ಕಷ್ಟ ಸುಖ ನುಂಗಿನೀರು ಕುಡಿಯುವ ಮುಂಬೈ
ಮುಂಬೈಯನ್ನು ಸುಮ್ಮಸುಮ್ಮನೇ ಮಹಾನಗರ ಎಂದು ಕರೆಯುವುದಿಲ್ಲ. ತನ್ನ ಮೇಲೆ ಆಗಿಂದಾಗ್ಗೆ ಎರಗುವ ಪ್ರಹಾರಗಳನ್ನು ತಡೆದುಕೊಂಡು, ಕೊಡವಿಕೊಂಡು ಮತ್ತೆ ಮತ್ತೆ ಎದ್ದುನಿಲ್ಲುವ ಶಕ್ತಿ ಅಮ್ಚಿ ಮುಂಬೈಗೆ ಇದೆ. ಅಂಜುಬುರುಕರನ್ನು ಕಂಡರೆ ಮುಂಬೈಗೆ ಇಷ್ಟವಿಲ್ಲ. ಅವರನ್ನು ಊರೊಳಗೆ ಬಿಟ್ಟುಕೊಳ್ಳುವುದೂ ಇಲ್ಲ.
ಇದಕ್ಕೆ ನೀವೇ ಸಾಕ್ಷಿ. ಹೋದ ವಾರ ಇದೇ ದಿನ ನ.17 ಶನಿವಾರ ಮಧ್ಯಾಹ್ನ ಲಕ್ಷಾಂತರ ಮರಾಠಿಗಳ ಕಣ್ಮಣಿ, ಶಿವಸೈನಿಕರ ಸೇನಾಧಿಪತಿ ಬಾಳಾ ಠಾಕ್ರೆ ಕೈಲಾಸಕ್ಕೆ ಹೊರಟ ದಿನ. ಅಂದು ಇಡೀ ನಗರ ಸ್ತಬ್ಧವಾಯಿತು. ಜನತೆ ಶೋಕ ಸಾಗರದಲ್ಲಿ ಮುಳುಗಿಬಿಟ್ಟರು.
ಇದಾದ ನಾಲ್ಕೇ ದಿನಕ್ಕೆ ಮುಂಬೈ ಇನ್ನೊಂದು ಮಹಾದಿನಕ್ಕೆ ಸಜ್ಜಾಗಿತ್ತು. ಅಮಾಯಕ ಭಾರತೀಯರ ಮತ್ತು ವಿದೇಶಿಯರ ಜೀವ ತೆಗೆದ ಪಾಕ್ ಪಾತಕಿಗಳ ಕೈಗೊಂಬೆ ಕಸಬ್ ನನ್ನು ಯರವಾಡ ಜೈಲಿನಲ್ಲಿ ನ.21 ರಂದು ನೇಣುಗಂಬಕ್ಕೆ ತೋರಣಕಟ್ಟಲಾಯಿತು. ಸಮಸ್ತ ಭಾರತೀಯರ ಜೊತೆ ಮುಂಬೈ ಆನಂದ ಸಾಗರದಲ್ಲಿ ಮುಳುಗಿತು.
ಶೋಕವೇ ಆಗಲಿ ಅನಂದವೇ ಇರಲಿ, ಬದುಕಿನ ಸಾಗರದಲ್ಲಿ ದಣಿವರಿಯದೆ ಈಜುವ ಮುಂಬೈ ನಗರ ತಕ್ಷಣ ಮಾಮೂಲು ಸ್ಥಿತಿಗೆ ಮರಳುವ ಕಲೆಯನ್ನು ಮೈಗೂಡಿಸಿಕೊಂಡಿರುವ ಅದ್ಭುತ ಸಿಟಿ. ಇದನ್ನು ಮುಂಬೈಕರ್ ಗಳ ಮ್ಯಾಜಿಕ್ ಎಂದು ಬಣ್ಣಿಸಬಹುದಾ.
ಭಾರತದ ಇತಿಹಾಸದ ಪುಟಗಳಿಗೆ ಸೇರಿದ ಎರಡು ವಿಶೇಷ ದಿನಗಳನ್ನು ಒಂದೇ ವಾರದಲ್ಲಿ ಕಂಡ ಮುಂಬೈ ಮಾತ್ರ ಇಂದು ಏನು ಆಗಿಲ್ಲವೇನೋ ಎನ್ನುವಂತೆ ತನ್ನ ಎಂದಿನ ಚಟುವಟಿಕೆಯಲ್ಲಿ ಮಗ್ನವಾಗಿದೆ. (ಜನಸಂಖ್ಯೆ 1, 24, 78,000)
ಇದಕ್ಕೆ ಒಂದು ಸಣ್ಣ ಉದಾಹರಣೆಯಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟಿನ ಎರಡನೇ ದಿನ ಕ್ರಿಕೆಟ್ ಆಟವನ್ನೇ ಗಮನಿಸೋಣ. ಕ್ರಿಕೆಟ್ ಪ್ರೇಮಿಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಇಡೀ ಶನಿವಾರದ ಹಗಲು ನಡೆದ ಕ್ರಿಕೆಟ್ ಆಟ ಸವಿಯುವುದರಲ್ಲಿ ತಲ್ಲೀನರಾಗಿದ್ದರು.
