ಶ್ರೀನಾಥ್ ಭಲ್ಲೆ ಅಂಕಣ; ವಿಷಯವೇ ಇಲ್ಲದ ವಿಚಾರಗಳ ಮಂಥನ
ವಿಷಯವೇ ಇಲ್ಲದ ವಿಚಾರಗಳ ಇಂದಿನ ಮಂಥನ ಆರಂಭವಾಗಿದ್ದೇ ಕಳೆದ ವಾರದಲ್ಲಿ ಸುಮ್ಮನೆ ಒಂದು ಲಾಂಗ್ ಡ್ರೈವ್ ಹೋಗಿದ್ದಾಗ. ನಾನು ಮತ್ತು ನನ್ನಾಕೆ fall colors ನೋಡುವ ಉದ್ದೇಶದಿಂದ ಒಂದು ಉದ್ದ ಡ್ರೈವ್ ಹೊರಟಿದ್ದೆವು. ಮೊದಲಿಗೆ ಅಂದುಕೊಂಡಿದ್ದೇ ಇಷ್ಟು, ಆರಾಮವಾಗಿ ಕಾರಿನಲ್ಲಿ ಸಾಗೋದು, ಬಣ್ಣ ಬಣ್ಣದ ಗಿಡಮರಗಳ ವೈಭವವನ್ನು ನೋಡಿ ಬರೋದು ಅಂತ. ಅಂದ್ರೆ ಜಾಸ್ತಿ ತಲೆ ತಿನ್ನದೇ, ತಲೆ ಕೆಡಿಸಿಕೊಳ್ಳದೇ, ಬೀದಿಯಲ್ಲಿ ಟ್ರಾಫಿಕ್ ಹೆಚ್ಚಿದ್ದರೂ ತಲೆಬಿಸಿ ಮಾಡಿಕೊಳ್ಳದೇ ಆರಾಮವಾಗಿ ಹೋಗಿ ಬರೋದು ಅಂತ. ಹಾಗಾಗಿ ಇಂದಿನ ಬರಹದಲ್ಲಿ ಹೆಚ್ಚಿನ ವಿಷಯ ಇಲ್ಲ, ನೀವೂ ಆರಾಮವಾಗಿ ನನ್ನೊಂದಿಗೆ ಇಂದಿನ ಡ್ರೈವ್ ಮಾಡಿ.
ಮೊದಲಿಗೆ ಒಂದು funnel ಅನ್ನು ಊಹಿಸಿಕೊಳ್ಳಿ. ಸೀಮೆಎಣ್ಣೆಯನ್ನು ದೊಡ್ಡ ಡಬ್ಬದಿಂದ ಸಣ್ಣ ಡಬ್ಬಕ್ಕೆ ಹಾಕುವಾಗ ಬಳಸುವ ಒಂದು ಸಾಧನ. ಆರಂಭದಲ್ಲಿ ಅದು ಹಿರಿದು, ಆ ನಂತರ ಕೊಳವೆಯ ಬಳಿ ಸಾಗುತ್ತಾ ಕಿರಿದು. ಈಗ, ಸಂಧ್ಯಾವಂದನೆ ಮಾಡುವಾಗಿನ ಸಂಕಲ್ಪವನ್ನು ಆಲೋಚಿಸಿ. ಜಂಬೂ ದ್ವೀಪೇ, ಭರತ ವರ್ಷೇ, ದಂಡ ಕಾರಣ್ಯೇ, ಗೋದಾವರ್ಯಾಹ, ದಕ್ಷಿಣೇ ತೀರೇ ಇತ್ಯಾದಿ. ಈ ಸಂಕಲ್ಪವನ್ನು funnelಗೆ ಹೋಲಿಸಿ. ಏನಾದರೂ ವ್ಯತ್ಯಾಸವಿದೆಯೇ? ಹಿರಿದಾಗಿ ಆರಂಭವಾಗಿ ನಿರ್ದಿಷ್ಟವಾಗಿ ಕೊನೆಯಾಗುತ್ತದೆ. ನಾವು ಪತ್ರ ಬರೆಯುವಾಗ ಬಳಸುವ ವಿಳಾಸ, ಒಂದು ರೀತಿ ಉಲ್ಟಾ funnel.
