ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .
ನಮ್ಮಲ್ಲಿ ಬೇಸಿಗೆ ಕಾಲ ಕೊನೆಯ ಹೆಜ್ಜೆಯನ್ನು ಇಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಅಗಾಧವಾದ ಬಿಸಿಲು ತಗ್ಗುತ್ತಾ ಸಾಗಿ, ಎಲೆಗಳೆಲ್ಲ ಉದುರಿ ಚಳಿಗೆ ಹಾದಿ ಮಾಡಿಕೊಡುತ್ತದೆ. ಬಿಸಿಲು ತಗ್ಗುತ್ತಾ ಸಾಗುತ್ತದೆ ಎಂದಾಗ ಮೊದಲಿಗೆ ಬೇಸರವೇ ಆಗೋದು. ಆರಾಮವಾಗಿ ಓಡಾಡಿಕೊಂಡು ಇದ್ದ ದಿನಗಳು ಹೋಗಿ ಮತ್ತೆ ಕೋಟ್, ಗ್ಲೋವ್ಸ್, ಟೋಪಿ ಅಂತೆಲ್ಲಾ ಶೃಂಗಾರ ಮಾಡಿಕೊಳ್ಳಬೇಕಲ್ಲ ಎಂಬ ಅಳಲು.
ಆದರೆ ಮತ್ತೊಂದು ಕಡೆ, ಸದ್ಯ ಬಿಸಿಲು ಕಡಿಮೆಯಾಯ್ತು ಎಂಬ ನೆಮ್ಮದಿಯ ನಿಟ್ಟುಸಿರೂ ಕೇಳುತ್ತದೆ. ಯಾಕಿರಬಹುದು?
ಜೀವನವೇ ಒಂದು ಬೀಳುಏಳಿನ ಸಂತೆ, ನಿಮಗಿದೆಯೇ ಅದರ ಚಿಂತೆ?
ಬಿಸಿಲಿನ ಬೇಗೆ ಹೆಚ್ಚಿ ಗಾಳಿಯಲ್ಲಿ ಬಿಸಿ ಸೇರಿ ವಾತಾವರಣ ಒರಟಾಗುತ್ತದೆ. ಬಿಸಿಲಿಗೆ ಮೈಸೋಕಿದರೆ ಚರ್ಮವೇ ಸುಟ್ಟು ಹೋಗುತ್ತದೇನೋ ಎನಿಸುತ್ತದೆ. ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುವ ಮಂದಿಗೆ sun stroke ಭೀತಿ. ಚರ್ಮದ ಖಾಯಿಲೆಗಳಿಗೂ ಕಡಿಮೆ ಏನಿಲ್ಲ. ಇದರೊಟ್ಟಿಗೆ ನೀರಿಗೆ ಕೊರತೆ. ಇಷ್ಟು ಸಾಲದು ಎಂದರೆ wild fire ಎಂಬ ಸಂಕಟ. ಗಾಳಿಯಲ್ಲಿ ಎಷ್ಟರಮಟ್ಟಿಗೆ ಹಬೆ ಇರುತ್ತದೆ ಎಂದರೆ, ಎರಡು ಮರಗಳು ಉಜ್ಜಿದಾಗ ಸಣ್ಣ ಕಿಡಿ ಉಂಟಾದರೂ ಸಾಕು ಭಗ್ ಎಂದು ಬೆಂಕಿ ಹೊತ್ತಿಕೊಂಡು ಮರಗಳು, ಮನೆಗಳು, ಮನುಷ್ಯರೂ ಸುಟ್ಟು ಭಸ್ಮವಾಗುತ್ತಾರೆ.
ಪ್ರಕೃತಿಯಿಂದ ಆಗುವ ವೈಪರೀತ್ಯವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಅಲ್ಲವೇ? ಅತೀವೃಷ್ಟಿಯಿಂದ ಕೊಡಗು ಮತ್ತು ಕೇರಳದಲ್ಲಿ ಆಗಿರುವ ವೈಪರೀತ್ಯ. ಅತೀ ಅಥವಾ ಅನಾವೃಷ್ಟಿಯಿಂದ ಬೆಳೆಗಳ ನಾಶ. ಅತೀ ಚಳಿಯಿಂದ ಸಾವು ನೋವುಗಳು, ಹೀಗೆ.
