ಗೆಲುವೇ ಗೆಲುವಿಗೆ ಸೋಪಾನ!
* ಗೋಪಾಲ ರೆಡ್ಡಿ, ಚಿಕ್ಕ ತಿರುಪತಿ
ಅತ್ಯುತ್ತಮ ಗುಣಮಟ್ಟದ, ಪ್ರಶಸ್ತಿಗೆ ಅರ್ಹವಾದ ಜೋಳವನ್ನು ಅನ್ನದಾತನೊಬ್ಬ ಬೆಳೆಯುತ್ತಿದ್ದ. ತಾನು ಬೆಳೆದ ಜೋಳವನ್ನು ಪ್ರತಿ ವರ್ಷ ರಾಜ್ಯಮಟ್ಟದ ಕೃಷಿ ಪ್ರದರ್ಶನದಲ್ಲಿ ಪ್ರದರ್ಶಿಸಿ ಬಹುಮಾನ ಗಿಟ್ಟಿಸಿ ಹಲವರ ಗೌರವಕ್ಕೆ ಪಾತ್ರನಾಗುತ್ತಿದ್ದ. ಒಂದು ವರ್ಷ ಪತ್ರಿಕೆಯೊಂದರ ವರದಿಗಾರನೊಬ್ಬ ಆತನನ್ನು ಸಂದರ್ಶಿಸಿ ಜೋಳವನ್ನು ಹೇಗೆ ಬೆಳೆಯುತ್ತಾನೆ ಎಂಬ ಆಸಕ್ತಿಕದಾಯಕ ವಿಚಾರವನ್ನು ತಿಳಿದುಕೊಂಡ.
ರೈತ ತನ್ನ ನೆರೆಹೊರೆಯ ರೈತರೊಂದಿಗೆ ಬೀಜಗಳನ್ನು ಹಂಚಿಕೊಳ್ಳುತ್ತಿದ್ದ ಎಂಬ ಮಹತ್ವದ ಅಂಶವನ್ನು ವರದಿಗಾರ ಕಂಡುಹಿಡಿದ. ''ತಾವು ಬೆಳೆದ ಅತ್ಯುತ್ತಮ ಜೋಳದ ಬೀಜಗಳನ್ನು ನಿಮ್ಮ ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಿದ್ದೀರಲ್ಲಾ ಅವರು ನಿಮ್ಮೊಂದಿಗೆ ಪ್ರತಿವರ್ಷ ಸ್ಪರ್ಧಿಸಿದರೆ?'' ಎಂದು ವರದಿಗಾರ ಪ್ರಶ್ನಿಸಿದ.
''ನೋಡಿ ಅಣ್ಣಾ, ನಿಮಗೆ ಗೊತ್ತಿಲ್ಲವೆ? ಕಟಾವಿಗೆ ಬಂದ ಜೋಳದ ಪರಾಗರೇಣುಗಳನ್ನು ಗಾಳಿ ಹೊಲದಿಂದ ಹೊಲಕ್ಕೆ ತಂದು ಹಾಕುತ್ತದೆ. ಒಂದು ವೇಳೆ ನನ್ನ ನೆರೆಯವರು ಕಳಪೆ ಮಟ್ಟದ, ಕೆಳದರ್ಜೆಯ ಹಾಗೂ ಜೊಳ್ಳು ಬೀಜಗಳನ್ನು ಬಳಸಿದ್ದೇ ಆದರೆ ಮಿಶ್ರ ಪರಾಗಸ್ಪರ್ಶದಿಂದ ನನ್ನ ಜೋಳದ ಗುಣಮಟ್ಟವು ಕ್ರಮೇಣ ಕ್ಷೀಣಿಸಲಿದೆ. ನಾನು ಉತ್ತಮ ಮಟ್ಟದ ಜೋಳವನ್ನು ಬೆಳೆಯಬೇಕಾದರೆ, ನನ್ನ ನೆರೆಯವರಿಗೂ ಉತ್ತಮ ಗುಣಮಟ್ಟದ ಜೋಳವನ್ನು ಬೆಳೆಯಲು ಸಹಾಯ ಮಾಡಬೇಕು.''
ಸುಸಂಬದ್ಧ ಜೀವನಕ್ಕೆ ಸಂಬಂಧಿಸಿದಂತೆ ಆ ರೈತ ಅತ್ಯುತ್ತಮ ಒಳದೃಷ್ಟಿಕೋನವನ್ನು ಕೊಟ್ಟಿದ್ದ. ನೆರೆಹೊರೆಯವರ ಜೋಳ ಉತ್ತಮವಾಗಿಲ್ಲದಿದ್ದರೆ ತಾನು ಬೆಳೆಯುವ ಜೋಳವು ಜೊಳ್ಳಾಗಲಿದೆ. ಇದೇ ಸೂತ್ರವನ್ನು ಜೀವನದ ವಿವಿಧ ಆಯಾಮಗಳಿಗೂ ಅನ್ವಯಿಸಿಕೊಳ್ಳಬಹುದಲ್ಲವೆ?
ಸಮರಸವನ್ನು ಬಯಸುವವರು ನೆರೆಹೊರೆಯವರಿಗೆ ಹಾಗೂ ಸಹೋದ್ಯೋಗಿಗಳಿಗೆ ಶಾಂತ ರೀತಿಯಲ್ಲಿ ಸಹಾಯ ಮಾಡಬೇಕಾಗುತ್ತದೆ. ಚೆನ್ನಾಗಿ ಬಾಳಬೇಕು ಎನ್ನುವವರು ಬೇರೆಯವರನ್ನು ಚೆನ್ನಾಗಿ ಬದುಕಲು ಸಹಾಯ ಮಾಡಬೇಕು. ಜೀವನದ ಮೌಲ್ಯವನ್ನು ನಿರ್ಧರಿಸಲು ಎಷ್ಟು ದಿನ ಬದುಕುತ್ತೇವೆ ಎಂಬುದಕ್ಕಿಂತ ಎಷ್ಟು ಮಂದಿಗೆ ಸಹಾಯ ಮಾಡಿದ್ದೇವೆ ಎಂಬುದರ ಮೇಲೆ ಅವಲಂಬಿಸಿದೆ.
ಈ ಕತೆಯಿಂದ ಕಲಿತ ಪಾಠ: ಏಕಾಂಗಿಯಾಗಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಸಹಯೋಗ ಮತ್ತು ಸಾಮೂಹಿಕ ಪ್ರಕ್ರಿಯೆಯಿಂದ ಗೆಲುವು ಸಾಧ್ಯವಾಗುತ್ತದೆ. ಹಾಗಾಗಿ ಒಳ್ಳೆಯ ಅಂಶಗಳನ್ನು, ಒಳ್ಳೆಯ ಆಲೋಚನೆಗಳು ಹಾಗೂ ಹೊಸ ವಿಚಾರಗಳನ್ನು ನಿಮ್ಮ ತಂಡದೊಂದಿಗೆ ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ. ಸೋಲೆ ಗೆಲುವಿನ ಸೋಪಾನದಂತೆ ಗೆಲುವೆ ಗೆಲುವಿಗೆ ಸೋಪಾನವಾಗುತ್ತದೆ.
ಸಂಧ್ಯಾ
ಬರಹ
:
ಗೆಲುವಿನಿಂದಲೇ
ಗೆಲುವು
ಮೂಡಿಬರುತ್ತದೆ
ರೇಣುಕಾ
ಬರಹ
:
ಗೆಲುವು
ಗೆಲುವನ್ನೇ
ಹುಟ್ಟಿಸುತ್ತದೆ