗಹುದು, ಮಳೆಯಲ್ಲಿ ಆನಂದಿಸಬಹುದು ಹೀಗೆ...
ದಿನವೊಂದರಲ್ಲಿ ನಾವೆಲ್ಲಾ ಬರೀತೀವಿ, ಹಾಗಂತ ನಾವು ಬರಹಗಾರರೇ?
ಹೊರ ಪ್ರಪಂಚದ ಎಲ್ಲ ಅತೀವೃಷ್ಠಿಗೂ ಅನಾವೃಷ್ಠಿಗೂ ತಲೆಕೊಡುತ್ತಾ ಬೆಳೆದು ದಿನನಿತ್ಯದಲ್ಲಿ ಬಲಿಷ್ಠವಾಗುತ್ತಾ ಸಾಗುತ್ತದೆ. ಇಲ್ಲಿ ಅತೀವೃಷ್ಟಿ/ಅನಾವೃಷ್ಟಿ ಎಂದಿರುವುದು ಕೇವಲ ಮಳೆಯ ಕುರಿತು ಅಂತೇನಲ್ಲ. ಯಾವುದೇ ಹೆಚ್ಚು ಕಡಿಮೆಗಳಿಗೆ ಅಂತ ಅರ್ಥೈಸಿಕೊಳ್ಳಬೇಕು.
ಸಸಿಯಾಗಿರುವುದು ಅಹೋರಾತ್ರಿ ಗಿಡವಾಗಿ ಮರುದಿನ ಮರವಾಗಿ ನಿಲ್ಲೋದಿಲ್ಲ. ಅದರ ಬೆಳವಣಿಗೆ ಬಲು ನಿಧಾನ. ಕೆಲವೊಮ್ಮೆ'ಇದೇನಿದು ದಿನಾ ನೀರು ಹೊಯ್ದಿದ್ದೇ ಬಂತು, ಗೊಬ್ಬರ ಉಣಿಸಿದ್ದೇ ಬಂತು ಏನೂ ಬೆಳೀತಾನೆ ಇಲ್ಲವಲ್ಲ?' ಎಂಬ ನಮ್ಮ ಗೊಣಗಾಟ ಸರ್ವೇಸಾಮಾನ್ಯ... ಆದರೆ ಭುವಿಯ ಮೇಲ್ಭಾಗ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತೆ ಅಷ್ಟೇ ವಿನಃ ಭೂಗರ್ಭದಲ್ಲಿ ಏನಾಗುತ್ತಿದೆ ಎಂದು ಬಲ್ಲವರಾರು?
ಸಮಯದ ಬಗ್ಗೆ ಓದೋಕೆ ನಿಮ್ಮ ಬಳಿ ಸ್ವಲ್ಪ ಟೈಮ್ ಇದೆಯಾ?
ನೋಡಲು ಸುಮ್ಮನೆ ಇರುವಂತೆ ಕಾಣುವ ಈ ಗಿಡಗಳು ಮೊದಲ ಹಂತದಲ್ಲಿ ಬೇರೂರುವ ಕ್ರಿಯೆಯಲ್ಲೇ ತಲ್ಲೀನ. ತಾನು ಗಿಡವಾಗಿ, ಮರವಾಗಿ ಬೆಳೆಯಬೇಕು ಎಂದರೆ ಬುನಾದಿ ಭದ್ರ ಇರಬೇಕು ಅಂತ ಆ ಸಸಿಗಳಿಗೆ ಗೊತ್ತು. ಹಾಗಾಗಿ ಮೊದಲಿಗೆ ತನ್ನ ಬೇರನ್ನು ಬಲಿಷ್ಠವಾಗಿ ಊರಿದ ನಂತರ ಮೇಲ್ಭಾಗದ ಬೆಳವಣಿಗೆಗೆ ಮಹತ್ವ ನೀಡುತ್ತದೆ. 'ನಾವು' ಏನೋ ಒಂದು ಡಿಗ್ರಿ ಅಂತ ಪಡೆದು ಕೆಲಸಕ್ಕೆ ಸೇರಿದ ಮರುದಿನವೇ ಕಾರು, ಮನೆ, ಆಸ್ತಿ ಅಂತೆಲ್ಲಾ ಸವಲತ್ತುಗಳನ್ನು ಹೊಂದಿ 'settle' ಆಗಿ ಬಿಡಬೇಕು ಎಂದುಕೊಳ್ಳುವ ಹಿಂದೆ ಅದ್ಯಾವ ಮೂರ್ಖತನ ಅಡಗಿದೆಯೋ ನಾ ಕಾಣೆ. ಬೆಳವಣಿಗೆಯ ವಿಷಯದಲ್ಲಿ ಇರಬೇಕಾದ ಭದ್ರಬುನಾದಿ ಮತ್ತು ಸಹನೆಯನ್ನು ಸಸಿಗಳಿಂದ ಕಲಿಯಬೇಕಾಗಿದೆ. ಸರಿಯಾಗಿ ಬೇರೂರದೆ ಎತ್ತರವಾಗಿ ನಿಲ್ಲೋಕ್ಕಾಗಲ್ಲ ಅಂತ ನಾವು ಎಂದು ಕಲಿಯೋದು? ಅಡಿಪಾಯ ಗಟ್ಟಿಯಿಲ್ಲದ ಕಟ್ಟಡಗಳಲ್ಲವೇ ಟೊಳ್ಳು?
