ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತ ಭಾಷೆಯ ವಿಸ್ತಾರ, ಆಳ, ಸಮೃದ್ಧತೆ ಅಪಾರ... ಇಂಥ ಭಾಷೆಗೆ ಸಾವಿದೆಯೆ?

By Staff
|
Google Oneindia Kannada News

ಸಂಸ್ಕೃತ ಭಾಷೆಯ ವಿಸ್ತಾರ, ಆಳ, ಸಮೃದ್ಧತೆ ಅಪಾರ... ಇಂಥ ಭಾಷೆಗೆ ಸಾವಿದೆಯೆ?
ಸಂಸ್ಕೃತವನ್ನು ಒಪ್ಪೋಣ. ಅದನ್ನು ಅಪ್ಪಿಕೊಳ್ಳೋಣ. ಅದಕ್ಕೂ ಮೊದಲು ಕೆಲವು ಸತ್ಯಗಳನ್ನು ಅರಿಯೋಣ. ಓದುಗರ ಅಭಿಮತ.

ಸಂಪಿಗೆಯವರಿಗೆ ನಮಸ್ಕಾರಗಳು.

‘ಸಂಸ್ಕೃತ ಭಾಷೆ ನಿಜಕ್ಕೂ ಸತ್ತ ಭಾಷೆಯೇ? - ಒಂದು ಜಿಜ್ಞಾಸೆ’ ಎಂಬ ಲೇಖನವು ಬಹು ಸಮಯೋಚಿತವಾದ ಲೇಖನ. ಸಂಸ್ಕೃತ ಖಂಡಿತವಾಗಿ ಸತ್ತಿಲ್ಲ! ಸಂಸ್ಕೃತ ನಿಜವಾಗಿ ಸತ್ತ ಭಾಷೆಯೇ, ಆಗಿದ್ದರೆ ಅದು ಇಂದಿಗೂ ಹೇಗೆ ಅಸ್ತಿತ್ವದಲ್ಲಿ ಉಳಿದು ಕೊಂಡಿದೆ? ಎಂದು ನಾನು ಪ್ರಶ್ನಿಸಬಹುದೆ?

ಸಂಸ್ಕೃತ ಎಂಬ ಭಾಷೆಯು ನಮ್ಮ ಭಾರತೀಯ ಸಂಸ್ಕೃತಿಯ ಭಾಷೆ. ಅದೊಂದು ಪರಿಪೂರ್ಣವಾದ ಭಾಷೆ. ಹಲವು ಭಾರತೀಯ ಭಾಷೆಗಳಿಗೆ ಸಂಸ್ಕೃತವು ಮಾತೃ ಸಮಾನವಾದ ಭಾಷೆ. ನಮ್ಮ ಆಳರಸರು ಇಂಗ್ಲಿಷ್‌ ಭಾಷೆಯಲ್ಲಿ ಪಠ್ಯ ಕ್ರಮಗಳನ್ನು ಬೋಧಿಸಲು ಶುರುಮಾಡಿದ ನಂತರ ಸಂಸ್ಕೃತ ಭಾಷೆಯ ಪ್ರಾಧಾನ್ಯತೆ ನಮ್ಮ ದೇಶದಲ್ಲಿ ಕಡಿಮೆಯಾಯಿತು. ನಮ್ಮನ್ನು ಆಳುತ್ತಿದ್ದ ಬ್ರಿಟಿಷ್‌ ಸರಕಾರವು ಇಂಗ್ಲಿಷ್‌ ಭಾಷೆಗೆ ಹೆಚ್ಚಿನ ಒತ್ತಾಸೆ ಕೊಟ್ಟು, ಅದನ್ನು ಕಲಿತ ಭಾರತೀಯರಿಗೆ ಒಳ್ಳೆಯ ಕೆಲಸದ ಆಮಿಷ ನೀಡಿತು. ಒಳ್ಳೆಯ ಉದ್ಯೋಗದ ಭರವಸೆ ಇದ್ದುದರಿಂದ, ನಮ್ಮ ಜನರು ಸಂಸ್ಕೃತ ಭಾಷೆಯನ್ನು ಕಡೆಗಣಿಸಿ, ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಕಲಿಯ ತೊಡಗಿದರು. ಈ ಕಾರಣದಿಂದಾಗಿ, ಸಂಸ್ಕೃತ ಭಾಷೆಯ ಕಲಿಯುವಿಕೆ ಕಡಿಮೆ ಆಯಿತು.

