ನಾವಿರುವ ದೇಶದಲ್ಲಿ ನವರಾತ್ರಿ ಆಚರಣೆ ಹೇಗೆ ಮಾಡ್ತಾರೆ ಗೊತ್ತಾ?!
ಈ ಹಿಂದೆ ನವರಾತ್ರಿ ಬೊಂಬೆ ಹಬ್ಬದ ಜೊತೆಗಿನ ನನ್ನ ಬಾಲ್ಯದ ನಂಟನ್ನು ಬಿಡಿಸೀ ಬಿಡಿಸೀ (ಎಳೆದೂ ಎಳೆದೂ ಅಲ್ಲ) ಹೇಳಿದ್ದೆ. ಈಗ ನನ್ನಂತೆ ವಲಸೆ ಬಂದಿಹ ಮಂದಿಯಿಂದ ವಿದೇಶದಲ್ಲಿ ಬೊಂಬೆ ಹಬ್ಬ ಹೇಗೆ ಅಂತ ನೋಡೋಣ್ವಾ?
ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಬಂದಾಗ ಮದುವೆಯಾದ ಹೆಂಗಳು ತಮ್ಮೊಂದಿಗೆ ಅಮ್ಮನ ಮನೆಯವರು ಕೊಟ್ಟ ಪಟ್ಟದಬೊಂಬೆ ತರದಿದ್ದರೂ ಮುಂದೊಮ್ಮೆ ವಿಸಿಟ್ ಮಾಡಿದಾಗ ತರುವುದು ವಾಡಿಕೆ. ಇದು ನೋಡಿರುವ, ಕೇಳಿರುವ ವಿಚಾರ. ಬೊಂಬೆಗಳನ್ನು ಇಟ್ಟು ಅಲಂಕಾರ ಮಾಡುವರೋ ಇಲ್ಲವೋ ಆದರೆ ನವರಾತ್ರಿಯಲ್ಲಿ ಪಟ್ಟದ ಬೊಂಬೆಗಳನ್ನು ಇಟ್ಟು ಪೂಜೆ ಮಾಡುವುದಂತೂ ಖಂಡಿತ.
ಗಣೇಶನ ಹಬ್ಬಕ್ಕೂ ಸುಬ್ಬನಿಗೂ ಏನ್ ನಂಟು ಅಂತೀರಿ!
ಚಿಕ್ಕಂದಿನ ಒಂದು ಅಳಿಸಲಾಗದ ನೆನಪು ಎಂದರೆ ಈ ನವರಾತ್ರಿಗಳ ಸಂಜೆಯ ವೇಳೆ ಹೆಂಗಳು ತಮ್ಮ ಮನೆಗೆ ಹೆಂಗಳೆಯರನ್ನು ಮತ್ತು ಮಕ್ಕಳನ್ನು ಕರೆದು ಅರಿಶಿ-ನ ಕುಂಕುಮ ನೀಡಿ ಜೊತೆ ಚರ್ಪು ನೀಡುವುದು. ತಾವೇ ಮತ್ತೊಬ್ಬರ ಮನೆಗೂ ಹೋಗುವುದು ಆಗಲಿ ಅಥವಾ ಜನರು ಮನೆಗೆ ಬರಲಿ ಗಂಡಸರಿಗೂ ಸಂಭ್ರಮಕ್ಕಂತೂ ಏನೂ ಕಡಿಮೆಯಿಲ್ಲ.
ಇಂಥಾ ಅನುಭವಗಳ ಮೂಟೆ ಹೊತ್ತುಕೊಂಡಿರುವ ಮಂದಿ ದೇಶ ಯಾವುದಾದರೇನು ಎಂದು ಹಬ್ಬಗಳನ್ನು ನಿಲ್ಲಿಸದೇ ಮುಂದುವರೆಸಿಕೊಂಡಿರುವ ನಿಲುವು ನಿತ್ಯನೂತನ. ಎಲ್ಲೇ ಇರಲಿ ಈ ಬೊಂಬೆಗಳು ಇಂದಿಗೂ ತನ್ನತನ ಉಳಿಸಿಕೊಂಡಿವೆ ಎಂದರೆ ಆ ನೆನಪುಗಳೇ ಕಾರಣ.
ಇಲ್ಲಿನ ಸ್ಥಳೀಯ ಅಂಗಡಿಗಳಿಂದ ಮರದ ಹಲಗೆಗಳನ್ನು ತಂದು, ಮೆಟ್ಟಿಲುಗಳನ್ನು ಮಾಡುವುದರಿಂದ ಆರಂಭವಾಗುವ ಕೆಲಸಗಳು ದಿನನಿತ್ಯದ ಕೆಲಸಗಳ ನಡುವೆ ತಾನೂ ಒಂದಾಗಿರುತ್ತವೆ. ಬೆಳಗ್ಗೆ ಹೊಟ್ಟೆಪಾಡಿನ ಕೆಲಸಗಳು, ಸಂಜೆಯಾದರೆ ಮಕ್ಕಳನ್ನು ಆ ಕ್ಲಾಸು ಈ ಕ್ಲಾಸು ಎಂದು ಡ್ರೈವ್ ಮಾಡಿಕೊಂಡು ಹೋಗುವ ಕೆಲಸವೇ ಮೊದಲಾಗಿ ಇದ್ದೂ ಈ ಕೆಲಸವೂ ಜೊತೆಗಿದ್ದು, ಒಮ್ಮೊಮ್ಮೆ ಒಂದು ತಿಂಗಳೇ ಬ್ಯುಸಿ ಇಡಬಹುದು. ದಿನನಿತ್ಯದ ಕೆಲಸಗಳಲ್ಲಿ ಒಂದು ಎಂದು ಆಸಕ್ತಿಯಿಂದ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ.
ದಸರಾ ಹಬ್ಬದ ಸಂಭ್ರಮಕ್ಕೆ ಕಥೆ ಹೇಳುವ ಬೊಂಬೆಗಳೇ ಭೂಷಣ
ಈವರೆಗೆ ನಾನು ಕಂಡಂತೆ, ಕೆಲವರು ಹತ್ತು ಲೆವೆಲ್ ಇಟ್ಟಿರುವುದೂ ಇದೆ. ಪ್ರತಿ ಬಾರಿ ಭಾರತದ ವಿಸಿಟ್ ಮಾಡಿದಾಗಲೂ ಒಂದಷ್ಟು ಬೊಂಬೆಗಳನ್ನು ತಂದು, ಅವುಗಳನ್ನು ಜೋಡಿಸಿ ಇಟ್ಟು ಆನಂದಿಸುವುದು ವಾಡಿಕೆ.
ದಕ್ಷಿಣ ಭಾರತದ ಮೂರು ರಾಜ್ಯದವರು ಆಸಕ್ತಿಯಿಂದ ಆಚರಿಸುವ ಸಂಭ್ರಮಕ್ಕೆ ಬೊಂಬೆ ಹಬ್ಬ, ಗೋಲು, ಬೊಮೈ ಗೋಲು, ಬೊಮ್ಮ ಕೋಲು ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಾರೆ. ಆ ದಿನಗಳಲ್ಲಿ ಕೆಲವರು ಹೆಂಗಳು ಮತ್ತು ಮಕ್ಕಳನ್ನು ಮಾತ್ರ ಮನೆಗೆ ಕರೆದರೆ ಹಲವರು ಇಡೀ ಸಂಸಾರಕ್ಕೆ ಆಹ್ವಾನ ನೀಡುವುದು ಉಂಟು.
ನೋಟ ಎಷ್ಟು ಸೊಗಸೋ ಚರ್ಪು ಕೂಡಾ ಅಷ್ಟೇ ಸವಿ. ಸಿಹಿ ಶಾವಿಗೆ, ರವೆ ಉಂಡೆ, ಸಜ್ಜಿಗೆ, ಶಾವಿಗೆ ಪಾಯಸ, ಉಪ್ಪಿಟ್ಟು, ಬಾದಾಮಿ ಹಾಲು, ಕದಳೀ ಗುಗ್ಗುರಿ ಒಂದೇ ಎರಡೇ. ಮತ್ತೆ ಕೆಲವರ ಮನೆಯಲ್ಲಿ ಬೊಂಬೆಹಬ್ಬದಲ್ಲಿ ನಮ್ಮೊಂದಿಗೆ ಸೇರಿ ನೀವೂ ಆಚರಿಸಿ ಎಂದು ಊಟಕ್ಕೆ ಕರೆದಿರುತ್ತಾರೆ. ಪುಳಿಯೋಗರೆ, ಇಡ್ಲಿ ಚಟ್ನಿ, ಬಿಸಿಬೇಳೆಬಾತ್, ಆಂಬೊಡೆ, ಮೊಸರನ್ನ, ಫ್ರೂಟ್ ಸಲಾಡ್ ಇತ್ಯಾದಿಗಳ ಸವಿಯೂಟಕ್ಕೆ ಕರೆದರೆ ನಾನಂತೂ ಬ್ಯಾಡ ಅನ್ನೋಲ್ಲ.
ನಿಮಗೆ ದಾಂಧಲೆ ಎಬ್ಬಿಸುವವರು ಗೊತ್ತೇ? ಇದರಿಂದ ಪ್ರಯೋಜನವೂ ಇದೆ
ಇಲ್ಲಿ ನಡೆವ ಬೊಂಬೆ ಹಬ್ಬದ ಸಂಭ್ರಮದಲ್ಲಿ ಮತ್ತೊಂದು ಪರಿಪಾಠವಿದೆ. ಕೆಲವರ ಮನೆಯಲ್ಲಿ ವೇದ ಪಠಣವಿದ್ದು, ನಂತರ ಊಟೋಪಚಾರ. ಕರ್ಣಾನಂದ- ಉದರಾನಂದ. ಕೆಲವರ ಮನೆಯಲ್ಲಿ ಸಂಗೀತ ಏರ್ಪಾಡು ಮಾಡಿದ್ದು, ಸ್ಥಳೀಯ ಪ್ರತಿಭೆಗಳಿಂದ ಒಂದು ಗಂಟೆ ಕಾಲ ಗಾಯನವೋ ಅಥವಾ ವಾದ್ಯವೋ ಇದ್ದು, ಮಹಾ ಆನಂದದಾಯಕವಾಗಿರುತ್ತದೆ. ಶುಕ್ರವಾರ ಈ ರೀತಿ ಔತಣ ಇಟ್ಟರಂತೂ ಲಲಿತಾಸಹಸ್ರನಾಮ ಖಂಡಿತ ಇದ್ದೇ ಇರುತ್ತದೆ.
ಇವೆಲ್ಲವೂ ಮನೆಗಳಲ್ಲಿನ ಸಂಭ್ರಮ ಆಯ್ತು. ಸ್ಥಳೀಯ ದೇವಸ್ಥಾನಗಳಲ್ಲೂ ಈ ಸಂಭ್ರಮ ಇದ್ದೇ ಇದೆಯಲ್ಲ. ನಮ್ಮ ನಗರದಲ್ಲೇ ಎರಡು ದೇವಸ್ಥಾನಗಳಿದ್ದು, ನವರಾತ್ರಿಯ ಪ್ರತೀ ಸಂಜೆಯೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ನೃತ್ಯ ಕಾರ್ಯಕ್ರಮ, ವೀಣೆ ನುಡಿಸುವಿಕೆ, ಹಾಡುಗಾರಿಕೆ, ವಾದ್ಯಗೋಷ್ಠಿಗಳೇ ಮೊದಲಾದ ಕಾರ್ಯಕ್ರಮಗಳು ಇರುತ್ತವೆ. ಸಾಮಾನ್ಯವಾಗಿ ಒಂದು ಗಂಟೆ ನಡೆಯುವ ಕಾರ್ಯಕ್ರಮವು ದೈವ ಸನ್ನಿಧಿಯಲ್ಲಿ ಇನ್ನೂ ಸೊಬಗು ಹೆಚ್ಚಿಸುತ್ತದೆ.
ನಮ್ಮಲ್ಲಿ ಇದ್ದಂತೆಯೇ ಇಲ್ಲಿನ ಹಲವಾರು ನಗರಗಳಲ್ಲಿ ಆಸಕ್ತರು ಭಾಷೆ ಬೆಳೆಸುವ ಉದ್ದೇಶದಿಂದ ಕನ್ನಡ ತರಗತಿಗಳನ್ನೂ ನಡೆಸುತ್ತಾರೆ. ಅಂತಹ ಶಾಲೆಗಳಲ್ಲಿ ಸರಸ್ವತಿ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ಹಬ್ಬದ ವೈಶಿಷ್ಟ್ಯವನ್ನು ಸಾರುವುದು, ದೇವಿಯನ್ನು ಸ್ತುತಿಸುವುದು, ಕೆಲವೊಮ್ಮೆ ಕನ್ನಡ ಕಿರುನಾಟಕ ಆಡುವುದು ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ.
ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?
ತಮ್ಮ ಮನೆಯ ಕಾರುಗಳನ್ನು ವರ್ಷದಲ್ಲಿ ಯಾವಾಗ ತೊಳೆಯುವರೋ ಇಲ್ಲವೋ ಆದರೆ ಆಯುಧ ಪೂಜೆಯ ದಿನವಂತೂ ಖಂಡಿತ ತೊಳೆದು, ಪೂಜಿಸುವ ಅಥವಾ ದೇವಸ್ಥಾನಕ್ಕೆ ಒಯ್ದು ಅರ್ಚಕರಿಂದ ಪೂಜಿಸುವ ವಾಡಿಕೆ ಇದ್ದೇ ಇದೆ.
