ನರಸಿಂಗರಾಯನಿಗೆ ಸುಳಿವು ಸಿಗದ ಮಂಥನ...
ಸದಾರಮೆ ನಾಟಕ ಆಡುವುದೆಂದು ತೀರ್ಮಾನವಾಗಿದ್ದರಿಂದ ನರಸಿಂಗರಾಯ ಅದರ ಚಿಂತನೆಯಲ್ಲಿ ಮುಳುಗಿದ್ದ. ಕಲಿಸುವ ಜವಾಬ್ದಾರಿಯನ್ನು ಅಪ್ಪ ಅವನಿಗೆ ವಹಿಸಿದ ವಿಷಯ ತಿಳಿದು ಅವನ ಗೆಳೆಯರು ಖುಷಿಯಲ್ಲಿದ್ದರು. ನಾಟಕದ ದಿನಕ್ಕೆ ಪೂಜಾರ್ರ ಲಕ್ಷ್ಮೀನಾರಾಯಣಪ್ಪನಿಂದ ದೊಡ್ಡ ತೋಮಾಲೆ ಕಟ್ಟಿಸಿ ನರಸಿಂಗನಿಗೆ ಹಾಕಲು ಬೋಡಪ್ಪ ತುದಿಗಾಲಿನಲ್ಲಿ ನಿಂತಿದ್ದ. ಜೊತೆಗೆ ಮೈಸೂರು ಝರಿ ರುಮಾಲು ತೊಡಿಸುವ ಯೋಜನೆ ಪಿಲ್ಲಣ್ಣನದು.
ಇಬ್ಬರೂ ಕೂಡಿ ಘನವಾಗಿ ಸನ್ಮಾನಿಸಲು ನಿಶ್ಚಯಿಸಿದರು. ಊರ ನೀರಬಾವಿ ಕಟ್ಟೆಯ ಮೇಲೆ ಕುಳಿತು ಇವರಾಡಿದ ಮಾತುಗಳನ್ನು ಕೇಳಿಸಿಕೊಂಡ ಗೌರಿ ಸೊಂಟದಲ್ಲಿ ಬಿಂದಿಗೆ ಇಟ್ಟುಕೊಂಡೇ, ಅದರಲ್ಲಿ ತನ್ನನ್ನೂ ಸೇರಿಸಿಕೊಳ್ಳುವಂತೆ ಅಂಗಲಾಚಿದಳು. ಖರ್ಚೆಲ್ಲ ಲೆಕ್ಕ ಮಾಡಿ ಹೇಳ್ತೀವಿ. ನಿನ್ನ ಪಾಲು ಕೊಡುವಿಯಂತೆ ಎಂದರು. ಅವಳಿಗೆ ಖುಷಿಯೋ ಖುಷಿ.
ಗೌರಿ ಬಾಯಿಗೆ ಸಿಕ್ಕಿದ ಮಾತು ದನ ಕಾಯುವ ಗೆಳೆಯರ ಕಿವಿಗಳನ್ನೂ ಮುಟ್ಟಿತು. ಅವರೆಲ್ಲ ಬಂದು ಬೋಡೆಪ್ಪ, ಪಲ್ಲಣ್ಣನವರನ್ನು ಕಾಡಿದರು. ಎಲ್ಲ ಸೇರಿ ಹತ್ತು ಜನರ ಗುಂಪಾಯಿತು. ಇದು ಗುಟ್ಟಾಗಿರಬೇಕೆಂದು, ತಿಳಿದರೆ ನರಸಿಂಗ ಹತ್ತಿರಕ್ಕೂ ಸೇರಿಸುವುದಿಲ್ಲ. ಹಾಗೇನಾದರು ಆದರೆ ಸನ್ಮಾನ ಕ್ಯಾನ್ಸಲ್ ಅಷ್ಟೆ ಎಂದು ಮುಂದಾಳುಗಳಿಬ್ಬರೂ ಒಂದೇ ಮಾತಿನ ತಾಕೀತು ಮಾಡಿದರು.
ನರಸಿಂಗರಾಯನ ಮನೆಯಲ್ಲಿ ಅವನಿಗೆ ಸುಳಿವು ಸಿಗದಂತೆ ಏನೋ ಮಂಥನ ಶುರುವಾಗಿತ್ತು. ಆಗಾಗ ಮುನೆಕ್ಕನೂ ಭಾಗಿಯಾಗುತ್ತಿದ್ದಳು. ಅವಳಿಂದ ವಾಸನೆ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಮಾತನ್ನು ಕೊಂಕಣ ಸುತ್ತಿಸಿ ಮೈಲಾರಕ್ಕೆ ತಂದರೂ ಅಮ್ಮ ಗುಟ್ಟು ಬಿಡಲಿಲ್ಲ. ಅಪ್ಪನನ್ನು ಕೇಳುವಂತೆಯೇ ಇಲ್ಲ. ಎಂದಾದರು ತಿಳಿಯದಿರದೆಂದು ನರಸಿಂಗರಾಯ ಆ ಪ್ರಯತ್ನದಿಂದ ದೂರ ಸರಿದರೂ ಮನಸ್ಸು ಮಾತ್ರ ಸುಮ್ಮನಿದ್ದುದಿಲ್ಲ. ಊಹೆಗಳ ಸುತ್ತ ಅವನನ್ನು ಅಲೆದಾಡಿಸುತ್ತಿತ್ತು. ನಾಕಾರು ದಿನಗಳ ನಂತರ ಅದು ಸುನಂದಾಳ ಕುರಿತಾದ ಮಂಥನವೆಂಬುದು ತಿಳಿಯಿತು. ಆದರೆ ಗುಟ್ಟೇಕೆ ಎಂಬುದೇ ಒಗಟಾಗಿತ್ತು.
