ಸ ರಘುನಾಥ ಅಂಕಣ; ಮನಸ್ಸುಗಳು ಒಂದಾದರೂ ಕಾರ್ಯಕ್ಕಿಳಿಯದ ಪ್ರಯತ್ನ
ಎಂಎಲ್ ಎ ಮನೆ ಮುಂದೆ ನಡೆದುದೆಲ್ಲ ಊರಿಗೇ ತಿಳಿಯಿತು. ಅದು ಊರಿಗಾದ ಅಪಮಾನವೆಂದು ಜನ ಮಾತಾಡಿಕೊಂಡರು. ಇದೂ ಒಂದು ಒಳ್ಳೆಯ ಬೆಳವಣಿಗೆಯೆಂದು ಅನೇಕರು ಭಾವಿಸಿದರು. ಈ ಬಿಸಿಯಲ್ಲೇ ಸಭೆ ನಡೆಸಲು ಮಾತನಾಡಿಕೊಂಡ ಸ್ವಾಭಿಮಾನಿ ಯುವಕರು ನರಸಿಂಗರಾಯನನ್ನು ಮುಂದಕ್ಕೆ ಹಾಕಿ, ಮುನಿನಾರಯಣಿಯ ಮೂಲಕ ಮನೆ ಮನೆಗೆ ಹೇಳಿ ಕಳುಹಿಸಿ ಸಭೆ ನೆರೆಸಿದರು.
ಸಭೆ ಎಂಎಲ್ ಎ ಜೊತೆ ನಡೆದ ಮಾತುಗಳಿಂದಲೇ ಪ್ರಾರಂಭವಾಯಿತು. ಬೋಡೆಪ್ಪ ಎದ್ದು ನಿಂತು ಕೈ ಮುಗಿದು, ಹಿಹಿಹಿಹಿ ನಗುತ್ತ ಅಮ್ಮಾ, ಅಪ್ಪ, ಅಕ್ಕ, ನಿಮ್ಮ ಮಗ ಬಂದಿದ್ದೀನಿ. ಓಟು ಕೊಟ್ಟು ಗೆಲ್ಲಿಸಿ ನಿಮ್ಮ ಸೇವೆ ಮಾಡುವ ಭಾಗ್ಯ ಕೊಡಿ. ಮನೆ ಮನೆಗೆ ನಲ್ಲಿ, ಊರಿಗೆ ಸಿಮೆಂಟು ರಸ್ತೆ, ದಿನಾ ಪೂರ್ತಿ ಕರೆಂಟು... ಹಿಂದೆ ಏನೋ ಆಯಿತು. ಈ ಸಲ ಹಾಗಾಗಲ್ಲ. ಅಸೆಂಬ್ಲಿಯಲ್ಲಿ ಕೂತ ತಕ್ಷಣ ಮೊದಲು ನಮ್ಮೂರಿಗೇ ಆಸ್ಪತ್ರೆ ಮಂಜೂರು ಮಾಡಿಸ್ತೀನಿ. ನಿಮ್ಮ ಮನೆಮಗನನ್ನು ಗೆಲ್ಲಿಸಿ. ನಿಮ್ಮ ಓಟು ಯಾರಿಗೆ? ನನಗೇ. ಎಂದು ಎಂಎಲ್ ಎ ಹಾಗೆ ಅಭಿನಯಿಸಿ ಕುಳಿತ.
ಸ ರಘುನಾಥ ಅಂಕಣ; ಕಾಯಿಸಿ ಕಾಯಿಸಿ ದರ್ಶನಕೊಟ್ಟ ಎಂಎಲ್ ಎ
ಜನ ನಗಬೇಕೆಂದಿರುವಾಗಲೇ ಹನುಮಕ್ಕ ಕುಳಿತಲ್ಲೇ, ಮಗ ಅಂತ ಓಟಿಗೆ ಬರಲಿ, ಮಗನೇ ಕಸ ಗುಡಿಸಲಾರೆನೋ, ಹಂಗೆ ಗುಡಿಸಿ ಹೋಗಪ್ಪ ಅಂತ ಪೊರಕೆ ಕೈ ಕೊಡ್ತೀನಿ ಅಂದಳು. ಜನ ಹಿಂದಿನ ನಗೆಯೊಂದಿಗೆ ಈಗಿನ ನಗೆಯನ್ನೂ ಸೇರಿಸಿ ನಕ್ಕರು.
ನಾವು ನಗುನಗುತ್ತಲೇ ಅಳ್ತಿದ್ದೀವಿ. ನಾವು ಒಳಗೂ ನಗಬೇಕಾದ್ರೆ ನಮ್ಮ ಕಷ್ಟ ತೀರಬೇಕು. ಅದಕ್ಕೆ ನಾವೇ ಒಂದು ದಾರಿ ಕಂಡುಕೊಳ್ಳಬೇಕು. ಅದು ಈ ಸಭೆಯಲ್ಲಿ ತೀರ್ಮಾನವಾಗಬೇಕು. ಎಂ ಎಲ್ ಎ ಏನೂ ಮಾಡೊಲ್ಲ ಅಂತ ತಿಳಿಯಿತು ಎಂದು ನರಸಿಂಗರಾಯ ಹೇಳಿದ. ಏನು ಮಾಡುವುದಂತ ನೀನೇ ಹೇಳೆಂದಿತು ಸಭೆ. ಗಜಾಗುಂಡ್ಲದ ಮಣ್ಣು ಎತ್ತಿದ್ದು ಯಾರು? ನಾವೇ ಅಲ್ಲವೆ. ಹಾಗೆಯೆ ಕೆರೆಯ ಹೂಳೆತ್ತುವುದು ಅಂದ. ಅದು ಚಿಕ್ಕದೊ ಮಾರಾಯ, ಎತ್ತಿದ್ವಿ. ಕೆರೆ ಹಾಗಲ್ಲ. ದೊಡ್ಡದು. ಆಗಲ್ಲ ಎಂದ ನರಸಿಂಹಪ್ಪನೋರ ಚಂದ್ರ.
