ಸ ರಘುನಾಥ ಅಂಕಣ; ಮಳೆಯು ಬಂದಿತು ನೆಲವು ನೀರನು ಕುಡಿಯಿತು
ನೋವು ನಿರಾಸೆಯಲ್ಲಿ ನರಸಿಂಗರಾಯ ನಾಕಾರು ದಿನ ಏನೂ ಬೇಡವಾದವನಂತಿದ್ದ. ಏನೇನೋ ತುಂಬಿಕೊಂಡ ಮನಸ್ಸನ್ನು ತೊಳೆದುಕೊಳ್ಳಬೇಕು ಅನಿಸುತ್ತಿತ್ತು. ಈ ದಿನಗಳಲ್ಲಿ ಯಾರೊಂದಿಗೂ ಮಾತಾಡಿರಲಿಲ್ಲ. ಮುನೆಕ್ಕನ ಮನೆಗೆ ಹೋದರೆ ಸುನಂದಾಳೂ ಸಿಗುತ್ತಾಳೆ ಎಂದು ಹೊರಟ. ಹತ್ತು ಹೆಜ್ಜೆ ಹಾಕಿದಾಗಲೇ ಬೋಡೆಪ್ಪ, ಪಿಲ್ಲಣ್ಣರಲ್ಲಿಗೆ ಹೋಗಬೇಕೆನಿಸಿತು. ತೋಟದಲ್ಲಿರಬಹುದು ಎಂದು ದಾರಿ ಬದಲಿಸಿದ. ಒಂದು ವೇಳೆ ಅವರಿಲ್ಲದಿದ್ದರೂ ಕೊಂಚ ಹೊತ್ತು ಅಲ್ಲಿದ್ದು ಬರುವುದೆಂದುಕೊಂಡ. ಮಣ್ಣ ವಾಸನೆಯಲ್ಲಿ ಎಲ್ಲಿಯೋ ಮಳೆಯಾದ ಸುಳಿವು. ಅಕಾಲಿಕ. ಜೋರು ಮಳೆಯೆ, ತುಂತುರೆ?
ತೋಟದಲ್ಲಿ ಗೆಳೆಯರಿರಲಿಲ್ಲ. ಬೋಡೆಪ್ಪನ ತೋಟದ ಪಕ್ಕದ ಪಿಲ್ಲಣ್ಣನ ತೋಟದಲ್ಲಿ ಮುಸುಕಿನ ಜೋಳದ ಪೈರು ದಂಟು ಕಟ್ಟುತ್ತಿತ್ತು. ಬೋಡೆಪ್ಪನ ತೋಟದಲ್ಲಿ ಸೇವಂತಿಗೆ ಕಾಯಿಮೊಗ್ಗು ಹಿಡಿದಿತ್ತು. ಎರಡೂ ತೋಟದ ನಡುವೆ ಓಡಾಡಿ, ಬಾವಿಯ ದಡದಲ್ಲಿದ್ದ ಒಂಟಿ ಸೀಬೆಮರದಡಿಗೆ ಬಂದ. ಮರದ ತುಂಬ ಮೊಗ್ಗು ಹೂ. ಹಣ್ಣಿನ ದಿನಗಳನ್ನು ಎಣಿಸಲೋ, ಜೋಳ ತೆನೆಗಟ್ಟುಲು ಎಷ್ಟು ದಿನಗಳು ಹಿಡಿಯಬಹುದೆಂಬ ಲೆಕ್ಕಕ್ಕೋ ಗಿಳಿಗಳು ಕೊಂಬೆಗಳಲ್ಲಿ ಕುಳಿತಿದ್ದವು. ಎಣಿಸುವ ಮನಸ್ಸಾಯಿತು. ಕಣ್ಣಿಗೆ ಕಂಡವು ಎಂಟು. ಹಸಿರೆಲೆಯ ಮರೆಯಲ್ಲಿ ಇದ್ದರೆ ಎಷ್ಟಿದ್ದಾವು? ಎಂಟು ಹತ್ತು ಇದ್ದಾವು. ಅಂದರೆ ಹದಿನಾರರಿಂದ ಇಪ್ಪತ್ತು. ಈ ಲೆಕ್ಕ ಏಕೆ ಅನ್ನಿಸಿತು. ನೋಡಿಯೇ ಬಿಡುವ ಎಂದು ಜೋರಾಗಿ ಚಪ್ಪಾಳೆಯಿಕ್ಕಿದ. ಗಿಳಿಗಳು ಕೂಗುತ್ತಾ ಎದ್ದವು. ಎಣಿಸುವಲ್ಲಿ ಸೋತ. ಕೊಂಬೆಯೊಂದರಲ್ಲಿ ಒಂದೇ ಒಂದು ಕುಳಿತೇ ಇತ್ತು. ಮನಸ್ಸಿನ ಹಿತಕ್ಕೆ ಒಂದು ಗಿಳಿಯೇ ಸಾಕು ಅನ್ನಿಸಿತು. ಅದರ ಅಂದವನ್ನು ನೋಡುತ್ತಿದ್ದಾಗ ರಾಜಮಾರ್ತಾಂಡ ಸದಾರಮೆಗೆ ಗಿಳಿಯನ್ನು ತೋರಿಸಿ ಹಾಡುವ ದೃಶ್ಯ ಸಂಯೋಜಿಸಿ ಹಾಡನ್ನು ರಚಿಸಲು ಒದ್ದಾಡುತ್ತಿದ್ದವನಿಗೆ ಹಾಡಿನ ಜಾಡು ಸಿಕ್ಕಿತು.
ಸ ರಘುನಾಥ ಅಂಕಣ; ದ್ವೇಷದ ಕಿಚ್ಚು, ಹುಣಿಸೆ ಕೊರಳಿಗೆ ಮಚ್ಚು
ಕಾಣುತಿಹುದೆ
ರಮಣಿ
ಎಲೆಯ
ಮರೆಯಲ್ಲಿ
ಪಂಚರಂಗಿ
ಗಿಳಿ
ಯಾವ
ರಾಜಕುವರಿಯ
ಪ್ರೇಮಕಥೆಯ
ಉಸುರೆ
ಕಾಯುತಿಹುದೊ
ಇಲ್ಲಿ.'
ಹಾಡಿನ ಪ್ರತಿಯೊಂದು ಶಬ್ದವನ್ನೂ ಮತ್ತೆ ಮತ್ತೆ ಹೇಳಿಕೊಳ್ಳುತ್ತ ಮನನ ಮಾಡಿಕೊಂಡ. ಎದೆಗೆ ಹಾಡಿಳಿದಂತೆ ಭೂಮಿಗೆ ಮಳೆ ಇಳಿಯಿತು. ಅರ್ಧ ಗಂಟೆ ಸುರಿದ ಜೋರು ಮಳೆ. ನೆಂದು ಮುದ್ದೆಯಾಗಿದ್ದ ನರಸಿಂಗರಾಯನ ಮನಸ್ಸು ಉಲ್ಲಾಸಗೊಂಡಿತು.
ಸ ರಘುನಾಥ ಅಂಕಣ; ಹೊಗೆಯಲ್ಲೇ ತಣ್ಣಗಾದ ಮುನೆಕ್ಕನ ಮುನಿಸು
ಮನೆ ಬಾಗಿಲಿಗೆ ಬಂದಾಗ ಅಮ್ಮ ಅಪ್ಪನಿಗೆ ಹೇಳುತ್ತಿದ್ದಳು: 'ಈ ತೇವಕ್ಕೆ ಕಡಿದ ಹುಣಿಸೆ ಗಿಡಗಳಲ್ಲಿ ಚಿಗುರು ಹುಟ್ಟುತ್ತೆ.'
ನರಸಿಂಗರಾಯ ಅಲ್ಲಿಂದಲೇ ತೋಪಿನತ್ತ ತಿರುಗಿದ. ನೆಲ ಚೆನ್ನಾಗಿ ತೇವ ಹಿಡಿದಿತ್ತು. ಆಕಾಶದತ್ತ ತಲೆಯೆತ್ತಿ ಕೈ ಮುಗಿದ. ಅಲ್ಲಿ ಬಿಳಿ ಮೋಡವೊಂದಿತ್ತು. ಅದು ಕಪ್ಪಾಗಿ ಇನ್ನಷ್ಟು ಮಳೆಸುರಿಸಲೇ ಎಂದು ಕೇಳುತ್ತಿರುವಂತೆ ಅನ್ನಿಸಿತು. ಅದಕ್ಕೂ ಕೈ ಮುಗಿದ. ತೋಟದಲ್ಲಿ ಗಿಳಿ ಕೊಟ್ಟ ಪದವನ್ನು ತೋಪಿನಲ್ಲಿ ಮೋಡ ಮುಂದುವರೆಸಿತು.
ಬಾನಿನಲ್ಲಿ
ಬೆಳ್ಳಿಮೋಡ
ಕೇಳುತಿಹುದು
ಚಂದದಿಂದ
ನಿನ್ನ
ಕಣ್ಣ
ಕಾಡಿಗೆಯಿಂದ
ಪ್ರೀತಿಯಿಂದ
ನಿನಗೆ
ಬರೆಯಲು
ಪ್ರೇಮಪತ್ರ
ಬರೆವೆ
ಮುಚ್ಚು
ಕಣ್ಣು
ನಿಮಿಷ.
ನರಸಿಂಗರಾಯ ದಾರಿಯುದ್ದಕ್ಕೂ ಮನಸಿನಲ್ಲಿ ಆ ಹಾಡನ್ನು ಹಾಡಿಕೊಳ್ಳುತ್ತ ಮನೆಗೆ ಬಂದ. ಬಾಗಿಲಲ್ಲಿಅವನು ಬರುವುದಕ್ಕೆ ಕಾಯುತ್ತಿದ್ದಂತೆ ನಿಂತಿದ್ದ ಸುನಂದಾಳತ್ತ ನೋಡದೆ ಒಳಗೆ ಹೋದ. ಮಗ ಬಂದುದನ್ನು ಕಂಡ ಅಮ್ಮ, ಕಾಫಿ ಕೊಡಲೆ ಎಂದುದಕ್ಕೂ ಪ್ರತಿಕ್ರಿಯಿಸಲಿಲ್ಲ. ಮುನೆಕ್ಕ ಏನಾದರು ತಿನ್ನಲು ಕೊಟ್ಟು ಕಾಫಿ ಕೊಡಬಹುದಲ್ಲ ಅಂದುದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅಪ್ಪಯ್ಯ ಗಮನಿಸುತ್ತ ಸುಮ್ಮನೆ ಕುಳಿತಿದ್ದ.
ಸ ರಘುನಾಥ ಅಂಕಣ; ಬೇಸ್ತವಾರದ ಸಭೆಯಲ್ಲಿ...
ನರಸಿಂಗರಾಯ ಹಾರ್ಮೋನಿಯಂ ಹಿಡಿದು ಬಂದ. ದಾರಿಯಲ್ಲಿ ಮನಸ್ಸಿಗೆ ಅನ್ನಿಸಿದಂತೆ ಶ್ರುತಿ ಹಿಡಿದು ಮೋಹನರಾಗದಲ್ಲಿ ಹಾಡಿದ. ಅಪ್ಪಯ್ಯ ಚಪ್ಪಾಳೆ ತಟ್ಟಿದ. ಸುನಂದಾ ಮುಖವರಳಿಸಿ ಅವನ ಮುಂದೆ ಕುಳಿತಳು. ಅಮ್ಮ ಕಾಫಿ ಲೋಟ ತಂದು ಕೈಗಿತ್ತಳು. ಕಾಫಿ ಕುಡಿದು, 'ಬಾನಿನಲ್ಲಿ ಬೆಳ್ಳಿಮೋಡ ಕೇಳುತಿಹುದು ಚಂದದಿಂದ' ಅದನ್ನು ಇನ್ನೊಮ್ಮೆ ಹಾಡು ಎಂದು ಸುನಂದಾಳ ಮುಖ ನೋಡಿದಳು. ಅವಳ ಕಾಡಿಗೆ ಕಣ್ಣುಗಳು ಮುಚ್ಚಿದ್ದವು.