ಕಾಫಿ-ಕನ್ನಡಪ್ರೀತಿಯ ಇನ್ನೊಂದು ಕೊಂಡಿ ಕಳಚಿಕೊಂಡಿತು
ಮಧುಸೂದನ ಪೆಜತ್ತಾಯ ಎಂದೊಡನೆಯೇ ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದು ನಿಮಗನಿಸಬಹುದು. ಆದರೆ, ನಮ್ಮ ತಾಣ ಮತ್ತು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯ ಓದುಗರಿಗೆ ಹೆಸರು ಚಿರಪರಿಚಿತ. ಅವರೇನು ಅಂಥ ದೊಡ್ಡಮನುಷ್ಯರೇನೂ ಆಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆಯಲ್ಲಿ ಒಂದಿಷ್ಟು ಗುಂಟೆ ಕಾಫಿತೋಟದ ಮಾಲೀಕರಾಗಿದ್ದರು ಎನ್ನುವುದಕ್ಕಿಂತ ರೈತರಾಗಿ ಬಾಳಿದರು ಎಂದರೆ ಸಮಂಜಸ.
ಕರ್ನಾಟಕದಲ್ಲಿ ಇವತ್ತು ರೈತರಿಗೆ ಉಳಿಗಾಲವಿಲ್ಲ. ತೋಟದಲ್ಲಿ ಕಳ್ಳತನಗಳು, ಬಲವಂತದಿಂದ ಭೂಮಿ ಒತ್ತುವರಿ, ಜಾತಿನಿಂದನೆಯ ಆಪಾದನೆಯ ನೆಪದಲ್ಲಿ ಕಿರುಕುಳಗಳು. ಬಾರದ ಮಳೆ, ಬೆಳೆದದ್ದಕ್ಕೆ ಸಿಗದ ನ್ಯಾಯಬೆಲೆ, ಮೈಬಗ್ಗಿಸಿ ದುಡಿಯಲೊಲ್ಲದ ಕೃಷಿಕೂಲಿ ಕಾರ್ಮಿಕರು, ಇಂಥವರೊಂದಿಗೆ ಏಗಲು ಮನೆಯಲ್ಲಿ ಒಬ್ಬ ಗಂಡುಮಗ ಇರಬಾರದೇ.
ಈ ಮಧುಸೂದನ ಎಂಬ ಮನುಷ್ಯ ಜೀವನಪರ್ಯಂತ ಸುಖವಾಗೇ ಇದ್ದರು. ಕ್ಯಾನ್ಸರ್ ಆಗಲೀ, ಕಣ್ಣಿಗೆ ಶಸ್ತ್ರಚಿಕಿತ್ಸೆಗಳಾಗಲೀ, ಮುದ್ದಿನ ನಾಯಿಯ ಸಾವಾಗಲೀ, ಮೋಹದ ಮಡದಿ ಸರೋಜಮ್ಮ ಅವರ ನಿರ್ಗಮನವಾಗಲೀ, ಅವರು " ತಲೆಕೊಡಿಸಿಕೊಂಡವರಲ್ಲ" .
ಹೊಸ ಜನರೊಂದಿಗೆ ಸ್ನೇಹ, ನಿಷ್ಕಲ್ಮಷ ಪ್ರೀತಿಯ ಸಿಂಚನ, ಸುಡುಗಾಡು ಸಿದ್ಧಾಂತಗಳಿಗೆ ಜೋತುಬೀಳದ ಪ್ರಾಮಾಣಿಕ ಬರಹಗಳು ಅವರನ್ನು ಸದಾಕಾಲ ಖುಷಿಯಾಗಿಟ್ಟಿದ್ದವು ಮತ್ತು ಇಲ್ಲಿಯತನಕ ಕೈಹಿಡಿದು ನಡೆಸಿಕೊಂಡು ಬಂದವು. ನಿನ್ನೆಯಲ್ಲ, ಮೊನ್ನೆ ಮಧ್ಯಾನ್ಹ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು.
ಜೀವನೋತ್ಸಾಹಕ್ಕೆ ಜ್ವಲಂತ ಉದಾಹರಣೆಯಾಗಿದ್ದ ಪೆಜತ್ತಾಯರಿಗೆ ವಯಸ್ಸೇ ಆಗಿರಲಿಲ್ಲ! ಹಾಗಾಗಿ, ಅವರ ನಿಧನದ ವಾರ್ತೆ ಬಾಳೆಹೊಳೆಯಿಂದ ಏಳು ಸಮುದ್ರಗಳಾಚೆ ಸುದ್ದಿಯಾಯಿತು. ಅವರ ಸ್ನೇಹವನ್ನು ಸವಿದ ಅನೇಕ ಕನ್ನಡಿಗರು ಬಹುವಾಗಿ ನೊಂದುಕೊಂಡರು.
ಕಾಫಿ ಹೂವುಗಳಲ್ಲಿ ಕರ್ನಾಟಕವನ್ನು, ಕನ್ನಡ ಅಕ್ಷರಗಳಲ್ಲಿ ಪರಾಗಸ್ಪರ್ಷಗಳನ್ನು ಕಂಡುಕೊಳ್ಳುವ ಹವಣಿಕೆಯಲ್ಲಿ ಎಲ್ಲರೊಳಗೊಂದಾದ ಪೆಜತ್ತಾಯರ ಈ-ಸ್ನೇಹ ಬಳಗದಲ್ಲಿ ತ್ರಿವೇಣಿ ಶ್ರೀನಿವಾಸರಾವ್ ಒಬ್ಬರು. ಆಗಿಹೋದ "ತಂದೆ"ಯೊಂದಿಗಿನ ತಮ್ಮ ಒಡನಾಟ ಮತ್ತು ಅನುಭವಗಳನ್ನು ತ್ರಿವೇಣಿಯವರು ಇಂಟರ್ ನೆಟ್ ನಲ್ಲಿ ಕನ್ನಡ ಓದುವ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಓದಿ.