ಸ ರಘುನಾಥ ಅಂಕಣ; ವಿದ್ಯಾರ್ಥಿಗಳನ್ನು ರಂಗಕ್ಕಿಳಿಸಿದ ನರಸಿಂಗರಾಯ
ನರಸಿಂಗರಾಯ ನಿದ್ದೆಗೆಟ್ಟು ಯೋಚಿಸಿದ. ಹುಣ್ಣಿಮೆಯೊಳಗೆ ಏನಾದರೂ ಮಾಡಲೇಬೇಕೆಂದು ಗೆಳೆಯರ ನಿದ್ದೆಯನ್ನೂ ಕೆಡಿಸಿದ. ಊರಿಗಾಗಿ ಮುಂದೆ ಬಂದ ರಂಗನ ಹಿಂದಿನ ತಪ್ಪುಗಳೆಲ್ಲ ಮಾಫಿಯಾಗಿ ಇವರ ಗ್ಯಾಂಗು ಸೇರಿದ್ದ. ಸುನಂದಾ, ಮೋಟಪ್ಪ, ಮುನೆಕ್ಕರು ಒಂದು ಗುಂಪಾಗಿ ಇದನ್ನೇ ಚಿಂತಿಸುತ್ತಿದ್ದರು.
ಅಪ್ಪಯ್ಯ ಒಂಟಿಯಾಗಿ ಆಲೋಚಿಸುತ್ತಿದ್ದ. ಮನಸ್ಸಾದಾಗ ಹೆಂಡತಿಯೊಂದಿಗೆ. ಉಳಿದವರು ಅಲ್ಲಲ್ಲಿ, ಮಾತನಾಡುವಾಗ ವಿಷಯ ತೆಗೆದಾಡಿಕೊಳ್ಳುತ್ತಿದ್ದರು. ಕೆರೆಯಲ್ಲಿ ಹೂಳು ತಣ್ಣಗಿದ್ದರೂ ಮನಸ್ಸುಗಳಲ್ಲಿ ಅದು ಕಾದ ಮಣ್ಣಾಗಿ ಕುಳಿತಿತ್ತು. ಎಂಎಲ್ ಎಗೆ ಇಂಥ ಪ್ರಸಂಗಗಳೆಷ್ಟೋ. ಚುನಾವಣೆಯ ತಂತ್ರ ಆ ಕಾಲಕ್ಕಿದ್ದದ್ದೆ. ಕೈ ಮುಗಿದು, ಕೈಯ್ಯೇ ಕಾಲೆಂದುಕೊಳ್ಳಿ ಎಂದೆಲ್ಲ ನಾಟಕವಾಡಿದರೆ ಮುಗೀತು ಎಂಬ ಧೋರಣೆಯಲ್ಲಿದ್ದುಬಿಟ್ಟ.
ಸ ರಘುನಾಥ ಅಂಕಣ; ಮನಸ್ಸುಗಳು ಒಂದಾದರೂ ಕಾರ್ಯಕ್ಕಿಳಿಯದ ಪ್ರಯತ್ನ
ಒಟ್ಟಿನಲ್ಲಿ ಕೆರೆಹೂಳು ಊರಿನವರ ನೆಮ್ಮದಿ ಕೆಡಿಸಿತ್ತು. ಇದನ್ನೇ ಕ್ರಿಯಾಶಕ್ತಿಯಾಗಿ ಪರಿವರ್ತಿಸುವ ಆಲೋಚನೆ ನರಸಿಂಗರಾಯನದು. ಆದರೆ ದಾರಿ ಕಾಣದಾಗಿತ್ತು. ಅಂತೆಯೆ ಹುಡುಕುವ ಪ್ರಯತ್ನವೂ ನಿಂತಿರಲಿಲ್ಲ.
ಅಂದು ನರಸಿಂಗರಾಯ ಊರಾಚೆಯ ಶಿವಾರಗೌಡನ ಬಾವಿ ಎಂದು ಕರೆಸಿಕೊಳ್ಳುವ ಕುಂಟೆಯ ದಡದಲ್ಲಿ ಕುಳಿತು ಯೋಚಿಸುತ್ತಿದ್ದ. ಕಣ್ಣ ಮುಂದಿದ್ದ ಕುಂಟೆಯಲ್ಲಿ ಒಂದು ಹನಿಯೂ ನೀರಿರಲಿಲ್ಲ. ಈ ಸಲವಾದರೂ ತುಂಬೀತೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದ. ಅದರ ಪಕ್ಕವೇ ಮಕ್ಕಳು ಶಾಲೆಗೆ ಹೋಗಿ ಬರುವ ದಾರಿ. ಎಲ್ಲರೂ ಒಟ್ಟಿಗೆ ಬರುತ್ತಿರಲಿಲ್ಲ. ಗೆಳೆಯ ಗೆಳೆಯರು ಗುಂಪಾಗಿ ಹೋಗಿ ಬರುತ್ತಿದ್ದರು. ಇಂಥ ಗುಂಪೊಂದು ಬರುತ್ತ, ಶಾಲೆಯಲ್ಲಿ ಚರ್ಚಾ ಸ್ಪರ್ಧೆಯೆಂದು ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡ ನರಸಿಂಗರಾಯ, ಅವರನ್ನು ಕರೆದು ಏನದು ಚರ್ಚಾಸ್ಪರ್ಧೆಯೆಂದ.
ಸ ರಘುನಾಥ ಅಂಕಣ; ಕಾಯಿಸಿ ಕಾಯಿಸಿ ದರ್ಶನಕೊಟ್ಟ ಎಂಎಲ್ ಎ
ಅವರಲ್ಲೊಬ್ಬ, 'ಬಯಲು ಸೀಮೆಯ ಬರಗಾಲ' ಅನ್ನೋ ವಿಷಯದ ಬಗ್ಗೆ ಚರ್ಚಾಸ್ಪರ್ಧೆ ಇಟ್ಟಿದ್ದಾರೆ ಅಂದ. ಸರಿ, ಚೆನ್ನಾಗಿ ತಯಾರಾಗಿ. ನಮ್ಮೂರಿನವರಿಗೇ ಫಸ್ಟ್ ಪ್ರೈಜ್ ