ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯೆಂದರೆ ಉಲ್ಲಾಸದ ಋತುಗಾನ

By Staff
|
Google Oneindia Kannada News

Wish you happy summer
ಬೇಸಿಗೆಯೆಂದರೆ ಬೇಗೆ ಮಾತ್ರವಲ್ಲ ಬಂಧುಗಳೊಡನೆ ಕೂಡಿ ಆಡಿ ಮಜಾ ಮಾಡುವ ಕಾಲ. ಮಕ್ಕಳಿಗೆ ರಜಾ ದಿನಗಳಲ್ಲಿ ಅಜ್ಜಿ ಮನೆಗೆ ಹೋಗುವ ಕನಸು, ಯುವಕರಿಗೆ ಚಾರಣದ ಹುಮ್ಮಸ್ಸು, ಹಿರಿಯರಿಗೆ ಮಕ್ಕಳ ಮದುವೆ ಮಾಡಿ ಜವಾಬ್ದಾರಿ ಇಳಿಸಿಕೊಳ್ಳುವ ವಯಸ್ಸು. ರೋಗರುಜಿನಗಳಿಂದ ದೂರವಾಗಿ ಮನಸು ಕೂಡ ಉಲ್ಲಾಸದಾಯಕವಾಗಿರುತ್ತದೆ. ಹಿತಮಿತವಾದ ಆಹಾರ ಮತ್ತು ಸರಿಯಾದ ಕಾಳಜಿ ವಹಿಸಿದರೆ ಬೇಸಿಗೆ ನಿಮಗೆ ನಿಜಕ್ಕೂ ಆರಾಮದಾಯಕವಾಗಬಲ್ಲುದು. ಸೋ ಎಂಜಾಯ್ ಬೇಸಿಗೆ.

* ಶ್ರೀನಿಧಿ ಡಿ.ಎಸ್.

ಕಾಲ ಅಥವಾ ಸಮಯ ಎನ್ನುವುದು ಯಾರ ಕೈಗೂ ಸಿಗದ ಮಾಯಾಜಿಂಕೆ. ಇನ್ನೇನು ಕಾಲದ ವೇಗಕ್ಕೆ ನಾವು ಹೊಂದಿಕೊಳ್ಳುತ್ತಿದ್ದೇವೆ ಎನ್ನುವಷ್ಟರಲ್ಲಿ ತನ್ನ ಗತಿಯನ್ನು ಬದಲಿಸುವ ಕಾಲ ಮರೀಚಿಕೆ. ಆದರೂ ಮಾನವ ಬದಲಾಗುವ ಸಮಯದ ಸ್ವಭಾವವನ್ನು ಅಧ್ಯಯನ ಮಾಡಿ ವರ್ಷ, ತಿಂಗಳು ಎಂದೆಲ್ಲ ವಿಭಾಗಿಸಿದ್ದಾನೆ.

ಭಾರತೀಯ ಸಂಪ್ರದಾಯದಲ್ಲಿ, ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಲಾಗುತ್ತದೆ. ಪ್ರತಿ ಭಾಗಕ್ಕೂ ಮೂರು ಋತುಗಳನ್ನು ಸೇರಿಸಲಾಗಿದೆ. ಹೀಗೆ ಆಗುವ ಋತುಚಕ್ರದ ಬದಲಾವಣೆ ಮನುಷ್ಯನನ್ನು ಬದುಕಿನ ಹೋರಾಟಕ್ಕೆ, ಉಳಿವಿಗೆ ಮನುಷ್ಯನನ್ನು ದೈಹಿಕವಾಗಿ, ಮಾನಸಿಕವಾಗಿ ಸಜ್ಜುಗೊಳಿಸುತ್ತದೆ. ಸೂರ್ಯನ ಗತಿಯನ್ನು ಆಧರಿಸಿ ಮಾಡಿದ ಈ ವಿಭಾಗದ ಮೊದಲಿಗೆ ಬರುವಂತಹದ್ದು ಬೇಸಿಗೆ ಕಾಲ. ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಾದ ಈ ಯಾಂತ್ರಿಕ ಯುಗದಲ್ಲಿ ಬಹುತೇಕರಿಗೆ ಬೇಸಿಗೆ ಎನ್ನುವುದು ಬೇಗೆಯೇ.

