ವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನ
ಇತ್ತೀಚಿನ ಬರಹಗಳಲ್ಲಿ ಒಂದಷ್ಟು ವಿಚಾರಗಳನ್ನು ತಿಳಿಸಿದ್ದೆ. ಏನು? ಅಂದ್ರಾ? ಕುಡೀಬೇಕಾ ಬೇಡ್ವಾ? ಶುಭಾಶಯಗಳನ್ನು ಹೇಳಬೇಕಾ? ಹೇಳಿದರೆ ಹೇಗೆ ಹೇಳಬೇಕು? ಮಾತು ಆಡಬೇಕಾ? ಆಡಿದರೆ ಯಾವಾಗ ಹೇಗೆ ಆಡಬೇಕು? ಧೂಳು ಹೊಡೆಯೋದು ಹೇಗೆ? ಬಟ್ಟೆ ಒಗೆಯೋದು ಹೇಗೆ? ನಿದ್ದೆ ಮಾಡೋದ್ ಹೇಗೆ, ಯಾಕೆ? ಈ ಎಲ್ಲದರ ವಿಷಯಗಳ ಹಿಂದೆ ಒಂದು ದೊಡ್ಡ ವಿಚಾರ ಇದೆ.
ಇವೆಲ್ಲವೂ ನಮ್ಮಿಂದ, ನಮ್ಮ ಸುತ್ತಲೂ ಗಿರಿಗಿಟ್ಲೆ ರೀತಿ ಸುತ್ತೋ ವಿಚಾರಗಳು. ನಮ್ಮನ್ನು ಯಾವುದೋ ಒಂದು ಕ್ರಿಯೆಗೆ ಸಿದ್ದಪಡಿಸೋ ವಿಚಾರಗಳು. ಇಂಥಾ ಕ್ರಿಯೆಗಳ ಆರಂಭ ಹೇಗಿರಬೇಕು ಅಥವಾ ದಿನದ ಅಂತ್ಯ ಹೇಗಿರಬೇಕು ಅಂಬೋದೇ ಧ್ಯಾನ. ನಮ್ಮಿಂದ ಆಗಬಹುದಾದ ದೈನಂದಿನ ಕ್ರಿಯೆಗೆ ನಮ್ಮ ದೇಹ ಸಿದ್ಧವಾಗಿದೆಯೇ? ಇಲ್ಲವೇ? ಇಲ್ಲವಾದರೆ ಸಿದ್ಧಪಡಿಸಿಕೊಳ್ಳೋದು ಹೇಗೆ ಎಂಬುದೇ ಧ್ಯಾನ. ದೈನಂದಿನ ವಹಿವಾಟು ಎನ್ನೋದು ಒಂದು ಯುದ್ಧ ಎನಿಸಿದರೆ ಅದಕ್ಕೆ ತಕ್ಕಂತೆ ಸೈನಿಕ ಸಿದ್ಧವಾಗಬೇಕು. ಇಲ್ಲವಾದರೆ ಪೆಟ್ಟು ತಿಂದು ಜರ್ಜರಿತನಾಗಬಹುದು.
ಚಂಚಲ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿ ಮಾರ್ಗ
ಧ್ಯಾನ ಎಂದರೇ ಯಾವುದೋ ಒಂದೇ ವಿಷಯ ಕುರಿತಾಗಿ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಇರತಕ್ಕುದು. ಇದು ಯಾವುದೇ ವಿಷಯ ಆಗಿರಬಹುದು. ಆದರೆ ಅದು ಏಕಾಗ್ರತೆಯಿಂದ ಕೂಡಿದ್ದು ಆಗಿರಬೇಕು. ವ್ಯಾಸರಾಜರು 'ಕನಕನಾಯಕನಿಗೆ' ಕೋಣ ಮಂತ್ರ ಜಪಿಸು ಅಂದರು. ಕನಕ ತನ್ನ ಧ್ಯಾನವನ್ನು ಕೇವಲ ಕೋಣ'ದತ್ತಲೇ ನೆಟ್ಟು 'ಕೋಣ ಕೋಣ ಕೋಣ' ಎಂದು ಧ್ಯಾನಿಸತೊಡಗಿದೆ. ಆಮೇಲೆ ಕೋಣ ಪ್ರತ್ಯಕ್ಷವೂ ಆಯ್ತು ಇತ್ಯಾದಿ ಕಥೆ ಇದೆ. ಆದರೆ ಇಲ್ಲಿ ಮುಖ್ಯವಾದುದು ಒಂದು ವಿಷಯಕ್ಕೆ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಏಕಾಗ್ರತೆಯಿಂದ ಮಾಡತಕ್ಕ ಕೆಲಸದ ಬಗ್ಗೆ.
