ಲಾಸು ಮಾಡಿದ ಈರುಳ್ಳಿ; ಚಿಂತೆ ಬಿಡಿಸಿತು ಸೀಗೆಣಸು
ಬಿತ್ತನೆ, ಗೊಬ್ಬರ, ಕೂಲಿ, ಕರೆಂಟು, ಗೋಣೆಚೀಲ, ಲಾರಿ ಬಾಡಿಗೆ, ಡ್ರೈವರ್ ಬಾಟ, ಮದ್ರಾಸು ಪ್ರಯಾಣದ ಖರ್ಚುಗಳೆಲ್ಲ ತೆಗೆದಾಗ ಒಬ್ಬೊಬ್ಬರ ಪಾಲಿಗೆ ಬಂದುದು ಹದಿನೈದು ಸಾವಿರ ರೂಪಾಯಿಗಳು. ಇದರ ಹುರುಪಿನಲ್ಲಿ ಗೆಳೆಯರು ಮುಂದಿನ ಬೆಳೆ ಏನೆಂದು ಆಲೋಚಿಸುತ್ತಿದ್ದಾಗ, ಇಷ್ಟೇ ಜಮೀನಿನಲ್ಲಿ ಜನ್ನಪ್ಪನಿಗೆ ಐವತ್ತು ಸಾವಿರ ಲಾಭ ತಂದುಕೊಟ್ಟ ಈರುಳ್ಳಿ ವಾಸನೆ ಇವರ ಮನಸ್ಸುಗಳನ್ನು ಆವರಿಸಿತು. ಲೆಕ್ಕ ಹಾಕಿ ಕೈಲಿದ್ದ ಆಲೂಗಡ್ಡೆ ದುಡ್ಡಿನಲ್ಲಿ ತಲಾ ಹತ್ತು ಸಾವಿರ ಹಾಕಿ ಗುಲಾಬಿ ಈರುಳ್ಳಿ ಬೇಸಾಯ ಮಾಡಿದರು. ಒಳ್ಳೆ ಹಸನಾದ ಬೆಳೆ ಕಂಡು ಜನ್ನಪ್ಪ ಏನಿಲ್ಲೆಂದರೂ ಒಂದೂವರೆ ಲಕ್ಷಕ್ಕೆ ಕಡಿಮೆ ಇಲ್ಲ ಅಂದಿದ್ದ. ಅದರಲ್ಲಿ ಖರ್ಚಿನ ಲೆಕ್ಕ ತೆಗೆದಾಗ ಎಪ್ಪತ್ತೈದು ಸಾವಿರ ಲಾಭ ಕಂಡಿತು. ಇಪ್ಪತ್ತೈದು, ಇಪ್ಪತ್ತೈದು, ಇಪ್ಪತ್ತೈದು ಸಾವಿರ ನೋಟುಗಳ ತೂಕ ಮೂವರ ಜೇಬುಗಳನ್ನೂ ಜಗ್ಗಿದಂತಾಯಿತು. ಆ ಖುಷಿಯಲ್ಲಿ ಅವರು ಅಂದು ಮಾಲೂರಿಗೆ ಹೋಗಿ ಬಾಲಾಜಿ ಟಾಕೀಸಿನಲ್ಲಿ ನಡೆಯುತ್ತಿದ್ದ ಹೊಂಗನಸು ಸಿನೆಮಾ ನೋಡಿ, ಗುರುಪ್ರಸಾದ್ ಹೋಟೆಲಿನಲ್ಲಿ ಜಾಮೂನು, ಮಸಾಲೆದೋಸೆ ತಿಂದು ಬಂದರು.
