ಸ ರಘುನಾಥ ಅಂಕಣ; ಊರುದ್ಯಾವರ ಮಾಡಬೇಕಣ್ಣ...
ಊರಿನಿಂದ ಹೊರಟ ಮೂರನೆಯ ಮಧ್ಯಾಹ್ನಕ್ಕೆ ಶೇಷಪ್ಪ ವಾಪಸ್ಸಾದ. ಅವನ ಬರಾವಿಗೆ ಊರೇ ಕಾದಿತ್ತು. ಅವನು ಮುಖ ತೊಳೆದು ಬರುವ ಹೊತ್ತಿಗೆ ಜನ ಧಾವಂತದಿಂದ ಧಾವಿಸಿ ಬಂದು ಚಲ್ಲಾಪುರಮ್ಮನ ಗುಡಿಯ ಮುಂದೆ ಸೇರಿದ್ದರು. ಶೇಷಪ್ಪ ತಾನು ಮಾಲೂರಿನಲ್ಲಿ ಬಸ್ಸು ಹತ್ತಿದಾಗಲಿಂದ ಮಾತು ಪ್ರಾರಂಭಿಸಿದ.
ದುಗ್ಗಪ್ಪ ಸಹನೆ ಕಳೆದುಕೊಂಡರೂ ಮಾತಿನಲ್ಲಿ ತೋರಗೊಡದೆ, ಊರಿಗೇನಾಗಬೇಕು ಅಂದರು ಅದನ್ನು ಹೇಳು. ನೀನು ಹೋಗಿ ಬಂದ ಕಥೆ ಇನ್ನೊಂದು ದಿನಕ್ಕಿರಲಿ ಅಂದ. ಮಾರಮ್ಮನಿಗೆ ದೀಪ ಹೊತ್ತು ಮರಿ ಬಲಿ ಕೊಡಬೇಕಂತೆ. ಚಲ್ಲಾಪುರಮ್ಮನ ಶಿಲಾ ವಿಗ್ರಹದ ಪ್ರತಿಷ್ಠಾಪನೆ ವಿಜಯದಶಮಿ ದಿನವೇ ಆಗಬೇಕಂತೆ. ಅದಕ್ಕೂ ಮುಂಚೆ ಊರದ್ಯಾವರ ಮಾಡಬೇಕಂತೆ ಎಂದು ವರದಿ ಒಪ್ಪಿಸಿದ.
ಸ ರಘುನಾಥ ಅಂಕಣ; ಊರ ಮೇಲೆ ಮಾರಿಕಣ್ಣು...
ಚರ್ಚೆಯಲ್ಲಿ ಮೊದಲ ದಿನ ಮಾಲೂರಿನ ಬೀರೇಶ್ವರಸ್ವಾಮಿ ಗುಡಿ ಪೂಜಾರಿ ನಂಜುಂಡಶಾಸ್ತ್ರಿಗಳಿಂದ ಊರಶುದ್ಧಿ, ಎರಡನೆಯ ದಿನ ಚಂಡಕಾ ಹೋಮ, ಅವತ್ತು ರಾತ್ರಿ ಸುನಂದಾಳಿಂದ ಸುಂದರಕಾಂಡ ಹರಿಕಥೆ, ಮೂರನೆಯ ದಿನ ಮಾರಮ್ಮನಿಗೆ ದೀಪಗಳು ಎಂದು ನಿರ್ಣಯವಾಯಿತು.
ಬಲಿ ಮರಿ (ಕುರಿ) ಯಾರದಿರಲಿ ಎಂಬ ಮಾತು ಬಂದಾಗ, ಬೀರಣ್ಣ ನಂದೇ ಇರಲಿ ಅಂದ. ಹಣಕಾಸು ಹೇಗೆ ಎಂಬ ಮಾತು ಅಪ್ಪಯ್ಯನದಾಗಿ ಮುಂದುವರೆದು, ದೇವಸ್ಥಾನದ ಚೀಟಿ ದುಡ್ಡು ಎಷ್ಟಿದೆ ಶೇಷಪ್ಪ ಅಂದ. ಅವನು ಅಮ್ಮನ ಮುಂದಿಟ್ಟಿದ್ದ ಲೆಕ್ಕದ ಪುಸ್ತಕ ತಂದು ನೋಡಿ, ಇಪ್ಪತ್ತು ಸಾವಿರದೊಂದು ನೂರೊಂದು ಅಂದ. ನಾಟಕಕ್ಕೆ ಅಂತ ಮನೆವಾರು ಹಾಕಿದ್ವಲ್ಲ ಆ ಹಣ ಇದಕ್ಕೆ ವಸೂಲಾಗ್ಲಿ. ಅದರ ಮೇಲೂ ಭಕ್ತಿಯಿಂದ ಕೊಡೋರು ಕೊಡ್ಲಿ. ಅಂದ್ರೆ ಸುಮಾರು ಲಕ್ಷ ದಾಟುತ್ತೆ. ಸಾಕಾಗುತ್ತೇನೊ ಅಂದ ಪಿಲ್ಲಣ್ಣ.
