ನರಸಿಂಗರಾಯನಿಗೆ ಅಪ್ಪನ ನಾಟಕದ ಪಾಠಗಳು
ನರಸಿಂಗರಾಯ ತನ್ನ ಅಪ್ಪ ಬರೆದಿಟ್ಟ ನಾಟಕಗಳನ್ನು ಮನವಿಟ್ಟು ಓದುತ್ತಿದ್ದ. ಆ ನಾಟಕಗಳು ವಿಭಿನ್ನವಾಗಿದ್ದರೂ ಅವು ಪೌರಾಣಿಕವೇ ಆಗಿದ್ದವು. ಅವಕ್ಕೆ ಹಾಡು, ಪದ್ಯಗಳು ಅಪ್ಪನವು. ಅವುಗಳನ್ನು ಮೇಲಿಂದ ಮೇಲೆ ಅಲ್ಲಲ್ಲಿ ತಿದ್ದಿರುವುದು ಕಂಡಿತು. ತೆಗೆದ ಪದಗಳ ಮೇಲೆ ತೆಳುವಾದ ಗೆರೆ ಎಳೆದು, ಅಲ್ಲಿಂದ ಗೆರೆ ಮೂಡಿಸಿ ಬಾಣದ ಗುರುತು ಹಾಕಿ, ಸೇರಿಸಿದ್ದ ಪದಗಳ ಅಡಿ ನಿಲ್ಲಿಸಿದ್ದ. ಸೊಗಸಾಗಿ ಹೊಂದಿದ ಪದಗಳನ್ನೂ ಬದಲಿಸಿದ್ದೇಕೆಂದು ತೋಚಲಿಲ್ಲ. ಹಾಗೇಕೆ ಮಾಡಿರುವುದೆಂದು ಕೇಳುತ್ತಿದ್ದಾಗ ಮುನೆಕ್ಕ ಬಂದು ಕುಳಿತಳು. ಅಂಗಡಿ ಬಿಟ್ಟು ಬಂದೆಯಲ್ಲ ಎಂದು ಅಮ್ಮ ಕೇಳಿದಳು. ಇವತ್ತು ತೆಗೆಯುವ ಮನಸ್ಸಿಲ್ಲ ಅಂದಳು.
ನೀನು ನೋಡುತ್ತಿರು ಹಾಡಿನಲ್ಲಿ ಸಚಿವಾಸುತ ಎಂಬುದಕ್ಕೆ ಬದಲಾಗಿ ಮುಂತ್ರಿಸುತ ಎಂದು ಸೇರಿಸಿರುವುದು ಯಾಕೆ ಗೊತ್ತ? ಗುಂಡ್ರಳ್ಳಿ ರಂಗ ಸದಾರಮೆ ನಾಟಕದಲ್ಲಿ ರಾಜಮಾರ್ತಾಂಡನ ಪಾರ್ಟು ಕಟ್ಟಿದ್ದ. ಅವನಿಗೆ 'ಚ'ಕಾರಗಳ ದೋಷವಿತ್ತು. ಬಡಕೊಂಡರೂ ಅವನ ಬಾಯಲ್ಲಿ ಆ ಅಕ್ಷರ ಹೊರಡುತ್ತಿರಲಿಲ್ಲ. ಸಸಿವಾಸುತ ಎಂದೇ ಹೇಳುತ್ತಿದ್ದ. ಆದ್ದರಿಂದ ಹಾಗೆ ಬದಲಿಸಬೇಕಾಯಿತು. ಇದೆಲ್ಲ ನಾಟಕ ಕಲಿಸುವವರ ಕರ್ಮ.
ಮುನೆಕ್ಕನ ಮನವ ಕವಿಯಿತು ನಾಟಕದ ಮಾಯೆ
ಹಾಗೆಯೆ ಈ 'ಅ,ಹ,ಲ,ಳ'ಗಳ ಹಣೆಬರಹ. ಮುಂದೆ ಇದೆ ನೋಡು 'ಗಾಡಿಯಿಂದ ಬರ್ಪುವನ ನೋಡಿ ಸತಿಯೆಂದು ಪೇಳ್ವೆ ಅನ್ನೋ ಕಡೆ ಅವನ 'ಲ' ಪ್ರೇಮಕ್ಕೆ ಮಣಿದು ಪೇಳ್ವೆ ಬದಲಿಗೆ ನುಡಿವೆ ಎಂದು ಸೇರಿಸಿದೆ. ನಾಟಕದ ಮೇಷ್ಟ್ರಿಗೆ ಇಂಥ ಜ್ಞಾನ ಮುಖ್ಯ. ಅಕ್ಷರ ಧ್ವನಿ ಹುಟ್ಟುವ ಸ್ಥಾನಗಳ ಅರಿವಿದ್ದರೆ ತಿದ್ದಬಹುದು. ಆದರೆ ಯಾವುದು ಅಭ್ಯಾಸವಾಗಿರುತ್ತೋ ಅದನ್ನು ಬದಲಿಸುವುದು ಸಾಧ್ಯವಿಲ್ಲ. ಹೇಳಿಕೊಡುವಾಗ ಸರಿಯಾಗಿ ಹೇಳಿದರೂ ಪುನರಾವರ್ತನೆಯಲ್ಲಿ ಡೊಂಕೇ' ಎಂದು ಅಪ್ಪ ವಿವರಿಸಿದ.
