ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕಚೇರಿಯಲ್ಲಿ ಆಯುಧ ಪೂಜೆ ಹೀಗಿತ್ತು

By Shami
|
Google Oneindia Kannada News

ಬೆಂಗಳೂರು, ಅ. 1 : ಈ ವರ್ಷದ ಆಯುಧ ಪೂಜೆಯನ್ನು ನಮ್ಮ ಬೆಂಗಳೂರು ಕಚೇರಿಯಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ನವರಾತ್ರಿ ಹಬ್ಬದ ಸಮಯದಲ್ಲಿ ಆಯುಧಪೂಜೆ, ಭಾದ್ರಪದ ಮಾಸದಲ್ಲಿ ಗಣೇಶನ ಪೂಜೆ ಮಾಡುವ ಪದ್ಧತಿ ನಮ್ಮ ಕಂಪನಿಯಲ್ಲಿ 15 ವರ್ಷಗಳಿಂದ ಚಾಚೂ ತಪ್ಪದೆ ನಡೆದು ಬಂದಿದೆ. ಓಣಂ ಮತ್ತು ಸಂಕ್ರಾಂತಿ ಹಬ್ಬಕ್ಕೆ ಕಾರಿಡಾರುಗಳಲ್ಲಿ ರಂಗೋಲಿ ಬಿಡಿಸುವುದು; ವರ್ಷಾಂತ್ಯದಲ್ಲಿ ಬೇ ಡೆಕೋರೇಷನ್ ಮತ್ತು ಆಟೋಟಗಳನ್ನು ಹೊರತುಪಡಿಸಿದರೆ ಇತರೆ ಹಬ್ಬಾಚರಣೆಗಳಿಲ್ಲ.

ಬುಧವಾರ ಮಧ್ಯಾನ್ಹ 3 ಗಂಟೆಗೆ ಪೂಜಾ ವಿಧಿವಿಧಾನಗಳು ಆರಂಭವಾದವು. ಹೆಣ್ಣು ಮಕ್ಕಳು ಕಣ್ಮನ ಸೆಳೆಯುವ ರಂಗೋಲಿ ಬಿಡಿಸಿದರು. ಪುರೋಹಿತ ಪ್ರವೀಣ್ ಶರ್ಮಾ ಅವರು ಸಂಕಲ್ಪ, ಗಣೇಶ, ದುರ್ಗಾ ಸ್ತುತಿ, ವಾಸ್ತು, ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಅರ್ಪಿಸಿದರು. "ಪೂಜಾ ಸಾಮಗ್ರಿ ಏನಿದೇ ಅನ್ನುವುದಕ್ಕಿಂತ ಮಂತ್ರದ ಬಲವೇ ಹೆಚ್ಚು" ಎಂದು ಶರ್ಮಾ ಈ ಸಂದರ್ಭದಲ್ಲಿ ನುಡಿದರು. ಕಂಪನಿಯ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಬಿ ಜಿ ಮಹೇಶ್, ಶ್ರೀಮತಿ ರೇಖಾ ಮಹೇಶ್ ಹಾಗೂ ಸಿಇಒ ಶ್ರೀರಾಮ್ ಹೆಬ್ಬಾರ್ ಕರ್ತೃ ಸ್ಥಾನದಲ್ಲಿ ನಿಂತು ಪೂಜೆ ನೆರವೇರಿಸಿದರು.

ಆಫೀಸ್ ಬಾಯ್ ಮಂಜುನಾಥ ರೆಡ್ಡಿ ಕುಂಬಳಕಾಯಿ ಒಡೆದನು. ನಾವು ಕೈಮುಗಿದು ಸಿಹಿಪೊಟ್ಟಣಗಳನ್ನು ಚೀಲಕ್ಕೆ ಹಾಕಿಕೊಂಡೆವು. ಹಬ್ಬದ ದಿವ್ಸವಾದ್ದರಿಂದ ಇವತ್ತು ನಮಗೆ ಎಥನಿಕ್ ಡೇ ಕೂಡಾ ಆಗಿತ್ತು. ಇದೇ ಮೊದಲ ಬಾರಿಗೆ ಸೀರೆ ಉಟ್ಟು ಬಂದಿದ್ದ ಮುಂಬೈ ಹುಡುಗಿ ಮತ್ತು ಹಳೇ ಜುಬ್ಬ ತಗುಲಿಹಾಕಿಕೊಂಡಿ ಬಂದಿದ್ದ ಬೆಂಗಳೂರು ಹುಡುಗ ಕ್ಯಾಂಟೀನ್ ನ್ಯೂಸ್ ರೂಮಿನ ಹರಟೆಗೆ ಗ್ರಾಸವಾಗಿದ್ದರು![ಆಯುಧ ಪೂಜೆಯ ಕೆಲವು ಚಿತ್ರಗಳು]

