ರಾಜ್ ಚಿತ್ರಗಳೆಂದರೆ ಸಾಗರದ ಮುತ್ತುಗಳನ್ನು ಹೆಕ್ಕಿದಂತೆ!
ಡಾ| ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಸಣ್ಣ ಒಗಟಿನ ಬರಹ ಬರೆದ ಮೇಲೆ, ಅವರ ಚಿತ್ರಗಳತ್ತ ಒಂದು ಕಿರುನೋಟ ಹರಿಸಿದರೆ ಹೇಗೆ ಅಂತ ಆಲೋಚಿಸಿ ಬರೆದ ಬರಹವಿದು. ರಾಜ್ ನಟಿಸಿದ ಎಲ್ಲಾ 210 ಸಿನಿಮಾಗಳನ್ನೂ ನಾನು ನೋಡಿಲ್ಲ. ಹಾಗಂತ ನಾ ನೋಡಿರುವ ಅವರೆಲ್ಲ ಚಿತ್ರಗಳ ಬಗ್ಗೆಯೂ ಬರೆಯುತ್ತಿಲ್ಲ. ಹಲವು ಚಿತ್ರಗಳ ಬಗ್ಗೆ 'ನನ್ನ' ಅನಿಸಿಕೆ ಇಲ್ಲಿದೆ.
ಮೌಲ್ಯಗಳನ್ನು ಬಲಿಕೊಡದೆ, ಬದಲಾವಣೆಯೊಂದಿಗೆ ನಾವೂ ಬದಲಾಗಿಯೂ ಮೌಲ್ಯಗಳನ್ನೂ ಕಾಪಾಡಿಕೊಳ್ಳಬಹುದು. "ನೋಡಿ ಸ್ವಾಮಿ ನಾವಿರೋದೇ ಹೀಗೆ" ಅಂತ ಜೀವನದುದ್ದಕ್ಕೂ ತಮ್ಮ ಮೌಲ್ಯಗಳಿಗೇ ಬೆಲೆಕೊಟ್ಟು ಅದರಂತೆಯೇ ಬದುಕು ನಡೆಸೋದು ಒಂದರ್ಥದಲ್ಲಿ ಸರಿ ಎನ್ನಿಸಿದರೂ ಸವಕಲಾಗೋ ಸಂಭವ ಹೆಚ್ಚು. ಹಾಗಾದಾಗ ಅನೇಕ ಸಂಕಟಗಳು ಎದುರಾಗುತ್ತದೆ ಎಂಬುದು 'ಕಸ್ತೂರಿ ನಿವಾಸ'ದಲ್ಲಿ ಕಲಿಯಬಹುದು ಎನಿಸುತ್ತದೆ.
ರಜನಿಯ 'ರಾಜ್, ಕನ್ನಡಾಭಿಮಾನದ' ಹಿಂದೆ ಇದೆಯಾ ರಾಜಕೀಯ ಲೆಕ್ಕಾಚಾರ?
ಹೊಟ್ಟೆಪಾಡಿಗಾಗಿ ದುಡಿಯುವ ಯಾವ ಕೆಲಸವೂ ಕೀಳಲ್ಲ. ಕಳ್ಳತನ ಮಾಡದೆ, ಯಾರ ತಲೆಯನ್ನೂ ಸೀಳದೇ ತಾ ದುಡಿದು ಸಂಪಾದನೆ ಮಾಡುವುದರ ಜೊತೆ ಸ್ವಾಭಿಮಾನವನ್ನೂ ಇಟ್ಟುಕೊಂಡಿದ್ದಲ್ಲಿ ಸಿರಿವಂತಿಕೆಯ ಅಹಮಿನಲ್ಲಿರುವವರ ಮುಂದೆ ತಲೆ ಬಗ್ಗಿಸಬೇಕಿಲ್ಲ ಮತ್ತು ಅವರ ಅಧೀನದಲ್ಲಿ ಬಾಳಬೇಕಿಲ್ಲ ಅಂತ 'ವಸಂತ ಗೀತ' ಕಥೆ ಹೇಳುತ್ತೆ ಅಂತ ನನಗನ್ನಿಸುತ್ತದೆ.
ಯಾವುದೇ ವೃತ್ತಿ ಕೇವಲವಲ್ಲ. ಶ್ರೀಮಂತಿಕೆಗೆ ಅಡಿಯಾಳಾಗಬಾರದು ಎಂಬುದನ್ನು ನೋಡಿದೆವು. ಹಾಗಾದಾಗ ಏನಾಗುತ್ತದೆ ಎಂಬುದನ್ನು 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ನೋಡಬಹುದು. ಕೆಲವೊಂದು ಸನ್ನಿವೇಶಗಳನ್ನು ನೋಡುವಾಗ ಮಕ್ಕಳೇ ಬೇಡಪ್ಪಾ ಎನಿಸಿದರೆ ಅಚ್ಚರಿಯಿಲ್ಲ. ಆದರೆ, ಮಕ್ಕಳಾಗಿ ನಾವು ನಮ್ಮ ಕರ್ತವ್ಯ ಮಾಡಿದ್ದೇವೆಯೇ ಎಂಬುದನ್ನು ಒಮ್ಮೆ ಹಿಂದಿರುಗಿ ನೋಡಿ ನಂತರ ಬೇರೆ ಯೋಚಿಸಿದರೆ ಉತ್ತಮ.
ಮಕ್ಕಳೇ ಬೇಡ ಎಂದಾಗ ಮಕ್ಕಳನ್ನು ನಾವು ಹೇಗೆ ಬೆಳೆಸಿದ್ದೆವು? ಈಗ ಹೇಗಾಗಿದ್ದಾರೆ? ಎಂಬುದನ್ನು ಗಾಢವಾಗಿ ಯೋಚಿಸುವಂತೆ ಮಾಡುವ ಚಿತ್ರ 'ಭಾಗ್ಯವಂತರು'. ಸಿಕ್ಕಾಪಟ್ಟೆ disciplined ಆಗಿ ಬೆಳೆಸೋದೂ ತಪ್ಪು ಹಾಗಂತ ಇಷ್ಟಬಂದ ಹಾಗೆ ಮಾಡ್ಕೋ ಅನ್ನೋದೂ ಕಷ್ಟ. ಹಾಗಿದ್ರೆ ಮಕ್ಕಳನ್ನು ಬೆಳೆಸೋದು ಹೇಗೆ? ಅದು ಗೊತ್ತಿದ್ರೆ ನನಗೂ ಹೇಳಿ.
ನವರಸಾಯನ: ಒಬ್ಬನೂ ಕನ್ನಡದವನಿಲ್ಲ ಆದರೂ 'ಈ ಸಲ ಕಪ್ ನಮ್ಮದೇ'
ತಾ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗದೆ ವಿಧಿಯಾಟದಲ್ಲಿ ಬೇರೊಬ್ಬ ಹೆಣ್ಣನ್ನು ಮದುವೆಯಾಗಬೇಕಾಯ್ತು. ಹಳೆಯ ನೆನಪಿನಲ್ಲೇ ಕೊಳೆತು ಇರುವ ಜೀವನವನ್ನೂ ಬರಡು ಮಾಡಿಕೊಳ್ಳುವುದೇ ಅಲ್ಲದೆ, ತಾ ಕಟ್ಟಿಕೊಂಡವಳ ಜೀವನವನ್ನೂ ಹಾಳು ಮಾಡುವುದು ತರವಲ್ಲ. ಹಳೆಯ ನೆನಪುಗಳು ನಿಂತ ನೀರಿನಂತೆ. ಅವು ಸೊಳ್ಳೆಗಳನ್ನು ಆಕರ್ಷಿಸುತ್ತವೆಯೇ ಹೊರತು ಯಾವುದೇ ಹೊಸತನಕ್ಕೆ ಚಾಲನೆ ನೀಡುವುದಿಲ್ಲ. ಅನವಶ್ಯಕವಾದ ಹಳತನ್ನು ಹಿಂದಕ್ಕೆ ಸರಿಸಿ ಹರಿಯುವ ನದಿಯಂತೆ ಜೀವನ ಸಾಗಿಸಬೇಕು ಎಂಬುದನ್ನು "ಎರಡು ಕನಸು" ಚಿತ್ರದಲ್ಲಿ ಕಲಿಯಬಹುದು.
