ಸ. ರಘುನಾಥ ಅಂಕಣ: ವಾಚುಗಳ ಸರದಾರ ಸಾಬೂಸಾಬಿ
ನಮ್ಮೂರು ಮಲಿಯಪ್ಪನಹಳ್ಳಿಯ ತೆಂಕಣ ದಿಕ್ಕಿನ ಚೆನ್ನಪ್ಪನಕೆರೆ ಕಟ್ಟೆ ದಾಟಿ ಕೊಂಚದೂರ ನಡೆದರೆ ಚವ್ವೇನಹಳ್ಳಿ. ನಾನು ಹುಡುಗನಾಗಿದ್ದ ಕಾಲಕ್ಕೆ ಹೆಚ್ಚೆಂದರೆ 40 ಮನೆಗಳಿದ್ದಾವು. ಇಂದು ಒಂದು ಹತ್ತಿಪ್ಪತ್ತು ಹೆಚ್ಚಿದ್ದಾವು. ಅಲ್ಲಿ ನಂಜಾರೆಡ್ಡಿ ಎಂಬುವವರ ಮನೆಯೊಂದನ್ನು ಬಿಟ್ಟರೆ ಇದ್ದವುಗಳೆಲ್ಲ ಮುಸ್ಲಿಮರವು. ತೌಡು, ಹುಣಿಸೇಬೀಜ, ಕೋಳಿಮೊಟ್ಟೆ, ಹೊಂಗೆಬೀಜ ಇಂಥವನ್ನು ಕೊಳ್ಳುವ ಹಾಗೂ ಆಪ್ಯಾಯತೆಯ ಸಂಬಂಧ ಎರಡೂರಿನ ನಡುವೆ ಇತ್ತು.
ಬಾಬಯ್ಯನ ಹಬ್ಬದ (ಮೊಹರಂ) ಆಚರಣೆಯದು ಇದರೊಂದಿಗೆ ಇದ್ದ ಇನ್ನೊಂದು ಸಂಬಂಧ. ಜೊತೆಗೂಡಿಸುವುದಾದರೆ ಬಹದ್ದೂರ್ ಖಾನ್, ಮುತ್ತು ಇನ್ನೊಂದಿಬ್ಬರು ಗೆಳೆಯರಾಗಿ ನಮ್ಮೊಂದಿಗೆ ಮಾಲೂರಿನ ಮುನಿಸಿಪಲ್ ಹೈಯರ್ ಸೆಕೆಂಡರಿ ಸ್ಕೂಲಿಗೆ ಬರುತ್ತಿದ್ದುದು.
ಚವ್ವೇನಹಳ್ಳಿಯ ಬಹುತೇಕರು ಜಿರಾಯ್ತಿದಾರರಾಗಿದ್ದರು. ಕೆಲವರು ದೊಡ್ಡಕಡತೂರು ಗುಡ್ಡದಿಂದ ಸೈಜುಕಲ್ಲುಗಳನ್ನು ಮಾಲೂರಿಗೆ ಎತ್ತನಗಾಡಿಗಳಲ್ಲಿ ಬಾಡಿಗೆ ಮೇಲೆ ಸಾಗಿಸುತ್ತಿದ್ದರು. ಶಾಲೆಯಿಂದ ಹಿಂದಿರುಗುವಾಗ ಒಂದೊಂದು ದಿನ ಈ ಬಂಡಿಗಳು ನಮಗೆ ನಡೆಯುವ ಕಷ್ಟವನ್ನು ತಪ್ಪಿಸುತ್ತಿದ್ದವು. ಇದೂ ಒಂದು ನಂಟೇ ಎನ್ನಬಹುದು.
ಈ ಎರಡು ಊರುಗಳ ಜೊತೆಗೆ ಅಬ್ಬೇನಹಳ್ಳಿಯೂ ಸೇರಿ '.....ಗೆ ಅಬ್ಬೇನಳ್ಳಿ, ಮೂದಲಕ ಮಲ್ಪನಳ್ಳಿ, ಕುಂತು ಮಾತಾಡೋಕ ಚವ್ವೇನಳ್ಳಿ' ಎಂಬ ಮಾತು ಗಾದೆಯಂತೆ ಜನರ ಬಾಯಲ್ಲಿ ಆಡುತ್ತಿತ್ತು. ಮರೆತು ಹೋಗಿದ್ದ ಇದು ಈ ಲೇಖನ ಬರೆಯುತ್ತಿರುವಾಗ ನೆನಪಾಯಿತು. ಕೂತು ಮಾತಾಡುತ್ತಿದ್ದ ಚವ್ವೇನಹಳ್ಳಿಯವರಲ್ಲಿ ಸಾಬೂಸಾಬಿಯೂ ಒಬ್ಬ.
ಇವನಿಗೆ ಬೇಸಾಯದ ಜಮೀನು ಇತ್ತೆ ಎಂಬುದು ನೆನಪಿಲ್ಲ. ಆದರೆ ಕೊಂಚ ಅನುಕೂಲಸ್ಥನೆಂಬುದು ನಿಜ. ಇದಕ್ಕೆ ಕಾರಣ ಬಾಂಬೆಯಲ್ಲಿದ್ದ ಆತನ ಮಗಳಂತೆ. ಆಕೆ ಹಣ ಕಳುಹಿಸುತ್ತಿದ್ದರಂತೆ. ಊರಿಗೆ ಬರುವಾಗ ಕೈ ಗಡಿಯಾರಗಳನ್ನು ತಂದುಕೊಡುತತಿದ್ದರಂತೆ. ಅವನ್ನು ಈತ ಮಾರಾಟ ಮಾಡುತ್ತಿದ್ದನಂತೆ.