ನಾನು ಅರುವತ್ತು ವರುಷಗಳ ಹಿಂದೆ ‘ಸಂಸ್ಕೃತ ಭಾಷೆಯ ಪೀಠ ’ ಎಂದು ಪರಿಗಣಿಸಲ್ಪಡುತ್ತಿದ್ದ ಉಡುಪಿ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಸಂಸ್ಕೃತ ಪಾಠಶಾಲೆಗೆ ಸೇರಿ, ಸಂಸ್ಕೃತ ಕಲಿತರೆ, ನನಗೆ ಉಜ್ವಲ ಭವಿಷ್ಯ ಇಲ್ಲ! ಎಂದು ನನ್ನ ಹಿರಿಯರು ತೀರ್ಮಾನಿಸಿ, ನನ್ನನ್ನು ಕನ್ನಡ ಮತ್ತು ಇಂಗ್ಲಿಷ್‌ ಕಲಿಸುವ ಸರಕಾರಿ ಪಾಠ ಶಾಲೆಗೆ ಸೇರಿಸಿ ಓದಿಸಿದರು. ನನಗೆ ಇತ್ತೀಚೆಗೆ ಸುಂದರ ಭಾಷೆಯಾದ ಸಂಸ್ಕೃತವನ್ನು ನಾನು ಕಲಿಯಲೇ ಇಲ್ಲವಲ್ಲಾ? ಎಂದು ದುಃಖವಾಗುತ್ತಿದೆ.

ಪವಿತ್ರ ಭಗವದ್ಗೀತೆಯನ್ನು ಅಥವಾ ಕಾಳಿದಾಸ, ಭಾಸ ಮತ್ತಿತರ ಕವಿಗಳ ಸಾಹಿತ್ಯ ಓದಿ ತಿಳಿದು ಕೊಳ್ಳುವ ಸಂಸ್ಕೃತ ಜ್ಞಾನವನ್ನು ನಾನು ಪಡೆದಿಲ್ಲ. ಹೆಚ್ಚೇಕೆ, ನಿತ್ಯ ಪ್ರಾರ್ಥನೆಯಲ್ಲಿ ಪಠಿಸುವ ಮಂತ್ರಗಳ ಅರ್ಥವನ್ನು ಕೂಡಾ ಅರಿಯಲಾರದ ಮೌಢ್ಯದಲ್ಲಿ ನಾನು ಇದ್ದೇನೆ!

ಈ ಪ್ರಾಯದಲ್ಲಿ ನಾನು ಸಂಸ್ಕೃತ ಭಾಷೆಯನ್ನು ಕಲಿಯಲೇ ಬೇಕು! ಎಂಬ ಅದಮ್ಯ ಆಸೆ ಹುಟ್ಟುತ್ತಾ ಇದೆ. ಇನ್ನಾದರೂ, ಈ ಸುಂದರ ಭಾಷೆಯನ್ನು ಕಲಿಯುವ ಪ್ರಯತ್ನವನ್ನು ಮಾಡುತ್ತೇನೆ.

ಸಂಪಿಗೆಯವರೇ! ತಮ್ಮ ಉತ್ತಮ ಲೇಖನಕ್ಕೆ ನಾನು ಋಣಿ.

