ಗೆಜ್ಜೆ ಕಾಲ್ಗಳ ದನಿಯನು ತೋರುತಾ...
ಅಮ್ಮಾ, ಅಂಗಡಿಗೆ ಸರಕು ತರೋಕೆ ಮಾಲೂರಿಗೆ ಹೊರಟಿದ್ದೀನಿ, ಮನೆಗೇನಾದರು ತರಬೇಕಾ? ಎಂದು ಕೇಳುತ್ತಲೇ ಬಂದಳು ಮುನೆಕ್ಕ. ಏನೂ ಬೇಡ, ನೀನು ಹೋಗಿ ಬೇಗ ಬಾ ಅಂದಳು ಅಮ್ಮ. ಎಂದೂ ಇಲ್ಲದ್ದು 'ಹುಷಾರು' ಎಂದ ಅಪ್ಪ. ನರಸಿಂಗರಾಯ ತಲೆ ಕೆರೆದುಕೊಂಡ. ಅದೇನೊ ಮಟ್ಟುಗಳು ಕಟ್ಟಿದ್ದಿಯಂತಲ್ಲ, ಹಾಡು ಬಾ ಎಂದು ಕರೆದು ನಡುಮನೆಯಲ್ಲಿ ಕುಳಿತ ಅಪ್ಪ. ನರಸಿಂಗರಾಯ ಹಾರ್ಮೋನಿಯಂ ಹಿಡಿದು ಶ್ರುತಿ ಸರಿಪಡಿಸಿಕೊಂಡ.
ಅಡುಗೆ ಮನೆಯಿಂದ ರುಬ್ಬುವ ಗಡಗಡ ಸದ್ದು, ಗಸಗಸೆ ಪಾಯಸದ ಘಮಲು. ಕಾದ ಎಣ್ಣೆಯಲ್ಲಿ ಬಿದ್ದಾಗ ಚುಂಯ್ ಅನ್ನುವ ಆಂಬೊಡೆ. ಸಾರಿಗೆ ಹಾಕಿದ ಇಂಗಿನ ಪರಿಮಳ. ಹಬ್ಬವಿಲ್ಲದ ದಿನ ಹಬ್ಬದಡುಗೆ!
ಸುನಂದಾಳ ನಿರ್ಗಮನದಿಂದ ಬಿಮ್ಮೆಂದ ಮನಸುಗಳು
ಹಾಡು, ಪದ್ಯದ ಬಗ್ಗೆ ಅಪ್ಪನನ್ನು ಕೇಳಬೇಕಿದ್ದ ನರಸಿಂಗರಾಯ, ಅಮ್ಮಾ ಏನಿವತ್ತು? ಎಂದು ಕೇಳಿದ. ಏನೂ ಇಲ್ಲ. ಮಾಡಬೇಕೆನಿಸಿತು ಅಷ್ಟೆ ಎಂಬ ಉತ್ತರ ಅಡುಗೆ ಮನೆಯಿಂದಲೇ ಬಂತು. ಚಿತ್ರಾನ್ನಾನೂ ಇದೆಯಾ ಅಂದ. ಇದೆ, ನೀನು ಹಾಡಪ್ಪ ಮಗನೆ ಅಂದಳು ಅಮ್ಮ. ಅಪ್ಪ ನಕ್ಕು, ಮರೀದೀರ ಮಾವಿನ ತುರಿ ಹಾಕು. ಮಗರಾಯ ಒಳ್ಳೆ ಪದ್ಯಕಟ್ಟಿ ಹಾಡ್ತಿದ್ದಾನೆ ಅಂದ. ನೀನೂ ವೇಷ ಹಾಕ್ತಿಯೇನು ಎಂದು ಕೇಳಿದ. ಈ ಸದ್ಯಕ್ಕಂತೂ ಅಂದುಕೊಂಡಿಲ್ಲ. ಅನಿವಾರ್ಯವೆನಿಸಿದರೆ ಹಾಕಿಬಿಡೋದೆ ಅಂದ.
ನಾಟಕ ಎಲ್ಲೂ ಸೋಲಬಾರದು. ಅಪ್ಪಯ್ಯನ ಮಗನೇನು ಕಮ್ಮೀನ ಅನ್ನಬೇಕು ಜನ. ಕೂತ್ರು, ನಿಂತ್ರು ನಾಟಕಾನ ಚೆಂದಗಟ್ಟಿಸುವತ್ತಲೇ ಮನಸ್ಸಿರಲಿ. ದುಗ್ಗಪ್ಪನ್ನ ಸಾಮಾನ್ಯ ಅಂದುಕೋಬೇಡ. ಅವನೊಪ್ಪಿದ ಅಂದ್ರೆ ದೇಶಾನೇ ಒಪ್ಪಿದ ಹಾಗೆ. ಅವನಿಂದ ನಾನು ಭಾಳಾ ಕಲ್ತಿದ್ದೀನಿ. ತ್ಯಾಗರಾಜರು ಹಾಡಿಲ್ಲವ 'ಎಂದರೋ ಮಹಾನುಭಾವುಲು' ಎಂದು ಹಾಡುವನು. ಇನ್ನು ಏನು ಹೇಳಲಿದ್ದನೊ? ಅಷ್ಟರಲ್ಲಿ ಬಾಗಿಲಿಗೆ ಬಂದ ಮುನೆಕ್ಕ, ಅಪ್ಪಾ ನಾವು ಬಂದ್ವಿ ಎಂದು ಒಳ ಬಂದಳು. ಅವಳ ಹಿಂದೆ ನರಸಿಂಗರಾಯನಿಗೆ ಕಂಡಿದ್ದು, 'ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯನು ತೋರುತ' ಸುನಂದಾ!!