ಬೇಸರದ ಮನಸ್ಸಿಗೆ ಕೊಂಡಮಾಮನ ಪಲುಕಿನ ತಂಪು
ಕಿತ್ತ ಈರುಳ್ಳಿಯನ್ನು ತೋಟದ ಅಂಚಿನಲ್ಲಿದ್ದ ದೊಡ್ಡಹುಣಿಸೆ ಮರದಡಿ ಆರುವಾಸಿಗೆ ಬರಲು ಹರಡಿದರು. ಆರುವಾಸಿಗೆ ಬಂದ ನಂತರ ಚೀಲಗಳಗೆ ತುಂಬುತ್ತಿದ್ದಾಗ, ಈರುಳ್ಳಿ ಬೆಲೆ ಕುಸಿಯುತ್ತಿದೆ ಎಂಬ ಸುದ್ದಿ ಬಂದಿತು. ಇನ್ನೂ ಇಳಿಯುವ ಸೂಚನೆಯೂ ಇತ್ತು. ಗೆಳೆಯರು ಬೆಲೆ ಏರಿಕೆಗೆ ಕಾಯುವುದೇ, ಮಾರಿಬಿಡುವುದೇ ಎಂಬ ಗೊಂದಲಕ್ಕೆ ಬಿದ್ದರು. ಜನ್ನಪ್ಪನ ಸಲಹೆ ಕೇಳಿದರು. ಮಾರ್ಕೆಟ್ಟು ರೈತನ ಕೈಲಿರೋದಲ್ಲ. ದಳ್ಳಾಳಿಗಳು, ವರ್ತಕರು ಏನು ಮಾಡುತ್ತಾರೆಂದು ಹೇಳೋಕಾಗದು. ನಿಮ್ಮ ಅದೃಷ್ಟ ಹೇಗೋ ಹೇಳಲಾಗದು ಅಂದ. ಕಾದು ನೋಡೋಣ ಇನ್ನೊಂದು ವಾರ ಎಂಬ ತೀರ್ಮಾನಕ್ಕೆ ಬಂದರು. ಮೂಟೆಗಳನ್ನು ಅದೇ ಮರದಡಿ ಲಾಟುಕಟ್ಟಿದರು. ವಾರ ಹತ್ತು ದಿನಗಳಾದರೂ ಬೆಲೆ ಏರಿಕೆಯಾಗಿಲ್ಲ. ಇನ್ನೂ ಕಾದರೆ ಮತ್ತೂ ಲಾಸು ಅನ್ನಿಸಿದಾಗ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಸಾಗಿಸಿದರು. ಕಮೀಷನ್ ಜಾತಾ ಕೈಗೆ ಬಂದುದು ನಲವತ್ತು ಸಾವಿರ! ಹೂಡಿಕೆಯಲ್ಲೇ ಹತ್ತುಸಾವಿರ ಸಾಲದ ಲೆಕ್ಕ ಸಿಕ್ಕಿತು.
ನರಸಿಂಗರಾಯನೂ, ದೋಸ್ತರೂ ಇಂಗ್ಲಿಷ್ ಪಿಚ್ಚರ್ ಗೆ ಹೋಗಿದ್ದು
ಕೃಷಿ ಬಿಡಬಾರದೆಂಬ ಮನಸ್ಸಿನಲ್ಲಿ ನಷ್ಟದ ಚಿಂತೆ. ಮಳೆಯಿಲ್ಲದೆ ಹೊಲಗಳ ಉಳುಮೆಯೂ ಆಗಿರಲಿಲ್ಲ. ನರಸಿಂಗರಾಯ ಅಪ್ಪನ ಆಶ್ರಯದಲ್ಲಿದ್ದ. ಆದರೆ ಬೋಡಪ್ಪ, ಪಿಲ್ಲಣ್ಣ ಬೆಳೆಯನ್ನೇ ಅವಲಂಬಿಸಿದ್ದರು. ಅವರಿಗೆ ಇಂತಹ ನಷ್ಟ ಭರಿಸಲಾಗದ್ದು. ನರಸಿಂಗರಾಯ ಅಪ್ಪನ ಸೂಚನೆಯಂತೆ ಬಂದಷ್ಟೇ ಹಣದಲ್ಲಿನ ತನ್ನ ಪಾಲನ್ನು ಬಿಟ್ಟುಕೊಟ್ಟ. ಮುಂದಿನದು ಏನೆಂಬ ಪ್ರಶ್ನೆ ಎದ್ದಿತು.
ದುಗ್ಗಪ್ಪ ಸೀಗೆಣಸಿನ ಹಂಬನ್ನು ತರಿಸಿದ್ದ. ತನ್ನ ತೋಟದಲ್ಲಿ ನೆಟ್ಟು ಅರ್ಧದಷ್ಟು ಉಳಿದಿತ್ತು. ಈ ದೋಸ್ತರನ್ನು ಕರೆಸಿ, ಹೂಳುವುದಾದರೆ ನೋಡಿ. ಕಾಸೇನು ಬೇಡವೆಂದ. ಗೆಣಸು ಗಡ್ಡೆ ಕಟ್ಟಿತು. ಕೆಬ್ಬೆ ನೆಲವಾದುದರಿಂದ ಒಳ್ಳೆ ಬಣ್ಣ ಬಂದಿತ್ತು. ಆನ್ನಪ್ಪನ ಸಲಹೆಯಂತೆ ದಿನಕ್ಕಿಷ್ಟಿಷ್ಟರಂತೆ ಅಗೆದು ಮಾಲೂರು-ಕೋಲಾರ ಹೆದ್ದಾರಿ ಪಕ್ಕ ಇಟ್ಟು ಮಾರತೊಡಗಿದರು. ಹದಿನೈದು ದಿನಗಳ ಮಾರಾಟ ಮುಗಿದಾಗ ಖರ್ಚೆಲ್ಲ ಕಳೆದು, ಹದಿನೆಂಟು ಸಾವಿರ ಚಿಲ್ಲರೆ ಪ್ರತಿಯೊಬ್ಬರ ಕೈ ಸೇರಿತು. ದೋಸ್ತರು ದೊಡ್ಡ ಹೂಡಿಕೆಯ ಬೆಳೆಗಳನ್ನು ಕೈ ಬಿಟ್ಟು, ಇಂತಹ ಬೆಳೆಗಳನ್ನು ಬೆಳೆದು ಕೊಂಚ ದುಡ್ಡಿನ ಮುಖ ಕಂಡರು.