ಭಾರತೀಯ ಪಂಚಾಂಗದ ಪ್ರಕಾರ ವರ್ಷದ 12 ತಿಂಗಳುಗಳನ್ನು ಮಾಸವಾಗಿ ವಿಭಾಗಿಸಿದ್ದಾರೆ. ಪ್ರತಿ ಎರಡು ಮಾಸಗಳಿಗೆ ಒಂದರಂತೆ ಆರು ಋತುಗಳನ್ನು ಮಾಡಿದ್ದಾರೆ. ಎರಡು ಋತುಗಳನ್ನು ಸೇರಿಸಿ ಮೂರು ಕಾಲಗಳನ್ನು ಮಾಡಿದ್ದಾರೆ. ಇವುಗಳಲ್ಲಿ ವಸಂತ ಮತ್ತು ಗ್ರೀಷ್ಮ ಋತುಗಳನ್ನು ಬೇಸಿಗೆಕಾಲ ಎನ್ನಲಾಗುತ್ತದೆ. ಅವುಗಳಲ್ಲಿ ಬಿಸಿಲಿನ ತಾಪ ಗ್ರೀಷ್ಮ ಋತುವಿನಲ್ಲಿ ಹೆಚ್ಚಾಗಿರುತ್ತದೆ. ವೇದಗಳಲ್ಲಿ ಬೇಸಿಗೆಯನ್ನು ದೇಹಶುದ್ಧಿಗೊಳಿಸುವ, ವಾತಾವರಣ ಅತ್ಯಂತ ಶುಭ್ರ ಮತ್ತು ಶುಚಿಯಾಗಿರುವ ಕಾಲ ಎಂದು ವರ್ಣಿಸಲಾಗಿದೆ.

ಪ್ರಾಚೀನ ಕವಿಗಳು ಉಳಿದ ಕಾಲಗಳಿಗೆ ಹೋಲಿಸಿದರೆ ಬೇಸಿಗೆಯ ಬಗ್ಗೆ ವರ್ಣಿಸಿರುವುದು ಕಡಿಮೆಯೇ. ಆದರೂ ಬೇಸಿಗೆಯಲ್ಲಿ ಹತ್ತಿ ಬಟ್ಟೆ ತೊಡುವುದು ಅನುಕೂಲ ಎಂದು ಭೋಜರಾಜನ ಕ್ಷೇಮಕುತೂಹಲ ಹೇಳುತ್ತದೆ. ಸೋಮೇಶ್ವರನ ಮಾನಸೋಲ್ಲಾಸ ಎನ್ನುವ ಗ್ರಂಥದಲ್ಲಿ ಅಭ್ಯಂತರ ಕ್ರೀಡಾ ಎಂದು ಸುಮಾರು 20 ಬಗೆಯ ಒಳಾಂಗಣ ಆಟಗಳನ್ನು ಉಲ್ಲೇಖಿಸಲಾಗಿದೆ. ಹಿಂದೆಲ್ಲ ರಾಜ ಮಹಾರಾಜರು ಜನರಿಗಾಗಿ ವಸಂತೋತ್ಸವ ಎಂದು ಏರ್ಪಡಿಸುತ್ತಿದ್ದರು. ಆ ಮೂಲಕ ಲಲಿತಕಲೆಗಳನ್ನು ಬೆಳೆಸುತ್ತಿದ್ದರು.

ಇನ್ನು ನಮ್ಮ ಹಳ್ಳಿಗಾಡಿನ ಜನರು ಬೇಸಿಗೆಯನ್ನು ಅನುಭವಿಸುವ ರೀತಿ ಬೇರೆ. ಅವರಿಗೆ ಮುಂದೆ ಬರುವ ಮಳೆಗಾಲಕ್ಕೆ ತಯಾರಿ ಮಾಡುವುದು ಬೇಸಿಗೆಯ ಬಹುಮುಖ್ಯ ಕೆಲಸ. ಬೇಸಿಗೆಯಲ್ಲಿ ಮದುವೆ, ಮಂಗಲ ಕಾರ್ಯಗಳು ನಡೆಯುವ ಪ್ರಮಾಣ ಜಾಸ್ತಿ. ಎಲ್ಲ ರೀತಿಯ ಕೌಟುಂಬಿಕ ಸಮಾರಂಭಗಳು ಈ ಬೇಸಿಗೆಯಲ್ಲೇ ಹೆಚ್ಚಾಗಿ ನಡೆಯುತ್ತವೆ.

ಚಳಿಗಾಲದಲ್ಲಿ ಹೂಬಿಟ್ಟ ಹಲವು ಕಾಡುಗಿಡಗಳು ಈ ಕಾಲದಲ್ಲಿ ವಿಶಿಷ್ಟವಾದ ಹಣ್ಣುಗಳನ್ನು ಬಿಡುತ್ತವೆ. ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಬಿಡುವ ಹಣ್ಣುಗಳು ಹೆಚ್ಚು ರುಚಿಯಾಗಿರುವುವಲ್ಲದೇ ಆರೋಗ್ಯಕ್ಕೂ ಪೂರಕ.

