ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ 'ಮೀ ಟೂ' ಎಂಬ ಅಭಿಯಾನ
ಈಚೆಗೆ ಆರಂಭವಾಗಿರುವ ಆದರೆ ಅನಾದಿಕಾಲದಿಂದಲೂ ಚಾಲ್ತಿಯಲ್ಲಿರುವ ಒಂದು ಕ್ರೂರ ವ್ಯವಸ್ಥೆಯ ವಿರುದ್ಧ ಹುಟ್ಟಿಕೊಂಡಿರುವ ಅಂತರ್ಜಾಲದ ಕೂಗು ಎಂದರೆ 'ಮೀ ಟೂ' ಎಂಬ ಅಭಿಯಾನ.
ಸಿನಿಮಾ ಪ್ರಪಂಚವೆಂಬ ಮೇರುಪರ್ವತ ಏರುವ ಕನಸು ಕಾಣುತ್ತ ಆ ಪರ್ವತದ ಟ್ರೆಕ್ಕಿಂಗ್'ನ ಹಾದಿಯಲ್ಲಿ ಸಾಗುತ್ತ ಉಳಿದವರೆಷ್ಟು ಮಂದಿ ಇದ್ದಾರೋ ಅಳಿದವರೂ ಅಷ್ಟೇ ಮಂದಿ ಇದ್ದಾರೆ. ಈ ಅಳಿದ ಅಥವಾ ಆಳಿದ ಜೀವನದಲ್ಲಿ ಅದೃಷ್ಟದಾಟದ ಪಾಲು ಎಷ್ಟಿದೆಯೋ ಅಷ್ಟೇ ಪಾಲು 'God Father'ಗಳದ್ದೂ ಇದೆ. ಈ God Father'ಗಳು ಕೈ ಹಿಡಿದು ನಡೆಸುವ ತಂದೆಯಾಗಿದ್ದಿದ್ದರೆ ಲೋಕದಲ್ಲಿ ಅವ್ಯವಹಾರಗಳೇ ಇರುತ್ತಿರಲಿಲ್ಲ. ಈ ಲೇಖನ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ.
ತಮ್ಮ ಲೋಲೋಪ್ತಿಗೆ ಅಮಾಯಕರನ್ನು ಬಳಸಿಕೊಳ್ಳುವ ಮಂದಿಯಿಂದ ಪ್ರತಿಯೊಂದು ರಂಗವೂ ನರಳುತ್ತಿವೆ.
ಇತ್ತೀಚಿಗೆ ಬಯಲಿಗೆ ಬಂದ ಹಾಲಿವುಡ್ ಪ್ರಪಂಚದ ಶೋಷಣೆ ಎಂದರೆ 'ಹಾರ್ವೆ ವೆಯ್ನ್ ಸ್ಟೀನ್'ನ ಕೆಟ್ಟ ಚಾಳಿ. ಹಾಲಿವುಡ್ ಪ್ರಪಂಚದ 'ಮೊಗಲ್' ಎಂದೇ ಗುರುತಿಸಿಕೊಂಡಿದ್ದ ಈತ ಎಷ್ಟು ಹೆಂಗಳ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದರೆ ನಂಬಲಸಾಧ್ಯ. ಈವರೆಗೆ ಕನಿಷ್ಠ ಐವತ್ತು ಮಂದಿ ತಾರೆಯರು ಅವನ ವರ್ತನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇವರ ಕೆಟ್ಟ ಅನುಭವ ಇಂದಿನದ್ದಲ್ಲ. ತಾವು ಚಿಕ್ಕವಯಸ್ಸಿನಲ್ಲಿ ಚಿತ್ರರಂಗ ಹೊಕ್ಕಾಗ ನಡೆದ ಘಟನೆಗಳು.