ಅಕ್ಟೋಬರ್ 2ನೇ ತಾರೀಖು ಗಾಂಧಿ ಜಯಂತಿ ಸರ್ಕಾರಿ ರಜೆ. ಪಂಚಾಂಗದ ಪ್ರಕಾರ ಆಯುಧ ಪೂಜೆ ಶುಕ್ರವಾರ ಅಕ್ಟೋಬರ್ 3ನೇ ತಾರೀಖು ಬೀಳತ್ತೆ. ಅಲ್ಲದೆ 4 ನೇ ತಾರೀಖು ವಿಜಯದಶಮಿ ನಿಮಿತ್ತ ಎರಡೂ ದಿನ ಕಚೇರಿಗೆ ರಜೆ ಇರುವುದರಿಂದ ಪೂಜೆಯನ್ನು ಬುಧವಾರವೇ ಆಚರಿಸಲಾಯಿತು. 249 ಉದ್ಯೋಗಿಗಳ ಪೈಕಿ ಸುಮಾರು 200 ಜನ ಕಲೆತಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿರುವ ಸಹೋದ್ಯೋಗಿಗಳು ಅವರವರ ಕಚೇರಿಯಲ್ಲಿ ಪೂಜೆ ಮಾಡಿದ ಬಗ್ಗೆ ಫೋಟೋ ಸಮೇತ ಇಂಟ್ರಾನೆಟ್ಟಿನಲ್ಲಿ ವರದಿ ಮಾಡಿದರು.

ನಮ್ಮ ಸಂಸ್ಥೆಗೆ ರಜಾ ಇರುವುದು ಈ ಗುರುವಾರ ಮತ್ತು ಶುಕ್ರವಾರ ಮಾತ್ರ. ಆದರೆ, ಸುದ್ದಿವಾಹಿನಿಗಳಿಗೆ ರಜಾ ಎಂಬುದಿಲ್ಲ. ಹಾಗಾಗಿ ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ ಮತ್ತು ಬಕ್ರೀದ್ ಹಬ್ಬವಾದ ಸೋಮವಾರವೂ ನಮ್ಮ ವೆಬ್ ಸೈಟ್ ಕಾರ್ಯ ನಿರ್ವಹಿಸುತ್ತದೆ. ಒಂದು ಕಡೆ ಮೈಸೂರು ದಸರಾ, ಇನ್ನೊಂದು ಕಡೆ ಜಯಲಲಿತಾ ಜಾಮೀನು ಕುರಿತ ಸುದ್ದಿ ಪಚಡಿಗಳು ಬೇಕಾದಷ್ಟಿರ್ತವೆ. ಯಾವುದಕ್ಕೆ ಕೊರತೆ ಆದರೂ ಸುದ್ದಿಗೆ ಬರಗಾಲವಿರುವುದಿಲ್ಲ. ಬರಗಾಲದ ಸುದ್ದಿಗಳಿಗೂ ಬರವಿಲ್ಲ.

[ಆಯುಧ ಪೂಜೆಯ ಕೆಲವು ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ], ನೋಡಿ. ಕಚೇರಿಗಳಲ್ಲಿ, ಮನೆಗಳಲ್ಲಿ, ಅಂಗಡಿಗಳಲ್ಲಿ, ಪೇಟೆ ಬೀದಿಗಳಲ್ಲಿ, ಸಭಾಂಗಣಗಳಲ್ಲಿ, ಓಣಿಓಣಿಗಳಲ್ಲಿ ಆಯುಧ ಪೂಜೆ ಆಚರಿಸುವ ನಮ್ಮ ಎಲ್ಲ ವಾಚಕ ಬಂಧುಗಳಿಗೆ ನವರಾತ್ರಿಯ ಹಾರ್ದಿಕ ಶುಭಾಶಯಗಳು.

English summary
Traditional gait and religious fervour marks Ayudha Puja in Oneindia corporate office Bangalore. The Hindus, on this day, Worship arms, ammunitions, weapons, hardware and the software. In substance the weapons to be worshipped are the divine powers in man. In the worship of the deities during Navarathri, every day, one of them should be worshipped, not only externally but with one’s heart and soul. Happy Navaratri and Dasara to you all. God bless.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X