ಸಮುದ್ರದ ನೀರಿನ ಮೇಲೆ ಒಂದು ಮಂಜುಗಡ್ಡೆಯ ಗುಡ್ಡ ಇರುತ್ತದೆ ಎಂದುಕೊಳ್ಳಿ. ಅದು ತೇಲುವ ಗುಡ್ಡವಾಗಿರದೆ ನಿಂತ ಗುಡ್ಡವಾಗಿರುತ್ತದೆ. ಸಮುದ್ರದ ಆಳವನ್ನು ಒಮ್ಮೆ ಮನಸ್ಸಿಗೆ ತಂದುಕೊಂಡಾಗಲೇ ಈ ಮಂಜುಗಡ್ಡೆಯ ಗುಡ್ಡದ ಬಗ್ಗೆ ಒಂದು ಅರಿವು ಬರೋದು. ನಾವು ಕಾಣೋದು tip of the iceberg ಅಷ್ಟೇ. ಆದರೆ ಸಮುದ್ರದ ಒಳಗೆ ಹೂತಿರುವ ಆ ಗುಡ್ಡದ ಆಳ ಮತ್ತು ಅಗಲ ಊಹಿಸಲೂ ಅಸಾಧ್ಯ. ಹಾಗೆಯೇ ಒಂದು ಗಿಡ ಅಥವಾ ಮರದ ಬೇರು ಬಿಡುವಿಕೆಯ ವಿಷಯ ಕೂಡ. ಭುವಿಯ ಆಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಊಹಿಸಲಾಗುವುದಿಲ್ಲ. ಸಾಮ್ಯತೆ ನೋಡಿದಾಗ, ಕಂಗಳಲ್ಲಿ ಎರಡು ಹನಿ ನೀರು ಕಾಣಬಹುದು. ಆದರೆ ಹೃದಯಾಂತರಾಳದಲ್ಲಿ ಮಡುಗಟ್ಟಿರುವ ಭಾವನೆಗಳನ್ನು ಅರಿಯೋದು ಕಷ್ಟ.
ಸತ್ಯಾಗ್ರಹದ ನಿಜವಾದ ಅರ್ಥ ಏನೆಂದು ನಿಮಗೆ ಗೊತ್ತಾ?