ಕೇವಲ ಮುಂಬೈಕರ್ ಗಳಷ್ಟೇ ಅಲ್ಲ ನೀವೂ ಅಷ್ಟೇ. ಟಿವಿಯಲ್ಲೋ, ಇಂಟರ್ ನೆಟ್ಟಿನಲ್ಲೋ ಅಥವಾ ಮೊಬೈಲ್ ಫೋನಿನಲ್ಲೋ ಕ್ರಿಕೆಟ್ ನೋಡಿರುತ್ತೀರಿ. ನನಗೆ ಗೊತ್ತು!
ದುಃಖಗಳನ್ನು ಸಂತೋಷಗಳನ್ನು ಮೀರಿ ಮತ್ತೆ ಬದುಕನ್ನು ಅಪ್ಪಿಕೊಳ್ಳುವ ಮನೋಧರ್ಮವೇ ಸೊಗಸು. ನಿನ್ನೆಗಳನ್ನು ಲಾಕರುಗಳಲ್ಲಿಟ್ಟು ಮತ್ತೆ ಸ್ಕೂಲಿಗೆ, ಮತ್ತೆ ಕೆಲಸಕ್ಕೆ ಮತ್ತೆ ಆಟಕ್ಕೆ ಮರಳುವುದೇ ಜೀವನ. ಇದಕ್ಕೆ ಸಾಕ್ಷಿಯೋ ಎಂಬಂತೆ ಇಂದು ಶನಿವಾರ ವಾಂಖೆಡೆಯಲ್ಲಿ ಕಂಡ ಕ್ರಿಕೆಟ್ ಆಟದ ಕೆಲವು ಕ್ಷಣಗಳನ್ನು ಚಿತ್ರ ಸಮೇತ ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ.
ಕ್ರಿಕೆಟ್ಟನ್ನು
ದ್ವೇಷಿಸುವವರೂ
ಇಷ್ಟಪಡುವ
ಈ
ಆರು
ಚಿತ್ರ
-
ಸಂಕ್ಷಿಪ್ತ
ವಿವರಣೆಗಳತ್ತ
ಕಣ್ಣುಹಾಯಿಸಿ.
ಮುಂಬೈಯನ್ನು
ನೆನೆಯುತ್ತಾ.
ಕಳೆದುಹೋದದ್ದನ್ನು
ಸ್ಮರಿಸಿ
ಕೊರಗುವ,
ತುರುಬನ್ನು
ನೆನೆಯುವ
ಆಟಿಟ್ಯೂಡುಗಳಿಗೆ
ಸಿಕ್ಸರ್
ಹೊಡೆಯಿರಿ.
ಭಾರತ ಧ್ವಜ ಹಿಡಿದ ಜ್ಯೂನಿಯರ್ ಸಚಿನ್
ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ವಿಕೆಟ್ ಬಿದ್ದಾಗ ಬಾವುಟ ಬೀಸಿದ್ದು ಹೀಗೆ
ಚೇತೇಶ್ವರ್ ಪೂಜಾರಾ ಬ್ಯಾಟಿಂಗ್ ಭಂಗಿ
135 ರನ್ ಸಿಡಿಸಿದ ಆಂಗ್ಲರ ಪಾಲಿಗೆ ಮುಳುವಾದ ಪೂಜಾರಾ ಬ್ಯಾಟ್ ಬೀಸಿದ್ದು ಹೀಗೆ
ಸಿಂಗ್ ಇಸ್ ಕಿಂಗ್
ಇಂಗ್ಲೆಂಡ್ ತಂಡ ಕೂಡಾ ಈಗ ಸಿಂಗ್ ಇಸ್ ಕಿಂಗ್ ಎನ್ನುತ್ತಿದೆ. ಅರ್ ಅಶ್ವಿನ್ ವಿಕೆಟ್ ಕೀಳುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿದ ಮಾಂಟೆ ಪನೇಸರ್
ಭಾರತದ ಹೊಸ ಗೋಡೆ ಕೊನೆಗೂ ಔಟ್
135 ರನ್ ಗಳಿಸಿದ್ದ ಪೂಜಾರಾ ಔಟಾಗುತ್ತಿದ್ದಂತೆ ಆಂಗ್ಲರು ನೆಮ್ಮದಿಯ ನಿಟ್ಟುಸಿರುಬಿಟ್ಟರು. ಈ ಸರಣಿಯಲ್ಲಿ ಮೂರು ಇನ್ನಿಂಗ್ಸ್ ಗಳಿಂದ 1,015 ನಿಮಿಷ ಬ್ಯಾಟಿಂಗ್ ಮಾಡಿರುವ ಪೂಜಾರಾ 382 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಮಾಂಟೆ ಪನೇಸರ್ ಬೌಲಿಂಗ್ ಭಂಗಿ
ಶನಿವಾರ ಕೂಡಾ ಉತ್ತಮ ಬೌಲಿಂಗ್ ಮೂಲಕ ಇಂಗ್ಲೆಂಡ್ ಗೆ ಒಳ್ಳೆ ಯಶಸ್ಸು ತಂದುಕೊಟ್ಟ ಮಾಂಟಿ ಪನೇಸರ್
ಹರ್ಭಜನ್ ಸಿಂಗ್ ಬ್ಯಾಟಿಂಗ್
ಪೂಜಾರಾಗೆ ಉತ್ತಮ ಸಾಥ್ ನೀಡಿದ ಹರ್ಭಜನ್ ಸಿಂಗ್ ಬ್ಯಾಟಿಂಗ್ ವೇಳೆ ಕಾಣಿಸಿದ್ದು ಈ ರೀತಿ