ಎರೆಯೆಣ್ಣೆ ತೆರೆಯಾಗಿ ಬತ್ತಿ ನಂದನವಾಗಿ...
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೆಕಲ್ಲಳ್ಳಿಯಲ್ಲಿ ಹಿರಿಯ ಮಿತ್ರ ಪ್ರೊಫೆಸರ್ ವೇಣುಗೋಪಾಲರ ಇಂದಿರಾಯಣ ಮನೆಯಲ್ಲಿ ಅವರ ವನಸುಮ ಪ್ರಕಾಶನ ಪ್ರಕಟಿಸಿದ ಭಾರತಿ ನಾರಾಯಣಪ್ಪನವರ ಕೀರ್ತನೆಗಳ ಪುಸ್ತಕದ ಬಿಡುಗಡೆ ಕಾರ್ಯಕ್ರಮವಿತ್ತು.
ಮಿಕ್ಸಿ, ಗ್ರೈಂಡರ್ ಏನೇ ಬಂದರೂ ಹಸಿಕಲ್ಲ ಬಳಕೆ ಜೀವಕ್ಕೆ ಖುಷಿ
ನಾನು ಆ ಪುಸ್ತಕ ಕುರಿತು ಮಾತನಾಡಬೇಕಿತ್ತು. ಹೋಗಿದ್ದೆ. ಪುಸ್ತಕ ಬಿಡುಗಡೆಯ ನಂತರ ಹಿರಿಯ ಹೆಂಗಸೊಬ್ಬರು ವರಂಡಾದಲ್ಲಿ ಮೂರುನಾಲ್ಕು ಜನರ ಮಧ್ಯೆ ಕುಳಿತು, ಭಾರತಿ ನಾರಾಯಣಪ್ಪನವರ ಪದಗಳ ನಡುವೆ ದಾಸರಪದಗಳನ್ನೂ ಹಾಡುತ್ತಿದ್ದರು. ವಯಸ್ಸಾಗಿದ್ದರೂ ಶಾರೀರ ಮಧುರವಾಗಿತ್ತು.
ಆಕೆ ಸಂಪ್ರದಾಯ ಗೀತೆಗಳನ್ನು ಹಾಡುವಾಗ ಮಾತ್ರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದುದು ರಸಭಂಗವುಂಟು ಮಾಡುತ್ತಿತ್ತು. ಹಿಂದೆ ಗೌರವವಿತ್ತು, ಶ್ರದ್ಧೆಯಿತ್ತು, ಭಕ್ತಿಯಿತ್ತು, ಆಸಕ್ತಿಯಿತ್ತು. ಹೆಚ್ಚಿಗೆ ಮನೆಮಂದಿ ಇಂದಿಗಿಂತಲೂ ಪಾಲ್ಗೊಳ್ಳುತ್ತಿದ್ದರು. ಈಗ ಅದಾವುದೂ ಇಲ್ಲ. ಅವರಿಗವರೇ ಹೆಚ್ಚು ಅಂತಾಗಿದೆ ಎಂಬುದು ಅವರ ಅನಿಕೆಗಳ ಸಾರಾಂಶ.
ನಾಚಿಕೆಯಿಂದ ತಲೆ ತಗ್ಗಿಸುತ್ತಿದೆ ಜಾನಪದ
ನನಗೆ ಹಾಡುವಿಕೆಯ ನಡುವೆ ಅವರಾಡುತ್ತಿದ್ದ ಮಾತುಗಳು ಕಿರಿಕಿರಿ ಉಂಟುಮಾಡುತ್ತಿದ್ದವು. ಅಮ್ಮಾ, ಹಾಡಿನ ಮಧ್ಯೆ ಮಾತು ಬೇಡ. ಹಾಡುವಷ್ಟನ್ನೂ ಹಾಡಿಬಿಡಿ. ನಂತರ ಮಾತಾಡಿದರೆ ಚೆನ್ನ ಹಾಗು ನಮಗೂ ಉಪಯುಕ್ತ ಎಂದೆ. ಅದೂ ನಿಜವೇ ಅನ್ನಿಸಿತು. ಹಾಡೋರು ಮಾತಿನ ಚಪಲಕ್ಕೆ ಬೀಳಬಾರದು. ಆದರೇನು ಮಾಡೋದು? ಈಗಿನೋರ ವರ್ತನೆ ಬೇಸರ ತರಿಸಿ ಮಾತಾಡೋ ಹಾಗೆ ಮಾಡಿಬಿಡುತ್ತೆ ಅಂದರು. ನಂತರ ಅವರು ಪದಗಳನ್ನಷ್ಟೇ ಹಾಡಿದರು.
ಆ ಹಿರಿಹೆಂಗಸು ಹಿಂದಿನ ದಿನಗಳಲ್ಲಿ ಬೆಳಗಾಗಲೆದ್ದು, ಕೆಲಸಗಳನ್ನು ಮಾಡುತ್ತ ಹಾಡಿಕೊಳ್ಳುತ್ತಿದ್ದುದನ್ನು ನೆನೆದು, ಅಂತಹ ಕೆಲವು ಹಾಡುಗಳನ್ನು ಹಾಡಿದರು. ಅವುಗಳಲ್ಲಿ ಬೆಳಗಾಗ ನಾನೆದ್ದು ಯಾರಾರ ನೆನೆಯಲಿ ಎಂಬಂತಹ ಜಾನಪದ ತ್ರಿಪದಿಗಳೂ ಇದ್ದವು. ಅವರು ಅವನ್ನು ದೇವರನಾಮಗಳೆಂದು ಭಾವಿಸಿದ್ದರು. ಜಾನಪದದ ಗುಣವೇ ಹಾಗೆ. ಆದ್ದರಿಂದಲೇ ಅವು ಜನಪದದ್ದು.
ನನ್ನಜ್ಜಿ ವೆಂಕಮ್ಮ ಸಂಜೆ ಮನೆದೀಪ ಮುಡಿಸುವಾಗ, ರಾತ್ರಿ ನಂದಿಸುವಾಗ ಹೇಳುತ್ತಿದ್ದ ಪದಗಳ ನೆಪಾಯಿತು. ಈಕೆಯ ಧ್ವನಿಯಲ್ಲಿ ಅಂಥದನ್ನು ಕೇಳುವ ಬಯಕೆಯಾಯಿತು. ಅವರಿಗೆ ತಿಳಿಸಿ, ಅಮ್ಮಾ ಹಾಡಿ ಎಂದೆ. ಅವರಲ್ಲಿ ಉತ್ಸಾಹ ಹುಟ್ಟಿತು.
ನಾನು ಹಾಡಬೇಕೆಂದಿದ್ದೂ ಮರೆತೆ ಕಾಣಪ್ಪ ಎಂದು, ಎರೆಯೆಣ್ಣೆ ತೆರೆಯಾಗಿ/ ಬತ್ತಿ ನಂದನವಾಗಿ/ ನಾ ಹಚ್ಚಿದಾ ದೀಪ/ ನಾ ಹಚ್ಚಿದಾ ದೀಪ ಶ್ರೀಕೃಷ್ಣನಿಗೆ ಅರ್ಪಿತವಾಲಿ ಇದು ದೀಪ ಮುಡಿಸುವಾಗ ಹಾಡುತ್ತಿದ್ದುದು. ಇಂದ್ರನಾ ಮನೆ ದೀವಿಗೆ/ ಚಂದ್ರನಾ ಮನೆ ದೀವಿಗೆ/ ಇಂದ್ಹೋಗಿ ನಾಳೆ ಸಂಜೆಗೆ/ ಇಂದ್ಹೋಗಿ ನಾಳೆ ಸಂಜೆಗೆ ಬಾರಮ್ಮ ಜ್ಯೋತೆಮ್ಮ ಇದು ದೀಪವಾರಿಸುವಾಗಿನ ಹಾಡು ಎಂದರು.
ನಮ್ಮನ್ನು ಸೋಲಿಸುತ್ತಿರುವ ಜಾನಪದ, ಗೆಲ್ಲುವ ಸೂತ್ರ ಯಾವುದು?
ಇಂದು ಅಂತಹ ಎಣ್ಣೇದೀಪ ಇರದಿರಬಹುದು. ಸ್ವಿಚ್ಚು ಒತ್ತಿದಾಗ ಹೊತ್ತಿಕೊಳ್ಳುವ ವಿದ್ಯುದ್ದೀಪ ಎಣ್ಣೇದೀಪ ಕೊಡುವ ಬೆಳಕನ್ನೇ. ಬೆಳಕು ಮುಖ್ಯ. ಅದನ್ನು ಕೊಡುವ ವಸ್ತುವಲ್ಲ. ಇಂದು ದೇವಾಲಯಗಳಲ್ಲೇನು ಮನೆಗಳ ದೇವರ ಮುಂದೆಯೂ ವಿದ್ಯುದ್ದೀಪಗಳೇ ಬೇಳಗುವುದು ಹೆಚ್ಚು. ಇವನ್ನೂ ಪವಿತ್ರ ಭಾವನೆಯಿಂದ ಕಾಣತಿದ್ದೇವೆ. ತಮಸ್ಸನ್ನು ಓಡಿಸುವ ಬೆಳಕುಗಳೆಲ್ಲವೂ ಪರಿಶುದ್ಧ, ಪವಿತ್ರ.
ಬೆಳಕಿಗೆ ಜಾತಿ, ಮತ, ಪಂಥಗಳಿಲ್ಲ. ಜಾತಿ ಹೀನನ ಮನೆಯ ಜ್ಯೋತಿ ತಾಹೀನವೆ ಎಂದು ಸಾರಿದ ಸರ್ವಜ್ಞ ದೊಡ್ಡವನು. ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಇದು ಕವಿಯ ಪ್ರಾರ್ಥನೆ. ತಮಸೋಮಾ ಜ್ಯೋತಿರ್ಗಮಯ ಇದನ್ನು ಮರೆಯಲುಂಟೆ? ನೂರ್ ನಹೀ ಸಿರ್ಫ್ ಸೂರಜ್ ಔರ್ ಚಾಂದ್ ಮೇ/ ಹೈ ದಿಲೋಂಮೇ ಭೀ/ಸಮಝ್ನೇ ವಾಲೋಂಕೊ ಕರೇ ಸಲಾಂ ಅಂದಿದ್ದಾನೆ ಒಬ್ಬ ಸೂಫಿ.
ಬೆಳಕನ್ನೂ ಬೀಳ್ಕೊಟ್ಟು, ಮತ್ತೆ ಕರೆವುದು ಭಾರತೀಯ ಪರಂಪರೆಯದಲ್ಲಿ ಮಾತ್ರವೇನೊ? ನಮ್ಮವರು ಬೆಳಕನ್ನಷ್ಟೇ ಕರೆದವರಲ್ಲ. ಬಾರೋ ಬಾರೋ ಮಳೆರಾಯ ಎಂದು ಮಳೆಯನ್ನೂ ಕರೆದವರೇ.