ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಮರರಿಗೆ ಆಹಾರ, ಪಂಡಿತರಿಗೆ ತಾಂಬೂಲ

By * ಶಾಮ್
|
Google Oneindia Kannada News

SK Shama Sundara
ಕನ್ನಡ ನಾಡಿನ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಅವರ class teacherಗಳನ್ನು ಗುರಿಯಿಟ್ಟು ನಿನ್ನೆ ಒಂದು ಪತ್ರ ಬರೆದಿದ್ದೆ. ಅದನ್ನು ಓದಿದ, ಓದುಗ ಎಂಬ ಓದುಗರೊಬ್ಬರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಅದು ಕೆಳಕಂಡಂತಿದೆ:

***
ಇಂದ: ಓದುಗ

ದಿನಾಂಕ: 08 Apr 2010 7:11 am

ರೀ ಸಂಪಾದಕ ಶಾಮ್ ಅವರೇ, ನಿಮ್ಮ ಈ ಲೇಖನದಲ್ಲೇ ಕನ್ನಡ ಅರ್ಧಕ್ಕರ್ಧ ಮಾಯವಾಗಿದೆಯಲ್ರಿ!! ಬೇರೆ ಲೇಖನದ ಬದಲು ಈ ಲೇಖನವನ್ನೇ ಓದುಗರಿಗೆ ಅನುವಾದ ಮಾಡುವಂತೆ ಹೇಳುವುದು ಒಳಿತು... ಹೀಗೆ ಬರ್ದಿದೀನಿ ಅಂತ ಇನ್ನರ್ಧ ಗಂಟೇಲಿ ನನ್ನ ಈ ಕಾಮೆಂಟ್ ಕಿತ್ತು ಹಾಕ್ತೀರಾ ಅಲ್ವ?

***

ಈ ಮೇಲಿನಂತೆ ಕಾಮೆಂಟ್ ಮಾಡಿದ 'ಓದುಗ'ರಿಗೆ ಅರಿವಿದೆಯೋ ಇಲ್ಲವೋ ಅಥವಾ ಗೊತ್ತಿದ್ದೂ ಡ್ರಾಮಾ ಮಾಡುತ್ತಿದ್ದಾರೋ ಅಥವಾ ನಿಜಕ್ಕೂ ಅವರು ಪಂಪ, ಕುಮಾರವ್ಯಾಸ, ಮುದ್ದಣ, ರೆವರೆಂಡ್ ಫರ್ಡಿನಾಂಡ್ ಕಿಟ್ಟಲ್ ಅವರ ವಂಶಜರೋ? ಪೂರ್ಣ ಮಾಹಿತಿ ಇಲ್ಲ. ಅವರು ಎತ್ತಿರುವ ಪ್ರಶ್ನೆ ಮಾತ್ರ Very pertinent ಆಗಿದೆ. Thanks a lot.

ಸಮಸ್ತ ಕನ್ನಡಿಗರಿಗೂ ಇವತ್ತು ಚೆನ್ನಾಗಿ ಗೊತ್ತಿರುವ ವಿಷಯವೊಂದಿದೆ. ಹಾಗಿದ್ದರೂ ಅದು ಮಾತ್ರ Karnataka State Secret ಆಗಿ ರಹಸ್ಯವಾಗಿಯೇ ಉಳಕೊಂಡಿದೆ. ಆದ್ದರಿಂದ ಅದರ ಬಗ್ಗೆ ಯಾರೂ ಹೆಚ್ಚಾಗಿ ಬಹಿರಂಗವಾಗಿ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ. ವಿಷಯ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದೇ ಅತಿ ಬುದ್ಧಿವಂತ ಕನ್ನಡಿಗನ ಲಕ್ಷಣವಲ್ಲವೆ? ಇಂಥ ಬಯಲುನಾಟಕದ ಕನ್ನಡ ಕುಲ ಕಲಾವಿದರನ್ನು ಆಧುನಿಕ ಕನ್ನಡಿಗ ಎಂದು ಕರೆಯುತ್ತಾರೆ.

