ನವ ವಿಧ ವಂದಿತ ದೇವತಾ ಸ್ತುತಿ, ಅಪೂರ್ವ ಭಕ್ತಿ ಮಾಲಿಕೆ
ನವರಸಾಯನದ ಇಂದಿನ ವಿಶೇಷ 'ನವ ವಿಧ ವಂದಿತ ದೇವತಾ ಸ್ತುತಿ'ಯ ಕುರಿತು. ಹಾಗೆಂದರೇನು? ನವಗ್ರಹ ದೇವತೆಗಳ ವಂದನೆಯೇ? ನವದೇವತೆಗಳ ವಂದನೆಯೇ? ಒಬ್ಬನೇ ದೇವನನ್ನು ನವ ವಿಧವಾಗಿ ಪಾಡಿಪೊಗಳಿರುವುದೇ? ಈ ಅಪೂರ್ವ ಭಕ್ತಿ ಮಾಲಿಕೆ ಎಂದರೇನು? ನೋಡೋಣ ಬನ್ನಿ.
ಅಮೆರಿಕಾದಲ್ಲಿ ನೆಲೆಸಿರುವ ಪ್ರಸಿದ್ಧ ಹಾಡುಗಾರರಾದ ರಾಮ ಪ್ರಸಾದ್ ಅವರ ಅಪೂರ್ವ ಯತ್ನವಾದ ಈ ಭಕ್ತಿ ಮಾಲಿಕೆಯಲ್ಲಿ ಒಂಬತ್ತು ಪುಷ್ಪಗಳಿವೆ. ಎಲ್ಲ ಹಾಡುಗಳಲ್ಲೂ ಒಂದು ರೀತಿ ಹೊಸತನವಿದೆ. ಕೆಲವೊಂದು ಹಾಡುಗಳನ್ನು ಒಬ್ಬರೇ ಹಾಡಿದ್ದರೆ ಮತ್ತೆ ಕೆಲವನ್ನು ಇಬ್ಬರು ಅಥವಾ ಮೂವರು ಸೇರಿ ಹಾಡಿದ್ದಾರೆ. ಒಟ್ಟಾರೆ ಒಂಬತ್ತು ಜನ ಹಾಡುಗಾರರ ಸಮ್ಮಿಲನವೇ ಈ ಭಕ್ತಿ ಮಾಲಿಕೆ. ಒಂಬತ್ತು ಹಾಡುಗಳು, ಹೊಸತನ ಮತ್ತು ಒಂಬತ್ತು ಮಂದಿ ಹಾಡುಗಾರರು ಎಂದಾಗ "ನವ" ಎಂಬ ಪದ ಅರ್ಥಗರ್ಭಿತವಾದದ್ದು ಅಂತಾಯ್ತಲ್ಲ. ಅರ್ಥ ಅನ್ನುವ ಪದಕ್ಕೆ ಹಣ ಎಂದೂ ಬಳಕೆ ಇದೆ. ಇಲ್ಲೇಕೆ ಪ್ರಸ್ತಾಪಿಸಿದೆ ಎನ್ನುವುದನ್ನು ಆಮೇಲೆ ಹೇಳುತ್ತೇನೆ.
ನಿಮಗೆ ದಾಂಧಲೆ ಎಬ್ಬಿಸುವವರು ಗೊತ್ತೇ? ಇದರಿಂದ ಪ್ರಯೋಜನವೂ ಇದೆ
ಅಪೂರ್ವ ಭಕ್ತಿ ಮಾಲಿಕೆ ಒಂದು ದೈವ ವಂದನೆಯ ಹಾಡುಗಳ ಮಾಲಿಕೆ. ಇದು ಬರೀ ಶ್ರಾವ್ಯವಲ್ಲದೆ ದೃಶ್ಯವನ್ನೂ ಒಳಗೊಂಡಿದೆ ಎಂಬುದರಲ್ಲಿ ಅಪೂರ್ವ ಎಂಬ ಪದದ ವಿಶೇಷತೆ ಎದ್ದು ಕಾಣುತ್ತದೆ.
