ಕರೆಯದೆ ಬಂದು, ಹೇಳದೇ ಹೋದ ಕಕ್ಕಮ್ಮನವರ ಕರುಳಿನ ಭಾವಗೀತೆ
ಕೆಲವರ ಬಾಳು-ವ್ಯಕ್ತಿತ್ವ ಕಥನಕ್ಕೆ ಪೀಠಿಕೆ, ಪ್ರಸ್ತಾವನೆಗಳ ಅಗತ್ಯವೇ ಇರದು. ಅವರ ಜೀವನದೆತ್ತರಕ್ಕೆ ಬಣ್ಣನೆಯ ಬಣ್ಣ ಕೃತಕವೆನಿಸುವುದು. ಇಂತಹವರಲ್ಲಿ ಹಲವರು ಹೇಗೆ ಬಂದರು, ಹೇಗೆ ಹೋದರು ಅನ್ನುವುದೇ ತಿಳಿಯುವುದಿಲ್ಲ ಅನ್ನಿಸುವಾಗ, 'ಕರೆಯದೆ ಬಂದವರು ಕೆಲಬರು/ ಹೇಳದೆ ಹೋದವರು ಕೆಲಬರು.....' ಎಂಬ ವಚನ ನೆನಪಾಗುವುದು.
ಇಂತಹವರ ಸಾಲಿಗೆ ಕಕ್ಕಮ್ಮ(ತಿಮ್ಮಕ್ಕ)ನವರು ಬರುತ್ತಾರೆ. ನನಗೆ ಕಕ್ಕಮ್ಮನವರ ಪರಿಚಯವಾದುದು ಆಕೆಯ ಕೈಯಿಂದ ಉಪ್ಪಿನಕಾಯಲ್ಲಿ ಅದ್ದಿದ ತಂಗಳಮುದ್ದೆಯ ಕೈತುತ್ತು ಉಂಡ ಆಪ್ತಮಿತ್ರ, ಜಾನಪದ ವಿದ್ವಾಂಸ ಡಾ. ಜಿ.ಶ್ರೀನಿವಾಸಯ್ಯನವರ ಮೂಲಕ. ಈ ಇಬ್ಬರೂ ಈಗಿಲ್ಲ.
ಗಗನದಲ್ಲಿ ಹಕ್ಕಿಯಾಗುವ ನೆಲ್ಲದ ಹುಲ್ಲು ಕಾಣುವ ಚಂದದ ಅನುಭವಕ್ಕೆ...
ಕಕ್ಕಮ್ಮ ದೇವುಲಪಲ್ಲಿಯಲ್ಲಿ ಊರಚಾಕರಿಯ(ತೋಟಿ) ಮನೆತನದ ಹೆಣ್ಣು. ಗಂಡ ತೀರಿಕೊಂಡ ಮೇಲೆ ಊರಬಡವಿ. 'ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ?' ಎಂಬ ಪ್ರಶ್ನೆಗೆ ಉತ್ತರವಾಗಿ, ಗೌರವಕ್ಕೆ ಕುಂದಿರದೆ ಬಾಳಿದವರು. ರೆಡ್ಡಿ, ಬ್ರಾಹಣರು ಇತರೆ ಜಾತಿಯವರು ಅಕ್ಕರೆಯಿಂದ ಕಂಡು, 'ಮಾರಕ್ಕಗಾರು' ಎಂದು ಗೌರವದಿಂದ ಕರೆಯುತ್ತಿದ್ದರು.
ತನ್ನವರ ಮಕ್ಕಳು 'ಕಕ್ಕಮ್ಮ' (ಕಕ್ಕ=ಊಟ, ಅನ್ನ, ಮುದ್ದೆ) ಎಂದು ಕರೆಯುತ್ತಿದ್ದರು. ರೆಡ್ಡಿ-ಬ್ರಾಹ್ಮಣರ ಮನೆಗಳವರು ಕೊಟ್ಟ ತಂಗಳು ಮುದ್ದೆಗಳ ಕೈ ತುತ್ತು ಹಾಕಿ, ಅವರಿಗೆ ಕಕ್ಕಮ್ಮನಾಗಿದ್ದರು.
ಊರವರ ಮನೆಗಳಲ್ಲಿ ಕಾಳುಕಡಿ ಕೇರುವುದು-ಮಾಡುವುದು, ಕರೆದು ಬಾರೆದೆಂದರೆ ಹೋಗಿ ಕರೆತರುವುದು ಕಕ್ಕಮ್ಮ ಮಾಡುತ್ತಿದ್ದ ಕೆಲಸಗಳು. ಅದಕ್ಕೆ ಸಿಗುತಿದ್ದುದು ತಂಗಳು ಮುದ್ದೆಗಳು. ಬೆಳಗಿನ ಹೊತ್ತು ಮನೆಮನೆ ತಿರುಗಿ ತಂಗಳು ಮುದ್ದೆಗಳನ್ನು ಸೆರಗಿಗೆ ಹಾಕಿಸಿಕೊಂಡು ಗುಡಿಸಲಿಗೆ ಬರುತ್ತಿದ್ದರು. ಬೀದಿಗಳಲ್ಲಿ ಅಡುವ, ಕೂಲಿನಾಲಿಗೆ ಹೋದವರ ಮಕ್ಕಳನ್ನು ಹುಡುಕಿ ಕರೆತಂದು ಸಾರಿನಲ್ಲೋ ಉಪ್ಪಿನಕಾಯಲ್ಲೋ ಅದ್ದಿ ಕೈತುತ್ತು ಹಾಕುತ್ತಿದ್ದರು.