ಅಂದರೆ ಮುನೆಕ್ಕ ಹೋದುದು ಅಂಗಡಿಗೆ ಸರಕು ತರಲಲ್ಲ! ಅಪ್ಪಯ್ಯ ಹುಷಾರು ಅಂದಿದ್ದು ಮುನೆಕ್ಕನಿಗಲ್ಲ. ಸುನಂದಾಳನ್ನು ಜೋಪಾನವಾಗಿ ಕರೆದು ತಾ ಎಂಬ ಅರ್ಥದಲ್ಲಿ. ಹಬ್ಬದಡಿಗೆ ಮಾಡಬೇಕೆನಿಸಿದ್ದಕ್ಕಲ್ಲ ಅಮ್ಮ ಮಾಡಿದ್ದು. ಸುನಂದಾ ಬರುತ್ತಿದ್ದುದರಿಂದ. ಈ ಎಲ್ಲದರ ಹಿಂದಿನ ಮರ್ಮವೇನು? ನರಸಿಂಗರಾಯ ತಲೆ ಕೆರೆದುಕೊಂಡ. ಅದನ್ನು ಗಮನಿಸಿದ ಅಪ್ಪಯ್ಯ, ನಾಟಕದ ವಿಷಯ ಏನೋ ಇದ್ದೀತು ಅಂದುಕೊಂಡ.
ಒಲೆಯ ಮೇಲೆ ಕಾಯುತ್ತಿರುವುದು ಅಂತಹುದೇ ಮರುಕದ ನೀರು!
ಸುನಂದಾ ಅಪ್ಪನ ಕಾಲಿಗೆ ನಮಸ್ಕರಿಸಿದಳು. ಆಗಲೇ ಅಲ್ಲಿಗೆ ಬಂದ ಅಮ್ಮನ ಕಾಲಿಗೂ ಎರಗಿದಳು. ನರಸಿಂಗರಾಯನತ್ತ ನೋಡಿ ಮಂದಹಾಸ ಬೀರಿದಳು. ಅವಳು ತಂದಿದ್ದ, ಸಾಕಷ್ಟು ದೊಡ್ಡದಿದ್ದ ಹೊಸ ಬ್ಯಾಗು ಹೊಟ್ಟೆ ತುಂಬಿಕೊಂಡಿತ್ತು. ನರಸಿಂಗರಾಯ ಸೂಕ್ಷ್ಮವಾಗಿ ಗಮನಿಸಿದ. ಸುನಂದಾ ಹಿಂದೆಂದಿಗಿಂತಲೂ ಗೆಲುವಾಗಿದ್ದಳು. ನಿರೀಕ್ಷಿಸಿರದ ಆಸರೆ ಸಿಕ್ಕಿದ್ದಕ್ಕಿದ್ದೀತು.
ದುಗ್ಗಪ್ಪ ಬಂದ. ಎತ್ತುಗಳಿಗೆ ನೀರು ಕುಡಿಸಾಕಂತ ಕುಂಟೆ ಕಡೆ ಹೊರಟಿದ್ದೆ. ನರಸಿಂಗ ಹಾಡೋದು ಕೇಳಿಸ್ತು. ನೀರು ಕುಡಿಸಿ, ಹುಲ್ಲು ಹಾಕಿ ಬರೋವಾಗ ಸುನಂದಾ ಬರ್ತಿರೋದು ಕಾಣಿಸ್ತು. ಪದ ಕೇಳಿದ ಹಾಗೂ ಆಗುತ್ತೆ, ಸುನಂದಾನ ಮಾತಾಡಿಸಿದ ಹಾಗೂ ಆಗುತ್ತೆ ಅಂತ ಬಂದೆ ಎಂದು ಹೇಳುತ್ತ ಕುಳಿತ. ಅದು ಊಟವಾದ ಮೇಲೆ ಆಗುತ್ತೆ ಬಿಡು. ಹೇಗೂ ಊಟದ ಹೊತ್ಗೆ ಬಂದಿದ್ದಿ. ಕೈ ತೊಳಕೊ ಅಂದ ಅಪ್ಪಯ್ಯ. ನಂದಾಗಿದೆ ನೀವು ಮಾಡಿ ಅಂದ ದುಗ್ಗಪ್ಪ. ಅಮ್ಮ ಒತ್ತಾಯಿಸಿ ಅವನಿಗೂ ಬಡಿಸಿದಳು.