ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಶ್ರೀಗಳಿಂದ ನಾವು ನಿರೀಕ್ಷಿಸುವುದೇನು?

By ಶಾಮ್
|
Google Oneindia Kannada News

What Karnataka expects from Chunchanagiri new seer
'ಶಿಕ್ಷಣ ಸಂತ' ಎಂದೇ ಭಕ್ತಾದಿಗಳಿಂದ ಕರೆಯಿಸಿಕೊಳ್ಳುತ್ತಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಆದಿಚುಂಚನಗಿರಿ ಪೀಠಕ್ಕೆ ಸಮರ್ಥ ಉತ್ತರಾಧಿಕಾರಿಯಾಗಿದ್ದಾರೆ. ಉನ್ನತ ಶಿಕ್ಷಣ ಪಡೆದಿರುವ 43 ವರ್ಷದ ಶ್ರೀಗಳ ಹೆಗಲ ಮೇಲೆ 400 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಲ್ಲಿನ ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಮುನ್ನಡೆಸುವ 'ಗುರು'ತರ ಜವಾಬ್ದಾರಿ ಲಭಿಸಿದೆ. ಈಗಾಗಲೆ ಚಿಕ್ಕಬಳ್ಳಾಪುರವನ್ನು ಶೈಕ್ಷಣಿಕ ಕೇಂದ್ರವನ್ನಾಗಿಸಿರುವ ಶ್ರೀಗಳು ಸಂಸ್ಥಾನವನ್ನು ಕೈಹಿಡಿದು ನಡೆಸುವ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ಮೈಸೂರಿನ NIE (ಸಿವಿಲ್) ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ ನಿರ್ಮಲಾನಂದನಾಥ ಶ್ರೀಗಳು, ಮದ್ರಾಸು NIT ಎಂ.ಟೆಕ್ ಮಾಡಿ ಚಿನ್ನದ ಪದಕ ಗಳಿಸಿದರು. ಉನ್ನತ ಶಿಕ್ಷಣ ಪಡೆದಿದ್ದ ಅವರಿಗೆ, ವಿದೇಶದಲ್ಲಿ ಕೈತುಂಬ ಸಂಬಳ ನೀಡುವ ಕೆಲಸದ ಅವಕಾಶವಿದ್ದರೂ, ಅದನ್ನೆಲ್ಲ ತ್ಯಜಿಸಿ ಅವರ ಚಿತ್ತ ಹೊರಳಿದ್ದು ಆಧ್ಯಾತ್ಮದೆಡೆಗೆ ಮತ್ತು ಸಮಾಜಸೇವೆಯೆಡೆಗೆ. ಅವರು 1995ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ 1996ರಲ್ಲಿ ಶಾಖಾ ಮಠದ ಮುಖ್ಯಸ್ಥರಾಗಿ ಆಯ್ಕೆಯಾದರು.

ತಮ್ಮ ವ್ಯಕ್ತಿತ್ವ ಮತ್ತು ಕಾರ್ಯವೈಖರಿಯಿಂದ ಚುಂಚನಗಿರಿ ಪೀಠದ ಶ್ರೀಗಳಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪ್ರೀತಿ ಮತ್ತು ನಂಬುಗೆಯನ್ನು ನಿರ್ಮಲಾನಂದನಾಥ ಸ್ವಾಮೀಜಿಗಳು ಗಳಿಸಿದರು. ಪದ್ಧತಿಯಂತೆ ಬಾಲಗಂಗಾಧರನಾಥ ಸ್ವಾಮೀಜಿಗಳು ತಮ್ಮ ಉಯಿಲಿನಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಯ್ಕೆ ಮಾಡಿದ್ದರು. ಉಯಿಲಿನಂತೆ, ಜ.14ರ ಸಂಕ್ರಾಂತಿಯಂದು ನಿರ್ಮಲಾನಂದನಾಥ ಸ್ವಾಮೀಜಿಯವರು ಪೀಠದ ಉತ್ತರಾಧಿಕಾರಿಯಾಗಿ ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು.

1997ರಲ್ಲಿಯೇ ಮಠದ ಸಂಪರ್ಕಕ್ಕೆ ಬಂದಿದ್ದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಇಷ್ಟು ವರ್ಷಗಳ ಅವಧಿಯಲ್ಲಿ ತಮ್ಮ ಕ್ರಿಯಾಶೀಲತೆಯಿಂದಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರ ಪ್ರೀತಿಯನ್ನು ಗಳಿಸಿದ್ದಾರೆ. ಅವರು ರಾಮನಗರ, ಚಿಕ್ಕಬಳ್ಳಾಪುರದ ಶಾಖಾ ಮಠದ ಉಸ್ತುವಾರಿ ವಹಿಸಿಕೊಂಡಿದ್ದರು. ಮಿತಭಾಷಿಯಾಗಿರುವ ಶ್ರೀಗಳು ಎಲ್ಲ ಹಿರಿಯ ಮತ್ತು ಕಿರಿಯರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಮತ್ತು ಉತ್ತಮ ಆಡಳಿತಾಧಿಕಾರಿ ಎಂದು ಹೆಸರು ಗಳಿಸಿದ್ದಾರೆ.

"ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿಶಿಷ್ಟವಾದ ಧಾರ್ಮಿಕ ಸೆಳೆತವಿದೆ. ಇಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲ ಧಾರ್ಮಿಕತೆಯ ದೈವೀ ಶಕ್ತಿಯ ಪರಮಸನ್ನಿಧಾನವೂ ಇದೆ. ಈ ಶಕ್ತಿಯ ಅರಿವು ವಿದ್ಯಾರ್ಥಿಗಳ ಜತೆಗೆ ಪೋಷಕ ವೃಂದಕ್ಕೂ ಆಗುತ್ತಿದೆ" ಎಂದು ಆದಿಚುಂಚನಗಿರಿ ಪೀಠದ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಆಯ್ಕೆಗೆ ಅನೇಕ ಗಣ್ಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಿರು ಪರಿಚಯ:

* ಹುಟ್ಟಿದ ಸ್ಥಳ : ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು, ಚೀರನಹಳ್ಳಿ
* ಜನ್ಮದಿನಾಂಕ : 20-07-1969
* ತಂದೆ : ನರಸಪ್ಪ
* ತಾಯಿ : ನಂಜಮ್ಮ
* ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ಪ್ರೌಢ ಶಿಕ್ಷಣ
* ತುಮಕೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ
* ಮೈಸೂರಿನ ಎನ್ಐಇಯಲ್ಲಿ ಎಂಜಿನಿಯರಿಂಗ್ ಶಿಕ್ಷಣ
* ಚೆನ್ನೈನ ಎನ್ಐಟಿಯಲ್ಲಿ ಎಂಟೆಕ್ ಪದವಿ
* 1995ರಲ್ಲಿ ಸನ್ಯಾಸ ಸ್ವೀಕಾರ
* 1997ರಲ್ಲಿ ಮಠದ ಸಂಪರ್ಕಕ್ಕೆ ಬಂದು ರಾಮನಗರ ಶಾಖಾಮಠದ ಉಸ್ತುವಾರಿ
* 2003ರಲ್ಲಿ ಚಿಕ್ಕಬಳ್ಳಾಪುರ ಶಾಖಾಮಠದ ಪೀಠಾಧಿಪತಿ
* ಆದಿಚುಂಚನಗಿರಿ ಟ್ರಸ್ಟ್‍ನ ಕಾರ್ಯದರ್ಶಿ
* ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಶಿಕ್ಷಣ ಕ್ರಾಂತಿ
* ಬಡಮಕ್ಕಳ ಶಿಕ್ಷಣಕ್ಕಾಗಿ ಅವಿಶ್ರಾಂತ ದುಡಿಮೆ
* ಶಿಥಿಲ ದೇವಾಲಯಗಳ ಜೀರ್ಣೋದ್ದಾರ

ಆಧ್ಯಾತ್ಮ, ಸಮಾಜಸೇವೆ, ಶಿಕ್ಷಣ ಮತ್ತು ಕರ್ನಾಟಕ ಸಾಮಾಜಿಕ ಅಭ್ಯುದಯಕ್ಕೆ ಸ್ವಾಮಿಗಳು ಕಂಕಣ ಬದ್ಧರಾಗಿದ್ದು, ಅವರಿಂದ ಭಕ್ತಕೋಟಿ ಇನ್ನಷ್ಟು, ಮತ್ತಷ್ಟು ಮಾರ್ಗದರ್ಶನವನ್ನು ನಿರೀಕ್ಷಿಸುತ್ತದೆ. ರಾಜಕೀಯ ನರಳಾಟಗಳಿಂದ ಮುಕ್ತವಾದ ಮಠಕ್ಕೆ ಅವರು ದಾರಿದೀಪ ಆಗುವವರೆಂಬ ನಿರೀಕ್ಷೆಗಳನ್ನು ಸಮಾಜ ಇಟ್ಟುಕೊಂಡರೆ, ತಪ್ಪೇನು? [ಸ್ವಾಮೀಜಿಗಳಾಗುವುದೆಂದರೆ ಅಪರಿಗ್ರಹದ ಪರಾಕಾಷ್ಠೆ!]

English summary
Brief introduction of Sri Nirmalanandanatha Swamiji (43)who took over as new head of Adichunchanagiri muth after demise of Dr. Balagangadharanatha swamiji on January 13th, 2013 due to kidney failure and heart attack. Highly educated Sri Nirmalanandanatha Swamiji is the new age Seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X