ವಂದನೆಗಳು

- ಎಸ್‌. ಮಧುಸೂದನ ಪೆಜತ್ತಾಯ, ಬೆಂಗಳೂರು

*

ಸಂಪಿಗೆಯವರಿಗೆ,

ಪ್ರಪಂಚದ ಎಲ್ಲಾ ಭಾಷೆಗಳ ಮೇಲೂ ಸಂಸ್ಕೃತದ ಪ್ರಭಾವವಾಗಿರುವುದನ್ನು ಉದಾಹರಣೆಗಳೊಂದಿಗೆ ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. ಸಂಸ್ಕೃತವನ್ನು ಸತ್ತಭಾಷೆ ಎಂದು ಜರೆಯುವವರಿಗೆ ಈ ವಿಷಯ ತಿಳಿಯದೇನಲ್ಲ. ಆದರೆ ಅದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಅವರಲ್ಲಿಲ್ಲ ಅಷ್ಟೆ.

ನೀವಂದಂತೆ ಸಂಸ್ಕೃತವನ್ನು ವಿರೋಧಿಸಿದರೆ ಮಾತ್ರ ಅವರು ಪ್ರಗತಿಶೀಲರು ಎಂಬ ಭ್ರಮೆಯು ಅನೇಕರಲ್ಲಿದೆ.

- ತ್ರಿವೇಣಿ, ಇಲಿನಾಯ್‌ು, ಯೂ.ಎಸ್‌.ಎ

*

ಸಂಪಿಗೆಯವರಿಗೆ,

ಅತಿಯಾದ ಮಡಿವಂತಿಕೆಯಿಂದ ಸಂಸ್ಕೃತ ಮೃತ ಭಾಷೆಯಾಗಿದೆ. ಕನ್ನಡ ದ್ರಾವಿಡ ಭಾಷೆಗಳಲ್ಲಿ ಒಂದು. ಹೀಗಾಗಿ ಸಂಸ್ಕೃತವನ್ನು ಕನ್ನಡದ ಜನನಿ ಎಂದು ಹೇಳುವುದು ತಪ್ಪಾಗುತ್ತದೆ. ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಇರುವಂತೆ, ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ. ಎಷ್ಟೋ ಕನ್ನಡ ಪದಗಳು ಸಂಸ್ಕೃತ ಕಾವ್ಯದಲ್ಲಿ ಕಂಡು ಬರುತ್ತವೆ.

ಕನ್ನಡಕ್ಕೆ ಕನ್ನಡದ್ದೇ ಆದ ಇತಿಹಾಸವಿದೆ. ಪರಂಪರೆಯಿದೆ. ಭಾಷಾ ಶ್ರೀಮಂತಿಕೆ ಇದೆ. ನನ್ನ ಈ ವಾದವನ್ನು ನೀವು ಒಪ್ಪುವಿರಾ?

- ಕೇಶವ ಸುತ, ಬೆಂಗಳೂರು.

*

ಮಾನ್ಯರೇ,

ಸಂಸ್ಕೃತದಿಂದ ಕನ್ನಡಕ್ಕೆ ಕೆಲವು ಪದಗಳು ಬಂದಿವೆ. ಇದ್ರಿಂದಾನೆ ಕನ್ನಡ ಶ್ರೀಮಂತವಾದದ್ದು, ಇಲ್ದಿದ್ರೆ ಆಗ್ತಾನೆ ಇರ್ಲಿಲ್ಲ ಅನ್ನೋ ರೀತಿ ನೀವು ಬರೆದಿದ್ದೀರಿ. ಇದು ಸರಿ ಅಲ್ಲ.

ಆ ಪದಗಳು ಇಲ್ದಿದ್ರೆ ಬೇರೆ ಕನ್ನಡ ಪದಗಳೇ ಇರ್ತಿಲಿಲ್ವೇನೋ ಆಯಾ ವಸ್ತುಗಳಿಗೆ!!