ಇದೆಲ್ಲದರ ಆಚೆ ಒಂದು ವರ್ಗವಿದೆ. ಅದನ್ನು negligence (ಉಡಾಫೆತನ), ignorance (ಮೌಢ್ಯ), arrogance (ಅಹಂಕಾರ) ಇತ್ಯಾದಿ ಯಾವುದೇ ತಲೆಬರಹ ಕೊಡಿ ಅಡ್ಡಿಯಿಲ್ಲ. ಆದರೆ ಇವೆಲ್ಲಾ ಆ ಒಂದು ದೊಡ್ಡ ವರ್ಗದ ಅಡಿಯಲ್ಲೇ ಬರುತ್ತದೆ. ಈ ವರ್ಗದಲ್ಲಿ ಯಾವ ರೀತಿಯ ವೈಪರೀತ್ಯಗಳು ಉಂಟಾಗುತ್ತವೆ ಅಂತ ಒಂದೆರಡು ಉದಾಹರಣೆಗಳಿಂದ ನೋಡೋಣ.
ಜಗದೊಳಿರುವ ಮನುಜರೆಲ್ಲಾ ಒಂಥರಾ ಒರಟರು!
ಐದು ವರ್ಷದ ಮಗುವಿನ ಅಪ್ಪ ಅಮ್ಮ ಆಗಿದ್ದವರು ಒಂದು ವರ್ಷದ ಕೂಸನ್ನು ದತ್ತು ತೆಗೆದುಕೊಂಡಿದ್ದರು. ಒಮ್ಮೆ ಗಂಡ ತನ್ನ ದೊಡ್ಡ ಗಾಡಿಯಲ್ಲಿ ಮಕ್ಕಳನ್ನು ಕೂಡಿಸಿಕೊಂಡು ಡೇ ಕೇರ್'ಗೆ ಹೋದ. ಬಹುಶ: ದೊಡ್ಡ ಹುಡುಗಿ ತಾನಾಗೇ ಕೆಳಗೆ ಇಳಿದಳು ಅಂದುಕೊಳ್ಳೋಣ. ಆ ದೊಡ್ಡವಳನ್ನು ಡ್ರಾಪ್ ಮಾಡಿ, ಸೀದಾ ಏರ್ಪೋರ್ಟ್'ಗೆ ಹೋದವ ಬಿಸಿನೆಸ್ ಟ್ರಿಪ್'ಗೆಂದು ಫ್ಲೈಟ್ ಹತ್ತಿ ಹೊರಟೇಬಿಟ್ಟ. ಹೆಂಡತಿಯು ಸಂಜೆ ಮಕ್ಕಳನ್ನು ಪಿಕ್ ಮಾಡಲು ಹೋದಾಗ ತಿಳಿದಿದ್ದು ಅಲ್ಲಿ ಒಬ್ಬಳು ಮಾತ್ರ ಇದ್ದಾಳೆ, ಚಿಕ್ಕ ಕೂಸು ಇಲ್ಲ ಅಂತ. ನಂತರ ಗೊತ್ತಾಗಿದ್ದು ಆ ಕೂಸು ಇನ್ನೂ ಏರ್ಪೋರ್ಟ್'ನಲ್ಲಿದ್ದ ಗಾಡಿಯಲ್ಲೇ ಇದೆ ಅಂತ. ದಿಗ್ಭ್ರಾಂತನಾಗಿ ಮೂಕಾದ ಗಂಡ ಹೇಳಿದ್ದು 'ನಮಗೆ ಮತ್ತೊಂದು ಕೂಸು ಇದೆ ಅಂತ ನೆನಪೇ ಆಗಲಿಲ್ಲ' ಅಂತ!
ಕಳೆದ ತಿಂಗಳಿನಲ್ಲಿ ನಮ್ಮೂರಿನಲ್ಲಿ, ನಾನು ಕೇಳಿದಂತೆ, ನಡೆದ ಘಟನೆ ಹೀಗಿದೆ. ಆಫೀಸಿನಲ್ಲಿದ್ದ ಹೆಂಡತಿಯಾದವಳು ತನ್ನ ಗಂಡನಿಗೆ "day careನವರು ಕಾಲ್ ಮಾಡಿದ್ದರು, ಮಗು ಬಂದಿಲ್ಲ ಅಂತ. ಡ್ರಾಪ್ ಮಾಡಲಿಲ್ವಾ? are you working from home?" ಅಂತ. ಆಫೀಸಿನಲ್ಲಿದ್ದ ಅವನಿಗೆ ಆಗಲೇ ಅರಿವಾಗಿದ್ದು, ಮೀಟಿಂಗ್'ಗೆಂದು ಬೆಳಿಗ್ಗೆ ಧಾವಿಸಿ ಬರುವಾಗ ಮಗುವನ್ನು ಡ್ರಾಪ್ ಮಾಡುವುದನ್ನು ಮರೆತು ಸೀದಾ ಆಫೀಸಿಗೆ ಬಂದಿದ್ದ ಅಂತ. ಅಂದು ಹೊರಗಿನ ಬಿಸಿಲಿನ ಬೇಗೆ 30'ರಿಂದ 40 ಸೆಲ್ಸಿಯಸ್ (100F) ಇತ್ತು. ಕನಿಷ್ಠ ಎಂದರೂ ಬಿಸಿಲಿನ ಬೇಗೆಯಲ್ಲಿ ಮೂರೋ ನಾಲ್ಕೋ ಘಂಟೆಗಳ ಕಾಲ ಕೂಸು ಒದ್ದಾಡಿ ಅಸುನೀಗಿತ್ತು.
