ಇವತ್ತು ವೈದ್ಯ ನಾರಾಯಣ ಧನ್ವಂತರಿ ಜಯಂತಿ
ವಿಷ್ಣು ಧನ್ವಂತರಿ ಅವತಾರ ತಾಳಿ ಎಷ್ಟು ಯುಗಗಳು ಉರುಳಿದವೋ ನನಗೆ ಗೊತ್ತಿಲ್ಲ. ಆದರೆ, ಪುರಾಣ ಮತ್ತು ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ತಿಳಿಸುವ ಪ್ರಕಾರ ಇಂದು ಮಂಗಳವಾರ ಧನ್ವಂತರಿ ಜಯಂತಿ. ಧನ್ವಂತರಿಯು ದೇವಾನುದೇವತೆಗಳಿಗೆ ಡಾಕ್ಟರ್ ಆಗಿದ್ದನು ಎಂದು ವಿಕಿಪೀಡಿಯದಲ್ಲಿ ಬಣ್ಣಿಸಲಾಗಿದೆ.
ಇಡೀ ವಿಶ್ವಕ್ಕೇ ವೈದ್ಯಕೀಯ ವಿದ್ಯೆಯನ್ನು ಮೊದಲು ತಿಳಿಸಿದ್ದು ಧನ್ವಂತರಿ. ಅಷ್ಟೇ ಅಲ್ಲ, ಇಂದಿನ ಪ್ಲಾಸ್ಟಿಕ್ ಸರ್ಜರಿಯನ್ನು ಆ ಕಾಲದಲ್ಲಿಯೇ ಪರಿಚಯಿಸಿದ್ದ ವಿಶ್ವದ ಮೊದಲ ವೈದ್ಯ ಎಂದೇ ಪ್ರಸಿದ್ಧನಾದ ಆತ ಆಯುರ್ವೇದದ ಪಿತಾಮಹ ಕೂಡ ಹೌದು.
ಅನೇಕ ಗಿಡ ಮೂಲಿಕೆಗಳನ್ನು ಪತ್ತೆ ಹಚ್ಚಿ, ಹಲವು ಕಾಯಿಲೆಗಳಿಗೆ ನೈಸರ್ಗಿಕ ಕಷಾಯ, ಗುಳಿಗೆ, ಲೇಹ, ಮುಲಾಮುಗಳನ್ನು ಕೊಟ್ಟ ಖ್ಯಾತಿ ಧನ್ವಂತರಿಗೆ ಅರ್ಪಣೆಯಾಗುತ್ತದೆ. ಅರಿಶಿಣ ಮತ್ತು ಉಪ್ಪಿನಲ್ಲಿರುವ ಗುಣಾತ್ಮಕ ಆಯುರ್ವೇದದ ಅಂಶಗಳನ್ನು ಮೊದಲು ಕಂಡುಹಿಡಿದದ್ದೂ ಧನ್ವಂತರಿಯೇ.
ಅಂದಿನ ಕಾಲಕ್ಕೆ ಅತಿ ನುರಿತ ವೈದ್ಯನಾಗಿದ್ದ ಧನ್ವಂತರಿ, ತುರ್ತು ಸಂದರ್ಭಗಳಲ್ಲಿ, ಯುದ್ಧದ ಸಮಯದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡುತ್ತಿದ್ದ ಎಂದು ಹೇಳಲಾಗುತ್ತದೆ. ಈತ ಅನುಸರಿಸುತ್ತಿದ್ದ ಮಾರ್ಗಗಳು ಅತಿ ಕಠಿಣ ಮತ್ತು ಕಷ್ಟಕರವಾಗಿದ್ದರೂ ರಿಸಲ್ಟ್ ಫಸ್ಟ್ ಕ್ಲಾಸ್.
ವೈದ್ಯಕೀಯ ಕ್ಷೇತ್ರದಲ್ಲಿನ ಈತನ ಬುದ್ಧಿವಂತಿಕೆ ಮತ್ತು ಸಾಧನೆಗಳ ಮೆಚ್ಚುಗೆಯ ಫಲವಾಗಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಈತನನ್ನು ನವರತ್ನಗಳಲ್ಲಿ ಒಬ್ಬ ಎಂದು ಬಣ್ಣಿಸಲಾಗಿತ್ತು.
ಆಯುರ್ವೇದ ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತನಿಗೆ ಧನ್ವಂತರಿ ಹಲವು ವೈದ್ಯಕೀಯ ವಿಚಾರಧಾರೆಗಳನ್ನು, ವಿಧಿವಿಧಾನಗಳನ್ನು ಮತ್ತು ಗುಟ್ಟುಗಳನ್ನು ತಿಳಿಸಿದ್ದ ಎಂದೂ ಗ್ರಂಥಗಳು ನಮಗೆ ತಿಳಿಸುತ್ತವೆ. ವೈದ್ಯೋ ನಾರಾಯಣೋ ಹರಿಃ (ಆಧಾರ : ವಿಕಿಪೀಡಿಯ)