ಸ. ರಘುನಾಥ ಅಂಕಣ: ಹೋರಾಟ; ಹೋಗುತ್ತಲೂ ಕೊಯ್ಯುವ, ಬರುತ್ತಲೂ ಕೊಯ್ಯವ ಗರಗಸ
ಯಾರೋ ಹೇಳಿದರು, ಕರೆದರು ಎಂದೋ, ನನಗೇನು ಅನುಕೂಲ, ಲಾಭವೆಂಬ ಲೆಕ್ಕಾಚಾರದಲ್ಲಿ ಬಾವುಟ ಹಿಡಿದರೆ, ಘೋಷಣೆ ಕೂಗಿದರೆ ಅದು ಹೋರಾಟವೂ ಅಲ್ಲ, ಚಳವಳಿಯೂ ಆಗದು.
ಚಳವಳಿ, ಹೋರಾಟ ಏತಕ್ಕೆ? ಯಾರಿಗಾಗಿ? ಸಮಾಜದ ಹಿತವೆಷ್ಟು? ನಾನು ಭಾಗವಹಿಸುವುದರಿಂದ ಅದಕ್ಕೆ ಹಿತವಾದೀತೆ? ಮುಖ್ಯವಾಗಿ ಸಮಸ್ಯೆಯೇನು? ಹೋರಾಟ ಎಷ್ಟು ನ್ಯಾಯಬ್ಧವಾದುದು? ಪ್ರಮಾಣಿಕವಾದುದೆ? ಇಂತಹ ಪ್ರಶ್ನೆಗಳ ಸರಣಿ ಹಿಡಿದು ಒಂದೊಂದಕ್ಕೂ ಉತ್ತರ ಕಂಡುಕೊಳ್ಳದೆ, ಮನವರಿಕೆ ಮಾಡಿಕೊಳ್ಳದೆ ಹೋದರೆ ಕುರುಡು ಕುದುರೆಯಂತೆ ಹೋರಾಟದಲ್ಲಿ ನಡಿಗೆ ಅಡ್ಡಾದಿಡ್ಡಿಯದಾಗುತ್ತದೆ.
ಇದಕ್ಕೆ ಚರಿತ್ರೆ ಹಾಗೂ ವರ್ತಮಾನದ ಆಗುಹೋಗುಗಳೇ ಪಾಠಶಾಲೆ. ಹೋರಾಟ ರೂಪಿಸುವವರಲ್ಲಿಯೂ ಇವಕ್ಕೆ ಉತ್ತರವಿರಬೇಕು. ಸಂಘಟನೆಗೆ ಬರುವವರಿಗೆ ಅವರ ಭಾಷೆಯಲ್ಲಿಯೇ ತಿಳುವಳಿಕೆ ಮೂಡಿಸಬೇಕು. ಇದು ನಾಯಕತ್ವದ ಪ್ರಾಥಮಿಕ ಲಕ್ಷಣ. ಅಧಿಕಾರದ ಕ್ರೂರತ್ವಕ್ಕೆ ಬಲಿಯಾದ ಸುಬ್ಬಾರಾವ್ ಪಾಣಿಗ್ರಾಹಿ ಲಂಬಾಣಿ ಸಮುದಾಯಕ್ಕೆ ಅವರ ಭಾಷೆಯಲ್ಲಿಯೇ ಸಮಾಜವಾದವನ್ನು ಬೋಧಿಸಿ, ಹೋರಾಟಕ್ಕೆ ಅಣಿಗೊಳಿಸಿದ್ದು, ಉದಾಹರಣೆಯಾಗಿ ಆಂಧ್ರ ರೈತ ಹೋರಾಟ ಚರಿತ್ರೆಯಲ್ಲಿ ಸಿಗುತ್ತದೆ.
