ಕುಮಾರಸ್ವಾಮಿ ಅವರಿಗೆ 52ರ ಶುಭಾಶಯಗಳು
ಆಡಳಿತ ಪಕ್ಷದ ತಪ್ಪು ನಡೆ ನುಡಿಗಳನ್ನು ತಿದ್ದುವುದು, ಆಳುವವರ ಜನ ವಿರೋಧಿ ನೀತಿ ನಿಯಮಗಳನ್ನು ಪ್ರಶ್ನಿಸುವುದು, ಅಧಿಕಾರಸ್ಥರ ಹಗರಣಗಳನ್ನು ಬಯಲಿಗೆ ಎಳೆಯುವುದು, ತನ್ಮೂಲಕ ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆಯಲ್ಲಿ ಅವರಿಗೆ ಗೆಲವು ಇರಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ. ಜನಪ್ರತಿನಿಧಿ ಆಡಳಿತ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜವಾಬ್ದಾರಿ ಬಲುದೊಡ್ಡದು. ಅದನ್ನು ಅವರು ಮತ್ತು ಅವರ ಪಕ್ಷದ ಶಾಸಕರು ತುಂಬ ಎಚ್ಚರಿಕೆಯಿಂದ ನಿರ್ವಹಿಸುತ್ತಾರೆಂದೂ ಬಯಸೋಣ.
ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಅಧಿಕಾರದ ರುಚಿ ಉಂಡವರು. ಇವತ್ತು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅದೃಷ್ಟ ಅವರನ್ನು ನಾಳೆ ಇನ್ನೆಲ್ಲಿಗೋ ಕರೆದೊಯ್ಯಬಹುದು. ಎಲ್ಲಾದರೂ ಇರು ಎಂತಾದರೂ ಇರು, ನೀನು ಕನ್ನಡನಾಡಿನ ಏಳಿಗೆಗೆ ತ್ರಿಕರಣ ಶುದ್ಧಿಯಿಂದ ಕೆಲಸ ಮಾಡುವಂತಹವನಾಗು ಎಂದು ನಾವೆಲ್ಲ ಕೂಡಿ ಹಾರೈಸೋಣ.
ಮುಂದೊಂದು ದಿನ ಅವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿ ಆದದ್ದೇ ಅದರೆ, ಈ ಹಿಂದೆ ರಾಜ್ಯಭಾರ ಮಾಡಿದ ಮುಖ್ಯಮಂತ್ರಿಗಳು ಎಸಗಿದ ಯಾವ ತಪ್ಪನ್ನೂ ನಾನು ಮಾಡುವುದಿಲ್ಲ ಎಂದು ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಬೇಕೆಂದೂ ರಾಜ್ಯದ ಒಟ್ಟಾರೆ ಹಿತದೃಷ್ಟಿಯಿಂದ ಅವರನ್ನು ಕೇಳಿಕೊಳ್ಳೋಣ.
ಹಿರಿಯನಾಯಕ ಎಸ್ ಬಂಗಾರಪ್ಪನವರು ಜೆಡಿಎಸ್ಸಿಗೆ ಸೇರುವುದರ ಮೂಲಕ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಕಾಣಿಕೆಯನ್ನು ಕೊಟ್ಟಿದ್ದಾರೆ. ನಾವು ಬಡವರು, ನಾಲಕ್ಕು ಒಳ್ಳೆಯ ಮಾತಿಗಿಂತ ಹೆಚ್ಚಿನ ಉಡುಗೊರೆಯನ್ನು ಅವರಿಗೆ ನೀಡಲಾರೆವು. ಕುಮಾರಸ್ವಾಮಿ ಅವರಿಗೆ ಐಶ್ವರ್ಯ ಇದೆ. ಅವರಿಗೆ ಬೇಕಾಗಿರುವುದು ಆರೋಗ್ಯ ಮತ್ತು ಆಯಸ್ಸು. ಅವೆರಡನ್ನು ದಯಾಮಯನಾದ ಆ ಭಗವಂತ ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸೋಣ. ಕುಮಾರಸ್ವಾಮಿಗೆ ಶುಭಾಶಯ ಕೋರಿರಿ.