ಅದು ಮಾಡಬೇಕಿರೋದು ಸರಕಾರ. ಮಾಡ್ಲಿ. ನಾವು ಯಾಕೆ ಮಾಡಬೇಕು ಅಂದ ವೆಂಕಟಬೋವಿ. ಮಾಡೋವರೆಗು ತಹಸಿಲ್ದಾರ್ ಆಫೀಸು ಮುಂದೆ ಸ್ಟ್ರೈಕು ಮಾಡೋಣ ಅಂದವನು, ಇವನು ಊರಲ್ಲಿದ್ದಾನೆಯೇ ಅನ್ನುವಂತಿದ್ದ ಕ್ರಿಷ್ಣಪ್ಪನೋರ ಹನುಮಂತ. ಹೀಗೆ ತಮಗೆ ಜವಾಬ್ದಾರಿಯೇ ಇಲ್ಲವೆಂಬಂತೆ ಹುಣಿಸೆಮರಗಳ ಅಡಿ ಕಾಸಾಟ ಆಡಿಕೊಂದ್ದವರೂ ಮಾತಾಡತೊಡಗಿದರು. ಇದರಿಂದ ನರಸಿಂಗರಾಯನಿಗೆ ತನ್ನೂರಿಗೆ ಧ್ವನಿ ಬರುತ್ತಿದೆ ಅನ್ನಿಸಿ ಸಂತೋಷವಾಯಿತು.
ಸ ರಘುನಾಥ ಅಂಕಣ; ನಗೆ ಮೊಗದ ಚಲ್ಲಾಪುರಮ್ಮನೆಷ್ಟು ಸುಂದರ!
ಚುನಾಣೆಯಲ್ಲಿ ಎಂಎಲ್ ಎ ಹಿಂದೆ ಓಡಾಡಿದ್ದ ಕೆಲವರು, ಅವನಿಗಿಂತ ನಮಗೆ ಊರು ಮುಖ್ಯ. ಬೇಕಾದ್ರೆ ಅವನು ಕೊಟ್ಟ ದುಡ್ಡನ್ನು ಬಿಸಾಕ್ತೀವಿ. ನಮ್ಮೂರ ಕೆಲಸ ಮಾಡಿಕೊಡ್ಲಿ ಎಂದು ಘೋಷಿಸಿದರು. ಕಾಸುಗುಳು ಕೊಡ್ತೀರಪ್ಪಾ, ಅವನು ಕೊಟ್ಟ ಸಾರಾಯ್ನ ಹೆಂಗೆ ಕೊಡ್ತೀರಿ? ಪಿಲ್ಲಣ್ಣ ಸವಾಲು ಹಾಕಿದ. ಅವರಲ್ಲಿದ್ದ ಫಟಿಂಗನೊಬ್ಬ ಎಲ್ಲೋ ಮರೆಯಲ್ಲಿ ಕುಳಿತಿದ್ದು, ಒಂದು ಕ್ವಾಟ್ರು ಹಾಕಿ ವಾಂತಿ ಮಾಡಿ ತಕೊಂತ ಹೇಲ್ತೀನಿ ಅಂದ. ಯಾರೋ ವಾಂತಿ ಎಮ್ಮೆಲ್ಯೆ ಎಂದು ಕೂಗಿದರು. ಸಭೆಯಲ್ಲಿ ಅಲೆ ಅಲೆ ನಗೆ... ನರಸಿಂಗರಾಯ ನಗಲಿಲ್ಲ.
ಏನೆಲ್ಲ ಮಾತನಾಡಿದರೂ ಹೂಳು ತೆಗೆಯಲು ಮುಂದೆ ಬಂದವರು ಮಾತ್ರ ಕೆಲವರೇ. ಆ ಕೆಲವರಿಂದ ಆಗದ ಕೆಲಸವಾಗಿತ್ತು. ಈ ಬಿಡಿಬಿಡಿ ಧ್ವನಿಗಳನ್ನು ಒಂದಾಗಿಸುವುದು ಹೇಗೆಂದು ನರಸಿಂಗರಾಯನಿಗೆ ಆ ಸಮಯದಲ್ಲಿ ತಿಳಿಯಲಿಲ್ಲ. ದುಗ್ಗಪ್ಪನಿಗೆ ಏನೋ ಹೇಳಿದ.
ದುಗ್ಗಪ್ಪ, ಅಪ್ಪಯ್ಯ, ಮುನೆಂಕಟೇಗೌಡ, ಬೀರಣ್ಣ, ಮೋಟಪ್ಪ, ಯಾಲಗಿರೆಪ್ಪ ಒಂದು ಗುಂಪಾಗಿ ಸೇರಿ ಗುಸುಗುಸು ಮಾತಾಡಿಕೊಂಡ ನಂತರ ದುಗ್ಗಪ್ಪ, ಈಗ ನಿಮಗೆಲ್ಲ ವಿಷಯ ತಿಳಿದಿದೆ. ಯೋಚನೆ ಮಾಡಿ. ಹುಣ್ಣಿಮೆ ಹದಿನೈದು ದಿನ ಇದೆ. ಅವತ್ತು ಭಜನೆಗೆ ಎಲ್ಲ ಸೇರ್ತೀವಿ. ಆಗ ತೀರ್ಮಾನ ಮಾಡೋಣ ಅಂದ.