ಹೋರಾಟಕ್ಕೆ(ಚಳವಳಿಗೆ) ಈಡೇರಿಸದ ಆಶ್ವಾಸನೆಗಳೊಂದಿಗೆ ರಾಜಿ ಎಂದಿಗೂ ಬಲವರ್ಧಕವಲ್ಲ. ಈಡೇರದೆ ವಿರಮಿಸುವುದು 'ಗುಮಾನಿ'ಗಳಿಗೆ, ಗಾಳಿಸುದ್ದಿ ಪ್ರಚಾರಕ್ಕೆ ಮಾಡಿಕೊಡುವ ಅನುಕೂಲವಾಗುವುದು. ಹೀಗಾದಾಗ ಸಮಸ್ಯೆ ಉಲ್ಭಣಗೊಂಡಾಗ ಮರುಸಂಘಟನೆ ಸುಲಭಸಾಧ್ಯವಲ್ಲ. ಹೋರಾಟವು ಯಾವುದಾದರೊಂದು ಬಗೆಯಲ್ಲಿ ಜನರ ನಡುವೆ ಸಂಚರಿಸುತ್ತಿರಬೇಕು. ಇದನ್ನೇ 'ಕಾವು ಕಾಯ್ದುಕೊಳ್ಳುವುದು' ಎನ್ನುವುದು.
ತಮಗೆ (ಡಪ್ಪು) ಕಾವು ಕೊಡದಿದ್ದರೆ ನಾದ ಕ್ಷೀಣಿಸುವ ಹಾಗೆ ಆಗುತ್ತದೆ. ಹೋರಾಟದಲ್ಲಿ ಪ್ರತಿಯೊಬ್ಬ ಹೋರಾಟಗಾರನೂ ಕಾವು ಪಡೆದ ತಮಟೆಯೇ. ಕರಪತ್ರ ಹಂಚುವವನೂ ಮುಖ್ಯನೇ ಎಂಬುದನ್ನು ಮೊದಲು ನಾಯಕತ್ವ ಗ್ರಹಿಸಬೇಕು. ಅಂದರೆ ಅವನನ್ನೂ ಗೌರವದಿಂದ ಕಾಣುವುದರಲ್ಲಿ ನಾಯಕತ್ವದ ಸಾಮರ್ಥ್ಯ ಅಡಗಿರುತ್ತದೆ. ನಾಯಕನ-ನಾಯಕರ-ನಿಷ್ಠೆ, ಪ್ರಮಾಣಿಕತೆ, ಸತ್ಯವಂತಿಕೆ ಕಾರ್ಯಕರ್ತರಲ್ಲಿ ಪ್ರತಿಫಲಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ನಾಯಕತ್ವವೆಂದರೆ ಪ್ರೇರೇಪಿಸುವುದು, ಉತ್ಸಾಹಿಸುವುದು. ಕಾರ್ಯಕರ್ತರನ್ನು ಬಳಲಿಸುವುದು ನಾಯಕತ್ವವಲ್ಲ.
ಯಾವುದರ ವಿರುದ್ಧ ಎಂಬುದಕ್ಕಿಂತ ಅದರಲ್ಲಿ ಮುಖ ತೋರಿಸಿ, ತಾವು ಹೋರಾಟದ ಪರವೆಂದು ಹೇಳಿಕೆ ಕೊಟ್ಟು, ನಂತರ ಮಾಯವಾಗಿಬಿಡುವ ವರ್ಗವೊಂದು ಸದಾ ಇಂಥ ವೇದಿಕೆಗಳಿಗಾಗಿ ಕಾಯುತ್ತಿರುವುದು ಸ್ವಾರ್ಥದ ಮರ್ಮ. ಇಂಥ ಜನ ವೇದಿಕೆಯ, ಅವರು ಇದ್ದಷ್ಟು ಸಮಯದ ಸಕಲ ಲಾಭಗಳನ್ನು ಗಂಟು ಮಾಡಿಕೊಂಡು ನಡೆದುಬಿಡುತ್ತಾರೆ. ಇದರ ಒಳಹೊರಗುಗಳಲ್ಲಿ ಇರುವುದು ತಾವೇ ಎಂದು ಲಜ್ಜೆಬಿಟ್ಟು ಹೇಳಿಕೊಳ್ಳುವುದರಲ್ಲಿ ನಿಸ್ಸೀಮರು. ಅಂದುಕೊಂಡಿದ್ದನ್ನು ಗಿಟ್ಟಿಸಿಕೊಂಡ ನಂತರ ಎಲ್ಲಿ ಹೋದರೆಂದು ಹುಡುಕಿದರೂ ಕಾಣಿಸುವುದಿಲ್ಲ. ಕಾಣಿಸುವುದಿದ್ದರೆ ಮುಂದಿನ ಇಂಥ ವೇದಿಕೆಗಳಲ್ಲಿ. ಈ ವರ್ಗದಲ್ಲಿ ಯಾರೂ ಇದ್ದಾರು. ವಿಭಾಗಿಸಿ ಹೇಳಬೇಕಿಲ್ಲ.