ಮುನೆಕ್ಕ ಚಿತ್ತವಿಟ್ಟು ಕೇಳುತ್ತಿದ್ದಳು. ಸಂಭಾಷಣೆಯಲ್ಲಿಯೂ ಇದು ಇದ್ದುದೆ. 'ಸ್ವಾಮಿ ಕಾಲು ನೀಡಿ ತೊಳೆಯುತ್ತೇನೆ' 'ಕಾಲು' ಪಾದವಾಗಿತ್ತು. ನಟನ ಬಾಯಲ್ಲಿ ಕಾಲು, ಕಾಳು ಆಗಿದ್ದರಿಂದ 'ಪದ' ಸೇರಿಸಲಾಗಿತ್ತು. 'ಮುನೆಕ್ಕ ಕಾಳು ನೀಡಿ ತೊಲೆಯುತ್ತೇನೆ' ಎಂದ ನರಸಿಂಗರಾಯ. ಅವನು ತನ್ನನ್ನು ಅಣಕಿಸುತ್ತಿದ್ದಾನೆಂದು ಮುನೆಕ್ಕ ಮುನಿಸಿಕೊಂಡಳು. ಅವಳ ಬಾಯಲ್ಲಿ 'ಳ' ಬದಲಿಗೆ 'ಲ'ನೇ ಹೊರಡುತ್ತಿದ್ದುದು. ನಾಳೆ ಕೇಳಿ ನೋಡು ಹೇಳುತ್ತೇನೆ ಎಂದಳು.
'ಅಮ್ಮ ಈವತ್ತು ಮುನೆಕ್ಕ ನಿಂಗೆ ಗಂಟು ಬೀಳ್ತಾಳೆ ನೋಡು. ಇವಳಿಗೆ ಕಲಿಸಲು ಹೋಗಿ ನಿನ್ನ ಲಗಳೆಲ್ಲ ಳಗಳು, ಳಗಳೆಲ್ಲ ಲಗಳಾಗಿಬಿಡುತ್ವೆ' ಎಂದು ನರಸಿಂಗರಾಯ ಅಂದಾಗ, ಎಲ್ಲರೊಂದಿಗೆ ಮುನೆಕ್ಕನೂ ನಕ್ಕಳು. 'ಬನ್ನಿ ಹೆಲ್ಲರಿಗೂ ಹೂಟ ಬಡಿಸುತ್ತೇನೆ' ಎಂದಳು ಅಮ್ಮ. 'ನಾನು ಹೊಳಗೆ ಓಗಿ ಬರಲೆ ಎಂದರು ಅಪ್ಪ. ಹೊಳೆಗೇಕೆ ಓಗುವುದು ಮನೆಯಲ್ಲಿ ನೀರಿದೆ' ಎಂದಳು ಅಮ್ಮ. 'ನಂಗೂ ಗೊತ್ತಿದೆ. ಹೊಳೆಗಲ್ಲ ಅದು ಒಳಗೆ ಅಂತ' ಎಂದಳು ಮುನೆಕ್ಕ. ಇದೇ ಲಹರಿಯಲ್ಲಿ ಊಟ ಸಾಗಿತು.
ನರಸಿಂಗರಾಯನ ಮೇಲೆ ಮುನೆಕ್ಕನ ಕಣ್ಗಾವಲು
ಮುನೆಕ್ಕನಿಗೆ ಪಾರ್ಟು ಕೊಡುವುದು ನಿಜವೋ ತಮಾಷೆಯೋ ಎಂದು ಅಮ್ಮ, ತಂದೆ ಮಗನನ್ನು ಕೇಳಿದಳು. ಬಫೂನು ಪಾರ್ಟು ಹಾಕೋದು ಗಂಡಸರೇ ಆಯಿತು. ಮುನೆಕ್ಕನಿಗೆ ಆ ಪಾರ್ಟು ಕೊಟ್ಟೇಕೆ ನೋಡಬಾರದು ಎಂದ ಅಪ್ಪನ ಮುಖ ನೋಡಿದ ನರಸಿಂಗರಾಯ. ಅಲ್ಲಿ ಯಾವುದನ್ನೂ ಸ್ಪಷ್ಟಪಡಿಸದ ನಗೆಯಿತ್ತು. ಅದೇ ನಗೆ ಉಳಿದವರ ಮುಖಗಳಲ್ಲಿಯೂ ಕಂಡಿತು.