ಸ.ರಘುನಾಥ ಅಂಕಣ: ಒಗ್ಗಟ್ಟಿನ ಹೊಸ ಹೆಜ್ಜೆ
ಕುಳ್ಳಪ್ಪ ನರಸಿಂಗರಾಯನ ಗುಂಪಿಗೆ ಸೇರಿದ್ದೊಂದು ಹೊಸ ಸುದ್ದಿಯಾಗಿ ಊರಿನ ಮಾತಾಯಿತು. ಇದರಿಂದ ಹೆಚು ಸಂತೋಷಪಟ್ಟವರಲ್ಲಿ ಮುನೆಕ್ಕ ಮೊದಲನೆಯವಳು. ಸುನಂದಳ ಮೇಲಿದ್ದ ನಿನ್ನ ದೃಷ್ಟಿಯನ್ನು ತೆಗೆದುಕೊಂಡುಬಿಟ್ಟೆ ಮಹಾತ್ಮ (ಶನಿ) ಎಂದು, ಆ ದೇವರ ಹೆಸರಿನಲ್ಲಿ ಕರಿ ಎಳ್ಳು ದೀಪ ಹಚ್ಚಿದಳು. ಸುನಂದ ನಿರಾಳವಾಗಿ ಉಸಿರಾಡಿದಳು. ಅಮ್ಮಯ್ಯ ನಿಡಿದಾಗಿ ನಿಟ್ಟುಸಿರಿಟ್ಟಳು.
ಮೋಟಪ್ಪನಿಂದ ಈ ವಾರ್ತೆ ಕೇಳಿದ ದುಗ್ಗಪ್ಪ, ಬೀರಣ್ಣ, ಮುನೆಂಕಟೇಗೌಡ, ಮುನಿಕೃಷ್ಣಪ್ಪ ಊರು ಒಂದಾಗೋ ಲಕ್ಷಣ ಇದು ಎಂದರು. ಅಪ್ಪಯ್ಯ ಮುಗುಳು ನಕ್ಕ.
ಸ.ರಘುನಾಥ್ ಅಂಕಣ: ನಾಟಕದ ಯಶಸ್ಸಿನ ಕಿರೀಟ ಊರಿನದೆಂದ ನರಸಿಂಗರಾಯ
ಕುಳ್ಳಪ್ಪನಲ್ಲಾದ ಈ ಬದಲಾವಣೆಯನ್ನು ನಿರೀಕ್ಷಿಸದಿದ್ದ ಕಂಟಕರ ಬಾಲಗಳು ಸದ್ದಿಲ್ಲದೆ ಮುದುಡಿಕೊಂಡವು. ಎರಡು ದಿನದಲ್ಲಿ ಊರಿಗೇ ಅವನು ಒಳ್ಳೆಯವನು ಅನಿಸಿಕೊಂಡನೆಂದರೆ ನಮ್ಮ ಆಟಗಳನ್ನು ಬಿಟ್ಟು, ನಾಲ್ಕು ಜನರಿಂದ ಬಾ, ಕುಳಿತುಕೊ ಅನ್ನಿಸಿಕೊಳ್ಳಬೇಕೆಂದು ಒಬ್ಬೊಬ್ಬರಾಗಿ ಇವರ ಜೊತೆ ಸೇರತೊಡಗಿದರು.
ಇಲ್ಲಿ ಈ ರೀತಿಯ ಬದಲಾವಣೆಯನ್ನು ತಿಳಿಯದ ಸುದರ್ಶನರೆಡ್ಡಿ, ಗದ್ದೆಗೆ ಸೊಪ್ಪಿಗೆಂದು ಬಿದಿರಳ್ಳಕ್ಕೆ ಹೋಗಿದ್ದ ಕೆಂಪರಾಜ ಹಾಗು ಕುಳ್ಳಪ್ಪನನ್ನು ಕಂಡು ಸುನಂದಳ ಅಪಹರಣದ ಹೊಸ ಯೋಜನೆಯನ್ನು ಬಿಡಿಸಿದ. ಆಗ ನಿನ್ನ ಮಾತಿಗೆ ಬಿದ್ದಿವಿ. ಬಂಗಾರದಂಥ ಸುನಂದಮ್ಮನ ಬದುಕಲ್ಲಿ ಕೆಟ್ಟ ಆಟ ಆಡಬೇಕು ಅಂತಿದ್ದೀಯ. ಈಗ ಅದೆಲ್ಲ ನಡೆಯೊಲ್ಲ.