ಯುವತಿಗೆ ಲೈಂಗಿಕ ಕಿರುಕುಳ, ಬೆಂಗಳೂರಿನ ಖಾಸಗಿ ಕಂಪನಿ ಸಿಇಒ ಬಂಧನ
ಹಣ, ಮತ್ತು ಅಧಿಕಾರ ಕೈಯಲ್ಲಿಟ್ಟುಕೊಂಡು ಪ್ರತಿ ಸನ್ನಿವೇಶವನ್ನೂ ತನಗೆ ಬೇಕಾದ ಹಾಗೆ ಬಳಸಿಕೊಂಡು ಅಟ್ಟಹಾಸದಿಂದ ಮೆರೆದವನ ಬಗ್ಗೆ ಓದುತ್ತಿದ್ದರೆ ಹೇಸಿಗೆಯಾಗುತ್ತದೆ. ಬಾಯಿಬಿಟ್ಟು ಹೇಳಿಕೊಂಡು ಶೋಷಣೆಯ ವಿರುದ್ಧದ ಕೂಗಿಗೆ ದನಿಗೂಡಿಸಿರುವವರು ಐವತ್ತು ಮಂದಿ ಇರಬಹುದು, ಆದರೆ ಇನ್ನೂ ಬಾಯಿ ಕಟ್ಟಿಹಾಕಿಕೊಂಡು ಕೂತವರೆಷ್ಟೋ? ಈತನ ಶೋಷಣೆಯ ವಿರುದ್ಧ ಇತ್ತೀಚಿಗೆ ಶುರುವಾದ ಈ ಕೂಗು ಕಾಳ್ಗಿಚ್ಚಿನಂತೆ ಹಬ್ಬಿದೆ.
ಇಂಥಾ ಶೋಷಣೆ ಬರೀ ಸಿನಿಮಾ ರಂಗಕ್ಕೆ ಮಾತ್ರ ಮೀಸಲಾಗಿರದೆ ಮ್ಯೂಸಿಕ್ ಉದ್ಯಮ, ವಿಧ್ಯಾಭ್ಯಾಸ, ಬಟ್ಟೆ ತಯಾರಿಕೆಯೇ ಅಲ್ಲದೆ ರಾಜಕೀಯದಲ್ಲೂ ಇದೆ ಎಂಬುದು ಈ ಕೂಗಿನಿಂದ ಅರಿವಿಗೆ ಬಂದಿದೆ. ತಮ್ಮ ಜೀವನದಲ್ಲಿ ತಮಗಾದ ಶೋಷಣೆಯ ಬಗ್ಗೆ ದಿನನಿತ್ಯದಲ್ಲಿ ಎಷ್ಟೋ ಮುಂದೆ ಬಂದು ಹೇಳಿಕೊಳ್ಳುತ್ತಿದ್ದಾರೆ. ಇವರೆಲ್ಲರ ಉದ್ದೇಶ ಒಂದೇ. ಅನ್ಯಾಯದ ವಿರುದ್ಧ ಕೂಗು ಮತ್ತು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಮತ್ತು ಎಚ್ಚರಿಕೆ ಮೂಡಿಸುವ ಪ್ರಯತ್ನ.
ನಟಿ ಮೇಲೆ ಲೈಂಗಿಕ ದೌರ್ಜನ್ಯ: ನಟ ದಿಲೀಪ್ ಗೆ ಜೈಲೇ ಗತಿ
ಹಾರ್ವೆ ಪ್ರಕರಣ ಈಗ ಹೊರ ಬಂದಿದ್ದರೂ ಇಂಥಾ ಪ್ರಸಂಗ ಇದೇ ಮೊದಲಲ್ಲ. ಕಳೆದ ಮೂರು ವರ್ಷಗಳ ಹಿಂದೆ ಬಿಲ್ ಕಾಸ್ಬಿ ಎಂಬ ಕಮೀಡಿಯನ್ ನಟನ ರೂಪದಲ್ಲಿ ಗುಲ್ಲೆಬ್ಬಿಸಿತ್ತು. ಪ್ರಕರಣ ಇನ್ನೂ ಮುಗಿದಿಲ್ಲ. ಈ ಮಹಾಶಯ ತನ್ನ ನಲವತ್ತು ವರುಷಗಳ ಸಿನಿಮಾ ಮತ್ತು ಟೆಲಿವಿಷನ್ ಲೋಕದಲ್ಲಿ ಎಷ್ಟೋ ಜನರನ್ನು ಶೋಷಣೆ ಮಾಡಿದ್ದಾನೆ ಎಂಬ ಆರೋಪ ಇದೆ.
