ಊಟಕ್ಕೆ ಮುದ್ದೆ ಇಲ್ಲದೇ ಇದ್ದರೆ ಊಟನೇ ಅಲ್ಲ ಸ್ವಾಮೀ!
ಸತತ ಒಂಭತ್ತು ದಿನ ಮತ್ತು ಅದರ ಮಾರನೇ ದಿನ ಆಚರಿಸಲಾಗುವ ಅಪ್ಪಟ ಕನ್ನಡನಾಡಿನ 24 ಕ್ಯಾರೆಟ್ ಹಬ್ಬ ದಸರಾ ಅಥವಾ ನವರಾತ್ರಿ. ಶುಭಾಶಯಗಳು.
ರಾಗಿ ಮುದ್ದೆ ತಯಾರಿಗೂ ಬಂತು ಅತ್ಯಾಧುನಿಕ ಯಂತ್ರ
ಹಬ್ಬ ಬಂತೆಂದರೆ ಮನೆಯ ಶೋಭೆ ವೃದ್ಧಿಸುತ್ತಿದ್ದವರು ಅಮ್ಮ, ಜತೆಗೆ ನನ್ನ ಅಕ್ಕ ಮತ್ತು ತಂಗಿ. ಅದೇನು ಸಂಭ್ರಮ, ಅದೇನು ಶ್ರದ್ದೆ, ಅದೇನು ಮುತುವರ್ಜಿ, ಅದೆಷ್ಟು ಸಿದ್ಧತೆ! ಅಬ್ಬಬ್ಬಾ.
ಅಣ್ಣ ತಂಮ್ಮಂದಿರಿಗೆ ಅಷ್ಟೇನು ಹೆಚ್ಚಿಗೆ ಕೆಲಸವಿಲ್ಲ. ಮಾರುಕಟ್ಟೆಯಿಂದ ಸಾಮಾನು ಸರಂಜಾಮು, ಕಟ್ಟಿಗೆ ಡಿಪೋದಿಂದ ಮಣ ಸೌದೆ ಹೊತ್ತು ತಂದುಹಾಕಿದರೆ ಅದೇ ದೊಡ್ಡ ಕೆಲ್ಸ.
ಎಲ್ಲರೂ ಸೇರಿ ಪೆಠಾರಿಯಲ್ಲಿ ಮಲಗಿದ್ದ ಗೊಂಬೆಗಳನ್ನು ತಂದು ಧೂಳು ಒರೆಸಿ ಸಾಲುಸಾಲಾಗಿ ಕೂಡಿಸಿ ಹೂವಿನಿಂದ ಅಲಂಕರಿಸುತ್ತಿದುದು ನವರಾತ್ರಿಯ ಒಂದು ಸೊಗಸು. ನನ್ನ ತಮ್ಮಂದಿರು ಗೊಂಬೆ ಮೆಟ್ಟಿಲ ಪಕ್ಕ ಕೃತಕ ಪಾರ್ಕ್ ನಿರ್ಮಿಸುವರು. ಆ ಉದ್ಯಾನವನಕ್ಕೆ ಬೇಕಾದ ಹಸುರು ಚಾಪೆ ಮೂಡಿಸುವುದು ನನ್ನ ಕೆಲಸ. ಹೂವ ತರುವವರ ಮನೆಗೆ ಹುಲ್ಲೂ ತರದಿದ್ದರೆ ಹೇಗೆ.
ರತಿ ವಿಜ್ಞಾನ ದರ್ಪಣ, ಲಂಕೇಶ್ ಮತ್ತು ಆ ದಿನಗಳು
ಪಾಡ್ಯ ಶುರುವಾಗುವ ಎಂಟು ದಿನ ಮುಂಚೆ ನಡುಮನೆಯಲ್ಲಿ ಕೆಂಪು ಮಣ್ಣಿನ ಹಾಸಿಗೆ ಹಾಸಿ, ನೀರು ಚಿಮುಕಿಸಿ ರಾಗಿ ಕಾಳು ಉದುರಿಸುತ್ತಿದ್ದೆ. ರಾತ್ರಿ ಪೂರ ರಾಗಿ ಎದ್ದು ಬರುವುದೇ ಕನಸು. ಮೂರು ದಿನಕ್ಕೆ ಮೊಳಕೆ ಒಡೆದು ರಾಗಿ ಕಣ್ಣು ಮಿಟುಕಿಸುತ್ತಿತ್ತು. ಮನೆಯ ಹೊಲದಲ್ಲಿ ಬಿತ್ತಿ ಬೆಳೆಯುವ ಖುಷಿ ಅದಾಗಿತ್ತು.
ಹೊಳಲ್ಕೆರೆ ರಸ್ತೆಯಲ್ಲಿನ ನಮ್ಮ ಜಮೀನಿನಲ್ಲಿ ಬೆಳೆಯುತ್ತಿದುದು ಬರೀ ರಾಗೀನೇ. ರಾಗಿ ಸಾಲುಗಳ ನಡುವೆ ಹೆಸರು, ಅವರೆ, ತೊಗರಿ, ಹುರುಳಿ, ಅಲಸಂದೆ ಅಕಡಿ ಕಾಳುಗಳು. ಬದುವಿನುದ್ದಕ್ಕೂ ಔಡಲ ಗಿಡಗಳು.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಒಣಒಣ ಭೂಮಿ ಇಷ್ಟು ಹಸುರಾಗಬೇಕಾದರೆ ನಾವು ಪಡಬೇಕಾದ ಶ್ರಮ ಅಷ್ಟಿಷ್ಟಲ್ಲ. ಬೇಸಗೆಯಲ್ಲಿ ಕಬ್ಬಿಣದ ಮಡಕೆ ಹೊಡೆಯಬೇಕು, ನಾಲಕ್ಕು ಹನಿ ಉದುರಿದ ನಂತರ ಕೊರಡು ಹೊಡೆಯಬೇಕು. ಆನಂತರ ಕೆದರು ಹೊಡೆದು ಸೆದೆ ಆರಿಸಿ ಅದನ್ನು ಅಲ್ಲೇ ಸುಡಬೇಕು.
