ಮಜಾವಾಣಿ : ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ!
ದಟ್ಸ್ ಕನ್ನಡದಲ್ಲಿ ಈಗಾಗಲೇ ಹಲವಾರು ಅಂಕಣಗಳಿದ್ದು, ಅಂಕಣಗಳ ಅಂತಸ್ತಿಗೆ ಹೊಸದಾಗಿ ಸೇರ್ಪಡೆಯಾದ ಮಜಾವಾಣಿಯನ್ನು ಕನ್ನಡ ಜನಸ್ತೋಮ ಬೆರಗುಗಣ್ಣುಗಳಿಂದ ಕ್ಲಿಕ್ ಮಾಡಿ ಓದುತ್ತಿದೆ. ಅಂತರಿಕ್ಷದಿಂದ ಆಗಾಗ್ಗೆ ಮಜಾವಾಣಿಯು ಹಲವಾರು ಬಗೆಯ ಸೂಚನೆಗಳನ್ನು ರವಾನಿಸಲಿದ್ದು ಅದು ಅಂತರ ಜಾಲದಲ್ಲಿ ಕನ್ನಡ ಓದುಗರ ಬೋರ್ಡಂಗಳನ್ನು ಢಮಾರ್ ಮಾಡಲಿದೆ ಎಂದು ವೆಬ್ ಸೈಟಿನ ಸಂಪಾದಕರು ಹೇಳಿದರು. ಮತ್ತು ನಿಂತ ನೀರಾಗಿರುವ ಹಾಗೂ ಕಲ್ಲೆಸೆದರೆ ಮಾತ್ರ ಅಲೆಯ ಉಂಗುರಗಳನ್ನು ನಿರ್ಮಿಸುವ ಕರ್ನಾಟಕ ಮಾಧ್ಯಮ ಲೋಕದಿಂದ ಸ್ಫೂರ್ತಿಪಡೆದ ಅಂಕಣವಿದಾಗಿದೆ ಎಂದೂ ಹೇಳಲು ಅವರು ಮರೆಯಲಿಲ್ಲ.
ಮಜಾವಾಣಿಯನ್ನು ನಿರ್ವಹಿಸುವವರು ದಟ್ಸ್ ಕನ್ನಡದ ಆತ್ಮೀದಾರರಾದ ವಾರ್ತಾ ವಿದೂಷಕ. ಅಂಕಣ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪಸ್ಥಿತರಿರಲಿಲ್ಲ. ಹಸಿಹಸಿ ವಾರ್ತೆ, ಬೇಜಾನ್ ಮನರಂಜನೆ ಮತ್ತು ಕ್ಷುಲ್ಲಕ ರಾಜಕೀಯ ಬೆಳವಣೆಗೆಗಳ ಬೆಂಬತ್ತಿ ಹೋಗುವ ಆತ್ಮೀದಾರರು ಎಲ್ಲೋ ಇರುತ್ತಾರೆ. ತಾವು ಎಲ್ಲಿರುತ್ತಾರೋ ಅಲ್ಲಿಂದಲೇ ಕನ್ನಡ ಓದುಗರನ್ನು ತಲುಪುವ ಅತ್ಯಾಧುನಿಕ, ಸುಸಜ್ಜಿತ, ಲಾಭರಹಿತ ಸುದ್ದಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇಮೇಲ್ ಗೆ ಮಾತ್ರ ಕೈಗೆಟಕುವ ವಾರ್ತಾ ವಿದೂಷಕರ ಇ ಮೇಲ್ ವಿಳಾಸ [email protected]ಅನ್ನೂ ದಟ್ಸ್ ಕನ್ನಡ ಸಂಪಾದಕ ಶಾಮಸುಂದರ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.