ಮೊದಲು ವಿಶ್ರಾಂತ ನಂತರ ಶುದ್ಧೀಕರಣ
ಧ್ಯಾನದ ಹಲವು ಹಂತಗಳಲ್ಲಿ ಮೊದಲು 'relaxing'/ವಿಶ್ರಾಂತ, ನಂತರ 'cleansing'/ಶುದ್ದೀಕರಣ ಆದ ಮೇಲೆ ಪ್ರಾರ್ಥನೆ.
ದೇಹದ ಅಂಗಾಂಗಗಳು ಒಂದಲ್ಲಾ ಒಂದು ರೀತಿ ಬಿಗಿತದಲ್ಲೇ ಇರೋದ್ರಿಂದ ಅವನ್ನು ಮೊದಲು ಸಡಿಲಗೊಳಿಸಬೇಕು. ಈ ಬಂಧನಗಳು ದೈಹಿಕವಾಗಿಯೂ ಇರಬಹುದು, ಮಾನಸಿಕವಾಗಿಯೂ ಇರಬಹುದು. ಮನಸ್ಸಿಗಾಗಲಿ, ದೇಹಕ್ಕಾಗಲೀ ಅತೀ ಸೂಕ್ತ ಎಂದರೆ ಪದ್ಮಾಸನ. ಹಾಗಾಗಿ ಒಂದು ನಿಗದಿತವಾದ, ಗಲಭೆ ಇಲ್ಲದ ಸ್ಥಳದಲ್ಲಿ ಪದ್ಮಾಸನದಲ್ಲಿ ಕೂಡಬೇಕು. ಪಾದಗಳ ಬೆರಳುಗಳನ್ನು ಸಡಿಲಿಸುವುದರಿಂದ ಆರಂಭಿಸಿ ಕ್ರಮೇಣ ಪಾದದಿಂದ ಮೇಲಕ್ಕೆ ಸಾಗುತ್ತ ತಲೆಯನ್ನು ವಿಶ್ರಾಂತಗೊಳಿಸುತ್ತಾ ಸಾಗಬೇಕು.
ಹೇಳಿದ್ದು ಅರ್ಥೈಸಿ ನಂತರ ಪ್ರತಿಕ್ರಿಯಿಸಿ
ಸಾಮಾನ್ಯವಾಗಿ ನಮ್ಮ ಮನಸ್ಸು reactive ಆಗಿರುತ್ತದೆ. ಯಾರಾದರೂ ಏನಾದರೂ ಅಂದಾಗ ತಕ್ಷಣ ಅದಕ್ಕೆ ಪ್ರತಿಸ್ಪಂದಿಸುವುದು ನಮಗೆ ಒಗ್ಗಿಹೋಗಿರುವ ಜಾಯಮಾನ. ಆ ಕ್ಷಣದಲ್ಲಿ ನಮ್ಮ ಮನಸ್ಸಿಗೆ ಅರ್ಥವಾಗಿದ್ದೇ ಪ್ರಮುಖವಾಗಿ ನಿಂತು ಅದನ್ನು ಅಲ್ಲಗೆಳೆಯುವುದೋ ಅಥವಾ ಅದರ ವಿರುದ್ಧ ಹೋರಾಡುವುದೋ ಮಾಡುತ್ತೇವೆ. ಸ್ವಿಚ್ ಹಾಕಿದ ಕೂಡಲೇ ಹತ್ತುವ ಬಲ್ಬ್'ನಂತೆ. ಮನಸ್ಸು ಬಲ್ಬ್'ನಂತೆ reactive ಆಗದೆ tubelight ನಂತೆ ಇರಬೇಕು. ಮೊದಲು ಅವರು ಹೇಳಿದ್ದೇನು ಅಂತ ಕೇಳಿಸಿಕೊಂಡು, ಅರ್ಥೈಸಿಕೊಂಡು ನಂತರ ಅದಕ್ಕೆ ಪ್ರತಿಕ್ರಿಯೆ ನೀಡತಕ್ಕದ್ದು. ಇದನ್ನೇ ಐಟಿ ಕ್ಷೇತ್ರದಲ್ಲಿ input - process - output ಅನ್ನೋದು. ಬುದ್ಧಿವಂತರೂ, ಮೊದ್ದುಗಳು ಎಲ್ಲರೂ tubelightಗಳೇ. ಎಷ್ಟು ಬೇಗ ಹೊತ್ತಿಕೊಳ್ಳುತ್ತದೆ ಅನ್ನುವುದರ ಮೇಲೆ ಬುದ್ಧಿಮತ್ತೆಯ ಅಳತೆ ಮತ್ತು ವರ್ಗೀಕರಣ. ಕೆಲವೊಮ್ಮೆ ಬುದ್ದಿವಂತ ಮನಗಳೂ ಪ್ರತಿಸ್ಪಂದಿಸುವುದು ನಿಧಾನ ಆಗೋದಕ್ಕೆ ಕಾರಣೀಭೂತಗಳು ಹಲವಾರು.