ಈ ಕಲಾವಿದರಿಗೆ ನಾನು ಇವತ್ತು ತಿಳಿಯಪಡಿಸಲೆತ್ನಿಸುವ Secret ವಿಷಯ ಏನೆಂದರೆ, ಆಧುನಿಕ ಕನ್ನಡಿಗರ ಮನೆ ಮಕ್ಕಳಿಗೆ ಕನ್ನಡ ಕಸಕ್ಕೆ ಸಮಾನ. ಹೆತ್ತ ತಂದೆ ತಾಯಿಯರಿಗೆ ಇದು ಚೆನ್ನಾಗಿ ಗೊತ್ತಿದೆ. ಹೆತ್ತ ತಪ್ಪಿಗೆ ಮಕ್ಕಳ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಾರೆ. ಅಸಹನೆ ಮಿತಿಮೀರಿದಾಗ ಮಾತ್ರ ತಮ್ಮ ಮಕ್ಕಳನ್ನು ಕ್ಷಮಿಸಿ ಪಕ್ಕದ ಮನೆಯ ಹುಡುಗರ ತಪ್ಪುಗಳತ್ತ ಬೊಟ್ಟು ಮಾಡಲು ಕಾತರಿಸುತ್ತಾರೆ. ಮದುವೆ, ಮಕ್ಕಳು ಆಗದಿದ್ದವರಿಗೂ ಗೊತ್ತಾಗಿರುವ secret ಒಂದಿದೆ. ಅದೆಂದರೆ, ಈಗಿನ ಕಾಲದ ಹದಿಹರೆಯದ ಹುಡುಗರು ಹುಡುಗಿಯರು ಕನ್ನಡ ಓದುವುದಿಲ್ಲ. ಕನ್ನಡ ಬಳಸಿ ಮಾತನಾಡುವುದಕ್ಕೂ ಏನೋ ಬಿಗುಮಾನ. ನಮ್ಮ ಆಧುನಿಕ ಕನ್ನಡ ಓದುಗರ ಮನೆಮನೆಗಳಲ್ಲಿ ಗೋಚರಿಸುತ್ತಿರುವ ನಿತ್ಯಸತ್ಯವೇ ಇದು.

ಯುವಕರಿಗೆ ಖಂಡಿತ ಕನ್ನಡದಲ್ಲಿ ಆಸಕ್ತಿ ಇಲ್ಲ. ಮುಖ್ಯವಾಗಿ ಬೆಂಗಳೂರಿನಲ್ಲಿರುವ ಶಾಲಾ ಕಾಲೇಜು ಬಾಲಕರು ಕನ್ನಡ ಪುಸ್ತಕವನ್ನಾಗಲೀ, ಕನ್ನಡ ಪತ್ರಿಕೆಯನ್ನಾಗಲೀ ಮೂಸಿ ಕೂಡ ನೋಡುವುದಿಲ್ಲ. ನಾನು ಕಂಟೋನ್ ಮೆಂಟಿನ ಆಂಗ್ಲೋ ಇಂಡಿಯನ್ ಅಥವಾ ಮಿಷನರಿ ಶಾಲೆಗಳಿಗೆ ಹೋಗುವ ಯುವಕರನ್ನು ಕುರಿತು ಹೇಳುತ್ತಿಲ್ಲ. ಅಪ್ಪಟ ಕನ್ನಡ ಪ್ರದೇಶಗಳೆಂದು ಗುರುತಿಸಿಕೊಂಡಿದ್ದ ಚಾಮರಾಜಪೇಟೆ, ಮಲ್ಲೇಶ್ವರ, ಬಸವನಗುಡಿ, ಜಯನಗರ, ಹನುಮಂತನಗರ, ಶಂಕರಪುರ ಮುಂತಾದ ಬಡಾವಣೆಗಳಲ್ಲೂ ಶಾಲಾಬಾಲಕರು ಇವತ್ತು ಹೀಗೇ ವರ್ತಿಸುತ್ತಿದ್ದಾರೆ.