ಒಂದು ಗಿಡವೇ ಆಗಲಿ ಮರವೇ ಆಗಲಿ ಪರಿಸರ ವ್ಯವಸ್ಥೆಗೆ ಸ್ಪಂದಿಸುತ್ತಲೇ ಇರುತ್ತದೆ. ವಸಂತ ಮಾಸದಲ್ಲಿ ಚಿಗುರುವ ಇವು ಆನಂದದಲ್ಲಿ ನಳನಳಿಸುತ್ತಾ ಹಸಿರು ವನವನ್ನೇ ಸೃಷ್ಟಿಸುತ್ತದೆ. ಆ ನಂತರದ ದಿನಗಳಲ್ಲಿ ಹೂವನ್ನು ಮೂಡಿಸಿಕೊಂಡು ಬೇಸಿಗೆಯಲ್ಲಿ ಕಾಯಿಗಳನ್ನು ನಂತರ ಹಣ್ಣುಗಳನ್ನು ನೀಡುತ್ತವೆ. ಈ ಹಣ್ಣು ಕಾಯಿಗಳಿಗೆ ಅದೆಷ್ಟು ಗ್ರಾಹಕರು? ಕ್ರಿಮಿಕೀಟಗಳೇ ಆಗಿರಬಹುದು, ಪಕ್ಷಿಗಳೇ ಆಗಿರಬಹುದು, ಪ್ರಾಣಿಗಳೇ ಆಗಿರಬಹುದು ಅಥವಾ ಮಾನವನೂ ಆಗಿರಬಹುದು. ತನ್ನ ಹಕ್ಕನ್ನು ಸಾಧಿಸುವ ಈ ಮನುಜ ಕ್ರಿಮಿಕೀಟ ನಾಶಕಗಳನ್ನು ಬಳಸಿ ಅವುಗಳನ್ನು ದೂರ ಇಡುತ್ತಾನೆ. ಬೇಲಿ ಹಾಕಿ ಪ್ರಾಣಿಗಳನ್ನು ದೂರ ಇಡುತ್ತಾನೆ, ಬೆದರು ಬೊಂಬೆಗಳನ್ನು ಇರಿಸಿ ಪಕ್ಷಿಗಳನ್ನು ದೂರ ಸರಿಸುತ್ತಾನೆ. ಮತ್ತೋರ್ವ ಮನುಜನ ಆಕ್ರಮಣವನ್ನು ದೂರವಿಕ್ಕಲು ತಾನೇ ಶಸ್ತ್ರಸಜ್ಜಿತನಾಗಿ ನಿಲ್ಲುತ್ತಾನೆ. "ಸ್ವಾರ್ಥಿ ತಾನಾಗಿ ಮೆರೆದಾಡುವ".
ಇಷ್ಟೆಲ್ಲಾ ಆದರೂ ಹಣ್ಣುಕಾಯಿಗಳನ್ನು ನೀಡುವ ಮರ ಮಾತ್ರ ತನ್ನ ಕರ್ತವ್ಯವನ್ನು ತಾನು ನಿಲ್ಲಿಸದೆ ಮುಂದುವರೆಸುತ್ತಲೇ ಇರುತ್ತದೆ. ಇಲ್ಲಿ ಅರ್ಥೈಸಿಕೊಳ್ಳಬೇಕಾದ್ದು ಇಷ್ಟೇ. ತನ್ನ ಹೂವು, ಹಣ್ಣು, ಕಾಯಿಗಳ ಮೇಲೆ ಅವು ಇಂದಿಗೂ ಚಕ್ರಾಧಿಪತ್ಯ ಸಾಧಿಸಿಲ್ಲ. ನಮ್ಮ ಸಂತತಿಗಳ ಮೇಲೆ ನಾವು ಹಕ್ಕು ಸಾಧಿಸುವುದನ್ನು ನಿಲ್ಲಿಸುವುದು ಒಳಿತಲ್ಲವೇ? ಇತರ ಜೀವಿಗಳಂತೆ ಮಾಡಲಾಗದು ಎನ್ನುವುದಾದರೆ ಕನಿಷ್ಠ ಪಕ್ಷ ಮಕ್ಕಳಿಂದ ನಿರೀಕ್ಷೆ ಮಾಡುವುದನ್ನಾದರೂ ನಿಲ್ಲಿಸಬಹುದು ಅಲ್ಲವೇ?
ಎಲೆಗಳು ತಾವು ನೆಲಕ್ಕುದುರಿ ಅಂತ್ಯವಾಗುವ ಮುನ್ನ ಹಲವಾರು ಹಂತದಲ್ಲಿ ತಮ್ಮ ಬಣ್ಣವನ್ನು ಬದಲಿಸಿಕೊಂಡು ನೋಡುಗರ ಮನಸ್ಸಿಗೆ ಆನಂದ ನೀಡುತ್ತದೆ. ಮನುಜನೂ ಉದುರುವಾ ತನಕ ಜೀವನದುದ್ದಕ್ಕೆ ತನ್ನ ಬಣ್ಣ ಬದಲಿಸುತ್ತಾ ಸಾಗುತ್ತಾನೆ, ಆದರೆ ಎಲ್ಲವೂ ಖುಷಿ ಕೊಡೋಲ್ಲ. ಎಲೆ ತಾನು ಗಟ್ಟಿಯಾಗಿದ್ದಾಗ ಹಸಿರು ಬಣ್ಣದಿಂದ ಕೂಡಿ ಹೇಗೆ ಆಹ್ಲಾದ ತರುತ್ತದೆಯೋ ಅಷ್ಟೇ ಆನಂದವನ್ನು ತಾ ಹೋಗುವ ಮುನ್ನವೂ ಆನಂದ ಹಂಚಿ ಹೋಗುತ್ತವೆ. ಕಡಿಮೆ ಅವಧಿ ಜೀವಿಸುವ ಎಲೆಗಳು ತಾನಿರುವಷ್ಟೂ ಕಾಲ 'ಜೀವಿಸುತ್ತದೆ' ಅನ್ನೋದು ಮುಖ್ಯ. ವರುಷಕೊಂದು ಹೊಸತು ಜನ್ಮ ಪಡೆದಿರುವ ಗಿಡಮರಗಳು ಧನ್ಯ ನಿಜ, ಆದರೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮವಾಗಿ ಬಾಳಿ ಬದುಕಲು ನಮಗಿರುವ ಸಮಯ ಬಹಳಷ್ಟು ಇದ್ದರೂ ಸುಧಾರಣೆಗೊಳ್ಳಲು ಮನಸ್ಸು ಮಾಡಬೇಕು ಅಷ್ಟೇ!