ಇದೇ ಸನ್ನಿವೇಶವನ್ನು ಒಂದು ಟೆಂಪ್ಲೇಟ್ ಆಗಿ ಇರಿಸಿಕೊಂಡು ಜಗತ್ತಿನಲ್ಲಿ ಯಾವುದೇ ಉದ್ಯಮಕ್ಕೆ ಹಿಡಿದಾಗ ಇಂಥಾ ನೀಚ ಬುದ್ದಿಯವರು ಕಂಡೇ ಕಾಣುತ್ತಾರೆ. ಶೋಷಣೆ ಎಲ್ಲೆಲ್ಲೂ ಇದೆ ಆದರೆ ಥಳಕು ಲೋಕದಲ್ಲಿ ಅತೀ ಹೆಚ್ಚು ಎಂದರೆ ಸುಳ್ಳಲ್ಲ. ಇಂಥಾ ನೀಚರ ವಿರುದ್ಧ ಈಜಿ ಹೇಳಹೆಸರಿಲ್ಲದೆ ಹೋದವರು ಎಷ್ಟೋ ಜನರಿದ್ದಾರೆ. ಇಂಥಾ ನೀಚರ ವಿರುದ್ಧ ಹೋರಾಡಿ ಪ್ರಾಣವನ್ನೇ ಕಳೆದುಕೊಂಡವರೂ ಕಡಿಮೆ ಏನಿಲ್ಲ. ಅತ್ಯಂತ ಶೋಚನೀಯ ಎಂದರೆ ವಿಧಿಯಿಲ್ಲದೇ ಪರಿಸ್ಥಿತಿಯ ವಿಕೋಪಕ್ಕೆ ಸಿಕ್ಕಿ ಇಂಥವರಿಗೆ ತಲೆಬಾಗಿ ಬಾಯಿ ಕಟ್ಟಿಹಾಕಿಕೊಂಡಿರುವವರು ಇಂದಿಗೂ ಎಲ್ಲೆಲ್ಲೂ ಇದ್ದಾರೆ.
ಈ ಶೋಷಣೆಯ ಮೂಲ ರೂಪ ಒಂದಿದೆ. ಈವರೆಗೆ ಕಂಡ ಸನ್ನಿವೇಶ ಎಂದರೆ ಕಾಸ್ಬಿ / ಹಾರ್ವೆ ಮತ್ತು ನಟಿಯರು. ಇವರು ನಡೆಸುತ್ತಿದ್ದ ಕಂಪನಿಯ ಶೋಗಳಲ್ಲಿ / ಸಿನಿಮಾಗಳಲ್ಲಿ ನಟಿಸುವ / ನಟಿಸುತ್ತಿದ್ದ ನಟಿಯರೆಂಬ ಕೆಲಸಗಾರರು. ಕಂಪನಿಯ ಒಡೆಯ ಮತ್ತು ಕೆಲಸಗಾರರು ಎಂಬ ಈ ಸನ್ನಿವೇಶದಲ್ಲಿ ಆ ಒಡೆಯ ಅನ್ನಿಸಿಕೊಂಡವನು ತನ್ನ ಕೆಲಸಗಾರರನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎಂಬ Workplace Harassment'ಯೇ ಈ ಶೋಷಣೆಯ ಮೂಲ ರೂಪ.
ಹಾರ್ವೆ ಸನ್ನಿವೇಶವನ್ನೇ ತೆಗೆದುಕೊಂಡರೆ, ಸಾಮಾಜಿಕ ತಾಣದಲ್ಲಿ ಕೆಲವರ ಪ್ರಶ್ನೆ ಹೀಗಿದೆ "ಇಷ್ಟು ದಿನ ಏನ್ ಮಾಡ್ತಿದ್ರಂತೆ ಈ ಅಮ್ಮಣ್ಣಿಗಳು? ಆಗ್ಲೇ ಬಾಯಿಬಿಡಬಹುದಿತ್ತು ತಾನೇ? ತಮಗೆ ಬೇಕಾದಾಗ ಏಣಿಯ ಹಾಗೆ ಬಳಸಿಕೊಳ್ಳುತ್ತಾರೆ. ಅವನು ಕೆಳಗೆ ಬಿದ್ದಾಗ ಆಳಿಗೊಂದು ಕಲ್ಲು ಅಂತ ಒಗೀತಿದ್ದಾರೆ" ಅಂತ. ಜಗತ್ತಿನಲ್ಲಿ ಇಂಥಾ ವಿದ್ಯಾವಂತರೂ ಇದ್ದಾರೆ ಅನ್ನೋದೇ ದೊಡ್ಡ ಖೇದ. ಅಕ್ಷರಸ್ತರೇ ಬೇರೆ, ವಿದ್ಯಾವಂತರೇ ಬೇರೆ. ಏನಂತೀರಿ?
