ಮೈ ವೀಣೆಯಲಿ ಕಂಪನ, ಜೇನ ತುಟಿಗೆ ದುಂಬಿ ಚುಂಬನ
ಮುಳುಗು ಸೂರ್ಯಕಾಂತಿ ತಂಗಾಳಿಯೊಡಗೂಡಿ ತಂಪಾಗಿ ಹಾಡಿತು ಯುಗಳಗೀತೆ. ಅಂಗಳದ ಮರುಗ, ಕೀಳುವ ಕೈಗಳಿಗೆ ಸಿಗದೆ, ಮರದ ಕೊಂಬೆಗಳ ಕೊನೆಗಳಲಿ ಅರಳಿ ಉಳಿದ ಸಂಪಿಗೆ, ಯಾರ ಮನೆ ತೋಟದ ಸೇವಂತಿಗೆಯೋ ಗಮಲಿನ ಅಮಲಿನ ಶೃಂಗಾರದ ವೃಂದಗಾನ ಮಾಡಿ ಸ್ವಾಗತಿಸಿದವು ಇರುಳ. ಅದು ಶ್ರಾವಣದ ಮೊದಲ ರಾತ್ರಿ. ವಿರಹ ಮಾಸದಲಿ ಅಗಲಿದ್ದ ದಂಪತಿಗಳ ಮಿಲನದ ರಾತ್ರಿ. ಒಲಿದ ಜೀವಗಳ ಮನದಲ್ಲಿ ಸಂಲಗ್ನ ರತಿ ಮದನ ನರ್ತನ ಕೇಳಿ.
ಅಪ್ಪುಗೆಗೆ ಅಪ್ಪುಗೆ, ಮುತ್ತಿಗೆ ಮುತ್ತು, ಆಲಿಂಗನಕೆ ಆಲಿಂಗನ, ಬಿಸಿಯುಸಿರಿಗೆ ಬಿಸಿಯುಸಿರು, ಮೈ ಬೆವರಿಸೆನೆಂದು ಸುಳಿದು ಬಂದ ತಂಗಾಳಿಗೆ ಸೋಲು. ಕಚಗುಳಿಯಿಟ್ಟು ಕುಲುಕಿಸಬೇಡ. ನಲುಗೀತು ಮುಡಿದ ಕನಕಾಂಬರ, ಉದುರಿ ಬಾಡೀತು ನಿತ್ಯಮಲ್ಲಿಗೆ ಎಂದು ಕೋಣೆಯ ಮಂದಕಾಂತಿ ಹೇಳುತ್ತಿದ್ದರೂ ಕೇಳಿಸಿಕೊಳ್ಳದು ಕಿವಿ.
ಜೇನಾಗಿ ನಿನ್ನ ಬಳಿ ಬರುವೆನೆಂಬ ಮಾತು ಒಪ್ಪಿ ಬೆಪ್ಪನಾದೆನೇ ಶಕುಂತಲಾ!
ಅದು ಎಂತಹ ಮೋಹವೋ, ಎಂಥ ಅಮಲೋ ಕಾಣೆ. ಥಟ್ಟನೆ ಆವರಿಸಿದ ಮೈಮರೆವು. ಓರೆ ನೋಟದ ಕೆಣಕು, ಕರೆವ ತುಟಿ ಕೆಂಪು. ಬಳಿ ಸಾರೆ ಪರಚುವ ಹೆದರಿಕೆ ತರುವ ಚಿಗುರು ಉಗುರಿನ ಮೊನಚು. ಅದನ್ನೂ ಮೀರಿ ಸೆಳೆವ ಗೋರಂಟಿ ರಂಗು. ಕಾಡಿಗೆ ಕತ್ತಲಲ್ಲಿ ಹೊಳೆವ ಬಟ್ಟಲಗಣ್ಣ ಮಿಟುಕು ಕರೆ. ಗಗನ ನಡುವಿನ ನಿತ್ಯಪುಷ್ಪ ಹೊಮ್ಮಿಸುವ ಕಾಂತಿ. ರತಿ ಕಾತರದಲ್ಲಿ ಹಣೆ ಮೇಲೆ ನಿಂತ ಹನಿ ಮುತ್ತುಗಳ ಸಾಲು.