ಈ ವರ್ಗ ಹೀಗೇಕೆ ಎಂಬ ಪ್ರಶ್ನೆಯೇ ಅನಗತ್ಯ. ಇದರ ಗುಣಲಕ್ಷಣಗಳೇ ಹೀಗೆ. ಈ ವರ್ಗದಲ್ಲಿ ಇನ್ನೊಂದು ಒಳವರ್ಗವಿರುತ್ತದೆ. ಚಳವಳಿ, ಪ್ರತಿಭಟನೆಗಳ ಅಂತಿಮ ದೆಸೆಯಲ್ಲಿ- ಅದು ಬಲಯುತವಾಗಿದ್ದರೆ, ಜನರ ನಡುವೆ ವ್ಯಾಪಿದ್ದರೆ ಮಾತ್ರ- ಆಯಕಟ್ಟಿನ ಜಾಗದಲ್ಲಿ ಕಾಣಿಸಿಕೊಂಡು, ತನ್ನ ಒಳ-ಹೊರ ಲೆಕ್ಕಾಚಾರದಂತೆ ವರ್ತಿಸುತ್ತದೆ. ಇದು ಆ ವರ್ಗಕ್ಕಲ್ಲದೆ ಇತರರಿಗೆ ಅರ್ಥವಾಗುವುದು ಕಷ್ಟ. ಒಂದು ವೇಳೆ ಅರ್ಥವಾಗುವುದಾರೆ, ಆಗುವಷ್ಟರಲ್ಲಿ ಆ ವರ್ಗ ಬಯಸಿದ್ದು ಅದರ ಗಂಟು ಸೇರಿ ಭದ್ರಗೊಂಡಿರುತ್ತದೆ. ಇಂತಹವರನ್ನು 'ಯಶಸ್ಸಿನ ಹರಣಕಾರರು' ಅನ್ನಬಹುದೆಂದಾದರೆ ಈ ಕುರಿತು ಅರಿವುಳ್ಳವರು ಆಲೋಚಿಸಬೇಕು.
Recommended Video
ಇದೇ ವರ್ಗದಲ್ಲಿ ಉಪವರ್ಗವಿದ್ದು, ಇದರಲ್ಲಿರುವವರು ಸಂಘಟನೆ, ಹೋರಾಟದ ಸೋಗಿನಲ್ಲಿ ಜೊತೆಗಿರುತ್ತಲೇ ಒಡೆಯುವ ತಂತ್ರಗಾರಿಕೆಯಲ್ಲಿ ಗುಪ್ತವಾಗಿ ನಿರತರಾಗಿರುತ್ತಾರೆ. ಇವರು ಕನ್ನಗಾರರು. ಈ ಕನ್ನಗಳು ಅವರಷ್ಟೇ ನುಗ್ಗಲು, ಇತರರ ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತವೆ. ಇದು ಚಳವಳಿ, ಹೋರಾಟ, ಸಂಘಟನೆಯನ್ನು ಖೆಡ್ಡಕ್ಕೆ ಬೀಳಿಸುವಷ್ಟು ಯೋಜನಾಬದ್ಧವಾಗಿರುತ್ತದೆ. ಅದಕ್ಕೆ ತಕ್ಕಂತೆ ಕಾರ್ಯತಂತ್ರವೂ ಇರುತ್ತದೆ. ಈ ಯೋಜನಾಬದ್ಧ ತಂತ್ರಗಾರರನ್ನು ತಡೆಯುವುದಕ್ಕೆ ಮೊದಲು ಅವರನ್ನು ಗುರುತಿಸಬೇಕು. ಆದರಿದು ಸುಲಭವಲ್ಲ. ಇವರು ಮುಖ ಕಾಣಿಸದವರು.