ನಿದ್ರಿಸುವ ವಿಚಾರವನ್ನು ನಿದ್ರೆಗೆ ಭಂಗವಾದಂತೆ ಅರಿಯೋಣ ಬನ್ನಿ
ಮನಸ್ಸು ಶುದ್ಧೀಕರಣ ಮಾಡುವುದು ಹೇಗೆ?
ಇರಲಿ, ಏನೋ ಒಂದು ಕಾರಣಕ್ಕೆ ಮನಸ್ಸು ವ್ಯಗ್ರವಾಗಿ ಅಶಾಂತವಾಗುತ್ತಲೇ ಇರೋದ್ರಿಂದ ದೇಹವನ್ನು relax ಮಾಡಿಕೊಳ್ಳಬೇಕು. ಶಾಂತವಾದ ದೇಹದಿಂದ ಎಲ್ಲಾ ಚಿಂತೆಗಳು ದೂರವಾಗುತ್ತದೆ ಅಂತ ಅಂದುಕೊಂಡಲ್ಲಿ ಅದು ತಪ್ಪು. ಮುಂದಿನ ಹೆಜ್ಜೆಗೆ ನಿಮ್ಮ ದೇಹ ಸನ್ನದವಾಗಿದೆ ಅನ್ನೋದಷ್ಟೇ. ನಂತರ ಬರುವುದೇ cleansing. ಈ ಶುದ್ದೀಕರಣ ಹೇಗೆ ಎಂದರೆ ಮನಸ್ಸು ಎಂಬ ಸ್ಲೇಟ್ ಅಥವಾ whiteboard'ನ ಮೇಲೆ ಮೂಡಿರುವ ಕಲೆಗಳನ್ನು ಒರೆಸಿಹಾಕೋದು.
ಹುಚ್ಚುಕೋಡಿ ಮನಸ್ಸು ತನ್ನಿ ತಹಬದಿಗೆ
ಒಂದೆಡೆ ಸುಮ್ಮನೆ ಕಣ್ಣುಮುಚ್ಚಿ ಕೂತ ಕೆಲವು ಕ್ಷಣಗಳ ನಂತರ ಮನಸ್ಸಿನಲ್ಲಿ ಏನೆಲ್ಲಾ ಆಲೋಚನೆಗಳು ಬರಲು ಆರಂಭಿಸುವುದು ಸಹಜ. ನಾಳೆಗೆ ಮನೆ ಬಾಡಿಗೆ ಅಥವಾ emi ಕಟ್ಟಬೇಕು, ಕಾರಿನ ಲೋನ್ ಕಂತು ಕಟ್ಟಬೇಕು, ಮಗನಿಗೆ ಫೀಸ್ ತುಂಬಬೇಕು, ಮಗಳ ಭರತನಾಟ್ಯದ ಫೀಸ್ ಕೊಡಬೇಕು, ನಾಳಿನ interviewಗೆ ಸಿದ್ಧವಾಗಬೇಕು ಇತ್ಯಾದಿಗಳು. ವಯಸ್ಸಿಗೆ ಅನುಗುಣವಾಗಿ ಅದಕ್ಕಿಂತಲೂ ಜವಾಬ್ದಾರಿಗೆ ಅನುಗುಣವಾಗಿ ಹತ್ತು ಹಲವಾರು ಆಲೋಚನೆಗಳು ಸಿಹಿತಿಂಡಿಗೆ ಇರುವೆ ಮುತ್ತಿದಂತೆ ಬಂದು ಮುತ್ತಿಕೊಳ್ಳುತ್ತದೆ. ಅದು ಎಷ್ಟರ ಮಟ್ಟಿಗೆ ದಾಳಿ ಮಾಡುತ್ತದೆ ಎಂದರೆ ಮುಚ್ಚಿದ ಕಣ್ಣು ಮರುಕ್ಷಣವೇ ತೆರೆಯುವಷ್ಟು. ಹುಚ್ಚುಕೋಡಿ ಮನಸ್ಸನ್ನು ಕೇಂದ್ರೀಕರಿಸೋದು ಅಷ್ಟು ಸುಲಭವಲ್ಲ ಅಂತ ಆಗ ವೇದ್ಯವಾಗುತ್ತದೆ. ಮನಸ್ಸು ಎತ್ತಲೋ ಓಡಿದಾಗ ಮತ್ತೆ ಅದನ್ನು ಹಿಡಿದುತಂದು ಕೇಂದ್ರೀಕರಿಸಿಕೊಳ್ಳಬೇಕು.
ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ
ದೇಹವನ್ನು ಶಾಂತಗೊಳಿಸಲು ಧ್ಯಾನ
ದಿನದ ಆರಂಭದಲ್ಲಿ ಕೆಲವು ಸಮಯ ಧ್ಯಾನಕ್ಕೆ ಮೀಸಲಾಗಿ ಇಟ್ಟುಕೊಳ್ಳತಕ್ಕದು. ದಿನದ ಜಂಜಟ್ಟನ್ನು ಎದುರಿಸುವ ಮೊದಲು, ದೇಹವನ್ನು ಶಾಂತಗೊಳಿಸಲು ಧ್ಯಾನ ಬೇಕು. ಒಂದೈದರಿಂದ ಹತ್ತು ನಿಮಿಷಗಳ ಕಾಲ ಕಣ್ಣು ಮುಚ್ಚಿ ಕೂಡುವುದು. ಮನದಲ್ಲಿ ಯಾವುದೇ ಮಂತ್ರ ಸ್ತೋತ್ರಗಳಾವುದೂ ಬೇಕಿಲ್ಲ. ಹಿನ್ನೆಲೆಯಲ್ಲಿ ಯಾವ ರೀತಿಯ ಸಂಗೀತವೂ ಬೇಡ. ಮನಸ್ಸಲ್ಲಿ ಬೆಳಕನ್ನು ಮೂಡಿಸಿಕೊಂಡು ಅದರೆಡೆ ಕೇಂದ್ರೀಕರಿಸಿಕೊಳ್ಳುತ್ತಿದ್ದೇವೆ ಎಂದುಕೊಂಡರೆ ಸಾಕು.
ಸಂಧ್ಯಾಕಾಲವನ್ನು ಧ್ಯಾನಕ್ಕೆ ಮೀಸಲಿಡಿ
ದಿನದ ವಹಿವಾಟಿನಲ್ಲಿ ನಡೆದಿರಬಹುದಾದ ವೈಮನಸ್ಯಗಳು, ಅಲ್ಲೋಲಕಲ್ಲೋಲಗಳನ್ನು ಶಾಂತವಾಗಿಸಿಕೊಳ್ಳಲು ದಿನದ ಕೊನೆಗೂ ಕೂಡ ಕಾಲುಘಂಟೆಗಳ ಕಾಲ ಸುಮ್ಮನೆ ಕೂತು ಮನಸ್ಸನ್ನು ತಹಬದಿಗೆ ತರಲು ಯತ್ನಿಸಬೇಕು. ಧ್ಯಾನಕ್ಕೆ ಅತೀ ಸೂಕ್ತ ಸಮಯವೇ ಹಗಲು ಇರುಳು ಸೇರುವ ಸಂಧ್ಯಾಕಾಲ ಎನ್ನುತ್ತಾರೆ. ಆದರೆ ಇಂದಿನ ದಿನಗಳಲ್ಲಿ ದೈನಂದಿನ ಕೆಲಸ ಸಂಜೆಗೆ ಮುಗಿಯುತ್ತೆ ಅನ್ನೋದು ಖಾತ್ರಿ ಇಲ್ಲ. ಇದರಂತೆಯೇ ಮಲಗುವ ಮುನ್ನವೂ ಒಂದಷ್ಟು ಸಮಯ ಧ್ಯಾನಕ್ಕೆ ಮೀಸಲಿಡಬೇಕು. ನಿದ್ದೆ ಅನ್ನೋದು ದೈವ ಕೊಟ್ಟ ವರ. ಅದಕ್ಕೆ ಗೌರವಿಸಬೇಕು ಎಂದರೆ ಮನದಲ್ಲಿ ಅಶಾಂತಿ ತಮಣೆ ಆಗಬೇಕು. ಹಾಗಾಗಿ ಧ್ಯಾನ ಅವಶ್ಯಕ.