ನರಸಿಂಗರಾಯನ ದಿನಗಳ ಎಣಿಕೆ ಪ್ರಕಾರ ಇಪ್ಪತ್ತೊಂದು ದಿನಗಳು ಈ ತ್ರಿಸದಸ್ಯ ಕೂಟದಲ್ಲಿ ಚರ್ಚೆ ನಡೆದಿತ್ತು. ಆದರೂ ಅಂತಿಮ ತೀರ್ಮಾನವಾದಂತಿಲ್ಲ ಅನ್ನಿಸಿತು ಅವನಿಗೆ. ಹಾಗಾಗಿದ್ದರೆ ತನ್ನವರೆಗೆ ಬರುತ್ತಿತ್ತು ಅಂದುಕೊಂಡ. ಮತ್ತೊಂದು ವಾರ ಕಳೆಯಿತು. ಏನೋ ಅನಿಶ್ಚಿತ ನೆರಳು ಸುಳಿದಾಡುತ್ತಿತ್ತು. ಕಡೆಗೊಂದು ದಿನ ಮೂವರೂ ತಮ್ಮ ಕೂಟಕ್ಕೆ ಆಹ್ವಾನಿಸಿದರು. 'ಸುನಂದಾಳನ್ನು ಇಲ್ಲಿಗೇ ಕರೆಸಿಕೊಂಡರೆ ಹೇಗೆ? ನೀನೇನಂತಿ?' ಅಪ್ಪ ಕೇಳಿದರು. ಏನಗತ್ಯ? ಅಂದ ನರಸಿಂಗರಾಯ.
ಗೆಜ್ಜೆ ಕಾಲ್ಗಳ ದನಿಯನು ತೋರುತಾ...
ಒಂಟಿಯಾಗಿ ಕಷ್ಟದಲ್ಲಿದೆ ಜೀವ ಅಂದಳು ಅಮ್ಮ. ಯಾರು ಹೇಳಿದ್ದು ಅಂದ. ಮುನೆಕ್ಕನತ್ತ ತೋರ್ಬೆರಳು ನೆಟ್ಟಗೆ ಮಾಡಿದಳು ಅಮ್ಮ. ಅಂತಹ ಕಷ್ಟ ಏನಂತೆ? ಒಂಟಿ, ಅದರಲ್ಲೂ ಹೆಣ್ಣು, ನೂರಿರುತ್ತೆ ಅಂದಳು ಅಮ್ಮ. ನನಗೆ ತಿಳಿಯಬಾರದ್ದೋ? ಮತ್ತೆ ಕೇಳಿದ ನರಸಿಂಗರಾಯ. ತಿಳಿಯಬಾರದ್ದು ಅನ್ನೊ ಹಾಗಿಲ್ಲ. ತಿಳಿಸುವಾಗ ನಾನೇ ತಿಳಿಸುತ್ತೇನೆ ಎಂದು ಅಪ್ಪ ಹೇಳಿದಾಗ, ಆಗಲಿ ಎಂದವನು, ಇರೋದೆಲ್ಲಿ ಅಂದ. ನನ್ನ ಮನೇಲಿ ಅಂದಳು ಮುನೆಕ್ಕ. ಯಾರಾರ ಅನ್ನ ನೀರಿನ ಋಣ ಎಲ್ಲೆಲ್ಲಿದೆಯೊ ಬಲ್ಲೋರಾರು? ಬಂದಿರಲಿ ಬಿಡಿ ಅಂದವನು, ಎದ್ದು ಹೊರಟು ಹುಣಿಸೆಗಿಡಗಳ ನಡುವೆ ಕುಳಿತ. ಅಪ್ಪ ಯಾವ ನಾಟಕಕ್ಕೋ ಬರೆದಿಟ್ಟಿದ್ದ ಪದ್ಯ ನೆನಪಾಗಿ ಹಾಡತೊಡಗಿದ,
ಲಲನೆಯ
ಲಲಿತ
ತನುವಿಂತು
ಪರಿಮಳಿಸುತಿಹುದೀ
ಪರಿ
ಯಾವ
ಸುಮವನ
ಪೊಕ್ಕು
ಲಲಿತಾಂಗಿ
ಬಂದಿಪಳೋ
ಪರಳೆನಿಸಳೀ
ಮನಕೆ
ಅದಾವ
ಪರಿಯೊ
ಪೇಳ್ವರಾರು?
ಎಲೆ
ಗಿಳಿಯೆ
ನೀ
ಅಲೆವೆಯಲ್ಲವೆ
ಗಿಡಮರಗಳನು
ಬಿಡದೆ
ಪರಿಚಿತಳೇನಿವಳು
ನಿನಗೆ
ಗಿಳಿಯಂತಲೆವ
ದುಂಬಿಯಗಳೆ
ನಳಿನಾಕ್ಷಿ
ಮೈಗಂಧ
ನವಸುಮದೆ,
ಇವಳ
ತನುವಿನದೆ?