ತನ್ನೆಲ್ಲಾ ಎಲೆಗಳನ್ನು ಉದುರಿಸಿಕೊಂಡು ಬೋಳಾದರೂ ಕಣ್ಣೀರು ಸುರಿಸಿಕೊಂಡು ಗೋಳಾಡದೇ ಮುಂದಿನ ದಿನಗಳಲ್ಲಿ ಮರುಹುಟ್ಟು ಪಡೆಯಲು ಕೊಂಚ ವಿಶ್ರಮಿಸಿಕೊಳ್ಳುತ್ತದೆ ಅಷ್ಟೇ, ಅದು depression ಅಂತಲ್ಲ. ಎಲ್ಲರನ್ನೂ ಕಳೆದುಕೊಂಡು ಸೋತೆ ಎಂದು ಕೈಚೆಲ್ಲಿ ಕೂರದೆ ಮರುಹುಟ್ಟು ಪಡೆಯುವತ್ತ ಗಮನ ಹರಿಸುತ್ತದೆ. ಹೊರಗಿನ ಬದಲಾಗುವ ವಾತಾವರಣಕ್ಕೆ ತಕ್ಕಂತೆ ಸ್ಪಂದಿಸುತ್ತಾ ಜೀವಿಸುವ ಕ್ರಿಯೆಯನ್ನು ನಾವೂ ರೂಢಿಸಿಕೊಳ್ಳಲೇಬೇಕು. ಹುಟ್ಟು ಸಾವು ನಮ್ಮ ಜೀವನದ ಅವಿಭಾಜ್ಯ ಅಂಗ. ನಾವು ಸಂಘಜೀವಿಗಳು ಎಂದು ಮರೆಯದೇ, ತೊರೆದು ಹೋದವರ ಬಗ್ಗೆಯೇ ಆಲೋಚಿಸುತ್ತಾ ನಮ್ಮ ಮುಂದಿನ ಜೀವನವನ್ನು ಮತ್ತು ನಮ್ಮನ್ನು ನಂಬಿದವರ ಜೀವನವನ್ನು ಹಾಳು ಮಾಡಿಕೊಳ್ಳದೆ ಮುಂದೆ ಸಾಗುವುದನ್ನು ಈ ಮರಗಿಡಗಳಿಂದ ಕಲಿಯಬೇಕು. ಸತ್ತೂ ಬದುಕಿರಬೇಕೇ ವಿನಃ ಬದುಕಿಯೂ ಸತ್ತಂತಿರಬಾರದು.
ಮರಗಳು ತಾವು ದಿಟ್ಟತನದಿಂದ ಎತ್ತರದ ನಿಲುವಿನಲ್ಲಿ ತಲೆ ಎತ್ತಿ ಬಾಳುತ್ತದೆ. ಆಕಾಶಕ್ಕೆ ಮುತ್ತಿಕ್ಕಿ ಮಳೆ ಸುರಿಸುತ್ತದೆ. ತನ್ನಿಂದಾದಷ್ಟೂ ನೆರಳನ್ನು ನೀಡುತ್ತದೆ. ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ. ಇಷ್ಟೆಲ್ಲದರ ಜೊತೆಗೆ ತನ್ನನ್ನು ಆತುಕೊಂಡು ಬೆಳೆವ ಬಳ್ಳಿಗಳಿಗೂ ಆಸರೆ ನೀಡಿ, ಅವುಗಳನ್ನೂ ಬೆಳೆಸಿ ತಾನೂ ಹಿರಿದಾಗಿ ನಿಲ್ಲುತ್ತದೆ. ಒಟ್ಟು ಸಂಸಾರದಲ್ಲಿ ಇಂಥ ಹೆಮ್ಮರಗಳನ್ನೂ ನೋಡಿದ್ದೇವೆ. ಯಾರು ಅಂಟಿಕೊಂಡು ಬಿಡುತ್ತಾರೋ ಎಂದು ಪರಿಸ್ಥಿತಿಗೆ ಹೆದರಿ ಪಲಾಯನ ಸೂತ್ರ ಅನುಸರಿಸಿರುವುದನ್ನೂ ನೋಡಿದ್ದೇವೆ. ಪಲಾಯನ ಮಾಡುವವರು ಹೆಮ್ಮರಗಳಿಂದ ಕಲಿಯಬೇಕು. ಆತುಕೊಳ್ಳುವ ಬಳ್ಳಿಗಳು ಮರದ ಕೊನೆಗಾಲದಲ್ಲಿ ನೋಡಿಕೊಳ್ಳುವುದು ಎಂಬುದು ನೆನಪಿರಲಿ. ಮರಗಳು ಆ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ.