ಸ ರಘುನಾಥ ಅಂಕಣ; ಸೋಮೇಶನ ಸಾವಿನ ನಂತರ ಮತ್ತೆ ನಾಟಕದ ಮಾತು
ಎಲ್ಲಿ ಸಾಕಾದೀತು? ಎರಡು ಲಕ್ಷನಾದ್ರು ಮುಟ್ಟುತ್ತೆ ಅಂದ ಬೋಡೆಪ್ಪ. ಊರಲ್ಲಿ ಚೀಟಿಗಳು ನಡಿಸ್ತಿರೋರು ನಾಲ್ಕು ಜನ. ಅವರು ಆಗಲ್ಲ ಅನ್ನದೀರ ಲಾಭದ ಚೀಟೀನ ಊರಿಗಾಗಿ ಬಿಟ್ಟು ಕೊಡಬೇಕು ಎಂದು ಫೈಸಲು ಮಾತಾಗಿ ದುಗ್ಗಪ್ಪ ಘೋಷಿಸಿದ. ಅದು ಒಟ್ಟು ಐವತ್ತು ಸಾವಿರ ಅಂತಾಯಿತು. ಇನ್ನು ಬೆಂಗಳೂರು, ಅಲ್ಲಿ ಇಲ್ಲಿ ಸಂಬಳ ತಕೋತೀರೋರು ಅವರ ಕೈಲಾದಷ್ಟು ಕೊಡಲಿ ಅಂದವಳು ಮುನೆಕ್ಕ. ಆಗಲೇ ಚಿಕ್ಕ ಮುನೆಪ್ಪ, ನಿಂದೇಸೋ? ಅಂದ. ಸುನಂದಾಳ ಹರಿಕಥೆ ಖರ್ಚು ನಂದೇ ಅಂದಳು.
ನರಸಿಂಗರಾಯ ಅಲ್ಲಿಯೇ ವಸೂಲಿ, ಖರ್ಚಿನ ಅಂದಾಜು ಪಟ್ಟಿ ಮಾಡಿ ಓದಿದ. ವಸೂಲಿ ಎರಡು ಲಕ್ಷ ಇಪ್ಪತ್ತೆರಡು ಸಾವಿರ. ವೆಚ್ಚ ಎರಡು ಲಕ್ಷದ ಅರವತ್ತ ನಾಲಕ್ಕು ಸಾವಿರ. ವಸೂಲೀಲಿ ಮೇಲಿನ ಇಪ್ಪತ್ತೆರಡುಸಾವಿರ ಬರದು ಅಂದುಕೊಂಡು ತೆಗೆದರೆ ಕಡಿಮೆ ಬೀಳೋದು ಅರವತ್ತನಾಲ್ಕು ಸಾವಿರ ಅಂದ. ಅದನ ಆಮೇಲೆ ನೋಡಾಣ. ಊರಿನಲ್ಲಿ ವಸೂಲಿ ಕೆಲಸ ಮುನಿನಾರಾಯಣಿ, ನಾರಾಯಣಪ್ಪ, ಮುನಿಕೃಷ್ಣಪ್ಪ ಇವರದು. ಕೆಲಸದಲ್ಲಿರೋರಿಂದ ಅವರವರ ಮನೇಯೋರು ತರಿಸಿಕೊಂಡು ಕೊಡಲಿ. ಎಲ್ಲಾ ಬೀರಣ್ಣನ ಕೈಲಿ ಜಮಾ ಆಗಲಿ ಎಂದು ದುಗ್ಗಪ್ಪ ಹೇಳಿದ.
ಸ ರಘುನಾಥ ಅಂಕಣ; ವಸ್ತಾ ವಟ್ಟಿದೆ ಪೋತಾ ವಟ್ಟಿದೆ ಬಾಧಯೆಂದುಕಂಟಾ?
ಇವತ್ತು ಶುಕ್ಲಪಕ್ಷ ಪಂಚಮಿ. ಮುಂದಿನ ಇದೇ ದಿನ ಎಲ್ಲ ಸೇರೋಣ. ಆ ದಿನಕ್ಕೆ ವಸೂಲಿ ಎಲ್ಲ ಮುಗಿದು, ಖಚಿತ ಲೆಕ್ಕ ಸಿಗಬೇಕು. ಅದಾದ ವಾರಕ್ಕೆ ಒಳ್ಳೆದಿನ ನೋಡಿ ಊರುದ್ಯಾವರ. ಅಷ್ಟರಲ್ಲಿ ಮಾಡಿಕೊಬೇಕಾದ ಅಣೀನೆಲ್ಲ ಮಾಡಿಕೊಳ್ಳಿ ಅಂದ ಅಪ್ಪಯ್ಯ.
ಇದನೆಲ್ಲ ಟಮುಕು ಹಾಕೋದ? ಎಂದು ಮುನಿನಾರಾಯಣಿ ಅದು ತನ್ನ ಸೇವೆ ಅನ್ನುವ ಭಾವದಲ್ಲಿ ಕೇಳಿದ. ಅದಕ್ಕೆ ಮೋಟಪ್ಪ, ಹೇಳಬೇಕು ಅಂತ ಕಾಯದೆ ಪಂಚಮಿವರೆಗೆ ವಾರಕ್ಕೊಂದಾವರ್ತಿ ಹಾಕು ಅಂದ. ಸುನಂದಾಳ ಹರಿಕಥಾ ಧಾಟಿಯಲ್ಲಿ ಹೇಳಬೇಕೆಂದರೆ 'ಊರದ್ಯಾವರ ಮಾಡಿ ಊರಿಗೆ ಶಾಂತಿಯನ್ನು ಪಡೆಯುವುದಕ್ಕೋಸ್ಕರವಾಗಿ ಭಕ್ತಜನ ಭಗವತ್ಪ್ರೇರಿತರಾಗಿ, ಭಾರವಾಗಿದ್ದಂತಹ ತಮ್ಮ ಹೃದಯಗಳನ್ನು ಹಗುರ ಮಾಡಿಕೊಂಡವರಾಗಿ ತಮ್ಮ ಮನೆಗಳತ್ತ ಹೊರಟಿರಲಾಗಿ ಮಂಗಳಂ ಜಯ ಮಂಗಳಂ.'