ಕೆಟ್ಟದ್ದೂ ಒಳಿತಿನ ನಡುವಿನ ಸೀಮಾರೇಖೆ ಹಾಕೋದು ಹೇಗೆ?
ಮನೆಯ ಹೊರಗೆ ಆಡುವ ಮಕ್ಕಳು, ಲಾಕ್ ಮಾಡಿರದ ಕಾರಿನ ಒಳಗೆ ನುಸುಳಿ ಲಾಕ್ ಮಾಡಿಕೊಂಡು ನಂತರ ಅದನ್ನು unlock ಮಾಡಲು ಗೊತ್ತಿರದೆ ಒಳಗೇ ಸಿಕ್ಕಿಹಾಕೊಂಡು ಅಸುನೀಗಿರುವ ಕೇಸ್'ಗಳು ಭಾರತ ದೇಶದಲ್ಲೂ ಇವೆ. ಬಿಸಿಲಿಗೆ ಹೆಸರಾದ ದುಬೈ, ಮತ್ತಿತರ ದೇಶಗಳಲ್ಲೂ ಇಂಥಾ ಘಟನೆಗಳು ನಡದೇ ಇದೆ.
ಹಲವಾರು ಘಟನೆಗಳನ್ನು ಅವಲೋಕಿಸಿದಾಗ, ಈ ರೀತಿ ಮಾತಾಪಿತೃಗಳು ಬೇಕೆಂದೇ ಮಾಡುವುದಿಲ್ಲ ಅಥವಾ ಮರೆತೂ ಹೋಗುವುದಿಲ್ಲ. ಬದಲಿಗೆ ನಮ್ಮ ಬುದ್ದಿಗೆ ಅದರ ಆಲೋಚನೆಯೇ ಬಾರದೆ ಹೀಗಾಗುತ್ತದೆ ಎನ್ನುತ್ತಾರೆ ವೈದ್ಯರು. ಹೀಗೆಂದರೆ ಏನು?
ದಿನನಿತ್ಯ ಕೆಲಸಕ್ಕೆ ಹೋಗುವ ಹಾಗೆಯೇ ಇಂದೂ ಹೋಗುವಾಗ ಹಾದಿಯಲ್ಲಿ ಒಂದು ಅಂಗಡಿಗೆ ಹೋಗಿ ನಂತರ ಆಫೀಸಿಗೆ ಹೋಗಬೇಕು ಎಂದುಕೊಳ್ಳುತ್ತೀರಿ. ಆಫೀಸಿನ ಹಾದಿ ಎಷ್ಟರ ಮಟ್ಟಿಗೆ ನಿಮ್ಮ ಅರಿವಿನಲ್ಲಿ ಇರುತ್ತದೆ ಎಂದರೆ, ಕಣ್ಣು ಮುಚ್ಚಿಕೊಂಡರೂ ಗಾಡಿ ಅದೇ ಹಾದಿಗೆ ತಂತಾನೇ ಹೋಗುತ್ತದೆ ಎಂಬಷ್ಟು. ಆಫೀಸಿಗೆ ಹೋದ ಮೇಲೆ ನೆನಪಾಗುತ್ತೆ 'ಅರೆ! ಅಂಗಡಿಗೆ ಹೋಗಬೇಕು ಅಂತಿದ್ದೆ ಆಲ್ವಾ?' ಅಂತ. ಬುದ್ದಿಯು ಯಾಂತ್ರಿಕವಾಗಿ ಚಾಲನೆಯಲ್ಲಿದ್ದು ಕ್ರಮಬದ್ಧವಾಗಿ ಅಷ್ಟೇ ಕೆಲಸ ಮಾಡಿಕೊಂಡು ಹೋಗಿರುತ್ತೆ. ಹೀಗಾಗಿ ಎಡವಟ್ಟುಗಳು ಜಾಸ್ತಿ.