ಮಗಳು ಬಂದು ಹೋದ ನಂತರ ಸಾಬೂಸಾಬಿಯ ಎರಡೂ ಕೈಗಳಲ್ಲಿ ಹೆಂಗಸರ ಕೈಯ ಬಳೆಗಳಂತೆ ಮೂರು ಮೂರು ವಾಚುಗಳು ಇರುತ್ತಿದ್ದವು. ಅವುಗಳ ನಡುವೆ ಅವನದೇ ಆಗಿ ಇರುತ್ತಿದ್ದುದು ಟೈಟಾನ್ ವಾಚು. ಆ ಪಾಸಲೆಯ ಹಳ್ಳಿಗಳಲ್ಲಿ ಈ ಗಡಿಯಾರವನ್ನು ಕಟ್ಟಿಕೊಂಡ ಮುದಲಿಗ ಈ ಸಾಬಣ್ಣನೇ.
ಹಿರಿಯರು ಟೈಂ ಕೇಳಿದರೆ ಮರ್ಯಾದೆಯಿಂದ ಹೇಳುತ್ತಿದ್ದ ಸಾಬೂಸಾಬಿ, ಹುಡುಗರು ಕೇಳಿದರೆ, 'ನಂಕ ಟೈಂ ಹೇಲಾ(ಳಾ)ಕೇನು ನಾನು ವಾಚು ಕಟ್ಟಿರೋದು, ಹೋಗೊಲೇ ಬೋಸುಡಿಕೆ' ಎಂದು ಸಿಡುಕುತ್ತಿದ್ದ. ನಾವು ಅವನಿಗೆ 'ಬೋಸುಡಿಕೆ ಸಾಬಿ' ಎಂಬ ಹೆಸರಿಟ್ಟಿದ್ದೆವು. ಅದು ಅವನಿಗೂ ತಿಳಿದು ಹೋಗಿತ್ತು. ಆದರೆ ಅವನ ಎದುರಿಗೆ ಹೇಳುವ ಧೈರ್ಯ ನಮ್ಮಲ್ಲಿ ಆಗ ಯಾರಿಗೂ ಇರಲಿಲ್ಲ. ಹಾಗಾಗಿ ಅವನೂ ಅಸಹಾಯಕನಾಗಿ, ನಾವು ಕಂಡರೆ ಹಲ್ಲು ಕಡಿಯುವುದರಲ್ಲಿ ಸಮಾಧಾನ ಪಡೆಯುತ್ತಿದ್ದ.
ನಮ್ಮ ಊರಿನಲ್ಲಿ ಅವನನ್ನು 'ಸಾಬೂಸಾಬಿಯವರೇ' ಎಂದು ಕರೆಯುತ್ತಿದ್ದುದು ಹಳೇ ಶಾನುಬೋಗರ ವೆಂಕಟಲಕ್ಷ್ಮನವರು ಮಾತ್ರ. ಆಕೆಯೆಂದರೆ ಅವನಿಗೆ ಗೌರವ. ಅವನನ್ನು 'ವಾಚುಗಳ ಸರದಾರ' ಎಂದು ಮೊದಲು ಕರೆದದ್ದು ಆಕೆಯೇ. ಇದರಿಂದ ಅವನಲ್ಲಿ ಆಕೆಯ ಮೇಲಿನ ಗೌರವ ಇಮ್ಮಡಿಸಿತ್ತು. ತನಗೆ ಕಷ್ಟಬಂದಾಗ ಅವನಿಂದ ನೆರವು ಸಿಗುತಿದ್ದುದು ಆಕೆಯ ಲಾಭ.
ಇದ್ದಕ್ಕಿದಂತೆ ಸಾಬೂಸಾಬಿ ಕಾಣೆಯಾದ. ಎಲ್ಲಿಗೆ ಹೊದ, ಯಾಕೆ ಹೋದ, ಏನಾದ ಎಂದು ಅವನ ಹೆಂಡತಿ ಸಹಿತ ಯಾರಿಗೂ ತಿಳಿಯಲಿಲ್ಲ. ಆರು ತಿಂಗಳ ನಂತರ ಕಾಣಿಸಿಕೊಂಡಾಗ, ಕೈಯಲ್ಲಿ ಒಂದೂ ಗಡಿಯಾರವಿರಲಿಲ್ಲ. ಆಳು ತುಂಬವೇ ಮೆತ್ತಗಾಗಿದ್ದ. ಹಲವು ಪುಕಾರುಗಳಂತೂ ಕೇಳಿ ಬಂದವು. ಯಾವುದೋ ಕೇಸಿನಲ್ಲಿ ಜೈಲಿನಲ್ಲಿ ಇದ್ದನಂತೆ, ಬೊಂಬಾಯಿಗೆ ಹೋಗಿದ್ದನಂತೆ.....