ಮೊದಲು ಕನ್ನಡ ಬೆಳೆಸೋದನ್ನ ನೋಡೋಣ. ನಂತರ ಬೇರೆಲ್ಲ. ಊರಿಗೆ ಉಪಕಾರ ಮಾಡಬೇಕು ನಿಜ, ಆದರೆ ಮೊದಲು ನಮ್ಮ ಮನೆ ಬೆಳಗಿಸೋಣ. ಇದೇ ರೀತಿ ಕನ್ನಡಿಗರಲ್ಲಿ ಸ್ವಾಭಿಮಾನ ಬರೋ ಅಂಥ ಕನ್ನಡದ ಬಗ್ಗೆ ಅಚ್ಚರಿ ಸಂಗತಿಗಳನ್ನ ಬರೆಯಿರಿ. ಅದರಿಂದನಾದ್ರು ನಮ್ಮವರಿಗೆ ಸ್ವಾಭಿಮಾನ ಬರಲಿ.

ಅದು ಬಿಟ್ಟು ನಾವೆಲ್ಲಾ ಸಂಸ್ಕೃತದ ಹಂಗಿನಲ್ಲಿ ಬದುಕಬೇಕು ಅಂಥ ಹೇಳಬೇಡಿ.

- ಅಪ್ಪಿ/ನಿರಂಜನ್‌, ಬೆಂಗಳೂರು

*

ಲೇಖಕರ ಪ್ರತ್ಯುತ್ತರ.

ನಿರಂಜನ ಅವರಿಗೆ ನಮಸ್ಕಾರಗಳು,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಈ ಲೇಖನದಲ್ಲಿ ಸಂಸ್ಕೃತವನ್ನೂ ಹೀಗೆಳೆಯುವುದೂ ಸರಿಯಲ್ಲ, ಕನ್ನಡವನ್ನು ಕಡೆಗಣಿಸುವುದೂ ಸರಿಯಲ್ಲ ಎಂದು ಬರೆದಿದ್ದೇನೆ ಹೊರತು ಕನ್ನಡಿಗರು ಸಂಸ್ಕೃತದ ಹಂಗಿನಲ್ಲಿ ಬದುಕಬೇಕು ಎಂದು ಹೇಳಿಲ್ಲ.

ಸಂಸ್ಕೃತದಿಂದ ಕೆಲವು ಪದ ಮಾತ್ರವಲ್ಲ, ಬಹಳಷ್ಟು ಪದಗಳನ್ನು ನಾವು ಎರವಲು ಪಡೆದು ಉಪಯೋಗಿಸುತ್ತಿದ್ದೇವೆ. ನಮಗೆ ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಕನ್ನಡದ್ದೇ ಸ್ವಂತ ಪದಗಳನ್ನು ಸೃಷ್ಟಿ ಮಾಡಿ ಉಪಯೋಗಿಸಬಹುದಲ್ಲವೇ ? ಯಾಕೆ ಯಾವ ಕನ್ನಡ ಪಂಡಿತರೂ, ಸಾಹಿತಿಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ? ಕನ್ನಡದ ಹೊಸ ಪದಗಳನ್ನು ಸೃಷ್ಟಿಸಲು ನಮ್ಮ ಕನ್ನಡ ವಿಶ್ವವಿದ್ಯಾಲಯ ಮತ್ತು ಕನ್ನಡಿಗರು ಮುಂದೆ ಬರಬೇಕು. ಅದು ಬಿಟ್ಟು ಸಂಸ್ಕೃತದ ಪದಗಳನ್ನು ರಾಜಾರೋಷವಾಗಿ ಉಪಯೋಗಿಸುತ್ತ ಸಂಸ್ಕೃತ ಭಾಷೆಯನ್ನು ದ್ವೇಷಿಸುವುದು ಸರಿಯಲ್ಲ ಎಂಬುದಷ್ಟೇ ನನ್ನ ಲೇಖನದ ಅನಿಸಿಕೆ.

ಕನ್ನಡಿಗರಲ್ಲಿ ಸ್ವಾಭಿಮಾನ ಬರೋ ಅಂಥ ಲೇಖನಗಳನ್ನು ಈಗಾಗಲೇ ಬರೆದಿದ್ದೇನೆ, ಮುಂದೆಯೂ ಬರೆಯುತ್ತೇನೆ ಎಂದು ಹೇಳಲು ಇಷ್ಟಪಡುತ್ತೇನೆ.