ಅಮೆರಿಕವು ಕಳೆದ ಹತ್ತು ವರುಷದಲ್ಲಿ ಜೂನ್ ಇಂದ ಸೆಪ್ಟೆಂಬರ್'ವರೆಗೂ ಸರಾಸರಿ 150 ಮಕ್ಕಳ ಸಾವು ಕಂಡಿದೆ. ವಾರ್ಷಿಕವಾಗಿ ನಲವತ್ತು ಮಕ್ಕಳು ಕಾರಿನಲ್ಲಿನ ಹಬೆಯಿಂದಾಗಿ ಮೃತಪಟ್ಟಿದ್ದಾರೆ. ಮುಖ್ಯವಾಗಿ ಇಲ್ಲಿ ಸೋಲುತ್ತಿರುವುದು ಪ್ರಜ್ಞೆ. ಇಷ್ಟಕ್ಕೂ ಈ ಪ್ರಜ್ಞೆ ಸೋಲುತ್ತಿರುವುದಾದರೂ ಏಕೆ? ಅದೇ, ಈ ಕೆಲಸ, ಒತ್ತಡ, ತಲ್ಲಣ ಇತ್ಯಾದಿ.
ತಲ್ಲಣ ಎಂದರೆ ಆತಂಕ. ಈ ಆತಂಕಕ್ಕೆ ನೂರಾರು ಕಾರಣವಿದ್ದು ಅದರಲ್ಲೊಂದು ಒತ್ತಡ. ದಿನನಿತ್ಯದಲ್ಲಿ ಒತ್ತಡ ಹೆಚ್ಚಾದಾಗ ಆತಂಕ ಹೆಚ್ಚುವುದರಲ್ಲಿ ಅಚ್ಚರಿಯಿಲ್ಲ. ಸಕತ್ work pressure... tension ಜಾಸ್ತಿ... ನಾಲ್ಕು ಜನರ ಕೆಲಸ ಒಬ್ಬ ನಿಂತು ಮಾಡ್ತೀನಿ ಇತ್ಯಾದಿ ಇತ್ಯಾದಿಗಳನ್ನು ಕೇಳ್ತಾನೆ ಇರ್ತೀವಿ ದಿನನಿತ್ಯ. ತಾವಿಲ್ಲದಿದ್ದರೆ ಕಚೇರಿಯ ಕೆಲಸ ನಿಂತೇ ಹೋಗುತ್ತದೆ ಎಂಬ ಹುಂಬತನವು ಇಂಥಾ ಘಟನೆಗಳಿಗೆ ಆಸ್ಪದ ನೀಡುತ್ತದೆ.
ಮನೆಯಿಂದ ಕೆಲಸಕ್ಕೆ ಅಂತ ಹೊರಟವರು, car seatನಲ್ಲಿ ಕಂದನನ್ನ ಕೂಡಿಸಿಕೊಂಡು, daycareಗೆ ಡ್ರಾಪ್ ಮಾಡಿ ಹೋಗುವುದು ಸರ್ವೇ ಸಾಮಾನ್ಯ. ಹಿಂದಿನ ಸೀಟಿನಲ್ಲಿ ಕೂಡಿಸುವ car seat ಒಂದೋ ಹಿಂಬದಿ ತಿರುಗಿಸಿ ಇಡಬಹುದು ಅಥವಾ ಸೀಟಿಗೆ ಆನಿಸಿ ಇಡಬಹುದು. ಹಿಂಬದಿ ತಿರುಗಿಸಿ ಇಟ್ಟಾಗ ಮಗುವಿನ ಕಡೆ ಗಮನ ಕಡಿಮೆಯಾಗುತ್ತದೆ. ಅನಿರೀಕ್ಷಿತ ಘಟನೆಗಳಿಗೆ ಆಸ್ಪದ ನೀಡುತ್ತದೆ.