ಶ್ರೀನಾಥ್ ಭಲ್ಲೆ ಅಂಕಣ; ಬತ್ತಳಿಕೆಯೊಳಗಿನ ಬಾಣಗಳು
ಈಗೇಕೆ ಈ ಮಾತು ಅಂತ ಹೇಳ್ತೀನಿ. Appalachian ಪರ್ವತ ಶ್ರೇಣಿಯ ಒಂದು ಭಾಗ ಬ್ಲೂ ರಿಜ್ (blue ridge) ಪರ್ವತ. 550 ಮೈಲುದ್ದದ ಈ ಪರ್ವತವು ಹಲವಾರು ರಾಜ್ಯಗಳನ್ನು ತನ್ನೊಡಲಲ್ಲಿ ಹೊತ್ತಿದೆ. ಅದರಲ್ಲೊಂದು ರಾಜ್ಯ ಎಂದರೆ ನಾವಿರುವ ವರ್ಜೀನಿಯಾ ರಾಜ್ಯ. ಈ ಪರ್ವತದ ಒಂದು ಭಾಗ shenandoah ನ್ಯಾಷನಲ್ ಪಾರ್ಕ್ ಎಂಬಲ್ಲಿಗೆ ನಾವು ಹೋದದ್ದು. ಇಷ್ಟೂ ಹೊತ್ತು ಹೇಳಿದ್ದರ ವಿಷಯವನ್ನು funnel ಮತ್ತು ಸಂಕಲ್ಪಕ್ಕೆ ಹೋಲಿಸಿ ನೋಡಿ. ಕಾರು ಓಡಿಸುವಾಗ ಯಾವ ಸಿಂಪಲ್ ಆಲೋಚನೆ ಬಂತು ಅಂತ ನಿಮಗೂ ಕಲ್ಪನೆ ಬರುತ್ತದೆ.
ಪರ್ವತ ಶ್ರೇಣಿಯಲ್ಲಿ ಇಕ್ಕೆಲಗಳಲ್ಲಿ ಹತ್ತಾರು ಅಡಿ ಎತ್ತರದ ಮರಗಳ ನಡುವೆ ಗಾಡಿ ಓಡಿಸುವುದೇ ಒಂದು ವಿಭಿನ್ನ ಅನುಭವ. ಒಂದೇ lane ರಸ್ತೆಯಲ್ಲಿ ಸಾಕಷ್ಟು ದೂರ ಸಾಗಬೇಕು ಎಂಬುದು ಒಂದು ವಿಚಾರವಾದರೆ, ಕೊಂಚ ಹೆಚ್ಚು ಬಲಕ್ಕೆ ಸಾಗಿದರೆ ಎಲ್ಲಿ ಯಾವುದಾದರೂ ಹಳ್ಳಕ್ಕೆ ಬೀಳುತ್ತೇನೋ ಎಂಬ ಭಯ ನನಗೆ. ಈವರೆಗೂ ಈ ಭಯ ಇರಲಿಲ್ಲ, ಮೊನ್ನೆ ಹಾಗಾಯ್ತು, ಬಹುಶಃ ಬಹಳ ದಿನಗಳ ಮೇಲೆ ಗಾಡಿ ಓಡಿಸಿದ್ದಕ್ಕೆ ಹೀಗಾಯ್ತೋ ಗೊತ್ತಿಲ್ಲ.
ಶ್ರೀನಾಥ್ ಭಲ್ಲೆ ಅಂಕಣ; ತಾಳ ಬೇಕು ತಕ್ಕ ಮೇಳ ಬೇಕು
ದಟ್ಟವಾದ ಮರಗಿಡಬಳ್ಳಿಗಳ ನಡುವೆ ಸೂರ್ಯಕಿರಣ ನುಸುಳುವುದಕ್ಕೂ ಜಾಗ ಇಲ್ಲದೇ ಇರುವಾಗ, ಆ ಶ್ರೀರಾಮನ ಜೊತೆಗೂಡಿ ಲಕ್ಷ್ಮಣ ಮತ್ತು ಸೀತಾಮಾತೆ ಅದೆಷ್ಟು ಓಡಾಡಿದ್ದರೋ ಪಾಪ? ಆಮೇಲೆ, ಆ ಮಾತೆಯನ್ನು ಹುಡುಕಿಕೊಂಡು ಹೊರಟ ರಾಮ ಮತ್ತು ಲಕ್ಷ್ಮಣರಿಗೆ ಇನ್ನೆಷ್ಟು ಕಷ್ಟವಾಗಿರಬೇಕು? ಬೇಕಾದಷ್ಟು ಸಮಯವಿದೆ ಹುಡುಕಬಹುದು ಎನ್ನುವ ಮಾತೇ ಇಲ್ಲ ಇಲ್ಲಿ. ಏಕೆಂದರೆ ಹೊತ್ತೊಯ್ದವ ದುಷ್ಟ ರಾವಣನು ಒಂದೆಡೆಯಾದರೆ, ಇಂತಿಷ್ಟೇ ಸಮಯದಲ್ಲಿ ವಾಪಸ್ ಬಾರದಿದ್ದರೆ ತಾನು ಅಗ್ನಿಪ್ರವೇಶ ಮಾಡುತ್ತೇನೆ ಎಂದಿದ್ದ ತಮ್ಮನಾದ ಭರತ. ಇಂಥ ಅಡಕತ್ತರಿಯಲ್ಲಿ ಸಿಲುಕಿ ಸೀತೆಯನ್ನೂ ಹುಡುಕಿ, ರಾವಣನ ಸಂಹಾರ ಮಾಡಿ, ಸಮಯಕ್ಕೆ ಸರಿಯಾಗಿ ವಾಪಸ್ ಕೂಡ ಆಗಿದ್ದು ನೋಡಿದಾಗ ರಾಮಾಯಣದಿಂದ time management ಕಲಿಯಬೇಕು ಅನ್ನಿಸದೇ ಇರಲಿಲ್ಲ.