ಪದವಿಯಲ್ಲಿ ದೊಡ್ಡ ಸ್ಥಾನದಲ್ಲಿ ಇರುವವರ ಸಹವಾಸ ಮಾಡುವಾಗ ಎಚ್ಚರದಲ್ಲಿರಬೇಕು. ಎಷ್ಟೇ ಹಿತವಿದ್ದರೂ ಅದು ಸಲುಗೆಯಾಗಬಾರದು. ದೊಡ್ಡವರು ತಮ್ಮ ಕೆಲಸವಾದ ಮೇಲೆ ಅಥವಾ ಯಾವುದೋ ಪಿತೂರಿಗೆ ಒಳಗಾದಾಗ ಯಾವುದೇ ಕ್ಷಣದಲ್ಲಿ ಅವರ ನಿರ್ಧಾರ ಬದಲಿಸಬಹುದು. ಹಿತ ಎನಿಸಿಕೊಂಡಿದ್ದು ಮರುಕ್ಷಣ ಜೀವಕ್ಕೇ ಕುತ್ತು ತರಬಹುದು. ಕೆಲಸವನ್ನು ಪ್ರೀತಿಸಬೇಕು ಆದರೆ ಕೆಲಸದ ಜಾಗವನ್ನಲ್ಲಾ (ಕಂಪನಿ) ಏಕೆಂದರೆ ಆ ಕೆಲಸದ ಜಾಗ ನಿಮ್ಮನ್ನು ಇಷ್ಟ ಪಡದೆ ಹೋದಾಗ ಗೇಟ್ ಪಾಸ್ ನೀಡಿದಂತೆಯೇ. ಭೋಜರಾಜನಾಶ್ರಯದಲ್ಲಿದ್ದ ಕಾಳಿದಾಸ ಎಷ್ಟೇ ವಿದ್ವತ್ ಹೊಂದಿದ್ದರೂ ಅರಮನೆಯಿಂದ ಹೊರಗೆ ಬರಬೇಕಾಯ್ತು.
ವಿದ್ಯೆಗಳು ಬರೀ ಪುಸ್ತಕದಲ್ಲಿರಬಾರದು ಬದಲಿಗೆ ಮಸ್ತಕದಲ್ಲಿರಬೇಕು. ಕಲಿತ ವಿದ್ಯೆಯನ್ನು ಅವಶ್ಯಕತೆ ಬಿದ್ದಾಗ ಬಳಕೆಗೆ ತರಬೇಕು. ದೇವಸ್ಥಾನದ ಪೂಜೆಯಾಗಬಹುದು, ಪಶುವಿಗೆ ಔಷಧಿ ನೀಡುವುದೇ ಇರಬಹುದು ಹೀಗೆ. ಆದರೆ ಯೋಗ ಎಂಬುದನ್ನೇ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಬಳಸಿಕೊಂಡು ತಾ ಪ್ರೀತಿಸಿದ ಹೆಣ್ಣನ್ನು ಮನಸ್ಸಿನಿಂದ ತೊಡೆದು ಹಾಕುವ ಕ್ರಿಯೆಗೆ ಬಳಸಿಕೊಂಡಿದ್ದು, ವಿದ್ಯೆಯ ಪ್ರಯೋಜನವನ್ನು ನಿರೂಪಿಸುತ್ತದೆ ಎಂಬುದನ್ನು 'ಕಾಮನಬಿಲ್ಲು' ಹೇಳುತ್ತದೆಯೇ?
"ಎಲ್ಲೆಲ್ಲೂ ಒಂದೊಂದು ಕೂಗಿನಲ್ಲೂ ನಾದದ ಝೇಂಕಾರ. ಹಾಡಿದೆ ಹಾಡಿದೆ ಮೈಮರೆತು ಹಾಡಿದೆ..." ಅನ್ನೋ ಮಾತನ್ನು ಕೇಳಿದಾಗ ಮನಸ್ಸಿಗೆ ಬರೋ ವಿಷಯ ಇಷ್ಟೇ. ಪ್ರಕೃತಿಯಲ್ಲಿ ಇರೋ ಸೌಂದರ್ಯ ಸವಿಯದೇ, ಕಾಡನ್ನು ಬೋಳಿಸಿ, ನಾಡು ಕಟ್ಟುತ್ತೇವೆ ಎಂದು ನಮ್ಮ ಸುತ್ತಲೂ ಕಾಂಕ್ರೀಟ್ ನಾಡನ್ನು ಕಟ್ಟಿಕೊಂಡು ಹಕ್ಕಿಗಳಿಂಚರ ಅಂದ್ರೆ ಏನು ಅಂತಲೇ ಗೊತ್ತಿಲ್ಲದಂತೆ ಬೆಳೆಯುತ್ತಿರೋ ನಾಗರೀಕರು ನಾವು ಅಂತ. ಕೆಲಸದ ಟೆನ್ಷನ್ ಹೆಸರಿನಲ್ಲಿ ವಾರಾಂತ್ಯಕ್ಕೆ ಮನಃಶಾಂತಿಯನ್ನು ಹುಡುಕಿಕೊಂಡು ಹೋಗೋ ಎಷ್ಟೋ ಮಂದಿ ಅಮ್ಮನನ್ನು ಮನೆಯ ಕಾವಲಾಗಿ ಬಿಟ್ಟುಹೋಗುವಾಗ 'ಜೀವನಚೈತ್ರ' ನೆನಪಾಗುತ್ತೆ.