ಈ ಹುಡುಗ ಹುಡುಗಿಯರು ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿಯಲ್ಲಿ ಕನ್ನಡ ಪೇಪರ್ ನಲ್ಲಿ ಪಾಸು ಆಗಲೇ ಬೇಕಾಗಿರುವುದರಿಂದ ಅಷ್ಟೋಇಷ್ಟೋ ಪಠ್ಯಪುಸ್ತಕವನ್ನು ಉರುಹೊಡೆದು ಗೆಟ್ ಆನ್ ಆಗುತ್ತಾರೆ. ಅವರಿಗೆ science, Maths, physics, biology ವಿಷಯಗಳಲ್ಲಿ 96 ಅಂಕಗಳಿಗಿಂತ ಹೆಚ್ಚು ಗಳಿಸುವತ್ತ ಗಮನವಿದೆಯೇ ವಿನಾ ನಿಮ್ಮ ಕನ್ನಡ ಅವರಿಗೆ ಬೇಕಾಗಿಲ್ಲ.

ಇನ್ನೊಂದು ದಿಕ್ಕಿನಿಂದ ಗಮನಿಸಿದರೆ, ಈ ತಲೆಮಾರಿನ ಎಳೆಯರು ಇಂಟರ್ನೆಟ್ ಬಳಸುವುದು ದಿನೇದಿನೇ ಹೆಚ್ಚಾಗುತ್ತಿದೆ. ಸಾಲ ಮಾಡಿಯಾದರೂ ಪರವಾಗಿಲ್ಲ, ಅಪ್ಪ ಎನಿಸಿಕೊಂಡವನು ಮನೆಗೆ ಇಂಟರ್ನೆಟ್ ಸಂಪರ್ಕ ತರಲೇ ಬೇಕಾಗಿದೆ. ಶಾಲೆಯ ಪಕ್ಕ ಕನಿಷ್ಠ ಎರಡಾದರೂ ಸೈಬರ್ ಕೆಫೆ ಇದ್ದೇ ಇರುತ್ತದೆ. ಇವರಿಗೆಲ್ಲ SRK, Katrina Kaif, Sania Mirza, Yuvraj Singh, Sachin Tendulkar ಮುಂತಾದ ಮಹಾಮಹಿಮರ ಜೀವನ ಮತ್ತು ಸಾಧನೆಗಳನ್ನು ಓದಿ ತಿಳಿಯುವ ಹಂಬಲ. ಅದಕ್ಕಾಗಿ ಅವರು ತಮ್ಮ ಇಂಟರ್ನೆಟ್ ಸಮಯ ಮತ್ತು pocket money ಮೀಸಲಿಡುತ್ತಾರೆ.

ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿಕೊಡುವ 20 ವರ್ಷ ಕೆಳಗಿನ ಈ segment ಒಟ್ಟಾರೆ ಸಿನಿಮಾ ಮತ್ತು ಕ್ರಿಕೆಟ್ ರಂಜನೆಗೆ 30 ಭಾಗ, ಕಲಿಕೆಗೆ ಪೂರಕವಾಗುವ ವಿಷಯಗಳನ್ನು ಹುಡುಕಿ ಓದುವುದಕ್ಕೆ 4 ಭಾಗ, ಇಮೇಲ್ ಗೆ 10 ಭಾಗ ಮತ್ತು ಉಳಿದ 56 ಭಾಗ ಫೇಸ್ ಬುಕ್ ಮತ್ತು ಆರ್ಕುಟ್ ಎಂಬ Social networking websitesಗಳಿಗೆ ಮುಡಿಪಾಗಿಟ್ಟಿದೆ.