ಆಗಲೇ ಹೇಳಿದಂತೆ ಅನಾದಿಕಾಲದಿಂದಲೂ ಈ ಅನ್ಯಾಯ ಇದ್ದೇ ಇದೆ. ಜೂಜಿನಲ್ಲಿ ಸೋತು ಅಡಿಯಾಳಾದವರು ತಮ್ಮ ವಿರುದ್ಧ ದನಿ ಎತ್ತಲಾರದೆ ಬಾಯಿಮುಚ್ಚಿಕೊಂಡಿರಬೇಕು ಎಂಬ ಸಂದರ್ಭವನ್ನೇ ಬಳಸಿಕೊಂಡು ದ್ರೌಪದಿಯ ವಸ್ತ್ರಾಪಹರಣ ನಡೆಸಿದ ದುರ್ಯೋಧನ. ವಿರಾಟನಿದ್ದರೂ, ತಾನೇ ಧಣಿಯಂತೆ ಇರುವುದರಿಂದ ತನ್ನ ಇಚ್ಛೆಯಂತೆ ನಡೆಯಬೇಕು ಎಂಬ ಅಧಿಕಾರದಿಂದ ಕೀಚಕ ನಡೆದುಕೊಂಡ. ಕೀಚಕ ಧಣಿಯಲ್ಲದೆ ಹೋಗಿದ್ದರಿಂದ ಆ ಮುಳ್ಳನ್ನು ಅಲ್ಲೇ ಕಿತ್ತುಹಾಕಲಾಯಿತು. ಆ ಸಾಮ್ರಾಜ್ಯಕ್ಕೆ ಅವನೇ ಧಣಿಯಾಗಿದ್ದರೆ, ದನಿ ಏಳುತ್ತಿತ್ತೋ ಇಲ್ಲವೋ ಗೊತ್ತಿಲ್ಲ.
ಹೌದು, ದಿನ ನಿತ್ಯದ ಜೀವನದಲ್ಲಿ ಹೆಣ್ಣು ಇಂಥಾ ನೀಚರ ಶೋಷಣೆಗೆ ಒಳಗಾಗುತ್ತಲೇ ಇರುತ್ತಾಳೆ ಅಂತ ಸಾರಾಸಗಟಾಗಿ ಸಾರುವ ಮಂದಿ ಸಿಕ್ಕಾಪಟ್ಟೆ ಇದ್ದಾರೆ. ಶೋಷಣೆಗೆ ಗಂಡು ಹೆಣ್ಣು ಎಂಬ ಭೇದವಿಲ್ಲ. ಸಂದರ್ಭ ಹೇಗಿತ್ತು ಎಂದರೆ ಮಹಾರಥಿ ಅರ್ಜುನ 'ಬೃಹನ್ನಳೆ' ಆಗಬೇಕಾಯ್ತು! ಗದೆಯನ್ನು ಪಿಡಿಯುವ ಭೀಮಸೇನ ಅಡುಗೆಯ ಸೌಟು ಹಿಡಿಯಬೇಕಾಯ್ತು. ಇವೆಲ್ಲಾ ಪುರಾಣದ ಕಥೆ ಸ್ವಾಮಿ. ನಡೆದಿತ್ತೋ ಇಲ್ಲವೋ ಗೊತ್ತಿಲ್ಲ, ಇಂದಿನ ಉದಾಹರಣೆ ನೀಡಿ ಅಂದಿರಾ?
ಒಂದೇ ಒಂದು ಉದಾಹರಣೆ ಸಾಕು. ಸರಕಾರೀ ಕಚೇರಿಯಲ್ಲಿ ಸಂಬಳಕ್ಕೆ ದುಡಿಯುತ್ತಿದ್ದರೂ ತನ್ನ ಮೇಲಧಿಕಾರಿ ವಹಿಸುವ ಮನೆಕೆಲಸಗಳನ್ನು ಇಷ್ಟವಿಲ್ಲದಿದ್ದರೂ ಮಾಡುವ ಎಷ್ಟು ಮಂದಿ ಪ್ಯೂನ್ (poen)'ಗಳಿಲ್ಲ? ಸ್ಕೂಲಿನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಆಯಾ, ಶಾಲೆ ನಡೆಯುವ ವೇಳೆ ಮುಖ್ಯೋಪಾದ್ಯರ ಕಾರು ತೊಳೆಯುತ್ತಿದ್ದುದನ್ನು ನಾನೇ ನೋಡಿದ್ದೇನೆ.
