ಕರ್ನಾಟಕದಲ್ಲಿ ಗಣೇಶನಿಗೆ ಮಳೆನೀರಿನ ಅಭಿಷೇಕ
- ಎಸ್ಕೆ. ಶಾಮಸುಂದರ
ದಟ್ಸ್ಕನ್ನಡ ಕಚೇರಿ, ಬೆಂಗಳೂರು, ಸೆ. 14 : ಚೌತಿಹಬ್ಬದ ಪ್ರಯುಕ್ತ ಶನಿವಾರ ಸೆ. 15ರಂದು ನಮ್ಮ ಕಾರ್ಯಾಲಯಕ್ಕೆ ಬಿಡುವು. ಈ ದಿವಸ ನಮ್ಮ ವಾಹಿನಿಯಲ್ಲಿ ಸುದ್ದಿ, ರೂಪಕಗಳು ಪ್ರಕಟವಾಗುವುದಿಲ್ಲ. ಓದುಗರು ಸಹಕರಿಸಬೇಕಾಗಿ ವಿನಂತಿ.
ಬೆಂಗಳೂರಿನಲ್ಲಿ ಭಾರೀ ಮಳೆ ಹುಯ್ಯುತ್ತಿರುವುದರಿಂದ ಅನೇಕ ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಕೆರೆಕಟ್ಟೆಗಳು ಕೋಡಿಹರಿಯುತ್ತಿವೆ. ತಗ್ಗಿನ ಪ್ರದೇಶಗಳ ದುರವಸ್ಥೆಯನ್ನು ಬಣ್ಣಿಸುವುದೇ ಬೇಡ. ನಮ್ಮ ಕಚೇರಿ ಇರುವ ಹೊಸೂರು ರಸ್ತೆಯಲ್ಲಿ ಮಡಿವಾಳ ಕೆರೆನೀರಿನ ಸುನಾಮಿ ಬರುತ್ತಿದೆ. ವಾಹನ ಸಂಚಾರವಿರಲಿ, ಕಾಲುದಾರಿಯೂ ಇಲ್ಲ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಬಹುತೇಕ ಸ್ಥಿತಿ ಹೀಗೇ ಇದೆ. ಹೊರಗೆ ಹೋದವರು ಮನೆಗೆ ವಾಪಸಾಗುವಂತಿಲ್ಲ, ಮನೆಯಿಂದ ಹೊರಗಡೆ ಹೋಗುವುದಕ್ಕೆ ಛಾನ್ಸೇ ಇಲ್ಲ. ಹೊಸೂರು ರಸ್ತೆಯ ಉದ್ದಕ್ಕೂ ಇರುವ ಅನೇಕಾನೇಕ ಕಚೇರಿಗಳಲ್ಲಿ ಕೆಲಸ ಮಾಡುವವರು ಶುಕ್ರವಾರ ಆಫೀಸಿಗೆ ಹೋಗಿಲ್ಲ. ಗುರುವಾರ ಹೋದವರು ಮನೆಗೆ ಬರಕ್ಕೆ ಆಗಿಲ್ಲ. ಆಟೋ ರಿಕ್ಷಾದವರು ಇನ್ನೂರು ಕೊಡ್ತೀನಪ್ಪಾ ಬಾರಯ್ಯ ಅಂದರೂ ಬರಲ್ಲ. ಯಾಕೆಂದರೆ ಅವನಿಗೆ ಮುನ್ನೂರು ರೂಪಾಯಿ ಬೇಕು. ಹಾಗೆ.
ದ್ವಿಚಕ್ರ ವಾಹನಗಳ ಎಂಜಿನ್ನೊಳಗೆ ನೀರು ಸೇರಿ ಆಫ್ ಆಗಿರುವ ಗಾಡಿಗಳಿಗೆ ಲೆಕ್ಕವೇ ಇಲ್ಲ. ಇದೆಲ್ಲ ಪರವಾಗಿಲ್ಲ . ಇನ್ನೂ ಮೂರು ದಿನ ಹೀಗೆನೇ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆಯಂತೆ. ಹವಾಮಾನ ಇಲಾಖೆಯ ಮುನ್ಸೂಚನೆಗಳು ಎಷ್ಟು ತಮಾಶೆಯಾಗಿರುತ್ತದೋ ಬೆಂಗಳೂರಿನ ಹವಾಮಾನ ಕೂಡ ಅಷ್ಟೇ ಊಹಾತೀತವಾಗಿ ಇರುತ್ತದೆ.
ಮಳೆ ಬಂದರೆ ಕೇಡಲ್ಲ ಮಗ ಉಂಡರೆ ಕೇಡಲ್ಲ. ಬರಲಿ. 5 ಅಥವಾ 6 ಸೆಂಟಿ ಮೀಟರ್ ಮಳೆಗೆ ಬೆಂಗಳೂರಿಗರು ಬೆಚ್ಚುವುದು ಬೇಡ. ಮುಂಬೈನಲ್ಲಿ ಬಿದ್ದ 97 ಸೆಂಟಿಮೀಟರ್ ಮಳೆ ನೆನೆಸಿಕೊಂಡರೆ ನಮ್ಮ ಊರು ಸ್ವರ್ಗ!
ಮಳೆರಾಯನ ಹಾವಳಿಯಿಂದ ಕರ್ನಾಟಕದಲ್ಲಿ ಹಬ್ಬದ ಉತ್ಸಾಹಕ್ಕೆ ತಣ್ಣೀರು ಬಿದ್ದಿದೆ. ಕರೆಂಟು ಹೋಗಿಬಂದು ಮಾಡುತ್ತಿದೆ. ಹಬ್ಬದ ಸಂಭ್ರಮ, ಮಳೆ, ಟ್ರಾಫಿಕ್ ಜಾಮು ಎಲ್ಲಾ ಸೇರಿಕೊಂಡು ಬದುಕು ಕಚಪಿಚ ಆಗಿದೆ. ಹೂವು ಹಣ್ಣು ಬಾಳೆಕಂಬ, ಹೋಳಿಗೆ ಚಕ್ಕುಲಿಗಳನ್ನು ಅಂಗಡಿಯಿಂದ ತರುವವರಿಗೆ ಬಲೆ ತಾಪತ್ರಯ. ಮಣ್ಣಿನ ಗಣೇಶನನ್ನು ಮನೆತನಕ ತರುವುದೂ ಕಷ್ಟವೆ. ಪೂಜೆ ಮಾಡಿಸಿಕೊಳ್ಳುವ ಮುಂಚೆಯೇ ಏಕದಂತನ ಬಣ್ಣದ ಮೂರ್ತಿ ಕರಗಿಹೋಗುವ ಸಂಭವವುಂಟು.