ಕೆಲವೊಮ್ಮೆ ಕುತೂಹಲ ಕೆಲವೊಮ್ಮೆ ಅಗತ್ಯ ಮತ್ತು ಕೆಲವೊಮ್ಮೆ accidental ಆಗಿ ಹೊಸಹೊಸ ಯುವ ಕನ್ನಡ ಓದುಗರು ಕನ್ನಡ ನಾಡಿನ ವಿವಿಧ ಜಿಲ್ಲೆಗಳ ಶಾಲೆ ಮತ್ತು ಕಾಲೇಜುಗಳಿಂದ ನಮ್ಮ ಕನ್ನಡ ವೆಬ್ ಸೈಟಿಗೆ ದಾಳಿ ಇಡುತ್ತಾರೆ. ಅವರಿಗೆ ಸುಲಭವಾಗಿ ಅರ್ಥವಾಗುವ, ಕ್ಲಿಷ್ಟಾತಿಕ್ಲಿಷ್ಟ ಪದಗಳನ್ನು ಬಳಸದೆ ಬರೆದ ವರದಿ, ಮಾಹಿತಿ, ಲೇಖನಗಳನ್ನು ಪೂರೈಸುವುದೂ ನಮಗೆ ಮುಖ್ಯವಾಗುತ್ತದೆ. ಅವರ ಓದುವುವಿಕೆಯ ಸಲೀಸು ಮತ್ತು ಅವರು ಮತ್ತೆ ನಮ್ಮ ವೆಬ್ ತಾಣಕ್ಕೆ ಭೇಟಿ ಕೊಡಲಿ ಎಂಬ ಸ್ವಾರ್ಥದಿಂದ, ಉದ್ದೇಶ ಪೂರ್ವಕವಾಗಿ ಕನ್ನಡ ಇಂಗ್ಲಿಷ್ ಮಿಕ್ಸ್ ಮಾಡಿ ಪತ್ರ ಬರೆದೆ. ಮತ್ತೆ ಬರೆಯುತ್ತೇನೆ.

ನಮ್ಮ ವೆಬ್ ಸೈಟು ನಿಮ್ಮಂತಹ ಸಾಲಿರಾಮಚಂದ್ರರಾಯರಿಗಲ್ಲ. ಚಂಪನಿಗೆ ಇಲ್ಲ, ಪಂಪನಿಗೆ ಅಲ್ಲ. ಕನ್ನಡ ಚಳವಳಿಗಾರರ ಸೊತ್ತಲ್ಲ. ಢೋಂಗೀ ಕನ್ನಡಿಗರ ಆಟದ ಮೈದಾನವಲ್ಲ. ಅಷ್ಟಕ್ಕೂ ನಮ್ಮ ವೆಬ್ ಸೈಟು ಶಬ್ದಮಣಿದರ್ಪಣವಲ್ಲ. ನಾನು ಕೇಶೀರಾಜನಲ್ಲ. ಅಕ್ಷರಕ್ಕೆ ಅಕ್ಷರ ಕೂಡಿಸಿಕೊಂಡು ನಿಧಾನವಾಗಿ ಕನ್ನಡ ಓದುವ ಉತ್ಸಾಹ ತೋರಿಸುವ ವರ್ಗ ಹಾಗು ಮರೆತ ಕನ್ನಡವನ್ನು ಮತ್ತೆ ಓದಲು ಶುರುಮಾಡಿಕೊಂಡಿರುವ ವಿಶಾಲ ಕನ್ನಡ ಸಮುದಾಯವೆಂದರೆ ನನಗೆ ಹೆಚ್ಚು ಪ್ರೀತಿ, ಜಾಸ್ತಿ ಹೆಮ್ಮೆ .

ಮೇಲಿನ ಕಾಮೆಂಟಿಗ 'ಓದುಗ'ನ ಕಳಕಳಿ ನನಗೆ ಸ್ವಲ್ಪ ಅರ್ಥವಾಗಿದೆ. ಆದ್ದರಿಂದ ಅವರು ಅಚ್ಚಕನ್ನಡದಲ್ಲಿ ಬರೆದ ಕಾಮೆಂಟ್ ಮತ್ತಿತರ ವಿವರಗಳು ಶಾಶ್ವತವಾಗಿ ನಮ್ಮ ವೆಬ್ ತಾಣದಲ್ಲಿ, google serverನಲ್ಲಿ ಜೋಪಾನವಾಗಿರುತ್ತದೆ. ಭಯಂನಾಸ್ತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X