ಫುಟ್ ಬಾಲ್ locker ರೂಮಿನಲ್ಲಿ ನಡೆವ ವರ್ಣ ಭೇದದಲ್ಲಿ ಬಲಿಪಶುಗಳು ಪುರುಷರೇ. ಶೋಷಣೆ ಕೇವಲ ಮಹಿಳೆ ಬಗ್ಗೆ ಅಲ್ಲದೆ ಪುರುಷರ ಮೇಲೂ ಎಲ್ಲೆಲ್ಲೂ ನಡೆಯುತ್ತದೆ.
ಇಂಥದ್ದೇ ಮತ್ತೊಂದು ಗಂಭೀರವಾದ ವಿಷಯ ಎಂದರೆ ಮತ್ತೊಬ್ಬರ ಧರ್ಮದ ಬಗ್ಗೆ ಹೀಯಾಳಿಸುವಂತೆ ವರ್ತಿಸುವುದು. ಈ ವಿಷಯದ ಗಂಭೀರತೆ ಎಷ್ಟು ಎಂದರೆ ಇದು ಒಂದು ಸಂಸ್ಥೆಯ ಅಥವಾ ಸಂಸ್ಥೆಗಳ ವಿಷಯವಾಗದೆ ದೇಶಗಳ ನಡುವಿನ ಸಮಸ್ಯೆಯೂ ಆಗಿ ಉಲ್ಬಣಗೊಂಡು ಏನೆಲ್ಲಾ ಅನಾಹುತವಾಗುವ ಅಪಾಯ ಸೃಷ್ಟಿಸಿದೆ, ಸೃಷ್ಟಿಸುತ್ತಲೇ ಇದೆ.
ಸೂತ ಎನಿಸಿಕೊಂಡೇ ಜೀವನದುದ್ದಕ್ಕೂ ಬದುಕು ಸವೆಸಿದ ಕರ್ಣ'ನ ಕಾಲದಿಂದಲೂ ಇದೊಂದು ಅತೀ ಗಂಭೀರ ಸಮಸ್ಯೆಯೇ ಆಗಿದೆ.
ಜಾತಿ ಭೇದ, ವರ್ಣ ಭೇದ, ಹೆಣ್ಣು-ಗಂಡು ಎಂಬ ಲಿಂಗ ಭೇದ ಎಂಬುದೆಲ್ಲ ಕಚೇರಿಗಳಲ್ಲಿ ಕೆಲವೊಮ್ಮೆ ಎದ್ದು ಕಂಡರೆ ಮತ್ತೆ ಕೆಲವೊಮ್ಮೆ ಚಾಪೆ ಅಡಿಯಲ್ಲೇ ಮಲಗಿ ಕುಟುಕುತ್ತಾ ಇರುತ್ತದೆ.
ಒಂದರ್ಥದಲ್ಲಿ ನೋಡಿದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲೂ ಒಂದಲ್ಲಾ ಒಂದು ರೀತ್ಯಾ ಶೋಷಣೆಗೆ ಒಳಗಾಗಿರುತ್ತಾರೆ. ಇಲ್ಲದವರು ಅದೃಷ್ಟವಂತರು. ಪ್ರತಿಯೊಬ್ಬರ "ಮೀ ಟೂ" ಕಥೆಗಳನ್ನು ಕೇಳಲು ಈ ಜನ್ಮ ಸಾಲದು ಅಲ್ಲವೇ?
ಇಂಥಾ ಸಂದರ್ಭ ಇದೇ ಅಂತಲೇ ಅದನ್ನು ಬಳಸಿಕೊಳ್ಳುವ ಜಾಣ ನೀಚರು ಇರುತ್ತಾರೆ. ಪಾಪದ ಕೊಡ ತುಂಬಿದಾಗ ಎನ್ನುತ್ತಾರಲ್ಲಾ ಹಾಗಾದಾಗ ಒಂದು ಆಂದೋಲನ ಹುಟ್ಟಿ ಭುಗಿಲೆದ್ದು ನೀಚರ ದಮನವಾಗುತ್ತದೆ (?). ಕುಹಕ ಬಿಟ್ಟು ಅನ್ಯಾಯದ ವಿರುದ್ಧ ಕೈಜೋಡಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಏನಂತೀರಿ?