1 ರಾತ್ರಿ 2 ಹಗಲು; ಕೇರಳ ಪ್ರವಾಸ ಡೈರಿ
ದೇವರ ಸ್ವಂತ ದೇಶ, ಐ ಮೀನ್ ಗಾಡ್ಸ್ ಓನ್ ಕಂಟ್ರಿ ಕೇರಳ ನಾನಾ ಕಾರಣಗಳಿಗಾಗಿ ಪ್ರಸಿದ್ದ. ಪ್ರಕೃತಿಯೇ ಕೊಟ್ಟ ತೆಂಗು, ಬಾಳೆ, ಚಹಾ, ಕಾಫಿ, ಏಲಕ್ಕಿ, ಲವಂಗ, ಕಾಳು ಮೆಣಸು, ರಬ್ಬರ್, ಮರಗೆಣಸು, ಕೊಬ್ಬರಿ ಎಣ್ಣೆ, ಬಾಯಿಲ್ಡ್ ರೈಸ್ ಮತ್ತು ಮೀನಿನ ಸಾರು. ಊಟಕ್ಕೆ ಮುಂಚೆ ಆಯುರ್ವೇದ ಮಸಾಜ್!
ಕೇರಳ ಇನ್ನೂ ಏನೇನಕ್ಕೋ ಹೆಸರುವಾಸಿ. ಕೌಟುಂಬಿಕ ಹಾಗೂ ಆರ್ಥಿಕ ಜಿಗುಪ್ಸೆಗಳ ಪರಮಾವಧಿಯಿಂದ ಸಂಭವಿಸುತ್ತಿರುವ ಆತ್ಮಹತ್ಯೆ ಪ್ರಕರಣಗಳು, ಶಿಕ್ಷಣ ಇಲಾಖೆ ಜಾರಿಗೆತಂದ ಶೇ 100 ಸಾಕ್ಷರತೆ, ಯಥಾಪ್ರಕಾರ ಕಾರ್ಮಿಕ ಚಳವಳಿಗಳು, ಎಬಿವಿಪಿ/ಡಿವೈಎಫ್ ಐ ವಿದ್ಯಾರ್ಥಿ ಸಂಘಟನೆಗಳ ಕ್ಯಾಂಪಸ್ ಜಗಳ ಕದನಗಳು, ಜತೆಗೆ ಎಲ್ ಡಿ ಎಫ್, ಯುಡಿಎಫ್ ಗುಂಪುಗಳ ಆವರ್ತನ ರಾಜಕೀಯ ಹೋರಾಟಗಳು.
ಪ್ರವಾಸಿಗರ ಸ್ವರ್ಗ ಕೇರಳದಲ್ಲಿ ಈಗ ಯುಡಿಎಫ್ ಆಡಳಿತ. ಪುತುಪಲ್ಲಿ ಕಾಂಗ್ರೆಸ್ ಎಂಎಲ್ಎ, ಮಲಂಕರ ಆರ್ ಥೊಡಾಕ್ಸ್ ಸಿರಿಯನ್ ಚರ್ಚ್ಗೆ ಸೇರಿದ ಓಮನ್ ಚಾಂಡಿ (68) ಮುಖ್ಯಮಂತ್ರಿ. ಹಿಂದೂ (56%), ಮುಸ್ಲಿಂ (24%), ಕ್ರಿಶ್ಚಿಯನ್ (19%) ಸಮುದಾಯಗಳ ನಡುವಿನ ಸಾಮರಸ್ಯ ಮತ್ತು ಸೌಹಾರ್ದಕ್ಕೂ ಕೇರಳ ಪ್ರಸಿದ್ಧವಾಗಿತ್ತು. ಈಗ ಅಲ್ಲಿ ಸಾಕಷ್ಟು ಬಿರುಕುಗಳು ಮೂಡಿವೆ. ಕೇರಳ ರಾಜ್ಯ ಮುಸ್ಲಿಂ ಭಯೋತ್ಪಾದಕರ ಅಡಗುತಾಣ ಎಂತಲೂ ಆಗಿಬಿಟ್ಟಿದೆ. ಇನ್ನು 'ನಮ್ಮ ಸಮುದಾಯಕ್ಕೇ ಪ್ರತ್ಯೇಕವಾದ' ರಾಜಕೀಯ ಪಕ್ಷ ರಚಿಸಿಕೊಳ್ಳುವ ಅಗತ್ಯ ಬಂದಿದೆ ಎಂದು ಚರ್ಚುಗಳ ಆಡಳಿತ ವರ್ಗಗಳು ಪಿಸುಗುಟ್ಟುತ್ತಿವೆ.
ಕೇರಳಿಗರ ಹೆಚ್ಚು/ಕಮ್ಮಿಗಾರಿಕೆಯನ್ನು ಎಷ್ಟು ಹೇಳಿದರೂ ಕಮ್ಮೀನೇ. ಈಗ ತಾನೆ ಮುಗಿದ ಓಣಂ ಹಬ್ಬದ ಸಮಯಕ್ಕೆ ಕೇರಳಕ್ಕೆ ಹೋಗಿದ್ದೆ. ಹೆಚ್ಚೂ ಕಡಿಮೆ ಓಣಂ ನೆಪದಲ್ಲಿ ಮಲಯಾಳಿಗಳು ಒಂದು ವಾರ ಸಮಯ ರಜಾ ಮಜಾ ಉಡಾಯಿಸಿದ್ದನ್ನು ಕಂಡೆ. ಓಣಂ ಹಬ್ಬದ ಒಂದು ದಿನ ಕಡ್ಡಾಯ ಸಸ್ಯಾಹಾರ ಮತ್ತು ಡ್ರೈ ಡೇ ಸೇಡನ್ನು ನಂತರದ ದಿನಗಳಲ್ಲಿ ತೀರಿಸಿಕೊಳ್ಳುವ ಮಲ್ಲುಗಳ ಮದ್ಯ ಮಾಂಸ ಸೇವನೆಯ ಹಪಾಹಪಿ ಭಾರತವಿಖ್ಯಾತ.
ಭಾರತದಲ್ಲೇ ಅತಿಹೆಚ್ಚು ಮಾಂಸಾಹಾರ ಸೇವಿಸುವ ರಾಜ್ಯ ಕೇರಳ. 2011ರ ಓಣಂ ನಂತರ ಮಲ್ಲುಗಳು ಎಷ್ಟು ಶೀಶೆ ಮದ್ಯ ಗುಟುಕರಿಸಿದರು, ಎಷ್ಟು ಟನ್ ಮಾಂಸ ಗುಳುಂ ಮಾಡಿದರು ಎಂಬ ಅಂಕಿಅಂಶ ಇಂಟರ್ ನೆಟ್ಟಿನಲ್ಲಿ ಪ್ರಕಟವಾಗಿತ್ತು. ಇಂಥ ಅಂಕಿಅಂಶಗಳು ಲೀಕ್ ಆಗುವುದು ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತದೆ ಎಂದರಿತ ಸರಕಾರ ಮಾಂಸ-ಮಾರಾಟದ ಅಂಕಿಅಂಶಗಳನ್ನು ಬಹಿರಂಗ ಮಾಡದಂತೆ ಈ ವರ್ಷದ ಓಣಂ ಸಮಯದಲ್ಲಿ ಆಜ್ಞೆ ಹೊರಡಿಸಿತು.
ಮದ್ಯ ಮಾರಾಟ ಮತ್ತು ಸೇವನೆಯ ಮೇಲೆ ನಿಯಂತ್ರಣ ಸಾಧಿಸುವುದಕ್ಕಿಂತ ಹೆಚ್ಚಾಗಿ ಖಾಸಗಿಯವರ ಹಾವಳಿ ತಪ್ಪಿಸಲು ಕೇರಳ ಸರ್ಕಾರದಲ್ಲಿ ಒಂದು ಶಾಸನವಿದೆ. ಕರ್ನಾಟಕದ ಹಾಗೆ ಹೆಜ್ಜೆ ಹೆಜ್ಜೆಗೆ ವೈನ್ ಶಾಪುಗಳು ಕೇರಳದಲ್ಲಿಲ್ಲ. ಮದ್ಯ ಮಾರಾಟವು ಸರಕಾರದ ನ್ಯಾಯಬೆಲೆ ಮಳಿಗೆಗಳಲ್ಲಿ ಮಾತ್ರ.
ಸೀಮೆ ಎಣ್ಣೆಗೆ ಮತ್ತು ಬೋರ್ ವೆಲ್ ನೀರಿಗೆ ನಾವು ಇಲ್ಲಿ ಕ್ಯೂ ನಿಲ್ಲುವಂತೆ, ಬೆಳಗಾದರೆ ಮದ್ಯದ ಅಂಗಡಿಗಳ ಮುಂದೆ ಮಲ್ಲುಗಳು ಸರತಿಯ ಸಾಲಿನಲ್ಲಿ ನಿಲ್ಲುತ್ತಾರೆ. ಇದು ಇವತ್ತಿನ ಕೇರಳದ ಅತ್ಯಂತ ದೊಡ್ಡ ಪಿಡುಗಾಗಿದೆ ಎಂದು ನಾನು ಉಳಿದುಕೊಂಡಿದ್ದ ಹೋಟೆಲಿನ ಮಾಲಿಕರು ಹೇಳಿದರು. ಆದರೆ, ಪ್ರತಿ ತಿಂಗಳ 1ನೇ ತಾರೀಖು ಮದ್ಯದಂಗಡಿಗಳಿಗೆ ರಾಜ್ಯಾದ್ಯಂತ ರಜಾ ಇರತ್ತೆ. ಅಂತೂ ಮ್ಯಾಡ್ ನೆಸ್ ನಲ್ಲೂ ಒಂದು ಮೆಥೆಡ್ ತಂದ ಹೆಮ್ಮೆ ಕೇರಳದ್ದು.
ಮಲ್ಲುಗಳ ಹಾವಭಾವ, ಉಡುಗೆ ತೊಡುಗೆಗೆ ಧರ್ಮ, ಜಾತಿ, ಅಂತಸ್ತು, ಬೇಧಭಾವ ಇಲ್ಲ. ಲುಂಗಿ, ಬುಷ್ ಷರ್ಟ್ ಮತ್ತು ಹವಾಯಿ ಚಪ್ಪಲಿ ಕೇರಳದ ಡ್ರೆಸ್ ಕೋಡ್ ಎಂದರೆ ತಪ್ಪಲ್ಲ. ಹಾಗೇನೇ, ಸಸ್ಯಾಹಾರಿಗಳು ಮಾಂಸಾಹಾರಿಗಳು ಏಕಪ್ರಕಾರವಾಗಿ ಮೇಯುವ ಬಾಳೆಹಣ್ಣಿನ ಚಿಪ್ಸ್ ಅನ್ನು ಕೇರಳದ ರಾಷ್ಟ್ರೀಯ ಸ್ನಾಕ್ಸ್ ಎನ್ನಬಹುದು. ಕುಡಿಯುವಾಗ, ದುಡಿಯುವಾಗ, ಸುಮ್ನೆ ಇರುವಾಗ ಮಲ್ಲುಗಳು ಬಾಯಾಡಿಸ್ತಾನೇ ಇರ್ತಾರೆ. ಬಾಳೆಹಣ್ಣಿನ ಚಿಪ್ಸ್ ದಂಡಿಯಾಗಿ ಸಿಗತ್ತೆ.
ಕೇರಳದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ, ಹಳ್ಳಿಗಳಲ್ಲಿ ಬಾಳೆಹಣ್ಣಿನ, ಮರಗೆಣಸಿನ, ವಿವಿಧ ಸ್ವಾದಗಳ ಚಿಪ್ಸ್ ತಯಾರಿಸಲಾಗುತ್ತದೆ. ಜನ ಅದನ್ನ ತಿಂತಾನೇ ಇರ್ತಾರೆ. ನಾನೂ ತಿಂದೆ ಆದ್ರೆ ನಿಮಗೆ ತರ್ಲಿಲ್ಲ. ತಿರುಪತಿಗೆ ಹೋಗಿದ್ದೆ ಅಂದ್ರೆ ಲಾಡು ಪ್ರಸಾದ ತಂದ್ಯಾ ಅಂತ ಕೇಳ್ತಾರೆ, ಕೇರಳಕ್ಕೆ ಹೋಗಿದ್ದೆ ಅಂದ್ರೆ ಚಿಪ್ಸ್ ತಂದ್ಯಾ ಅಂತ ಕೇಳ್ತಾರೆ. ನಾನು ತರ್ಲಿಲ್ಲ, ಯಾಕಂದ್ರ್ ನಾನು ಬ್ಯಾಕ್ ಪ್ಯಾಕ್ ಟ್ರಾವೆಲರ್.