ಕರ್ನಾಟಕ ಸಂಗೀತದ ತರಗತಿಗಳನ್ನು ನಡೆಸುವ ನಮ್ಮ ಗುರುಗಳು, ಪ್ರತೀ ವಿಜಯದಶಮಿಯಂದು ಪ್ರತಿ ವಿದ್ಯಾರ್ಥಿಗೆ ಒಂದೆರಡು ಸಾಲು ಯಾವುದಾದರೂ "ಹೊಸ" ಹಾಡು ಕಲಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಆ ದಿನ ಹೊಸ ಕಲಿಕೆಯ ನಂತರ ಗುರು ಪತ್ನಿ ನೀಡುವ ಕಿರುಕಾಣಿಕೆ ಮತ್ತು ಪ್ರಸಾದ ಸ್ವೀಕರಿಸುವುದು ಹಲವಾರು ಕಡೆ ನಡೆಸಿಕೊಂಡು ಬಂದಿರುವ ಪದ್ಧತಿ.
ಹಾಗಿದ್ದರೆ ವಿದೇಶೀ ನೆಲದ ಎಲ್ಲ ದಕ್ಷಿಣ ಭಾರತೀಯರೂ ಸಂಪ್ರದಾಯ ಉಳಿಸಿಕೊಂಡು ಬಂದಿದ್ದಾರೆ ಅಂತಾಯ್ತು ಎನ್ನದಿರಿ. ದಕ್ಷಿಣೇತರ ರಾಜ್ಯದವರೂ ಇಲ್ಲಿ ಹಿಂದೆ ಬಿದ್ದಿಲ್ಲ.
ಯಾವ ರೀತಿ ಅರಿಶಿಣ-ಕುಂಕುಮಕ್ಕೆ ಅಥವಾ ಗೊಂಬೆ ನೋಡಲು ಬರುವ ಮಂದಿಯಲ್ಲಿ ಯಾವ ರಾಜ್ಯದವರು ಎಂಬ ಭೇದ ಇಲ್ಲವೋ ಹಾಗೆಯೇ ಭಾರತ ದೇಶದ ಎಲ್ಲರೂ ನವರಾತ್ರಿ ಸಂಭ್ರಮದ ಗುಜರಾತಿನ 'ರಾಸ್, ಗರ್ಬ, ದಾಂಡಿಯಾ'ದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುತ್ತಾರೆ. ನವರಾತ್ರಿ ಸಮಯದಲ್ಲಿನ ಎರಡು ವಾರಾಂತ್ಯ, ಸಂಜೆ ಎಂಟರಿಂದ ಶುರುವಾಗುವ ಈ ಸಂಭ್ರಮ ಬೆಳಗಿನ ಒಂದು ಅಥವಾ ಎರಡು ಗಂಟೆಯವರೆಗೂ ಸಾಗುತ್ತದೆ.
ಈ ಸಂದರ್ಭಕ್ಕೆ ಎಂದು ಮೀಸಲಾದ ಹಾಡುಗಳನ್ನು ಹಾಡಲು, ವಾದ್ಯಗಳನ್ನು ನುಡಿಸಲು ಪರ ರಾಜ್ಯದಿಂದ ನಮ್ಮಲ್ಲಿ ಕರೆಸುತ್ತಾರೆ. ಕೆಲವೊಮ್ಮೆ ಭಾರತದಿಂದಲೂ ಕರೆಸುವ ಮಂದಿ ಇದ್ದಾರೆ. ಕೋಲಾಟ, ವೃತ್ತಾಕಾರದಲ್ಲಿ ಸುತ್ತುತ್ತ ಹೆಜ್ಜೆ ಹಾಕುವುದು ನೋಡಲೇ ಸೊಗಸು.
ಹೇಗೆ ನಮ್ಮ ದೇಶದವರು ಆಸಕ್ತಿ ತೋರುವರೋ ಹಾಗೆಯೇ ವಿದೇಶೀ ಹೆಂಗಳೂ ಗುಜರಾತೀ ದಿರಿಸಿನಲ್ಲಿ ಪಾಲ್ಗೊಳ್ಳುತ್ತಾರೆ.
ಕಾಲಾಯ ತಸ್ಮೈ ನಮಃ ಎಂದು ಹಲವಾರು ಹಬ್ಬಗಳಲ್ಲಿ ಏರುಪೇರುಗಳು ಕಂಡಿರಬಹುದು, ಆಚರಣೆ ಕಡಿಮೆಯಾಗಿಯೋ ಅಥವಾ ನಿಂತೇ ಹೋಗಿರುವುದೂ ಉಂಟು. ನನಗೆ ಅರಿವಿರುವಂತೆ ನಮ್ಮ ದೇಶದಲ್ಲೇ ಆಗಲಿ, ವಿದೇಶೀ ನೆಲದಲ್ಲೇ ಆಗಲಿ ನವರಾತ್ರಿ ಸಂಭ್ರಮವಂತೂ ಇಂದಿಗೂ ಅದೇ ಛಾಪನ್ನು ಉಳಿಸಿಕೊಂಡಿದೆ.