ಬುದ್ಧಿ ಇದ್ರೆ ಮುಚ್ಕೊಂಡು ನಡಿ ಅಂದು ಕುಳ್ಳಪ್ಪ ಅವನ ಮುಖಕ್ಕೇ ಹೇಳಿದ. ಕುಂಟಿಕೊಂಡು ಬಂದ್ದೀಯ. ತೆವಳಿಕೊಂಡು ಹೋಗಿ, ಯಾವುದಾದರು ದೇವಸ್ಥಾನದ ಮುಂದೆ ಭಿಕ್ಷೆ ಎತ್ತೋದು ನಿನ್ನ ಹಣೇಲಿ ಬರೆದಿದ್ದರೆ ಇಲ್ಲೇ ಇರು.
ಒಂದು ಕೂಗು, ಒಂದು ಶಿಳ್ಳೆ ಸಾಕು ಸುತ್ತ ಇರೋರೆಲ್ಲ ಬರೋಕೆ ಅನ್ನುತ್ತಿರುವಾಗಲೆ, ಹೇಳಿಕಳುಹಿಸಿದಂತೆ ಬೋಡೆಪ್ಪ ಅಲ್ಲಿಗೆ ಬಂದ. ಈ ಕೂಟವನ್ನು ಕಂಡು ಅನುಮಾನಿಸುತ್ತಿರುವಾಗಲೇ, ಅವರು ಮೂರು ಜನ, ತಾನೊಬ್ಬ ಎಂದು ಅಳುಕುತ್ತಿರುವಾಗಲೇ ಕೆಂಪರಾಜ ಸುದರ್ಶನರೆಡ್ಡಿಯ ಸಂಚನ್ನು ತಿಳಿಸಿದ.
ಬೋಡೆಪ್ಪನ ಕಟಕಟ ಹಲ್ಲು ಕಡಿತದ ಧ್ವನಿಗೆ ಸುದರ್ಶನರೆಡ್ಡಿ ಕುಳಿತಿದ್ದ ಜಾಗದ ಮರಳು ಒದ್ದೆಯಾಯಿತು. ಕೆಂಪರಾಜನ ಮಾತು ನಿಜವಾಗುವುದೇನೊ ಎಂದು ದಿಗಿಲುಗೊಂಡ. ಅವನ ಸ್ಥಿತಿ ಕಂಡು ಆ ಮುವ್ವರಿಗೆ ನಗೆ ತಡೆಯಲಾಗಲಿಲ್ಲ. ಅವರ ನಗು ನಿಲ್ಲುವಷ್ಟರಲ್ಲಿ ಸುದರ್ಶನರೆಡ್ಡಿ ಅಲ್ಲಿರಲಿಲ್ಲ.
ಈ ಘಟನೆ ಒಂದು ಕಥಾ ಪ್ರಸಂಗವಾಗಿ ಊರಿನಲ್ಲಿ ಹರಿದಾಟಿತು. ನಾನಾಗಿದ್ದರೆ ಏಳೆದುಕೊಂಡು ಬಂದು, ತಲೆ ಬೋಡಿಸಿ, ಊರುತುಂಬ ಮೆರವಣಿಗೆ ಮಾಡುತ್ತಿದ್ದೆ ಎಂದು ಪಿಲ್ಲಣ್ಣ ಗುಡುಗುತ್ತಿದ್ದಾಗ, ಒಂದೇ ಮಾತಿನ ಇಪ್ಪತ್ತೆರಡು ಜನರ ಮಾನವಶಕ್ತಿ ಊರಿಗಾಗಿ ಬಳಕೆಯಾಗುವುದು ಹೇಗೆಂದು ನರಸಿಂಗರಾಯ ಯೋಚಿಸುತ್ತಿದ್ದ.
ನರಸಿಂಗರಾಯ ಊರಿನಲ್ಲಿ ಮಾಡಬಹುದಾದ ಕೆಲಸಗಳನ್ನು ಗುರುತಿಸಿ ಪಟ್ಟಿ ಮಾಡಿದ. ಮೊದಲಿಗೆ ಊರಿಗೆ ಸೇರಿದ ಎರಡು ಕುಂಟೆಗಳನ್ನು ಪುನಶ್ಛೇತನಗೊಳಿಸುವುದು. ಅದಾಗಲು ಗೋಪಾಲಸ್ವಾಮಿ ಗುಡಿಯನ್ನು ಶನಿವಾರದ ಭಜನೆಗಾಗಿ ಬಳಸುವುದು. ಸಿದ್ಧೇದೇವರ ಗುಡಿ ಪಕ್ಕದ ಮೈದಾನವನ್ನು ಕುಸ್ತಿ ಕಣವಾಗಿ ಮಾಡಿಕೊಂಡು ಅಲ್ಲೊಂದು ಗುಡಿಸಲು ಹಾಕುವುದು. ಇದು ಯಶಸ್ವಿಯಾದರೆ ಊರಿನಲ್ಲಿ ನೀರುಗಂಟಿ ಪದ್ಧತಿಗೆ ಮುರುಹುಟ್ಟು ಕೊಡುವುದು. ಸಾಮೂಹಿಕ ವ್ಯವಸಾಯದ ಸಾಧ್ಯತೆಯನ್ನು ಪರಿಶೀಲಿಸುವುದು. ಶಾಲಾ ಮಕ್ಕಳಿಗೆ ಪಾಠ ಹೇಳುವುದು. ಬಡಮಕ್ಕಳ ಉನ್ನತ ಶಿಕ್ಷಣಕ್ಕೆ ರೈತ ಮಕ್ಕಳ ಶೀಕ್ಷಣ ನಿಧಿ ಸ್ಥಾಪಿಸುವುದು.