ಮಳೆಗಾಲದ ಬಿತ್ತನೆ, ನಾಟಿ ತೊಂದರೆಯಿಲ್ಲದ, ಜಿಟಿಜಿಟಿ ಮಳೆಯ ಕಾಟವಿರದ, ಚಳಿಗಾಲದ ಕೆಟ್ಟ ಛಳಿಯಿಲ್ಲದ, ಬೆಳೆದ ಫಸಲನ್ನು ಕಟಾವು ಮಾಡಿ ಕಣಜ ತುಂಬುವ ಜವಾಬ್ದಾರಿ ಯಾವುದೂ ಇಲ್ಲದ ವಿಶ್ರಾಂತಿಯ, ಮನೋರಂಜನೆಯ ಕಾಲ ಬೇಸಿಗೆ. ಹಾಗಾಗಿ ಜಾತ್ರೆ, ಉರುಸ್ ಮೊದಲಾದ ಉತ್ಸವಗಳೆಲ್ಲ ನಡೆಯುವುದು ಬೇಸಿಗೆಯಲ್ಲೇ. ಉರಿಉರಿ ಬಿಸಿಲಲ್ಲಿ ಊರ ಜನರೆಲ್ಲ ಸೇರಿ ಈ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತಾರೆ. ಸುಗ್ಗಿ ಮುಗಿಸಿದ ಜನರಿಗೆ ಸಂಭ್ರಮಿಸಲು, ಜೀವನಕ್ಕೆ ಹೊಸ ಉತ್ಸಾಹ ತುಂಬಿಕೊಳ್ಳಲು ಇವು ಅವಕಾಶ ಕಲ್ಪಿಸುತ್ತವೆ.

ಆದ್ದರಿಂದ ಬೇಸಿಗೆಯನ್ನು ಸಹಜವಾಗಿ ಸ್ವೀಕರಿಸುವುದು ಅತ್ಯವಶ್ಯ. ಇಂದಿನ ಬೇಸಿಗೆಯ ತೊಂದರೆಗೆ ಹಿಂದಿನವರು ಮತ್ತು ಜಾನಪದರು ಕಂಡುಕೊಂಡ ಉಪಾಯಗಳು ಆಧುನಿಕರಿಗೆ ಉಪಯೋಗವಾಗಬಲ್ಲವು. ಬೇಸಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ಯಾವಾಗ ರಜೆ ಕೊಡುತ್ತಾರೋ ಎಂಬ ಕಾತುರ. ಹದಿವಯಸ್ಸಿನವರಿಗೆ ಚಾರಣದ ಹುಮ್ಮಸ್ಸು. ವಯಸ್ಸಿಗೆ ಬಂದವರಿಗೆ ಮದುವೆಯಾಗುವ ಕಾಲ. ನಡುವಯಸ್ಸಿನವರಿಗೆ ಮಳೆಗಾಲಕ್ಕೆ ತಯಾರಿ ಮಾಡಬೇಕಾದ ಜವಾಬ್ದಾರಿ. ಹಿರಿಯರಿಗೆ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಕಾಲ.

ಬೇಸಿಗೆಯೆಂದರೆ ವರ್ಷದ ಕೆಲಸಕಾರ್ಯಗಳ ನಡುವೆ ದೇಹ-ಮನಸುಗಳಿಗೆ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಕಾಲ. ಹಿತಮಿತವಾದ ಆಹಾರ ಮತ್ತು ಸರಿಯಾದ ಕಾಳಜಿ ವಹಿಸಿದರೆ ಬೇಸಿಗೆ ನಿಮಗೆ ನಿಜಕ್ಕೂ ಆರಾಮದಾಯಕವಾಗಬಲ್ಲುದು.

ಬೇಸಿಗೆಯಲ್ಲಿ ನಿಮಗಾಗಿ
ಬೇಸಿಗೆ ಸ್ಪೆಷಲ್ ಮಾವಿನಕಾಯಿ ತಂಬಳಿ
ಪಾಕಶಾಲೆ: ಪಿಂಕ್‌ಲೇಡಿ ಕುಡಿದು ನೋಡಿ!
ಬೇಸಿಗೆಯ ಬಿಸಿ ಆರಿಸಲು ತಂಪು ಪಾನಕ
ಥಂಡಾ ಅಂದರೆ ಹುರಿಹಿಟ್ಟು, ಚಿಕ್ಕು ಷೇಕ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X