ರಾಮಾಯಣ ತಲೆಯಲ್ಲಿ ಓಡಾಡುತ್ತಿತ್ತು. ಅಲ್ಲೊಂದೆಡೆ ಅರ್ಥಾತ್ ಬೆಟ್ಟದ ಮೇಲೊಂದು amphi ಥಿಯೇಟರ್ ಗೆ ಹೋದೆವು. ಪಾರ್ಕಿಂಗ್ ಲಾಟ್ ನಲ್ಲಿ ಇದ್ದುದು ನಮದೊಂದೇ ಕಾರು. ಈ ಮುಂಚೆಯೇ ನನ್ನ ಚೀಲದಲ್ಲಿ ಹಾಡಿನ ರೆಕಾರ್ಡಿಂಗ್ ಮಾಡಲು ಸಾಧನಗಳನ್ನು ಇಟ್ಟುಕೊಂಡಿದ್ದೆ. ಆದರೆ ವಿಪರೀತ ಗಾಳಿ ಮತ್ತು ಚಳಿ ಇದ್ದುದರಿಂದ ಹಾಡುವ ಸಾಹಸ ಮಾಡಲಿಲ್ಲ. ಅಲ್ಲಿಂದ ವಾಪಸ್ ಬರುವಾಗ ಒಂದು ದೊಡ್ಡ ಬಂಡೆ ಕಾಣಿಸಿತು. ಇನ್ನೂ ಇಲ್ಲೇ ಇದ್ದೀಯಾ ಅಹಲ್ಯಾ ಮಾತೆ ಎಂದು ಕೇಳಿಯೇಬಿಟ್ಟೆ. ಬಂಡೆ ಬಾಯಿಬಿಟ್ಟು ಆಡದೇ ಇದ್ದರೂ, ನನಗೆ ಕೇಳಿಸಿದ್ದು ರಾಮನ ಪಾದ ತಾಗಿ ಮುಕ್ತಿ ಸಿಕ್ಕಿದ್ದು ಒಬ್ಬ ಅಹಲ್ಯೆಗೆ ಮಾತ್ರ. ಅವನ ಪಾದಸ್ಪರ್ಶಕ್ಕೆ ಕಾದಿರುವ ಅಹಲ್ಯೆಯರು ಈ ಜಗತ್ತಿನಲ್ಲಿ ಬೇಕಾದಷ್ಟು ಮಂದಿಯಿದ್ದಾರೆ. ಕೇವಲ ಶಾಪಗ್ರಸ್ತ ಅಹಲ್ಯೆಯರೇ ಅಲ್ಲ ಬದಲಿಗೆ ಅವನನ್ನು ಭಕ್ತಿಯಿಂದ ಪೂಜಿಸುತ್ತಲೇ ಕಾಯುತ್ತಿರುವ ಶಬರಿಯರೂ ಎಲ್ಲೆಲ್ಲೂ ಇದ್ದಾರೆ, ಅಂತ.
ಶ್ರೀನಾಥ್ ಭಲ್ಲೆ ಅಂಕಣ; ಅಷ್ಟು ಇಷ್ಟಾಗಿದ್ದು, ಇಷ್ಟು ಅಷ್ಟಾಗಿದ್ದು...
ಈ ಕಾಡುಮೇಡು ರಾಮಾಯಣಕ್ಕೆ ಮಾತ್ರವಲ್ಲದೆ ಮಹಾಭಾರತದಲ್ಲೂ ಮುಂದುವರೆಯಿತು ಎನ್ನಬಹುದು. ಶಾಪಗ್ರಸ್ತ ಪಾಂಡುಮಹಾರಾಜ ಕಾಡಿಗೆ ಹೋದ ಮೇಲೆ ಅವನ ಸಾವಿನವರೆಗೂ ಅವನ ಸಂಸಾರಸ್ಥರೆಲ್ಲಾ ವನವಾಸಿಗಳೇ ಆಗಿದ್ದರು. ಬಾಲ್ಯದಲ್ಲೇ ಅಭ್ಯಾಸವಿದ್ದುದರಿಂದಲೋ ಏನೋ ಆ ನಂತರ ವನವಾಸಿಗಳಾದಾಗ ಪಾಂಡವರಿಗೆ ಬಹುಶಃ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ತ್ರೇತಾಯುಗದಿಂದ ಸರಿದ ಮನಸ್ಸು ದ್ವಾಪರಯುಗಕ್ಕೆ ಜಾರಿತ್ತು.
ಎಲ್ಲೆಲ್ಲೂ ಮರಗಿಡಗಳು ಇದೆ ಅಂದ ಮೇಲೆ ಹಕ್ಕಿಗಳಿಗೇನು ಕಡಿಮೆ? ಅಂದು ದ್ರೋಣಾಚಾರ್ಯರು ಒಂದು ಮರದ ಮೇಲೆ ಗಿಳಿಯ ಗೊಂಬೆಯನ್ನು ಕೂರಿಸಿಟ್ಟು ತಮ್ಮ ವಿದ್ಯಾರ್ಥಿಗಳಿಗೆ ಮರದ ಮೇಲೆ ಏನು ಕಾಣುತ್ತಿದೆ ಎಂದು ಕೇಳುತ್ತಾರೆ. ಕೆಲವರಿಗೆ ಹಸಿರು ಸಿರಿಯಾ ಮಧ್ಯೆ ಹಸಿರು ಗಿಳಿಯೂ ಕಾಣಲಿಲ್ಲ. ಕೆಲವರಿಗೆ ಗಿಳಿಯ ಬರೀ ಕಣ್ಣು ಕಾಣದೇ ಇಡೀ ಗಿಳಿಯೇ ಕಂಡಿತು. ಅರ್ಜುನನು ಗಿಳಿಯ ಕಣ್ಣನ್ನು ಮಾತ್ರ ಗಮನವಿಟ್ಟು ನೋಡಿ ನಂತರ ಬಾಣವನ್ನೂ ಬಿಟ್ಟು ಅದನ್ನು ಕೆಳಕ್ಕೆ ಉರುಳಿಸುತ್ತಾನೆ. ಮತ್ತೊಂದು ವಿಶಿಷ್ಟ ಕಥೆಯ ಪ್ರಕಾರ ಧರ್ಮರಾಯನಿಗೆ ಅಲ್ಲಿ ಕೇವಲ ಒಂದು ಗಿಳಿಯ ಬದಲಿಗೆ ಅಲ್ಲೊಂದು ಪರಿಸರ ಸಂಪತ್ತೇ ಕಂಡಿತ್ತು. ತಾನು ತನ್ನ ಭಲ್ಲೆಯಿಂದ ಆ ಪಕ್ಷಿಯನ್ನು ಬೀಳಿಸಿದಲ್ಲಿ ಅಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ ಎಂಬ ಚಿಂತೆ ಮೂಡಿತಂತೆ. ಇಂಥ ಧರ್ಮರಾಯನಿಗೆ ನಾಡಿಗಿಂತ ಕಾಡೇ ಹೆಚ್ಚು ಪ್ರೀತಿ ಇತ್ತು ಅನ್ನೋದು ಖಚಿತವಾಗಿ ಅರಿವಾಗುತ್ತದೆ.