ಮೊದಲಿಗೆ ಮನೆಯವರೊಂದಿಗೆ ಚರ್ಚಿಸಿದ. ಸಾಧ್ಯವೆ ಎಂದರು ಸುನಂದ, ಮುನೆಕ್ಕ, ಅಮ್ಮಯ್ಯ. ಆಗದೇನೋ ಅಂದುಕೊಂಡೇ ಮುಂದುವರೆಯಬಹುದು. ಆಗ ಸೋತರೂ ನಿರಾಸೆಯಾಗದು ಎಂದ ಅಪ್ಪಯ್ಯ. ಎರಡನೆಯ ಹಂತವಾಗಿ ಹಿರಿಯರೊಂದಿಗೆ ಚರ್ಚಿಸಿದ. ಭರಣಿ ಮಳೆ ಆದರೆ ಒಂದೆಕರೆಗೆ ಎಳ್ಳು ಚೆಲ್ಲಬೇಕು ಅಂತಿದ್ದೀನಿ ಅದು ಕೈಗೆ ಬಂದರೆ ಒಂದು ಮೂಟೆ ಮಾರಿದ ದುದ್ದು ನಿಮ್ಮ ಕೆಲಸಕ್ಕೆ ಎಂದ ದುಗ್ಗಪ್ಪ.
ಸೋಮೇಶನ ಹೆಸರಲ್ಲಿ ಮಕ್ಕಳ ಓದಿಗೆ ನನ್ನ ಕಡೆಯಿಂದ ಕೋಸು ಮಾರಿದ್ದರಲ್ಲಿ ಅರ್ಧಪಾಲು ಎಂದ ಬೀರಣ್ಣ. ನಾನು ದುಡ್ಡು ಕೊಡಲಾರೆ. ಆದರೆ ಒಂದು ಮೂಟೆ ರಾಗಿ ನನ್ನದಿರಲಿ ಎಂದ ಮುನೆಂಕಟೇಗೌಡ. ನನ್ನದೊಂದು ಟಗರು ಎಂದ ಮುನಿಕೃಷ್ಣಪ್ಪ. ಇದರಿಂದ ನರಸಿಂಗರಾಯ ಪ್ರೇರಿತನಾದ.
ಮೂರನೆಯ ಹಂತದಲ್ಲಿ ವಿಷಯ ಗೆಳೆಯರ ನಡುವೆ ಚರ್ಚೆಗೆ ಬಂದಿತು. ಎಲ್ಲ ಸರಿ, ಆದರೆ ಗರಡಿ ಮನೆ, ಅದೂ ಈ ಕಾಲದಲ್ಲಿ ಭಜನೆ ಯಾಕೆ ಎಂದ ರಂಗ. ದೇಹದ ಆರೋಗ್ಯಕ್ಕೆ, ಒಗ್ಗಟ್ಟಿಗೆ, ಕೆಲಸ ಕಾರ್ಯಗಳ ತೀರ್ಮಾನಕ್ಕೆ ಎಂದು ಉತ್ತರಕೊಟ್ಟ ನರಸಿಂಗರಾಯ. ಮುಂದಕ್ಕೇನು ಅಂದ ಕೆಂಪರಾಜ.
ನಮ್ಮೂರು ಅಂತ ಒಂದು ಸಂಘ ಕಟ್ಟುವುದು. ಅದರಲ್ಲಿ ಹೆಂಗಸರು, ಕೂಲಿಕಾರರು, ವಿದ್ಯಾರ್ಥಿಗಳು ಎಲ್ಲರೂ ಇರುವುದು ಎಂದ ನರಸಿಂಗರಾಯನ ತೀರ್ಮಾನದ ಮಾತಿಗೆ ಕುಳ್ಳಪ್ಪ, ನೀರಿಗಿಳಿ ಅಂತಿದ್ದೀಯ. ಇಳಿದೇ ಬಿಡೋಣ. ಮುಳುಗೋದೊ, ತೇಲೋದೊ ಆಮೇಲಿನದು ಎಂದು ಅಪ್ಪಯ್ಯನಂತೆಯೇ ನುಡಿದ.