ಮಗುವನ್ನು car seatನಲ್ಲಿ ಕೂಡಿಸಿದ ಮೇಲೆ ನಿಮ್ಮದೇ ಆದ ಒಂದು ಮುಖ್ಯ ವಸ್ತುವಾದ ಪರ್ಸ್, laptop ಬ್ಯಾಗ್, ಸಾಧ್ಯವಾದರೆ ಫೋನ್ ಹೀಗೆ ಮತ್ಯಾವುದಾದರೂ ಸರಿ, ಆ ಹಿಂದಿನ ಸೀಟಿನಲ್ಲಿ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದನ್ನೂ ಮರೆತು ಹೋದಾಗ, ಕಚೇರಿಯ ಒಳಗೆ ಹೋದ ಮೇಲಂತೂ ಅದು ನೆನಪಿಗೆ ಬಂದೇ ಬರುತ್ತದೆ. ಹಾಗಾಗಿ ವಾಪಸ್ ಬಂದು ತೆಗೆದುಕೊಂಡು ಹೋಗುವಾಗಲಾದರೂ, ಮಗುವನ್ನು ಮರೆತಿದ್ದರೆ ತಕ್ಷಣವೇ ಕ್ರಮ ತೆಗೆದುಕೊಳ್ಳಬಹುದು.
ಮತ್ತೊಂದು ಕ್ರಮ ಎಂದರೆ, ಸಾಧ್ಯವಾದಷ್ಟೂ, ಮಗುವನ್ನು ಡ್ರಾಪ್ ಮಾಡುವವರೆಗೂ ಫೋನ್'ನ ಕರೆ ಅಥವಾ ಮ್ಯೂಸಿಕ್'ನಿಂದ ದೂರವಿರುವುದು ಒಳಿತು. ಕಾರಿನಲ್ಲೇ ಕೂತು ಮೀಟಿಂಗ್ ಕಾಲ್ ತೆಗೆದುಕೊಂಡು ಕಾರು ಓಡಿಸುವಾಗ ಹಾದಿಯ ಕಡೆ ಗಮನವೂ ಕಡಿಮೆಯಾಗಬಹುದು. ಕಾರು ಓಡಿಸುವಾಗ ಮಗುವನ್ನು ಮಾತನಾಡಿಸುತ್ತಾ ಓಡಿಸಿದರೆ ಮಜಾವಾಗಿರುತ್ತೆ. ನಾನು ಹೀಗೇ ಮಾಡಿದ್ದೇನೆ, it works. ಎಳೇ ಕೂಸಿಗೆ ಏನು ಗೊತ್ತಾಗುತ್ತೆ ಮಾತು? ಅಂತ ಕೇಳಿರುವವರೂ ಇದ್ದಾರೆ. ಪ್ರಹ್ಲಾದಕುಮಾರ ಉದರದೊಳಗೆ ಇದ್ದುಗೊಂಡೇ ಕಲಿತವನು. ಚಿಕ್ಕಮಕ್ಕಳನ್ನು underestimate ಮಾಡದಿರಿ.
ಕೆಲವೊಮ್ಮೆ ತಾಯಂದಿರಿಂದ ಇಂಥಾ ಅವಘಡಗಳು ಸಂಭವಿಸುತ್ತದೆ. ಮಳಿಗೆಗೆ ಹೋದವರು 'ಒಂದೈದು ನಿಮಿಷ ಅಂಗಡಿ ಒಳಗೆ ಹೋಗಿ ಬರ್ತೀನಿ' ಅಂತ ಕಾರಿನಲ್ಲಿ ಕೂಸನ್ನು ಬಿಟ್ಟು ಹೋದಾಗ ಹೀಗಾಗುವುದುಂಟು. ಯಾರದ್ದೋ ಮನೆಗೆ ಹೋದಾಗ, ಒಂದೆರಡು ನಿಮಿಷ ಮನೆಯಾಕೆಗೆ ಏನೋ ಕೊಟ್ಟು ಬರ್ತೀನಿ ಅಂತ ಒಳಗೆ ಹೋದವರು ಮಾತಿನಭರದಲ್ಲಿ ಕೂಸನ್ನೇ ಮರೆತವರು ಇದ್ದಾರೆ. ಮಗುವನ್ನು ಕಾರಿನಲ್ಲಿ ಕೂಡಿಸುವ ಸಮಯದಲ್ಲಿ ಕೀ ಇರುವ ಪರ್ಸ್ ಅನ್ನು ಕಾರಿನ ಒಳಗೆ ಇತ್ತು ಬಾಗಿಲು ಹಾಕಿ lockout ಆಗಿ ಅನಾಹುತಕ್ಕೆ ಕಾರಣವಾಗುವ ಸಂದರ್ಭಗಳು ಅನೇಕ.
ಅವಘಡಗಳು ಯಾವಾಗಬೇಕಾದರೂ ಅಥವಾ ಯಾವ ರೂಪದಲ್ಲಾದರೂ ಬರಬಹುದು. ಎಚ್ಚರಿಕೆವಹಿಸುವುದರಲ್ಲಿ ತಪ್ಪೇನಿಲ್ಲ. ನೀವೇನಂತೀರಿ?