ಒಂದು ಮರವು ವರ್ಷಾನುವರ್ಷ ಬೆಳೆದಂತೆ ತನ್ನೊಡಲಲ್ಲಿ ತಾ ಬೆಳೆದು ಬಂದ ಹಾದಿಯ ಮಾಹಿತಿಯನ್ನು ಶೇಖರಿಸುತ್ತಾ ಸಾಗುತ್ತದೆ. ಈ ಮಾಹಿತಿಯನ್ನು ಮುಂದಿನ ಜನಾಂಗಕ್ಕೆ ಬಳಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಕೂಡ. ಅದರೊಡಲ ರಿಂಗ್ ಅನ್ನು ಗಮನಿಸಿದರೆ ಅದರ ವಯಸ್ಸು ಅರಿಯಬಹುದು. ಜೊತೆಗೆ ಆ ಮರ ಹುಟ್ಟಿನಿಂದ ಉರುಳುವ ತನಕ ಯಾವ್ಯಾವ ಹವಾಮಾನದಲ್ಲಿ ಬೆಳೆದು ಬಂದಿದೆ ಎಂದೂ ಅರಿವಾಗುತ್ತದೆ. ಯಾವಾಗ ಉತ್ತಮ ಮಳೆಯಾಗಿತ್ತು, ಯಾವಾಗ ಬರಗಾಲ ಇತ್ಯಾದಿ ಮಾಹಿತಿಗಳನ್ನು ಮರದ ಬೊಡ್ಡೆ ತಿಳಿಸುತ್ತದೆ. ಇದನ್ನು paleoclimatology ಎನ್ನುತ್ತಾರೆ.
ಯಾವುದಾದರೂ ಒಂದು ಗಿಡ ಅಥವಾ ಮರವನ್ನೇ ಉದಾಹರಣೆ ತೆಗೆದುಕೊಂಡು ಅದರಿಂದ ಏನು ಕಲಿತಿದ್ದೇವೆ, ಕಲಿಯಬಹುದು ಎಂದು ಹೇಳುವಿರಾ?
ಮರಕ್ಕೂ ಬಾಯಿ ಅಂತ ಇದ್ದಿದ್ರೆ, ಮಾತು ಅಂತ ಆಡಿದ್ರೆ ಬಹುಶಃ ಎಲ್ಲ ಅರಿಕೆಯನ್ನೂ ತನ್ನೊಡಲಲ್ಲೇ ಇಟ್ಟುಕೊಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಜ್ಞಾನವಿರುವ ನಾವು, ಮಾತನಾಡಲು ಬಲ್ಲ ನಾವು, ನಮ್ಮೊಡಲಲ್ಲಿ ಎಲ್ಲವನ್ನೂ ಶೇಖರಿಸಿ ಇಟ್ಟುಕೊಳ್ಳುತ್ತೇವೆ. ಹಾಗೆ ಇಟ್ಟುಕೊಂಡು ಬೆಂದು ಸಾಯುವ ಮೊದಲು ವೈಷಮ್ಯತೆಯನ್ನು ಹೊರಗೆ ಕಕ್ಕಿ, ಜ್ಞಾನ ಹಂಚಿಕೊಳ್ಳಿ, ಮುಂದಿನ ಜನಾಂಗವನ್ನು ಬೆಳೆಸಿ ಎಂದು ಮರಗಳು ತಿಳಿಸುತ್ತಿವೆ ಎನಿಸುತ್ತದೆ.
ಏನಂತೀರಾ?