ಸುನಂದಾಳಿಗೆ ಪತ್ತಲ ಉಡಿಸಿದ ನರಸಿಂಗರಾಯ
ದನ ಕಾಯುತ್ತ, ಕಾದಂಬರಿ, ನಾಟಕಗಳನ್ನು ಓದುತ್ತ, ಗೆಳೆಯರು ಹೇಳುವ, ಆ ವಯಸ್ಸಿಗೆ ಸಹಜವಾಗಿ ಕುತೂಹಲ, ಬಯಕೆ ಹುಟ್ಟಿಸುವ ಪ್ರಸಂಗಗಳನ್ನು ಕೇಳುತ್ತ ತಾನೂ ಅಂಥ ಅನುಭವಗಳಿಗೆ ತರೆದುಕೊಳ್ಳಬೇಕೆಂದುಕೊಂಡರೂ ತಾನಾಗಿಯೇ ಬಂದ ಹೆಣ್ಣುಗಳಿಗೆ ಸಿಗದೆ ನುಣುಚಿಕೊಳ್ಳುತ್ತ ಬಂದ ನರಸಿಂಗರಾಯ, ತಾನೇಕೆ ಹೀಗೆಂದು ಯೋಚಿಸುತ್ತಿದ್ದ.
'ನಿನಗದಿಲ್ಲವ?' ಎಂದು ಗೌರಿ ಅವಮಾನಿಸಿದ್ದಳು. ಅವಳು ಅಪ್ಪಿಕೊಂಡಾಗ ಮೈಯಲ್ಲಿ ಕಾವೇರಿದ್ದರೂ ಕೆರಳಿರಲಿಲ್ಲ. ಯಾವುದೋ ತಡೆ, ಅರ್ಥವಾಗದ್ದು. ನಿಗ್ರಹವೆ? ಈ ವಯಸ್ಸಿಗೆಂತಹುದು? ಮುನೆಕ್ಕನ ಬೋಧನೆಯ ಪ್ರಭಾವ, ಪರಿಣಾಮವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದ. ದಿನಗಳು ಕಳೆದು ಇಪ್ಪತ್ತೆರಡಕ್ಕೆ ಬಂದಿದ್ದ.
ನರಸಿಂಗರಾಯ ಎಂಎಲ್ ಎ ಜೊತೆ ಇಂಗ್ಲಿಷಲ್ಲಿ ಮಾತಾಡಿದ್ದು...
ನಾಟಕ ಕಲಿಸಲು ಹೋಗುವಾಗ ಹಿಂದಿಟ್ಟುಕೊಂಡು ಹೋಗುತ್ತಿದ್ದ ಅಪ್ಪಯ್ಯ ಹೇಳುತ್ತಿದ್ದ, 'ನರಸಿಂಗ ನಾಟಕ ಕಲಿಸೋಷ್ಟೇ ಮೇಕಪ್ಪು, ದಿರಿಸುಗಳ ಜ್ಞಾನ ಮುಖ್ಯ. ಅದರಿಂದ ಕಲಿಸಿ ಆಡಿಸೋದರ ಅರ್ಧ ಯಶಸ್ಸು ನಿನ್ನ ಕೈಲಿರುತ್ತೆ. ಪ್ರಾಮುಖ್ಯತೇನೂ ನಿನ್ನದಾಗಿರುತ್ತೆ,' ಅದರಂತೆ ತರಪೇತೂ ನೀಡುತ್ತಿದ್ದ. ಅದರಲ್ಲಿ ಮುಖ್ಯಾದುದು ಸ್ತ್ರೀ ಪಾತ್ರಗಳಿಗೆ ಸೀರೆ ಉಡಿಸುವುದು. ಅದರಲ್ಲಿಯೂ ಪತ್ತಲ ಉಡಿಸುವುದು. ಇದನ್ನು ಅಪ್ಪನೂ ಕಲಿತಿದ್ದ. ಕಲಿಸಿದವಳು ಅಮ್ಮನಂತೆ.
ಊರಿನಲ್ಲಿ ಶ್ರೀಕೃಷ್ಣ ತುಲಾಭಾರ ನಾಟಕವಾಡಿಸುವ ವಿಚಾರ ಬಂದಾಗ ನರಸಿಂಗರಾಯನಿಗೆ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶವನ್ನು ತಂದೆ ಕಲ್ಪಿಸಿದ್ದ. ಸತ್ಯಭಾಮೆ ಪಾತ್ರಕ್ಕೆ ಮದನಪಲ್ಲಿಯಿಂದ ವಾರಕ್ಕೊಂದು ದಿನ ಜಮಾಯಿಂಪಿಗೆ (ರಿಹರ್ಸಲ್ ಗೆ) ಬರಬೇಕೆಂಬ ಒಪ್ಪಂದದಲ್ಲಿ ಸುನಂದಳನ್ನು ಬುಕ್ಕು ಮಾಡಿದ್ದರು. ಅವಳ ತೆಲುಗು ಛಾಯೆಯ ಕನ್ನಡ ಉಚ್ಛಾರಣೆಯನ್ನು ಕನ್ನಡವಾಗಿಸಲು ಹೆಣಗಿ ಗೆದ್ದು ಅವಳ ಅಭಿಮಾನವನ್ನು ಗಳಿಸಿದ್ದ. ನಾಟಕದ ದಿನ ಸತ್ಯಭಾಮೆಯ ಪಾತ್ರಕ್ಕೆ ತಕ್ಕಂತೆ ಭಾರಿ ಸೀರೆ ಉಡಿಸಬೇಕಿತ್ತು. ಅವಳಿಗೆ ಅದು ಸಾಧ್ಯವಿರಲಿಲ್ಲ. 'ನರಸಿಂಗ ನೀನೇ ಉಡಿಸು ಅಂದ ಅಪ್ಪ. ನರಸಿಂಗರಾಯ ತಲೆತಗ್ಗಿಸಿ ನಿಂತ. 'ನೀನು ನಾಲಾಯಕ್ ಆಗ್ತಿ ಹೋಗು' ಎಂದು ಗದರಿಸಿಕೊಂಡ.