ಕಾರಣವೇನೇ ಇರಲಿ ಒಬ್ಬರಿಗೆ ಮಾಡಿದ ಅನ್ಯಾಯ, ಯಾವಾಗಲೋ ನಮ್ಮನ್ನು ಅಟಕಾಯಿಸಿಕೊಂಡು ಬಂದು ಅಪ್ಪಳಿಸುತ್ತದೆ. ಆದರೆ ವಿಧಿಯಾಟ ಹೇಗೆ ಎಂದರೆ ನಾವು ಸಂಕಷ್ಟದಲ್ಲಿರುವಾಗಲೇ ಅದು ಬಂದು ಅಪ್ಪಳಿಸೋದು. ಆಸ್ಪತ್ರೆ ಖರ್ಚಿಗೆ ಹಣಹೊಂದಿಸುವ ಕ್ರಿಯೆಯಲ್ಲಿ ಹಲವಾರು ದಾರಿ ಹಿಡಿದಾಗ, ಅತೀ ಸಂಕಷ್ಟದಲ್ಲಿರುವಾಗಲೇ ಅವರೆಲ್ಲ ಒಮ್ಮೆಲೇ ಬಂದು ಎರಗುತ್ತಾರೆ. ಸ್ವಲ್ಪ ಹುಷಾರಾಗಿರಿ ಎಂದಿದೆಯೇ "ಹಾಲುಜೇನು"?
ಜೀವನದಲ್ಲಿ ಕೆಲವೊಮ್ಮೆ ಬಾಯಿ ಬಿಟ್ಟು ಮಾತನಾಡಿದಾಗ ಎಷ್ಟೋ ಸಮಸ್ಯೆಗಳು ಸಮಸ್ಯೆ ಆಗಿ ಉಳಿಯುವುದಿಲ್ಲ. ಸಮಸ್ಯೆ ಅನ್ನೋದೇ ಇಲ್ಲದೇ ಹೋದಾಗ ಇನ್ನು ಪರಿಹಾರ ಎಲ್ಲಿಂದ ಬಂತು? ಆದರೆ ಹಾಗಾಗುವುದಿಲ್ಲವೇ? ಇದು ಹೀಗಾಗುತ್ತೆ ಹಾಗಾಗುತ್ತೆ ಎಂಬ ಮನಸ್ಸಿನಲ್ಲೇ ಕಲ್ಪಿಸಿಕೊಂಡು ಯಾರೊಂದಿಗೂ ಏನೂ ಹೇಳದೆ ನಿರ್ಧಾರ ತೆಗೆದುಕೊಂಡಿದ್ದೇ ಏನೆಲ್ಲಾ ಅನುಭವಿಸುವ 'ಸಮಯದ ಗೊಂಬೆ'ಯಾಗುತ್ತಾನೆ ಮಾನವ.
ಮದುವೆ ಅಂದ ಕೂಡಲೇ ಎಣ್ಣೆ-ಸೀಗೆಕಾಯಿಗೆ ಹೋಲಿಸುವ ಮನಗಳು ಇವೆ. ಎಷ್ಟೋ ತಿಕ್ಕಾಟಗಳು, ಎಷೋ ರಾಜಿತನಗಳು ಮದುವೆಯಲ್ಲಿದೆ. ಕದನಗಳಿಗೆ ಹೊರಗಿನ ಜನ, ಬಂಧು ಜನ ಅಥವಾ ಅಹಮಿಕೆ ಇತ್ಯಾದಿಗಳು ಕಾರಣವಾಗುವಂತೆ ಕೆಲವೊಮ್ಮೆ ಅವರವರು ಮಾಡುವ ವೃತ್ತಿಗಳೂ ಕಾರಣವಾಗುತ್ತದೆ. ಇಂದಿನ ಐಟಿ ಯುಗದಲ್ಲಿ ಇದು ಪೆಡಂಭೂತವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಈ ಎಣ್ಣೆ ಸೀಗೆಕಾಯಿ ವೃತ್ತಿ ಎಂದರೆ ಪೊಲೀಸ್-ಲಾಯರ್ ವೃತ್ತಿಗಳು. 'ಕೆರಳಿದ ಸಿಂಹ' ಚಿತ್ರದಲ್ಲಿ ಇದನ್ನು ಸೂಕ್ಷ್ಮವಾಗಿ ಹೇಳಿರುವಂತಿದೆ. ಇಬ್ಬರೂ ಒಂದೇ ವೃತ್ತಿಯಲ್ಲಿದ್ದರೂ ಕದನಕ್ಕೆ ಎಡೆಮಾಡಿಕೊಡುತ್ತದೆ ಎಂಬುದನ್ನು "ಚಲಿಸುವ ಮೋಡಗಳು" ಹೇಳುತ್ತದೆ.