ಮೊದಲು ಹೂ ಬಾಣ ಹೂಡಿ ಕಾಡಿದ ಮದನ ಮನ ಹೊಕ್ಕು ಹಾಡಿದಾಗ ರತಿಗಾನ, ಮೈ ವೀಣೆಯಲಿ ಕಂಪನ. ಜೇನ ತುಟಿಗೆ ದುಂಬಿ ಚುಂಬನ. ರತಿ ಹಾಡಿದಳು:
ಮದನ ಮಾರ ಪರಿಮಳ ವದನ ರತಿ ಕೇಳಿ ಸದನ
ಬಾ ಬಾರ ಕಾದಿದೆ ಬಾಹು ತೋರಣ
ಮೂಗುತಿಯ ಮುತ್ತು ಹೊಳೆದಿದೆ
ಅದುರುವ ಕೆಂದುಟಿಯ ಮೇಲೆ
ಹರಿದರೆ ತಡವೆಂದು ನುಗ್ಗಿ, ಧುಮುಕಿ, ಉಕ್ಕಿ ಪ್ರವಾಹವಾದ ಸುಖನದಿ. 'ಹಾ! .....' ಎಷ್ಟೋ ದಿನಗಳ ತನು ಮನದ ತಾಪ ಪ್ರವಾಹದಲಿ ಕೊಚ್ಚಿ ಕೊಚ್ಚಿ ಕೊಚ್ಚಿ ಹೋದಾಗ ಬೆವರ ಹನಿಮುತ್ತುಗಳಲ್ಲಿ ಬಾನ ಚುಕ್ಕಿಗಳು ಹೊಳೆದವು.
ಮಂಚದಲಿ ಚಂದ್ರರಶ್ಮಿ ಸೋಕಿದ ನೈದಿಲೆ. ದಣಿದು ಎದೆಯ ಮೇಲೆ ತಲೆಯಿಟ್ಟ ಕೃಷ್ಣನ ಕಿವಿಯಲ್ಲಿ ಏನೋ ಪಿಸುಗುಟ್ಟಿ ನಗುವಳು ಸತ್ಯಭಾಮೆ.
ಹರಕೆಯಾಚೆಗೆ ಆರ್ಥ ಹಚ್ಚದಿರು, ನಕ್ಕು ಬಿಡು ಒಮ್ಮೆ ಹಗಲಿನಲಿ ಬೆಳದಿಂಗಳಂತೆ
ಕೃಷ್ಣ ಹೇಳುವ, "ಸತ್ಯಾ, ಹಣೆಯ ಸಿಂಗರಿಸಿರುವ ಸಾಲು ಮುತ್ತುಗಳ ಮುಂಗುರುಳು ಒಡೆಯುವ ಮೊದಲು ಆರಿಸಿಕೊಳ್ಳಬೇಕು ನಾನು. ಆದರೆ ಹೇಗೆಂದು ತಿಳಿಯದು. ಹೇಳು ನೀನು". ಅನುರಾಗದ ಸುಖದ ಶ್ರುತಿಯಲ್ಲಿ ಹೇಳಿದಳು ಸತ್ಯಭಾಮೆ, "ನಿನ್ನ ತುಟಿಗಳಿಗೆ ಹೇಳಿಬಿಡು."
ವಸಂತನ ಅಪ್ಪುಗೆಯಲ್ಲಿ ಶಕುಂತಲೆ, ಅವಳ ತೆಕ್ಕೆಯಲ್ಲಿ ವಸಂತ. ಕೂಡಿ ಹಾಡಿದ ಮೋಹನ ರಾಗಕ್ಕೆ ರಾತ್ರಿ ರಾಣಿ ಅರಳಿ ಪರಿಮಳಿಸಿದಳು.