ಒಬ್ಬೊಬ್ಬರೂ ಭಿನ್ನ, ಆಕಾರವೂ ಭಿನ್ನ, ವಿಕಾರವೂ ಭಿನ್ನ!
ವ್ಯಗ್ರಗೊಂಡ ಮನಸ್ಸು ಶಾಂತವಾಗಲು...
ಮನೆಯ ಹೊರಗೆ ಯಾರಿಂದಲೋ ಅಥವಾ ಟ್ರಾಫಿಕ್ ಜಾಮ್'ನಿಂದಲೂ ತಲೆ ಕೆಟ್ಟಿರಬಹುದು. ಅದರಂತೆಯೇ ಮನೆಯ ಜನರಿಗೂ ಮತ್ಯಾವುದೋ ಕಾರಣಕ್ಕೆ ಮನಸ್ಸಿಗೆ ಹಿಂಸೆಯಾಗಿರಬಹುದು. ಆಗ ಪರಿಸ್ಥಿತಿ 'ರಣಬಿಸಿಲಿಗೆ ಕಾದ ಗಾಳಿಯಂತೆ' ಇರುತ್ತದೆ. ಎಲ್ಲೋ ಒಂದೆಡೆ ಸಣ್ಣ ಕಿಡಿ ಹೊತ್ತಿದರೂ ಸಾಕು ವಾತಾವರಣ ದಗ್ದವಾಗಲು. ಇಂಥಾ ವ್ಯಗ್ರಗೊಂಡ ಮನಸ್ಸು ಶಾಂತವಾದಾಗ ಅಶಾಂತಿ ಕಡಿಮೆಯಾಗುತ್ತದೆ. ಆ ನಂತರದ ಸಂವಾದಗಳಲ್ಲಿ ಹಿತ ಇರುತ್ತದೆ ಮತ್ತು ತೊಂದರೆಗಳಿಗೆ ಸಮಾಧಾನಚಿತ್ತರಾಗಿ ಪರಿಹಾರ ಕಂಡುಕೊಳ್ಳುವ ವ್ಯವಧಾನವೂ ಇರುತ್ತದೆ. ವ್ಯವಧಾನ ಮೂಡಿಸಿಕೊಳ್ಳಲು ಧ್ಯಾನ ಬೇಕು.
ಯಾವುದೇ ಕ್ರಿಯೆ ದೇಹಕ್ಕೆ ರೂಢಿಯಾಗಬೇಕು
ಯಾವುದೇ ಅಭ್ಯಾಸವನ್ನು ಆರಂಭಿಸುವಾಗ ಅಥವಾ ದುರಭ್ಯಾಸವನ್ನು ತ್ಯಜಿಸುವಾಗ ಒಮ್ಮೆಲೇ ದೊಡ್ಡ ಪ್ರಮಾಣದಲ್ಲಿ ಮಾಡಬಾರದು. ಉದಾಹರಣೆಗೆ ವ್ಯಾಯಾಮವೇ ಕಾಣದ ದೇಹವನ್ನು ಒಮ್ಮೆಗೆ ಐದು ಮೈಲಿ ಓಡಿಸಬಾರದು. ದೇಹಕ್ಕೆ ಮೊದಲು ಆ ಕ್ರಿಯೆಯನ್ನು ಕಲಿಸಬೇಕು. ಕಲಿಕೆಯನ್ನು ರೂಢಿಸಿಕೊಂಡ ದೇಹ ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತದೆ. ಹಾಗಾಗಿ ನಾಳೆಯಿಂದ ಧ್ಯಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದಲ್ಲಿ 'ಅರ್ಧ ಘಂಟೆ ಕಣ್ಣು ಮುಚ್ಚಿ ಮೂಗು ಹಿಡಿದು ಕೂಡುತ್ತೇನೆ' ಅಂದುಕೊಳ್ಳಬಾರದು. ಮೊದಲಿಗೆ ಒಂದೈದು ನಿಮಿಷ, ಆ ನಂತರ ಹತ್ತು ನಿಮಿಷ ಅಂತ ಕ್ರಮೇಣ ಕೇಂದ್ರೀಕರಿಸಿಕೊಂಡಲ್ಲಿ ದೇಹ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ.
ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .
ಧ್ಯಾನದಿಂದ ದೇಹದ ಮೇಲೆ ಏನು ಪರಿಣಾಮ?
ಧ್ಯಾನ ಅನ್ನೋದು ಮನಸ್ಸಿಗೆ ನಿಜ ಆದರೆ ದೇಹದ ಮೇಲೆ ಇದರ ಪರಿಣಾಮ ಏನು? ಧ್ಯಾನದಿಂದ ಖಾಯಿಲೆಗಳು ವಾಸಿಯಾಗುತ್ತದೆಯೇ? ಎಂಬೆಲ್ಲಾ ಪ್ರಶ್ನೆಗಳು ಉದ್ಭಾವವಾಗುತ್ತದೆ. ಮನಸ್ಸು ಅನ್ನೋದು ಚಿಂತೆ ಮತ್ತು ಚಿಂತನೆಗಳ ಕಾರ್ಯಾಗಾರ. ಅಲ್ಲಿಂದ ಆರಂಭವಾದದ್ದು ಹೃದಯಕ್ಕೆ ಸೇರುತ್ತದೆ. ಹೃದಯ ಭಾವನೆಗಳ ಕಾರ್ಖಾನೆ. ಇವೆರಡೂ ಕೂಡಿದಾಗ ಉಂಟಾಗುವ ಪರಿಣಾಮಗಳು ಇಡೀ ದೇಹದ ಮೇಲೆ ಪರಿಣಮಿಸುತ್ತದೆ. ನಿಜ ತಾನೇ? ಹಾಗಾಗಿ ಮನಸ್ಸು ಮತ್ತು ಹೃದಯವನ್ನು ಹದ್ದುಬಸ್ತಿನಲ್ಲಿ ಇಟ್ಟಕೊಂಡರೆ ತಂತಾನೇ ಮಿಕ್ಕೆಲ್ಲವೂ ಸುಸ್ತಿತಿಗೆ ಬಂದೇ ಬರುತ್ತದೆ.
ಋಣಾತ್ಮಕ ಅಂಶಗಳನ್ನು ಬದಿಗೆ ಸರಿಸಿ
ಚಟುವಟಿಕೆಗಳು ಮತ್ತು ವ್ಯಾಯಾಮ ದೇಹವನ್ನು ಗಟ್ಟಿಯಾಗಿ ಇಡುತ್ತದೆ. ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಧ್ಯಾನ ಚಿಂತೆಗಳನ್ನು ದೂರಗೊಳಿಸಿ ಚಿಂತನೆಗಳನ್ನು ಮೂಡಿಸುತ್ತದೆ. ಎಲ್ಲವೂ ಒಂದಕ್ಕೊಂದು ಪೂರಕ ಕ್ರಿಯೆಗಳೇ. ಒಟ್ಟಾರೆ ಹೇಳೋದಾದ್ರೆ ಮಾಡುವ ಇಂಥಾ ಯಾವುದೇ ಕ್ರಿಯೆಯಿಂದ ಋಣಾತ್ಮಕ ಅಂಶಗಳನ್ನು ಬದಿಗೆ ಸರಿಸಿ ಧನಾತ್ಮಕ ಅಂಶಗಳನ್ನೇ ರೂಢಿಸಿಕೊಂಡಲ್ಲಿ ಜಗವೇ ಸುಂದರ. ಒಟ್ಟಾರೆ ಹೇಳೋದಾದ್ರೆ ಇದೇ ಅಂತರಂಗ ಶುದ್ದಿ ಅಂದು ಹೇಳಿದ್ದು ಬಹಿರಂಗ ಶುದ್ದಿ!