ಹೊಲ ತೋಟಗಳಲ್ಲಿ ನೀಲಗಿರಿ ತೋಪುಗಳು ನಕ್ಕವು
ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭೂ ಮಸೂದೆಯಿಂದಾಗಿ, ಜಮೀನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀಲಗಿರಿ ತೋಪುಗಳು ತಲೆ ಎತ್ತಿದವು. ದಿನಗಳೆದಂತೆ ಇದು ಸಾಕ್ರಾಮಿಕಗೊಂಡು ತುಂಡು ನೆಲಗಳಲ್ಲಿಯೂ ನೀಲಗಿರಿ ಸಸಿಗಳು ನಕ್ಕು ನಲಿದವು. ಇದರಿಂದಾಗಿ ಪಕ್ಕದ ಜಮೀನುಗಳಲ್ಲಿ ಇತರೆ ಬೆಳೆಗಳನ್ನು ತೆಗೆಯುವುದು ಕಷ್ಟವಾಗಿ ಅವರೂ ನೀಲಗಿರಿಗೇ ಶರಣಾದರು. ಬೋಡಪ್ಪನ ಹಿಂದೆಯೇ ಪಿಲ್ಲಣ್ಣನೂ ನೀಲಗಿರಿ ನೆಟ್ಟ. ನರಸಿಂಗರಾಯನಿಗೆ ಇದು ಇಷ್ಟವಿಲ್ಲದ್ದಾಗಿತ್ತು. ಅವನು ಹುಣಿಸೆ ಗಿಡಗಳನ್ನು ನೆಡಿಸಿದ. ಎಕರೆಗೆ ಇಪ್ಪತ್ತು ಗಿಡಗಳು ಬಿದ್ದವು. ಅವುಗಳ ನಡುವೆ ಹುರುಳಿ, ಹಾರಕಗಳನ್ನು ಬೆಳೆಯತೊಡಗಿದ. ನಿಧಾನ ಗತಿಯ ಬೆಳವಣಿಗೆಯೇ ಶಾಪವಾಗಿ ಸರ್ವೆ ತೋಪುಗಳಿದ್ದವು.
ನೀಲಗಿರಿಯಲ್ಲಿ ದುಡ್ಡಿನ ಹುಟ್ಟುವಳಿ ಕಾಣತೊಡಗಿತು. ಮರ ಕಡಿಯಲು ಕೂಲಿ, ತೊಗಟೆ ತೆಗೆಯಲು ಕೂಲಿ ಸಿಗುತ್ತಿದ್ದಂತೆ ಕೂಲಿಕಾರು ಅತ್ತಲೇ ನಡೆದರು. ಸವರಿದ ರೆಂಬೆಗಳನ್ನು ಲೋಡು ಮಾಡಿಕೊಂಡ ಲಾರಿ, ಟ್ರಾಕ್ಟರುಗಳು ಇಟ್ಟಿಗೆ ಫ್ಯಾಕ್ಟರಿಗಳತ್ತ ಬುರುಗುಟ್ಟುತ್ತ ಸಾಗಿದವು. ಅದರಲ್ಲಿಯೂ ಝಣಝಣ ಕಾಂಚಾಣ. ನೀಲಗಿರಿ ತಂದ ಕಾಂಚಾಣ ಕುಣಿಯುತ್ತಲಿತ್ತು. ಅದರ ಹೆಜ್ಜೆ ಗತ್ತಿಗೆ ಮರುಳಾದವರ ಕಣ್ಣುಗಳಿಗೆ ಮುಂದೆ ಬರಲಿರುವ ಯಾವ ಆಪತ್ತೂ ಕಂಡುದಿಲ್ಲ. ತರಕಾರಿಗಳಿಗೆ ಖ್ಯಾತವಾಗಿದ್ದ ಮಾಲೂರು ನೀಲಗಿರಿಗೆ ಹೆಸರಾಯಿತು.
ಬೋಡಪ್ಪ, ಪಿಲ್ಲಣ್ಣರ ಒತ್ತಾಯಕ್ಕೆ ಹುಣಸೆಯನ್ನು ತೆಗೆದು ನೀಲಗಿರಿ ನೆಡಲು ನರಸಿಂಗರಾಯ ಮುಂದಾದರೂ ಹುಣಿಸೆಯನ್ನು ತೆಗೆಯುವುದು ಬೇಡವೆಂಬ ಅಪ್ಪಯ್ಯನ ಹಠವನ್ನು ಗೆಲ್ಲಲಾಗದೆ ಸುಮ್ಮನಾದ. ಐದನೇ ವರ್ಷದಲ್ಲಿ ಹುಣಿಸೆ ಹೂ ಮುಡಿಯಿತು. ಮೊದಲ ಫಸಲು ಅಮ್ಮ, ಮನೆಗೆ ಹಾಗೂ ಅವರಿವರಿಗೆ ಕೊಡಲು ಮಾಡುವ ತೊಕ್ಕಿಗೂ ಆಯಿತು. ಮನೆ ಬಳಕೆಗೆ ವರ್ಷಕ್ಕಾಗುವಷ್ಟು ಹಣ್ಣೂ ಸಿಕ್ಕಿತು. ಹೆಚ್ಚಿನದನ್ನು ಚವ್ವೇನಹಳ್ಳಿ ಸಾಬುಸಾಬಿ ಸರಿತೂಕವೆಂದು ಒಂದು ಮಣ ಬೆಲ್ಲ ಕೊಟ್ಟ. ಆ ವರ್ಷ ಬೆಲ್ಲ ಕೊಳ್ಳುವ ಖರ್ಚು ಉಳಿಯಿತು.
ಹುಣಸೆ ಕೆಂಪನ್ನು ಕಳೆದುಕೊಳ್ಳುತ್ತ, ಹಸಿರುಗಟ್ಟುತ್ತಿದ್ದ ಚಿಗುರ ನಡುವೆ ನಗುತ್ತಿದ್ದ ಹೂಗಳನ್ನು ನೋಡಿ ಆನಂದಿಸುತ್ತಿರುವಾಗ ನರಸಿಂಗರಾಯನಿಗೆ ಬೇಂದ್ರೆಯವರ ಪದ್ಯ ನೆನಪಿಗೆ ಬಂದಿತು.
'ಕವಿಮನದ
ಬ್ಯಾಸರಾ
ಹರಿಸಾಕ
ಹಾಡ
ನುಡಿಸಾಕ
ಹೆಚ್ಚಿಗೇನು
ಬೇಕ
ಒಂದು
ಹೂತ
ಹುಣಸೀ
ಮರ
ಸಾಕ.'