ವಿಶ್ವೇಶ್ವರಭಟ್ಟರ ಪುಸ್ತಕಗಳ ಬುಟ್ಟಿಗೆ ಇನ್ನೂ ನಾಲಕ್ಕು..
ಅಲ್ಲಿ 'ನೂರೆಂಟು ಮಾತು"ಗಳಿರುತ್ತವೆ, 'ವಕ್ರೋಕ್ತಿ"ಯಿರುತ್ತದೆ, 'ಸುದ್ದಿಮನೆ ಕತೆ"ಗಳಿರುತ್ತವೆ! ಇನ್ನೂ ಏನೇನೋ ಇರುತ್ತವೆ! ಡಿಸೆಂಬರ್ 24ರ ಭಾನುವಾರವನ್ನು ಈಗಲೇ ಕಾದಿರಿಸಿ.
ಬೆಂಗಳೂರು : ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಹಾಗೂ ದಟ್ಸ್ಕನ್ನಡ ಡಾಟ್ಕಾಮ್ ವಾಹಿನಿಯ ಅಂಕಣಕಾರ ವಿಶ್ವೇಶ್ವರಭಟ್ರ, ಇನ್ನೂ ನಾಲ್ಕು ಪುಸ್ತಕಗಳು ಬಿಡುಗಡೆಗೊಳ್ಳಲು ಇದೀಗ ಸಜ್ಜಾಗುತ್ತಿವೆ. ಮಾಧ್ಯಮದ ಪುಟಗಳಲ್ಲಿ ಓತಪ್ರೋತವಾಗಿ ಬರೆಯಿಸಿಕೊಂಡ ಅಕ್ಷರ ಅನುಸಂಧಾನಗಳು ಹಾಳೆಗಳಿಂದ ಜಿಗಿದು ರಟ್ಟಿನೊಳಗೆ ಅಡಗಿಕೊಳ್ಳುವ ಮತ್ತೊಂದು ಮಜಲಿದು.
ಬಿಡುಗಡೆಗೊಳ್ಳಲು ಹವಣಿಸುತ್ತಿರುವ ಕೃತಿಗಳ ವಸ್ತು ವಿಜಯಕರ್ನಾಟಕ ಓದುಗರಿಗೆ ಅಪರಿಚಿತವೇನಲ್ಲ. ಪ್ರತಿ ಗುರುವಾರ ಬೆಳಕು ಕಾಣುವ ಕಳಕಳಿಯ 'ನೂರೆಂಟುಮಾತು"; ಪತ್ರಿಕೆಯಲ್ಲಿ ಧಾರಾವಾಹಿ ಬಗೆಯಲ್ಲಿ ಮೂಡಿಬಂದ ಭಾರತೀಯ ಪತ್ರಿಕೋದ್ಯಮದ ಧೀಮಂತ 'ರಾಮನಾಥ ಗೋಯಾಂಕಾ" ಅವರ ಜೀವನ ಸಾಗುವಳಿಯ ಚಿತ್ರಣ ; ಬದುಕಿನ ನೇರನೋಟಗಳನ್ನು ಸಾಫ್ ಸೀದಾಸಾದಾ ಚಿಮುಕಿಸುವ ' ಮತ್ತಷ್ಟು ವಕ್ರತುಂಡೋಕ್ತಿ" ಮತ್ತು ಪತ್ರಿಕಾಲಯದೊಳಗೆ ತೇಯಿಸಿಕೊಳ್ಳತ್ತಾ ಸವಕಲಾಗುವ ವೃತ್ತಿ-ಮನ-ಧರ್ಮಗಳನ್ನು ಬಿಂಬಿಸುವ 'ಸುದ್ದಿಮನೆ ಕತೆ" ಪುಸ್ತಕಗಳಾಗಿ ಹೊರಬರುತ್ತಿವೆ.
ಅಂಕಿತ ಪ್ರಕಾಶನ (53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು. 560004) ಹೊರತರುತ್ತಿರುವ ಈ ಪುಸ್ತಕಗಳ ಬಿಡುಗಡೆ ಸಮಾರಂಭ ಕ್ರಿಸ್ಮಸ್ ಈವ್ ಭಾನುವಾರ ನಡೆಯಲಿದೆ. ಬೆಂಗಳೂರಿನ ನಂ. 6, ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಾಟಾಗಿದೆ.
ಮುಖ್ಯ ಅತಿಥಿಗಳಾಗಿ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ, ನಿರ್ದೇಶಕ ಟಿ.ಎನ್. ಸೀತಾರಾಮ್, ಜೀ ಟಿವಿಯ ಮುಖ್ಯಸ್ಥೆ ನಟಿ ಮಾಳವಿಕಾ ಮತ್ತು ವಿಶ್ವೇಶ್ವರಭಟ್ಟರ ಅಮ್ಮ ಗಿರಿಜಾ ಭಟ್ ಇರುತ್ತಾರೆ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡುವುದರಲ್ಲಿ ಎತ್ತಿದ ಕೈ ಎನಿಸಿರುವ, ಸ್ವತಃ ಭಟ್ಟರ ಕೃತಿಗಳೇ ಬಿಡುಗಡೆಯಾಗುತ್ತಿರುವುದು ಮುಂದಿನ ಭಾನುವಾರ ಬೆಳಗಿನ ಸುದ್ದಿ ಸ್ವಾರಸ್ಯ.ನೆನಪಿರಲಿ, ಕಾರ್ಯಕ್ರಮ ಡಿಸೆಂಬರ್ 24 ಭಾನುವಾರ ಬೆಳಗ್ಗೆ 10.30ಕ್ಕೆ. ಉಪಾಹಾರ 9.30ಕ್ಕೆ.
ನಮ್ಮ ಅಂಕಣಕಾರರ ಇತರ ಕೃತಿಗಳು :
ಮಾತಿನ ಮಂಟಪ -ಶಿಕಾರಿಪುರ ಹರಿಹರೇಶ್ವರ
ವಿಚಿತ್ರಾನ್ನ -ಶ್ರೀವತ್ಸ ಜೋಶಿ
ಜಿಜ್ಞಾಸಾಗಂಗೆಯ ದಡದ ಕಾಲುದಾರಿಯಲ್ಲಿ -ರವಿಕೃಷ್ಣಾರೆಡ್ಡಿ
ಪೂರ್ವ
ಪಶ್ಚಿಮ
-
ಎಂ.ಆರ್.ದತ್ತಾತ್ರಿ