ಹಸಿವು ಹೆಚ್ಚಿಸುವ, ರುಚಿ ತಣಿಸುವ ಗೋಂಗೂರ - ಆವಕಾಯ ಇನ್ನೂ ತಿಂದಿಲ್ವೆ?
ಅವಿಲ್ಲವೆಂದರೆ ಹುಣಸೆಗೊಜ್ಜು ಹಿಸುಕಿ ಹಾಕುತ್ತಿದ್ದರು. ಅವು ಉಂಡು ಉಳಿದರೆ ಕುರಡು(ಶಾವಿಗೆ ಒರಳು)ನಲ್ಲಿ ಹಾಕಿ, ಒತ್ತಿ ಶಾವಿಗೆ ಮಾಡಿ ಮಧ್ಯಾಹ್ನದ ಹೊತ್ತಿನಲ್ಲಿ ತಿನ್ನಲು ಕೊಡುತ್ತಿದ್ದರು. ಉಂಡ ನಂತರ ಶಾಲೆಗೆ ಸೇರಿದ್ದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು. ಅವು ಬಂದಾಗ ಎಲ್ಲ ಮಕ್ಕಳೊಂದಿಗೆ ಶಾವಿಗೆಯ ಕೈತುತ್ತು. ಆಕೆಯ ಕೈತುತ್ತು ಉಂಡು ಶಾಲೆಗೆ ಹೋದವರಲ್ಲಿ ಶ್ರೀನಿವಾಸಯ್ಯನವರೂ ಒಬ್ಬರು.
ಜ್ಞಾನ - ವಿಜ್ಞಾನಕ್ಕೆ ಅಕ್ಷರ ವಿದ್ಯೆಯ ಪದವಿಯ ಹಂಗಿರದು. ಜಾತಿ, ಲಿಂಗದ ಮಾತೇ ಇರದು. ಲೋಕಜ್ಞಾನ, ಅನುಭವದ ಸಿರಿಯೇ ಅದಕ್ಕೆ ಪ್ರಮಾಣ. ಇದು ಕಕ್ಕಮ್ಮನವರಲ್ಲಿ ಇತ್ತು. ನೂರಾರು ತೆಲುಗು ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಅದ್ಭುತವಾದ ಕಥನಶಕ್ತಿ ಇತ್ತು. ಕೈತುತ್ತು ಹಾಕುತ್ತಲೇ ಮಕ್ಕಳಿಗೆ ಹೇಳಿದ ಕಥೆಗಳೆಷ್ಟೋ! ಆ ಕಥೆಗಳನ್ನು ಕೇಳಿ, ಹಾಡುಗಳನ್ನು ಆಲಿಸಿ ಪ್ರೇರಿತರಾಗಿಯೇ ಶ್ರೀನಿವಾಸಯ್ಯ ಜಾನಪದ ವಿಷಯದಲ್ಲಿ ಎಂ.ಎ., ಪಿಎಚ್.ಡಿ., ಮಾಡಿದ್ದು.
ನಮ್ಮೂರಿನ ಇಟ್ಟುಮುನಿಗ, ಮುದ್ದಿಗಳ ಸೊಣ್ಣಪ್ಪರ ಊಟದ ಸಾಹಸಗಳು
ಕಕ್ಕಮ್ಮನವರು ಹತ್ತಿರವಿದ್ದರೆ ಬಸುರಿಯರಿಗೆ ಭೀಮಧೈರ್ಯ. ಮನೆಯವರಿಗೆ ತಾಯಿ-ಮಗು ಕ್ಷೇಮವೆಂಬ ಭರವಸೆಯ ವಿಶ್ವಾಸ. ಗಂಗಮ್ಮನಲ್ಲಿ ಅಚಲ ಭಕ್ತಿಯಿದ್ದ ಕಕ್ಕಮ್ಮನವರಿಗೆ ಆ ಅಮ್ಮ ಕಾಪಾಡುವಳು ಎಂಬ ನಂಬಿಕೆ. ಸುಖದ ಹೆರಿಗೆ ಈ ಎಲ್ಲದರ ಫಲ.
ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!
ಏಕೋ ಏನೋ ಗಂಗಮ್ಮ ಈ ಮುದಿದೇಹಕ್ಕೆ ತಂಪು ಕೊಡಲಿಲ್ಲ. ತುರಿಕೆ ರೋಗ ನಾಕಾರು ವರುಷ ಕಾಡಿ, ಕಾಡಿ ದೇಹ ತಣ್ಣಗಾದಾಗ ಕಕ್ಕಮ್ಮನವರಿಗೆ ಎಂಬತ್ತು ವರ್ಷ. ಕಕ್ಕಮ್ಮ ಕರೆಯದೆ ಬಂದು, ಹೇಳದೆ ಹೋದ ಸರಳ ಸಾರ್ಥಕ ಜೀವ.