ಶ್ರೀವತ್ಸ ಜೋಶಿ ಪುಸ್ತಕ ಪರಾಗಸ್ಪರ್ಶ
ಅಮೆರಿಕಾದ ಪೂರ್ವ ಕರಾವಳಿಯ ವರ್ಜೀನಿಯಾದಲ್ಲಿ ನೆಲೆಸಿರುವ ಮೂಲತಃ ಕಾರ್ಕಳದವರಾದ ಜೋಶಿ, ವಿದೇಶಿ ನೆಲದಲ್ಲಿ ಕುಳಿತು ಕನ್ನಡ ಮಾಧ್ಯಮ ವೇದಿಕೆಗಳಿಗೆ ಸತತ ಎಂಟು ವರ್ಷಗಳ ಕಾಲ ಸಾಪ್ತಾಹಿಕ ಅಂಕಣ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಇಷ್ಟು ದೀರ್ಘ ಕಾಲ ಕನ್ನಡ ಕಾಲಂ ನಿಭಾಯಿಸಿದ ಅನಿವಾಸಿ ಲೇಖಕ ಗೌರವ ಅವರಿಗೆ ಮಾತ್ರ ಸಲ್ಲುತ್ತದೆ. ಅವರು ನಮ್ಮ ವಾಹಿನಿಯಲ್ಲಿ ಐದು ವರ್ಷಗಳ ಕಾಲ ಬರೆದ ಮಂಗಳವಾರದ ಅಂಕಣ ವಿಚಿತ್ರಾನ್ನದ ಎರಡು ಸಂಪುಟಗಳು ಈಗಾಗಲೇ ಬೆಳಕು ಕಂಡಿರುವುದನ್ನು ನೆನಪಿಸಲಾಗಿದೆ.
ಪರಾಗಸ್ಪರ್ಶ ಅಂಕಣ ಲೇಖನಗಳ ಸಂಗ್ರಹ ಎರಡು ಹೊತ್ತಿಗೆಗಳಲ್ಲಿ ಏಕಕಾಲಕ್ಕೆ ಬೆಳಕು ಕಾಣುತ್ತದೆ. ಕೃತಿಗಳು 2010 ರ ಜನವರಿ 2 ಶನಿವಾರದಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಸವನಗುಡಿಯಲ್ಲಿ ವರ್ಲ್ಡ್ ಫೇಮಸ್ ಆಗಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬಿಡುಗಡೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಈ ಸಭಾಂಗಣವನ್ನು ಕನ್ನಡ ಕೃತಿ ಬಿಡುಗಡೆಯ ಬಾಣಂತಿ ಕೋಣೆಯೆಂದೂ ಮಂದಿ ಕುಶಾಲಕ್ಕೆ ಹೇಳುತ್ತಾರೆ.
ಪುಸ್ತಕ ಪ್ರಕಾಶನ ಮಾಡುತ್ತಿರುವವರು ಅಂಕಿತ ಪ್ರಕಾಶನದ ಪ್ರಕಾಶ್ ಕಂಬಂತ್ತಳ್ಳಿ. ಬಿಡುಗಡೆ ಕಾರ್ಯಕ್ರಮದ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳಲಿವೆ, ನಿರೀಕ್ಷಿಸಿ. ಇದೇ ಉದ್ದೇಶದಿಂದ ಲೇಖಕ ಶ್ರೀವತ್ಸ ಜೋಶಿ ಅವರು ಇದೀಗ ಭಾರತಕ್ಕೆ ಬಂದಿದ್ದಾರೆ. ಅವರ ವಿಳಾಸ ಎಂದಿನಂತೆ : [email protected]