ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಪ್ರಭ ಪತ್ರಿಕೆಯ ಸಂಪಾದಕ ಶಿವಸುಬ್ರಮಣ್ಯ

By * ಎಸ್ಕೆ. ಶಾಮ ಸುಂದರ
|
Google Oneindia Kannada News

Shivasubramanya, new editor Kannadaprabha (Photo by KM Veeresh)
ಯುವಕ ಕೆ.ಶಿವಸುಬ್ರಮಣ್ಯ ಅವರು ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ನೂತನ ಸಂಪಾದಕರ ನೇಮಕವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪಬ್ಲಿಕೇಷನ್ಸ್ ಮಧುರೈ ಪ್ರೈ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಸೋಮವಾರ ಪ್ರಕಟಿಸಿದ್ದಾರೆ.

ಎಚ್ ಆರ್ ರಂಗನಾಥ್ ಅವರ ರಾಜೀನಾಮೆಯಿಂದ ತೆರವಾದ ಸಂಪಾದಕರ ಹುದ್ದೆಯನ್ನು ಅಲಂಕರಿಸಿರುವ ಶಿವು ಕನ್ನಡಪ್ರಭದಲ್ಲಿ ಕಳೆದ 12 ವರ್ಷಗಳಿಂದ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ರಂಗನಾಥ್ ಅವರಲ್ಲದೆ ಅವರ ಜತೆ ಮೂರು ಮಂದಿ ಅನುಭವಿ ಪತ್ರಕರ್ತರು ಕನ್ನಡಪ್ರಭಕ್ಕೆ ರಾಜಿನಾಮೆ ನೀಡಿ ಸುವರ್ಣ ಟಿವಿಯ ಸುದ್ದಿ ವಾಹಿನಿ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿವು ಅವರಿಗೆ ಮೇಲ್ದರ್ಜೆಗೆ ಭಡ್ತಿ ದೊರೆತಿದೆ. ಪ್ರಜಾವಾಣಿಯ ಧಣಿ ದಿವಂಗತ ಕೆ.ಎನ್. ಗುರುಸ್ವಾಮಿ ಆಗಾಗ ಹೇಳುತ್ತಿದ್ದರು "ಯಾರು ನಮ್ಮನ್ನು ತೊರೆದು ಹೋದರೂ ಮರುದಿನ ಬೆಳಗಿನ ಜಾವ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆ ನ್ಯೂಸ್ ಸ್ಟಾಂಡಿನಲ್ಲಿ ಹಾಜರಾಗುತ್ತದೆ".

ಭಾರತೀಯ ಜನತಾ ಪಕ್ಷದ ಅಂಗಳದಲ್ಲಿ ಪರಸ್ಪರ ನಾಯಕರು ಕೆಸರು ಎರಚಿಕೊಳ್ಳುವ ಸುದ್ದಿಗಳನ್ನು ನಿತ್ಯ ಓದುತ್ತಿದ್ದೇವೆ. ಜಸ್ವಂತ್ ಸಿಂಗ್ ನಂತರ ಬಿಜೆಪಿ ನಾಯಕತ್ವವನ್ನು ತರಾಟಾಗೆ ತೆಗೆದುಕೊಳ್ಳುತ್ತಿರುವ ಸರದಿ ಅರುಣ್ ಶೌರಿ ಅವರದಾಗಿದೆ. ಇದೇ ಶೌರಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕರಾಗಿ ಕೆಲಸ ಮಾಡಿದ್ದರು. ಪತ್ರಿಕಾವೃತ್ತಿಯನ್ನು ತೊರೆದು ಅವರು ರಾಜಕೀಯ ಸೇರಿ ಎಷ್ಟೋ ವರ್ಷಗಳಾದರೂ, ಎಕ್ಸ್ ಪ್ರೆಸ್ಸಿನ ಮಾಲಿಕ ರಾಮನಾಥ್ ಗೋಯೆಂಕಾ ದೈವಾಧೀನರಾಗಿದ್ದರೂ ಇಂಡಿಯನ್ ಎಕ್ಸ್ ಪ್ರೆಸ್ ಎಂದಿನಂತೆ ಪ್ರಕಟವಾಗುತ್ತಿದೆ. ಪತ್ರಿಕೆಯ ಗುಣಮಟ್ಟ ಮತ್ತು ಪ್ರಸಾರ ಸಂಖ್ಯೆ ಹಾಗೂ ಲಾಭ ನಷ್ಟಗಳ ವಿಚಾರ ಬಿಡಿ.

ಪತ್ರಿಕೆಯ ವಿವಿಧ ಜಾಗೆಗಳಲ್ಲಿ ದುಡಿದು ಅನುಭವ ಪಡೆದಿರುವ ಶಿವಸುಬ್ರಮಣ್ಯ ಅವರ ಹೆಗಲ ಮೇಲೆ ಕನ್ನಡಪ್ರಭ ಪತ್ರಿಕೆಯನ್ನು ಮುನ್ನಡೆಸುವ ಜವಾಬ್ದಾರಿ ಬಿದ್ದಿದೆ. ಪತ್ರಿಕೆಯಿಂದ ಪಲಾಯನ ಮಾಡಿರುವ ಪ್ರತಿಭೆಗಳ ಕೊರತೆಯನ್ನು ತುಂಬಿ, ಹೊಸ ತಂಡಕಟ್ಟುವ ಮೂಲಕ ಒಳ್ಳೆ ಪತ್ರಿಕೆಯನ್ನು ಕಟ್ಟಿಕೊಡುವಲ್ಲಿ ಹೊಸ ಸಂಪಾದಕರು ಯಶಸ್ಸು ಕಾಣುತ್ತಾರೆಂಬ ಭರವಸೆ ಪತ್ರಿಕೆಯ ಓದುಗರದು. ಶಿವಸುಬ್ರಮಣ್ಯ ಅವರಿಗೆ ಶುಭಾಶಯಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X