ಹುಟ್ಟಿನಿಂದ ಒಂದು ಮನೆಯಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಇನ್ಯಾವುದೋ ಮನೆಗೆ ಸೇರಬೇಕಾದವರು ಅಂತಾಗಿ ಅಲ್ಲಿಗೆ ಹೋಗಬೇಕಾದಂತಹ ಪರಿಸ್ಥಿತಿ ಎದುರಾದಾಗ ಹೊಸ ಜಾಗಕ್ಕೆ ಬಂದು ಅಲ್ಲಿ ಹೊಂದಿಕೊಳ್ಳುವ ಮನೋ ಹೋರಾಟ 'ಬಂಗಾರದ ಪಂಜರ'ದ ಕಥೆ. ಮದುವೆಯಾಗಿ ಗಂಡನ ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವ ಮದುಮಗಳ ಹೋರಾಟ ಎಂದುಕೊಳ್ಳದಿರಿ. ಇದು. ಈಗ ಮತ್ತೊಮ್ಮೆ ಸಿನಿಮಾ ಕಥೆ ಯೋಚಿಸಿ ಮತ್ತು ಮದುಮಗಳ ಮನೋಸ್ಥಿತಿಯನ್ನು ಯೋಚಿಸಿ. ಚಿತ್ರದಿಂದ ಏನು ಕಲಿಯಬಹುದು ಎಂಬುದು ಅರ್ಥವಾಗುತ್ತದೆ.
ಇನ್ನೂ ಹೇಳ್ತಾ ಹೋದರೆ ಸಾಗರದ ಮುತ್ತುಗಳನ್ನು ಹೆಕ್ಕಿದಂತೆ. ಸಿಗುತ್ತಾ ಹೋಗುತ್ತದೆ ಆದರೆ ಕೊನೆ ಎಂಬುದಿಲ್ಲ. ಒಂದು ಚಿತ್ರವನ್ನು ಇದ್ದ ಹಾಗೇ ನೋಡದೆ ಸ್ವಲ್ಪ ಆಚೆ ಈಚೆ ನೋಡಿದಾಗ ಏನೆಲ್ಲಾ ಅರಿವಾಗುತ್ತದೆ ಅಲ್ಲವೇ? ರಾಜ್ ಚಿತ್ರಗಳಲ್ಲಿ ಹಲವಾರು ಕಾದಂಬರಿ ಆಧಾರಿತ ಚಿತ್ರಗಳು ಇವೆ. ಅದ್ಬುತ ಕಥೆಗಾರರು ಚಿತ್ರಕಥೆ ಬರೆದಿದ್ದಿದೆ. ಅದು ಕೇವಲ ಚಿತ್ರದ ಕಥೆಯಾಗದೆ ನಿಜ ಜೀವನದ ಕಥೆಯೇ ಆಗಿರುವಷ್ಟು ನೈಜತೆಯೂ ಇರುತ್ತಿತ್ತು.
ಇದು ನನ್ನ ಪುಟ್ಟ ಹಾಗೂ ವಿಭಿನ್ನ ಪ್ರಯೋಗದ ಬರಹ. ನನ್ನ ಜೊತೆ ಕೈಗೂಡಿಸುವ ಇರಾದೆ ಇದ್ದಲ್ಲಿ ನಿಮಗೆ ಹಿಡಿಸಿದ ರಾಜ್ ಚಿತ್ರ ತೆಗೆದುಕೊಂಡು ಮತ್ತೊಂದು ದಿಶೆಯಲ್ಲಿ ನೀವು ಅರ್ಥೈಸಿಕೊಂಡ ಬಗೆಯನ್ನು ಹೇಳಿ ಮತ್ತೆ! ಸದ್ಯಕ್ಕೆ 'ನಾನಿನ್ನು ಬರಲೇ ಯಮುನೇ?"