ಪ್ರತಿಯೊಂದು ಹಾಡನ್ನು ಹಲವಾರು ಜನ ಜವಾಬ್ದಾರಿಯುತವಾಗಿ ವಿಡಿಯೋ ಚಿತ್ರೀಕರಣ ನಡೆಸಿ ಹಾಡಿಗೆ ಮತ್ತಷ್ಟು ಮೆರಗು ನೀಡಿದ್ದಾರೆ. ಕಣ್ಣಿಗೆ ತಂಪು, ಕಿವಿಗೆ ಇಂಪು ಎಂದಾಗಿ ಹಾಡನ್ನು ಕೇಳುವಾಗ ಸಾಂದರ್ಭಿಕವಾಗಿ ದೃಶ್ಯಗಳೂ ಮೂಡಿಬರುತ್ತ ತಲೆದೂಗುವಂತೆ ಮಾಡುತ್ತದೆ. ದೃಶ್ಯಗಳನ್ನು ಚಿತ್ರೀಕರಿಸಿ ಹಾಡುಗಳಿಗೆ ಮೆರುಗನ್ನು ಹೆಚ್ಚಿಸುವ ದಿಶೆಯಲ್ಲಿ ಹಲವಾರು ಮಂದಿ ಕೆಲಸ ಮಾಡಿದ್ದಾರೆ.
ರಾಮ್ ಪ್ರಸಾದ್ ಅವರ ಈ ಯತ್ನದಲ್ಲಿ ಕೈಜೋಡಿಸಿರುವವರು ಅನೇಕ. ಈವರೆಗೆ ಹಲವಾರು ಭಕ್ತಿಗೀತೆಗಳನ್ನು ರಚಿಸಿರುವ ಆಸ್ಟ್ರೇಲಿಯಾ ನಿವಾಸಿ ಕೃಷ್ಣ ಪ್ರಸಾದ್ ಅವರು ಈ ಎಲ್ಲ ಒಂಬತ್ತು ಹಾಡುಗಳನ್ನು ರಚಿಸಿದ್ದಾರೆ. "ಖಗವಾಹನನ ನಗುಮೊಗರಾಣಿ" ಎಂದು ಲಕ್ಷ್ಮಿಯನ್ನು ಸ್ತುತಿಸುವಾಗ, "ದೋಷವಾಡೋ ನಾಲಿಗೆಯೇ ತ್ರಾಸಪಡದಿರು ನಾಲಿಗೆಯೇ" ಎನ್ನುತ್ತಾ ರಾಮನಾಮ ನುಡಿಯೆಂದು ತಿಳಿಸುವ ಕೃಷ್ಣ ಪ್ರಸಾದ್ ಅವರ ಲೇಖನಿ ಕೈಚಳಕ ಎದ್ದು ಕಾಣುತ್ತದೆ.
ಅಂದಿನ ಕಾಲದಲ್ಲಿ ಸಿನೆಮಾ ನೋಡುವ ಮಜವೇ ಮಸ್ತಾಗಿತ್ತು!
ರಾಮ್ ಪ್ರಸಾದ್ ಅವರು ಈ ಹಾಡುಗಳಿಗೆ ಟ್ಯೂನ್ ಹಾಕಿದ್ದಕ್ಕೆ orchestra effect ನೀಡಿದವರು ಸುಪ್ರಸಿದ್ದ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್. Orchestra Director ಆಗಿ ಪ್ರವೀಣ್ ಅವರು ಅದ್ಭುತವಾದ ಕೆಲಸ ಮಾಡಿದ್ದಾರೆ. "ದೇವಾಧಿ ದೇವ ನಟರಾಜ" ಗಾನದಲ್ಲಿ ಇರುವ ವೈವಿಧ್ಯತೆಯಲ್ಲಿ ಇವರ ಪ್ರೌಢಿಮೆ ಎದ್ದು ಕಾಣುತ್ತದೆ.
ಈ ದೃಶ್ಯಕಾವ್ಯದ ಹಾಡುಗಳಾದರೂ ಯಾವುವು? ಹಾಡಿರುವವರು ಯಾರು? ವಿಷಯ ಹೀಗಿದೆ:
01. ವಿಘ್ನವಿನಾಶಕ ವಿನಾಯಕನನ್ನು ಕುರಿತಾಗಿ "ಏಕದಂತನೇ ಶಾಂತಮೂರ್ತಿಯೇ ವರವ ಕರುಣಿಸೋ" ಎಂದು ಗಣಪನನ್ನು ಬೇಡುವ "ಕರವ ಮುಗಿಯುವೆ ಗಣಪ ವರವ ಕರುಣಿಸೋ" ಎಂಬ ಹಾಡನ್ನು ಹಾಡಿರುವವರು ರಾಮ್ ಪ್ರಸಾದ್ ಮತ್ತು ಪುಷ್ಪಾ ಜಗದೀಶ್.
ನಿಮ್ಮೆಲ್ಲರ ಜೀವನದ ಕಥಾಸರಮಾಲೆ 'ಸತ್ಯಮೇವ ಜಯತೆ'
02. ಮಹಾಲಕ್ಷ್ಮಿಯನ್ನು "ಖಗವಾಹನನ ನಗುಮೊಗರಾಣಿ" ಎಂದು ಹಾಡಿ ಪೊಗಳುವ "ಬಾರಮ್ಮಾ ಬಾ ಮಹಾಲಕ್ಷ್ಮಿಯೇ" ಎಂಬ ಹಾಡನ್ನು ಹಾಡಿರುವವರು ರಾಮ್ ಪ್ರಸಾದ್.
03. ದಿವ್ಯತೇಜನಾದ ಗಂಗಾಧರನನ್ನು ವಂದಿಸುವ "ದೇವಾಧಿ ದೇವಾ ನಟರಾಜ" ಹಾಡನ್ನು ರಾಮ್ ಪ್ರಸಾದ್ ಮತ್ತು ವಾಣಿ ಸತೀಶ್ ಅವರು ಹಾಡಿದ್ದಾರೆ.
04. 'ರಾಮನಾಮವನ್ನು ಪಾಯಸಕ್ಕೆ' ಹೋಲಿಸಿರುವ ದಾಸರಪದದಂತೆ, ರಾಮನಾಮವನ್ನು ತ್ರಾಸ ಪಡೆದಂತೆ ಧ್ಯಾನಿಸೋ ಎನ್ನುತ "ರಾಮ ಬರುವನು ನಾಳೆಗೆ" ಎಂದು ಹಾಡಿರುವುದು ರಾಮ್ ಪ್ರಸಾದ್.
05. 'ಕವಿಜನ ಪೂಜಿತೇ' ಎಂದೇ ಪೂಜಿತಳಾದ ದೇವಿ ಸರಸ್ವತಿಯ ವಂದನೆ ಮಾಡಿರುವವರು ಪರಿಮಳ ಮುರಳಿ, ಶಶಿನಾಥ್ ಮತ್ತು ಚಂದ್ರಹಾಸೇ ಗೌಡ.
06. ಕೃಷ್ಣವಂದನೆ ಇರದಿದ್ದರೆ ಭಕ್ತಿ ಮಾಲಿಕೆ ಹೇಗಾದರೂ ಪೂರ್ಣವಾದೀತು? "ಜೋ ಜೋ ಮಲಗೋ ಕಂದ, ಜೋ ಜೋ ಮಲಗೋ ಜಗದಾನಂದ" ಎಂದು ಹಾಡಿರುವುದು ರಾಮ್ ಪ್ರಸಾದ್.
07. ಮಹಾವಿಷ್ಣು ಇರದ ಜಾಗವಾದರೂ ಯಾವುದು? ಕಂಬದಿಂದ ಬಂದು ಹಿರಣ್ಯಕಶಿಪುವನ್ನು ಸೀಳಲಿಲ್ಲವೇ? "ಅಂಬರದಲ್ಲಿರುವೆ ನೀ" ಎಂಬ ಗಾನಸುಧೆ ಹರಿಸಿರುವವರು ರಾಮ್ ಪ್ರಸಾದ್ ಮತ್ತು ಸೋಮಶೇಖರ.
08. ಗೊಡಚಿ ಕ್ಷೇತ್ರದ ವೀರಭದ್ರಸ್ವಾಮಿಯ "ಗುಡಿಗೆ ಹೋಗುವ ನಾವು" ಎಂದು ಹಾಡುತ ರಾಮ್ ಪ್ರಸಾದ್ ಮತ್ತು ಶೇಷ ಪ್ರಸಾದ್ ಅವರುಗಳು ಕ್ಷೇತ್ರ ದರ್ಶನಕ್ಕೆ ಕೊಂಡೊಯ್ಯುತ್ತಾರೆ.
09. 'ತುಂಗಾ ತೀರದ ನಿವಾಸಿ', 'ಕಲಿಯುಗದ ಕಾಮಧೇನು' ಎಂದೇ ಪೂಜಿಸಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಾದ "ರಾಘವೇಂದ್ರನೇ" ಹಾಡನ್ನು ಹಾಡಿರುವವರು ರಾಮ್ ಪ್ರಸಾದ್ ಮತ್ತು ಅಕ್ಷತಾ ರಾಮನಾಥ್.
ಒಬ್ಬ ಆಸಕ್ತರು ಅಥವಾ ಒಂದು ಸಂಸ್ಥೆ ಒಂದು ಪ್ರಾಡಕ್ಟ್ ಅನ್ನು ತಯಾರಿಸಿ, ಮಾರಾಟಕ್ಕೆ ಮುನ್ನ ಮತ್ತು ನಂತರ ಮಾರ್ಕೆಟಿಂಗ್ ಮಾಡುವುದು, ಹಣ ಮಾಡಿಕೊಳ್ಳುವುದು ಅಂಬೋದೆಲ್ಲಾ ವ್ಯಾವಹಾರಿಕ ಜಗತ್ತಿನ ಸೂತ್ರ. ಹೀಗಿರುವಾಗ ಅಪೂರ್ವ ಭಕ್ತಿ ಮಾಲಿಕೆಯಲ್ಲಿನ ವಿಶೇಷತೆ ಏನು? ಇದರ ಬಗ್ಗೆ ಬರೆದಿದ್ದಾದರೂ ಏಕೆ?
ಈ ದೃಶಕಾವ್ಯದ ಕೆಲವು ಇತರೆ ವಿಶೇಷಗಳು ಹೀಗಿವೆ.
ಈ ವಿಡಿಯೋವನ್ನು, ಅಮೇರಿಕಾದ ಟೆಕ್ಸಾಸ್ ರಾಜ್ಯದ Dallas ನಗರದಲ್ಲಿ ಜರುಗಲಿರುವ "ಅಕ್ಕ 2018" ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಹರಿ ಆಡಿಯೋದವರು ಬಿಡುಗಡೆ ಮಾಡಲಿದ್ದಾರೆ. ಲಹರಿ ವೇಲು ಅವರು 1000 ಸಿಡಿಗಳನ್ನೂ ಅಕ್ಕ'ಗೆ ನೀಡಲಿದ್ದಾರೆ. ಮಾರಾಟವಾಗುವ ಪ್ರತಿಗಳಿಂದ ಬರುವ ಹಣವನ್ನು ಸಂಪೂರ್ಣವಾಗಿ ಅಕ್ಕ Charity'ಗೆ ನೀಡಲಾಗುತ್ತದೆ.
ಅಕ್ಕ charity (ದೇಣಿಗೆ) ವಿಭಾಗ ಹಲವಾರು ರೀತಿಯಲ್ಲಿ ಜನೋಪಯೋಗಿ ಕೆಲಸಗಳನ್ನು ಹಮ್ಮಿಕೊಂಡಿದೆ. ಶಂಕರ ಕಣ್ಣಿನ ಆಸ್ಪತ್ರೆಗೆ ದೇಣಿಗೆ ನೀಡಿದ ಫಲವಾಗಿ ಆಸ್ಪತ್ರೆಯ ಒಂದು ವಿಭಾಗಕ್ಕೆ 'ಅಕ್ಕ' ಹೆಸರನ್ನು ಇಡಲಾಗಿದೆ. ಮನೋರಂಜನಿ ಕಾರ್ಯಕ್ರಮ ನಡೆಸಿ ಬರುವ ಆದಾಯವನ್ನು ಕರ್ನಾಟಕಾದ್ಯಂತ ಹಲವಾರು ವಿದ್ಯಾ ಸಂಸ್ಥೆಗಳಲ್ಲಿ ಅನಾಥ ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸಲೆಂದು ದೇಣಿಗೆ ನೀಡಿದೆ. ಇಂಥವೇ ಹಲವಾರು ಕಾರ್ಯಕ್ರಮಗಳಿಗೆ ಆಶ್ರಯ ನೀಡುತ್ತಿರುವ 'ಅಕ್ಕ charity'ಗೆ ವಿನಿಯೋಗವಾಗಲೆಂದು ಕೈಜೋಡಿಸಿರುವ ಅಪೂರ್ವ ಭಕ್ತಿ ಮಾಲಿಕೆ ಯೋಜನೆಯು ಯಶಸ್ವಿಯಾಗಲಿ ಎಂದು ಹಾರೈಸೋಣ.
ಹೂವಿನೊಂದಿಗೆ ನಾರು ಸ್ವರ್ಗ ಸೇರಿತು ಎನ್ನುವಂತೆ ನಾನು ಈ ಬರಹದ ಮೂಲಕ ಕೈಜೋಡಿಸಿದ್ದೇನೆ. ನೀವು?