ಸ.ರಘುನಾಥ್ ಅಂಕಣ: ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ವಿದ್ಯಾರ್ಥಿಗಳ ಪಾಠಕ್ಕೆ ನಾಲ್ಕು ದಿನ, ದಿನಕ್ಕೆ ಎರಡು ಗಂಟೆ, ಹೆಂಗಸರ ಕಲಿಕೆಗೆ ಮೂರುದಿನ, ದಿನಕ್ಕೆ ಒಂದು ಗಂಟೆ, ಸಂಗೀತಕ್ಕೆ ಎರಡು ದಿನ, ದಿನಕ್ಕೆ ಒಂದು ಗಂಟೆ, ತಮಟೆ ಕಲಿಕೆಗೆ ಎರಡು ದಿನ, ದಿನಕ್ಕೆ ಒಂದು ಗಂಟೆ, ಕುಸ್ತಿಗೆ ಮೂರು ದಿನ, ಪ್ರತಿದಿನ ಮುಂಜಾನೆ ಒಂದು ಗಂಟೆ ಎಂದು ವೇಳಾಪಟ್ಟಿ ಸಿದ್ಧವಾಯಿತು. ಒಬ್ಬರೇ ಎರಡು ಮೂರು ವಿಭಾಗದಲ್ಲಿದ್ದರೆ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಯಿತು.
ಕುಸ್ತಿ ಕಲಿಯುವವರಿಗೆ ಹೊಟ್ಟೆಗೆ ಏನಾದರು ಕೊಡಬೇಕೆಂದ ಸಿದ್ಧಪ್ಪ. ಹತ್ತು ಜನಕ್ಕೆ ಲೋಟವೊಂದರಂತೆ ರಾಗಿಗಂಜಿ ಕೊಡಲು ಮುನೆಕ್ಕ ಒಪ್ಪಿದಳು. ಅಂದುಕೊಂಡಂತೆ ಕೆಲಸಗಳು ಆರಂಭವಾದವು. ಆದರೆ ನಿರ್ವಹಣೆಗೆ ಕೂಡಿಸಿದ್ದು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದಂತಾಯಿತು. ಕೊಡುತ್ತಾರೆಂದು ಊರಿನವರ ಮೇಲೆ ಎಷ್ಟು ಎಂದು ಬೀಳುವುದು ಅನಿಸಿತು ನರಸಿಂಗರಾಯನಿಗೆ. ಕಷ್ಟವೆಂದು ಯಾವುದನ್ನೂ ನಿಲ್ಲಿಸುವಂತಿಲ್ಲ. ಒಂದು ನಿಂತರೆ ಒಂದೊಂದಾಗಿ ಎಲ್ಲವೂ ನಿಲ್ಲಬಹುದು. ಒಂದಕೊಂದು ಸರಪಣಿಯಾಗಿ ಸುತ್ತಿಕೊಳ್ಳತೊಡಗಿತು.
ಸ.ರಘುನಾಥ್ ಅಂಕಣ: ನಾಟಕದ ಯಶಸ್ಸಿನ ಕಿರೀಟ ಊರಿನದೆಂದ ನರಸಿಂಗರಾಯ
ಕೆರೆಯಲ್ಲಿ ನೀರಿದೆ, ಮಳೆಯಾಗುತ್ತಿದ್ದು ಹೊಲಗದ್ದೆಗಳಲ್ಲಿ ಬೆಳೆಯಿದೆ. ಅವು ಕೈಗೆ ಬಂದಾಗ ಕೈ ಚಾಚಿದರೆ ಬೊಗಸೆಗೊಂದಿಷ್ಟು ಬೀಳುವುದು. ಆದರೆ ಆವರೆಗೆ ಸುಮ್ಮನಿರಲಾಗದು. ಚಿಂತಿಸಿದ, ಚರ್ಚಿಸಿದ ನರಸಿಂಗರಾಯ. ಜೊತೆಗಿದ್ದವರೆಲ್ಲ ದಾಸಯ್ಯರೇ. ಅಪ್ಪಿದರೆ ಉದುರುವುದು ಬೂದಿಯಷ್ಟೆ.
ಕುಳಿತರು, ಕುಳಿತು ಕುಳಿತು ಚರ್ಚಿಸಿದರು. ನಿಂತು ಮಾತಾಡಿದರು. ಚರ್ಚೆ, ಮಾತು, ಚಿಂತನೆ ಹಣದ ಮಾರ್ಗ ತೋರಿಸಲಿಲ್ಲ. ಮಾತಾಡದೆ ತನ್ನ ಬೆರಳಿನ ಉಂಗುರವನ್ನು ತೆಗೆದು ನರಸಿಂಗರಾಯನ ಮುಂದೆ ಇರಿಸಿದ ಕುಳ್ಳಪ್ಪ, ಒಂದು ಕ್ಷಣದ ಆಘಾತ ಕೊಟ್ಟ. ಇದಿಷ್ಟೆ ನನ್ನಿಂದಾಗೋದು ಅಂದು ಗೆಳೆಯರ ಕೊರಳಿಗೆ ಧ್ವನಿ ನೀಡಿದ.
