ಎಸ್ಕೆ. ಶಾಮಸುಂದರ
ಅಮರ್ನಾಥ್
ಗೌಡರ
ಸಮ್ಮುಖದಲ್ಲಿ
ರಾಣಿ
ಸತೀಶ್ರಿಂದ
ಹಂಪಿ
ವಿವಿ
ಕುಲಪತಿ
ಲಕ್ಕಪ್ಪಗೌಡರಿಗೆ
ಚೆಕ್
ಹಸ್ತಾಂತರ
ಎಸ್ಕೆ.
ಶಾಮಸುಂದರ [email protected] |
ಕುವೆಂಪು ಸಮಗ್ರ ಕಾವ್ಯ ಪ್ರಕಟಣೆ ಯೋಜನೆಗೆ ತಾನು ನೀಡಿದ್ದ ಧನ ಸಹಾಯ ಆಶ್ವಾಸನೆಯನ್ನು ‘ಅಕ್ಕ’ ಇಂದು ಬೆಂಗಳೂರಿನಲ್ಲಿ ಕಾರ್ಯರೂಪಕ್ಕೆ ತಂದಿತು. ಕನ್ನಡ ಭವನದಲ್ಲಿ ಫೆಬ್ರವರಿ 25ರ ಬುಧವಾರ ಬೆಳಗ್ಗೆ ನಡೆದ ಸಾಂಕೇತಿಕ ಸಮಾರಂಭದಲ್ಲಿ ಅನಿವಾಸಿ ಕನ್ನಡಿಗರ ‘ ಕನ್ನಡ ಬೆಂಬಲ ಮನೋಭಾವ ’ ಕ್ಕೆ ದ್ಯೋತಕವಾಗಿ ನಿಲ್ಲುವ ಹಣ, ಕನ್ನಡ ವಿಶ್ವವಿದ್ಯಾಲಯದ ತಿಜೋರಿಗೆ ಭರ್ತಿ ಆಯಿತು.
ಏಳೂವರೆ ಲಕ್ಷ ರೂಪಾಯಿಯ ಚೆಕ್ ಅನ್ನು ಅಕ್ಕ ಅಧ್ಯಕ್ಷ ಅಮರ್ನಾಥ್ ಗೌಡ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಅವರಿಗೆ ಕೊಟ್ಟರು. ರಾಣಿ ಅವರು ತಮ್ಮ ಅಮೃತ ಹಸ್ತದಿಂದ ಚೆಕ್ ಅನ್ನು ಹಂಪಿ ವಿವಿ ಕುಲಪತಿ ಡಾ. ಲಕ್ಕಪ್ಪ ಗೌಡರಿಗೆ ಒಪ್ಪಿಸಿದರು.
2000 ಇಸವಿಯಲ್ಲಿ ಹ್ಯೂಸ್ಟ್ನ್ನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಿತು. ಆ ಸಂದರ್ಭದಲ್ಲಿ ಕುವೆಂಪು ಸಮಗ್ರ ಕಾವ್ಯ ಪ್ರಕಟಿಸುವ ಕನ್ನಡ ವಿವಿಯ ಯೋಜನೆಗೆ ಅಕ್ಕ ಧನಬೆಂಬಲ ಪ್ರಕಟಿಸಿತ್ತು. ಅನಿವಾಸಿ ಕನ್ನಡಿಗರಲ್ಲಿ ಹಣಕ್ಕೆ ಅಂಥದೇನೂ ಕೊರತೆ ಇಲ್ಲದಿದ್ದರೂ, ಸಂವಹನ ಲೋಪಗಳು ಮತ್ತು ಹಿಡಿದ ಕೆಲಸವನ್ನು ಪಟ್ಟುಬಿಡದೆ ಮಾಡಿ ಮುಗಿಸುವ ಛಲದ ಕೊರತೆಯಿಂದಾಗಿ ಚೆಕ್ಕು ಬರೆಯುವುದು ಇಷ್ಟು ದಿನ ತಡವಾಗಿತ್ತು. Better late than never ಎಂಬ ಗಾದೆ ಇಲ್ಲಿ ನಿಜವಾಯಿತು.
ಕನ್ನಡದ ಕೆಲಸಗಳಿಗೆ ಬೆಂಬಲವಾಗಿ ನಿಲ್ಲುವುದಕ್ಕೆ ಅಕ್ಕ ಬದ್ಧ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅಮರ್ನಾಥ್ ಗೌಡ ಹೇಳಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಪೋಷಣೆಗೆ ಅನೇಕಾರು ಯೋಜನೆಗಳನ್ನು ಅಕ್ಕ ರೂಪಿಸುತ್ತಿದೆ ಎಂದೂ ಅವರು ತಿಳಿಸಿದರು. ಎರಡು ವರ್ಷಗಳ ಅವಧಿಯ ಅಕ್ಕ ಅಧ್ಯಕ್ಷ ಪದವಿಯನ್ನು ಅಮರ್ನಾಥ್ ಗೌಡ ಅವರು ಇದೀಗ ಮುಗಿಸುತ್ತಿದ್ದಾರೆ. ಸಂಸ್ಥೆಗೆ ಹೊಸ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆಯೂ ಮುಗಿದಿದ್ದು ಹೊಸ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿ ರಚನೆ ಆಗಬೇಕಿದೆ.
ರಸಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳು ಕನ್ನಡಿಗರ ಪಡಸಾಲೆಗಳಲ್ಲಿ ನಡೆಯುತ್ತಿರುವ ಈ ಸಮಯದಲ್ಲೇ, ಅನಿವಾಸಿ ಕನ್ನಡಿಗರ ಹಣ ಬೆಂಬಲ ಕನ್ನಡ ವಿಶ್ವವಿದ್ಯಾಲಯ ತಲುಪಿರುವುದು ಅತ್ಯಂತ ಸಮಾಧಾನಕರ ಅಂಶ ಎಂದು ಕುಲಪತಿ ಲಕ್ಕಪ್ಪ ಗೌಡರು ಸಂತೋಷ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಕುಲಸಚಿವ ಕೆ.ವಿ. ನಾರಾಯಣ್, ಮಾಜಿ ಕುಲಸಚಿವ ಕೆ.ಸಿ. ರಾಮಮೂರ್ತಿ ಐಪಿಎಸ್, ಅನಿವಾಸಿ ಕನ್ನಡಿಗ ಕೃಷ್ಣೇಗೌಡ ಮುಂತಾದವರು ಪಾಲ್ಗೊಂಡಿದ್ದರು.
ವಾರ್ತಾ ಸಂಚಯ
ಹಂಪಿ ವಿವಿ ಬಾಕಿ ಸಂದಾಯಕ್ಕೆ‘ಅಕ್ಕ’ ಸಿದ್ಧ
|