ವಂದನೆಗಳು

- ಸಂಪಿಗೆ ಶ್ರೀನಿವಾಸ

*

ನಿಮ್ಮ ಸಂಸ್ಕೃತ ಭಾಷೆಯ ಲೇಖನ ಬಹಳ ಚೆನ್ನಾಗಿತ್ತು. ಸಂಸ್ಕೃತವನ್ನು ಒಂದು ಭಾಷೆಯಾಗಿ ಶಾಲೆಗಳಲ್ಲಿ ಕಲಿಸಲು ಸರ್ಕಾರ ಪ್ರಯತ್ನ ಮಾಡಬೇಕು. ಇಲ್ಲಿನವರೆಗೂ ಸಂಸ್ಕೃತವನ್ನ ಒಂದು ಅಂಕಗಳಿಸುವ ವಿಷಯವಾಗಿ

ವಿದ್ಯಾರ್ಥಿಗಳು ಪರಿಗಣಿಸುತ್ತಿದ್ದಾರೆ ಹೊರತು ಒಂದು ಭಾಷೆಯ ಹಾಗಲ್ಲ. ಹಾಗೆಯೆ ಸಂಸ್ಕೃತ ವಿದ್ವಾಂಸರು ಕೂಡ ಜನಸಾಮಾನ್ಯರು ಸುಲಭವಾಗಿ ಸಂಸ್ಕೃತ ಕಲಿಯುವ ಹಾಗೆ ಪುಸ್ತಕಗಳನ್ನು ಹೊರತರಬೇಕು.

ನಮಸ್ಕಾರ

- ರಾಜೇಶ್‌, ಊರು?

*

ಸಂಸ್ಕೃತ ನಮ್ಮ ನಿಮ್ಮೆಲ್ಲರ ಮಾತೃಭಾಷೆಗಳಿಗೆ ಮಾತೃ. ಸಂಸ್ಕೃತ ನನ್ನ ಅಚ್ಚುಮೆಚ್ಚಿನ ಭಾಷೆ ಕೂಡ. ಕೆಲವು ಕನ್ನಡ ಪರ ಹೋರಾಟಗಾರರು ಹೇಳ್ತಾರೆ -2000 ವರ್ಷಗಳಿಂದ ಇರುವ ಸಂಸ್ಕೃತದ ವಿರುದ್ಧ ಹೋರಾಡಿ ಗೆದ್ದಿದ್ದೀವಿ ಅಂಥ. ಇದು ಬಹಳ ತಪ್ಪಾದ ನಿಲುವು ಅನ್ನೋದು ನನ್ನ ಭಾವನೆ. ಸಂಸ್ಕೃತ ಯಾವತ್ಗೂ ಕನ್ನಡಕ್ಕೆ ಕಾಂಪಿಟೇಶನ್‌ ಆಗಿಲ್ಲ.

- ಅಮರನಾಥ, ಬೆಂಗಳೂರು.

*

ಸಂಸ್ಕೃತ ಭಾಷೆಯ ಸವಿ ಗೊತ್ತಿರುವುದು ಸು-ಸಂಸ್ಕೃತನಿಗೆ ಮಾತ್ರ!
- ಪಿ.ಕೆ.ಭಟ್‌, ಊರು?

*

Dear Sampige

Your article is relevant and thought provoking. Sanskrit is a very ancient language which is rich in literature. An organized attempt to promote Sanskrit is necessary in order to transfer effectively the language and literature to the next generation. Also, a rich wealth of information, knowledge is there in Sanskrit literature. The only way to transfer such knowledge is to learn and teach it to the next generation.

I very much appreciate your effort to throw light on such obscure aspects and thus creating a wave of awareness in the society.

Your other article about "Suvarna Karnataka" was also interesting. If you can publish it in other printable media, a large variety of people may be able to know many truths about Karnataka.

Regards

- Dr.D.M.Sagar, Netherland

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X