ಯಾವುದಕ್ಕೂ ಮುಂದೆ ಬರುವ ಸ್ವಾತಂತ್ರ್ಯವಿದ್ದವರು ಪಿಲ್ಲಣ್ಣ ಮತ್ತು ಬೋಡೆಪ್ಪ ಮಾತ್ರ. ನರಸಿಂಗರಾಯನಿಗೆ ಸ್ವತಂತ್ರವಿತ್ತಾದರೂ ಅದನ್ನು ಮನೆಮಂದಿ ಕಿವಿಗೆ ಹಾಕದೆ ಬಳಸುತ್ತಿರಲಿಲ್ಲ. ಇದು ಅವರಿಗೆಲ್ಲ ತಿಳಿದಿತ್ತು. ರಂಗ ನಾಲ್ಕು ಬೆಳೆ ರೇಷ್ಮೆಗೂಡು ಮಾರಿ, ಮನೆಯಲ್ಲಿ ತಿಳಿಸದೆ ಉಳಿಸಿಕೊಂಡಿದ್ದ ಐದುಸಾವಿರದಲ್ಲಿ ಮೂರುಸಾವಿರವನ್ನು ಉಂಗುರದ ಕೆಳಗಿಟ್ಟ. ಕೆಂಪರಾಜನೂ ಹೀಗೆಯೇ ಉಳಿಸಿಕೊಂಡಿದ್ದು ಮೂರುಸಾವಿರ ಕೊಡಲು ಮುಂದಾದ. ಈಗ ಅವನು ಕೊಡುವುದು ಬೇಡವೆಂದ ನರಸಿಂಗರಾಯನ ಮನಸ್ಸಿನಲ್ಲಿದ್ದುದೇನೆಂದು ಬಹಿರಂಗಗೊಳ್ಳಲಿಲ್ಲ.
ಪಿಲ್ಲಣ್ಣ, ಬೋಡೆಪ್ಪ ಎರಡು ನಿಮಿಷದ ಮಟ್ಟಿಗೆ ಹತ್ತು ಹೆಜ್ಜೆ ದೂರಹೋಗಿ ಬಂದರು. ಅವರ ಲೆಕ್ಕಾಚಾರವೇನೆಂದು ತಿಳಿಯಲಿಲ್ಲ. ಏನಪ್ಪ ನಿಮ್ಮದು ಎಂದು ಕುಳ್ಳಪ್ಪ ಕೇಳಿದ. ಅಂಥದೇನಿಲ್ಲ. ಟಮೋಟೋ ಕಡ್ಡಿಗಳಿಗಾಗಿ ನಮ್ಮ ನೀಲಗಿರಿ ತೋಪುಗಳನ್ನ ಕೇಳಿಕೊಂಡು ಬಂದಿದ್ದರು. ಬೆಲೆ ಕುದುರೋದು ನೋಡಿ ಎಷ್ಟು ಕೊಡಬೋದು ಅಂತ ತೀರ್ಮಾನಿಸೋಣ ಅಂದುಕೊಂಡು ಬಂದುವಿ ಎಂದ ಪಿಲ್ಲಣ್ಣ. ಆ ಮಾತು ಹೇಳುತ್ತಿರುವಾಗಲೆ ತೋಪು ಕೇಳಿದ್ದವರು ಅವರನ್ನು ಹುಡುಕಿಕೊಂಡು ಅಲ್ಲಿಗೇ ಬಂದರು.
ವ್ಯವಹಾರ ಕುದುರಿ ಎರಡೂ ತೋಪಿನ ಕಡ್ಡಿಗಳಿಗೆ ತಲಾ ಇಪ್ಪತ್ತೈದು ಸಾವಿರದಂತೆ ಫೈಸಲಾಯಿತು. ಇವರ ಉದ್ದೇಶ ತಿಳಿದ ಆ ಇಬ್ಬರು ವ್ಯಾಪಾರದಾರರು ಒಂದೊಂದು ಸಾವಿರ ರೂಪಾಯಿಗಳನ್ನು ಅಲ್ಲಿಯೇ ಕೊಟ್ಟರು. ಮುಂದಿನ ವಾರ ತೋಪು ಕಡಿಯಲು ಬಂದಾಗ ಒಂದೇ ಸಲ ಹಣ ಕೊಡುವುದಾಗಿ ಹೇಳಿ ಹೋದರು.
ಇಪ್ಪತ್ತು ಸಾವಿರದ ಅಂದಾಜಿನಲ್ಲಿದ್ದವರು ಇಪ್ಪತೈದು ಸಾವಿರಕ್ಕೆ ವ್ಯವಹಾರ ಕುದುರಿದ್ದರಿಂದ ಮೇಲಿನ ಐದೈದು ಸಾವಿರವನ್ನು ಕೊಡುವುದಾಗಿ ಹೇಳಿದರು. ಆಗ ತನ್ನದೂ ಅಷ್ಟೇ ತೊಪಿರುವುದು ನೆನಪಾಗಿ ಕುಳ್ಳಪ್ಪ, ಹೋಗುತ್ತಿದ್ದವರನ್ನು ಕರೆದು, ತನ್ನ ತೋಪೂ ಬೇಕಿದ್ದರೆ ಹೇಳಿ ಅಂದ. ನಮಗೆ ಅಲೆದಾಟ ತಪ್ಪಿತು ಎಂದ ಅವರು ಅಷ್ಟೇ ಬೆಲೆ ನಿಗದಿಪಡಿಸಿಕೊಂಡು ಹೋದರು. ಕುಳ್ಳಪ್ಪ ತನ್ನದೂ ಐದುಸಾವಿರವೆನ್ನುತ್ತ ಉಂಗುರವನ್ನು ಬೆರಳಿಗೇರಿಸಿದ.