ಹೊಲ ತೋಟಗಳಲ್ಲಿ ನೀಲಗಿರಿ ತೋಪುಗಳು ನಕ್ಕವು
ಸುನಂದಳ ಮೇಕಪ್ಪು ನರಸಿಂಗರಾಯನ ಮನೆಯಲ್ಲೇ. ಅಮ್ಮನೂ ಅಪ್ಪನೊಂದಿಗೆ ರಂಗದ ಬಳಿಯೇ ಇದ್ದಳು. ಸುನಂದ ಪತ್ತಲವನ್ನು ಅವನ ಕೈಲಿತ್ತು ನಿಂತಳು. ನರಸಿಂಗರಾಯ ಉಡಿಸಲು ಶುರು ಮಾಡಿದ. ನೆರಿಗೆ ಹಿಡಿದು ಸೊಂಟಕ್ಕೆ ಸಿಕ್ಕಿಸುವಾಗ ಮೈ ನುಲಿದಳು. ಬಿಸಿಯುಸಿರು ಬಿಟ್ಟಳು. ಅಲ್ಲಿಯೇ ಅವನ ಕೈ ಇರುವಂತೆ ಹಿಡಿದುಕೊಂಡಳು. ನರಸಿಂಗರಾಯನಿಗೆ ಅದಾವುದೂ ಗಮನವಿಲ್ಲ.
ಕಣ್ಣ ತುಂಬ ಸೀರೆ. ಮನಸ್ಸಿನಲ್ಲಿ ದೇವಿ ಸತ್ಯಭಾಮೆ. ಅವನು ಸೆರಗು ಸರಿಪಡಿಸುವಾಗಲಂತೂ ಸುಸ್ತಾದವಳಂತೆ ಕುಸಿದಳು. ನರಸಿಂಗ ನೀರು ಕುಡಿಸಿದ. ರೆಟ್ಟೆ ಹಿಡಿದೆತ್ತಿ ನಿಲ್ಲಿಸಿ ಅಚ್ಚುಕಟ್ಟಾಗಿ ಸೀರೆ ಉಡಿಸಿದ. ದೂರ ಸರಿದು ದೃಷ್ಟಿಸಿದ. ಮನಸ್ಸಿಗೆ ಎಲ್ಲಾ ಸರಿಯಿದೆ ಎನಿಸಿತು. ಮುಖದ ಮೇಕಪ್ಪು ಅಲ್ಲಿಯೋ ಇಲ್ಲಿಯೋ ಎಂದ. ಇಲ್ಲೆ ಅಂದಳು ಅಮಲಿನ ಧ್ವನಿಯಲ್ಲಿ. ಮುಖಕ್ಕೆ ಬಣ್ಣ ಬಳಿಯಲು ಬಾಗಿದಾಗ ಅಪ್ಪಿಕೊಂಡು ನರಸಿಂಗ, ನರಸಿಂಗ ಎಂದು ಕನವರಿಸಿದಳು.
ನರಸಿಂಗರಾಯನೂ, ದೋಸ್ತರೂ ಇಂಗ್ಲಿಷ್ ಪಿಚ್ಚರ್ ಗೆ ಹೋಗಿದ್ದು
ನರಸಿಂಗ ಅವಳನು ಕೂರಿಸಿ ನಕ್ಕ. ಬೊಗಸೆಯಲ್ಲಿ ಅವಳ ದುಂಡು ಮುಖವನ್ನು ತುಂಬಿಕೊಂಡು, 'ಸತ್ಯಭಾಮಾದೇವಿ ಮುಖದಲ್ಲಿ ಅರಳಲಿ ಶ್ರೀಮಂತಿಕೆಯ ಬಿಗುಮಾನದ ನಗೆ' ಇಲ್ಲೀವರೆಗೆ ಯಾರಲ್ಲೂ ಕಂಡುದಿಲ್ಲ ಈ ಅಹಂಕಾರ. ಗೆದ್ದೆ ನೀನು ಎಂದ, 'ಪಾತ್ರಗೆಲ್ಲಲಿ ಎಂದು ಹರಸು' ಅಂದವಳು ಅವನ ಕಾಲಿಗೆರಗಿದಳು.