ವಿಶ್ವೇಶ್ವರಭಟ್ಟರು ವಿಜಯಕರ್ನಾಟಕ ಬಿಟ್ಟಗುಟ್ಟುರಟ್ಟು
ವಿಜಯ ಕರ್ನಾಟಕ ಸಂಪಾದಕ ಹುದ್ದೆಗೆ ಭಟ್ಟರು ರಾಜೀನಾಮೆ ನೀಡಿ ಒಂದು ವರ್ಷ ತುಂಬಿತು. ಈ ಸಂದರ್ಭದಲ್ಲಿ ಅವರು ಬರೆದ ಬರಹವನ್ನು ತನ್ನಿಮಿತ್ತ ಲೇಖನ ಎಂದು ಕರೆಯಲೂಬಹುದು. ವರ್ಷಾಬ್ಧಿಕ ಎನ್ನೋಣವೇ ಅಥವಾ ವಾರ್ಷಿಕೋತ್ಸವ ಎನ್ನೋಣವೇ? ಅಥವಾ ಇದಕ್ಕೆ ಬೇರೊಂದು ಹೆಸರುಂಟೊ?
ಇದನ್ನು ಹೇಗೆ ಕರೆದರೆ ಸರಿಹೋದಿತೆಂದು ಸ್ವತಃ ಭಟ್ಟರೇ ತಮ್ಮ ದೀರ್ಘವಾದ ಲೇಖನದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸವಿವರವಾಗಿ ಬರೆದುಕೊಂಡಿದ್ದಾರೆ. ಸ್ಯಾಂಪಲ್ಲಿಗಾಗಿ ವಿಶ್ವೇರಭಟ್ಟರ ಲೇಖನದಿಂದ ಆಯ್ದ ಒಂದೆರಡು ಎರಡು ಪ್ಯಾರ ಹೀಗಿದೆ :
ಆತ ಅಪೇಕ್ಷಿಸಿದಂತೆ ಅವನ ಓಲೈಕೆ, ಬಕೆಟ್ ಹಿಡಿಯುವಿಕೆ, ಚಮಚಾಗಿರಿ ಮಾಡಿದ್ದರೆ, ನಿರಾತಂಕವಾಗಿ ಅಲ್ಲಿಯೇ ಮುಂದುವರಿಯಬಹುದಿತ್ತು! ಇಷ್ಟಾಗಿಯೂ ಆ ವ್ಯಕ್ತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಒಂದು ರೀತಿಯಲ್ಲಿ ನನಗೆ ಆತ ಪ್ರಾತಃ ಸ್ಮರಣೀಯ. ಕಾರಣ ಆತ ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಳ್ಳದಿದ್ದರೆ ನಾನು 'ವಿಕ’ವನ್ನು ಬಿಡುತ್ತಿರಲಿಲ್ಲ. ವಿಕಕ್ಕಿಂತ ಮಿಗಿಲಾದ ಈಗಿನ ಜವಾಬ್ದಾರಿಯೂ ಸಿಗುತ್ತಿರಲಿಲ್ಲ. ಆತನ ಹೊಟ್ಟೆ ಸದಾ ತಣ್ಣಗಿರಲಿ! "
ಹೀಗೆ ಆ "ಸಣ್ಣ ಮನಸ್ಸಿನ" ವ್ಯಕ್ತಿಗೆ ಬರೆಯುವ ನೆಪದಲ್ಲಿ ಭಟ್ಟರು ಇನ್ನೂ ಅನೇಕ ಸಂಗತಿಗಳನ್ನು ತಮ್ಮ ದೊಡ್ಡ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಈ ಬರಹದಲ್ಲಿ 14 ವ್ಯಕ್ತಿಗಳ ಹೆಸರುಗಳು ಪ್ರಸ್ತಾಪವಾಗಿದೆ. 3 ವ್ಯಕ್ತಿಗಳ ಭಾವಚಿತ್ರ ಅಚ್ಚಾಗಿದೆ. ಬರಹವು ತಾಣದ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಅಡಕವಾಗಿದೆ, ಓದಿ.