ಇಷ್ಟೆಲ್ಲದರ ನಡುವೆ ನಾವು ಅಲ್ಲಿಗೆ ಹೋಗಿದ್ದಾದರೂ ಏಕೆ? ಬೇಸಿಗೆ ಮುಗಿದು ಈಗ ಮರಗಿಡಗಳ ಎಲೆಗಳ ಬಣ್ಣ ಹಸಿರು ಕಳೆದುಕೊಂಡು ಮುದಿಯಾಗಿ ನೆಲಕ್ಕೆ ಬೀಳುವ ಕಾಲ. ಹಸಿರು ಹಳದಿಯಾಗಿ, ಹಳದಿಯು ಕಿತ್ತಳೆಯಾಗಿ, ನಂತರ ಕಂದಾಗಿ ಕೊನೆಗೆ ತಾನಾಗಿಯೋ ಅಥವಾ ಗಾಳಿಗೋ ಮಳೆಗೋ ಕೆಳಕ್ಕೆ ಉದುರಿ ಕೊನೆಯಾಗುತ್ತದೆ. ಎಲ್ಲ ಮರಗಿಡಗಳ ಎಲೆಗಳೂ ಒಮ್ಮೆಲೇ ಒಂದೇ ರೀತಿ ಬಣ್ಣ ಬದಲಾಗದೇ ಇರೋದ್ರಿಂದಲೇ ಅಲ್ಲೊಂದು ಪ್ರಕೃತಿ ವಿಸ್ಮಯ ಕಣ್ಣಿಗೆ ಕಾಣೋದು. ಪ್ರತೀ ಬಾರಿ ಈ ಒಂದು ಚಿತ್ರಣ ನನಗೆ fruit cake ನೆನಪನ್ನು ಮೂಡಿಸುತ್ತದೆ ಎಂದರೆ ಅಚ್ಚರಿಯಿಲ್ಲ.
ಮಾನವ ಜೀವನಕ್ಕೂ ಈ ಮರಗಿಡಗಳ ಜೀವನಕ್ಕೂ ಬಹಳ ಮುಖ್ಯವಾದ ವ್ಯತ್ಯಾಸವೆಂದರೆ ಉಗಾದಿ ಗೀತೆಯಲ್ಲಿ ಉಲ್ಲೇಖಿಸಿರುವಂತೆ ವರುಷಕೊಂದು ಹೊಸತು ಜನ್ಮ. ಪ್ರತೀ ವರುಷ ಈ ಅಂದ ಚೆಂದ ಮೆರೆದು ಮಣ್ಣಲ್ಲಿ ಮಣ್ಣಾಗಿ ಸೇರಿಹೋಗುತ್ತವೆ ಈ ಎಲೆಗಳು. ಆ ನಂತರ ಬೋಳಾದ ಮರಗಳು ತನ್ನ ಮೇಲೆ ಬೀಳುವ ಹಿಮಕ್ಕಾಗಿ ಕಾದು ಕುಳಿತಿರುತ್ತದೆ. ಕಾಲ ಮುಂದುವರೆದಂತೆ ಅದೂ ಹೊರಟು ಸಾಗಿ ಚೈತ್ರ ಮೂಡುತ್ತಿದ್ದಂತೆಯೇ ಮತ್ತೆ ಹಸಿರು. ಬಣ್ಣ ಕಳೆದುಕೊಂಡು ಆದರೆ ರಂಗೇರಿಸಿಕೊಂಡು ತನ್ನತ್ತ ಲಕ್ಷಾಂತರ ಜನರನ್ನು ಕೂಗಿ ಕರೆಯುವ ವನ್ಯಸಿರಿಯ ಸೌಭಾಗ್ಯ ಮನುಜನಿಗೆ ಇಲ್ಲ.
ಇಷ್ಟೆಲ್ಲಾ ಆದ ಮೇಲೆ ಹಲವಾರು ಚಿತ್ರಗಳನ್ನು ತೆಗೆದುಕೊಂಡು ಹೊರಟು ಬರುವಾಗ ಅನ್ನಿಸಿದ್ದು ಎರಡು ವಿಚಾರಗಳು. ಮೊದಲಿಗೆ ಮನಸ್ಸನ್ನು ಕಟ್ಟಿ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಹೆಚ್ಚು ಆಲೋಚನೆ ಮಾಡಬಾರದು ಎಂದುಕೊಂಡರೂ ಹಲವಾರು ಆಲೋಚನೆಗಳು ಸಾಗಿಯೇ ಇತ್ತು.
ಎರಡನೆಯ ವಿಚಾರ ಎಂದರೆ ಪ್ರಶ್ನೆಗಳಿಲ್ಲದ ಹೊತ್ತು, ಸವಾಲುಗಳು ಇಲ್ಲದ ಜೀವನ, ವಿಷಯವೇ ಇಲ್ಲದ ವಿಚಾರಗಳು ಇಲ್ಲವೇ ಇಲ್ಲ ಅಂತ. ನೀವೇನಂತೀರಾ?