ಹದ ನೋಡಿಕೊಂಡು ಬಿತ್ತುವ ದಿನವೇ ಸುದಿನ. ಗಂಡಾಳುಗಳು ಜೋಡೆತ್ತಿಗೆ ಮೈಯುಜ್ಜಿ ನೊಗ ಕಟ್ಟಿದರೆ ನವೋದಯದ ಆರಂಭ. ಒಡಲಲ್ಲಿ ಬೀಜ ಕಟ್ಟಿಕೊಂಡು ಕೂರಿಗೆಯಲ್ಲಿ ಬಿತ್ತುತ್ತಾ ಹೋಗುವವರು ಹೆಣ್ಣಾಳುಗಳು. ಮಳೆ ಒಲಿದರೆ ಮೂರು ತಿಂಗಳಿಗೆ ರಾಗಿ ಕಟಾವಿಗೆ ಬರುವುದು.
ರಾಗಿ ನವಣೆ ಸಾಮೆಯಂಥ ಸಿರಿಧಾನ್ಯ ಹೇರಳವಾಗಿ ಬಳಸಿ
ಅದಕ್ಕೆ ಮುನ್ನ ಎರಡು ಮೂರು ಬಾರಿ ಎಡೆಕುಂಟೆ ಹೊಡೆಯುವುದು, ಕಳೆ ತೆಗೆಸುವುದನ್ನು ಕಡೆಗಣಿಸಿರಬಾರದು. ಏನೇ ಆಗಲೀ, ಶಾಶ್ವತ ಬರಗಾಲ ಪ್ರದೇಶಗಳ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆ ಹೆಸರು ಬರಲೀ ಬಿಡಲೀ, ದುರ್ಗದ ಜನರನ್ನು ರಾಗಿ ಕೈಬಿಡಲಿಲ್ಲ. ಬಿಡುವುದೂ ಇಲ್ಲ.
ಇವತ್ತಿಗೂ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ ಚಿತ್ರದುರ್ಗ. ಜಿಲ್ಲೆಯಲ್ಲಿ ರಾಗಿಗೆ ಪ್ರಥಮ ಬಹುಮಾನ. ಜನತೆ ರಾಗಿ ತಿಂದುಂಡು ಮಲಗುವರು. ಉಳಿದಿದ್ದನ್ನು ಉಳಿದ ಜಿಲ್ಲೆಗಳಿಗೆ ಕಳಿಸಿ ಕೊಡುವರು.
ನವರಾತ್ರಿಯು ಎಲ್ಲವನ್ನೂ ನಡೆಸುವ ಶಕ್ತಿಯ ಆಹ್ವಾನ
ಆಗಿನ ಕಾಲಘಟ್ಟದಲ್ಲಿ ನಮ್ಮ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಪಲ್ಲ ರಾಗಿ ಬೆಳೆಯುತ್ತಿದ್ದೆವು. ಮನೆಯಲ್ಲಿ ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಗಂಜಿ, ಹುರಿಹಿಟ್ಟು ಸಿದ್ಧವಾಗುತ್ತಿದ್ದವು. ಮುದ್ದೆ ಮುರಿಯದೆ ಅನ್ನಕ್ಕೆ ಕೈಹಾಕದ ಊಟದ ತಟ್ಟೆಗಳು ನಮ್ಮ ಮನೆಯಲ್ಲಿ ಒಂಭತ್ತಿತ್ತು. ಅತಿಥಿಗಳು ಬಂದರೆ ಮುತ್ತುಗದ ಎಲೆ.
ವಿಜಯದಶಮಿ ದಿನ ಜಮೀನಿನಿಂದ ಆಳುಕಾಳುಗಳು ಮನೆಗೆ ಬರುತ್ತಿದ್ದರು. ನಮ್ಮ ಅಮ್ಮ ಅವರಿಗೆಲ್ಲ ಹೋಳಿಗೆ ಪಾಯಸ ಊಟ ಬಡಿಸಿದ ನಂತರ ಊಟಕ್ಕೆ ಕೂರುತ್ತಿದ್ದರು.
ಆಳುಗಳ ಪಟ್ಟಿಯಲ್ಲಿ ಓಬಾನಾಯಕ ಅಂತ ಒಬ್ಬನಿದ್ದ. ಹಬ್ಬದ ಊಟ ಆದ ಮೇಲೆ "ಊಟಕ್ಕೆ ಮುದ್ದೆ ಇಲ್ಲದೇ ಇದ್ದರೆ ಊಟನೇ ಅಲ್ಲ, ಸ್ವಾಮೀ, ಅಂತಿದ್ದ" ಓಬಣ್ಣ. ನಮಗೆ ಅವನು ಬರೀ ಓಬ. ಕಳೆದ ಶತಮಾನದಲ್ಲಿ ನಾನು ಕಂಡ ಅಪರೂಪದ ವ್ಯಕ್ತಿ, ನಿರಕ್ಷರ ಕುಕ್ಷಿ, ಓಬ.
ಹೀಗೆಲ್ಲ ಆಗಿ, ನನ್ನದು ರಾಗಿ, Finger Millet, A wonder grain ತಿಂದು, ಬೆಳೆದ ಮನಸ್ಸು ಮತ್ತು ಈ ದೇಹ. ನಿಮ್ಮಗಳಲ್ಲಂಥ, ಸ್ವಾಮೀ ನಮಸ್ಕಾರ.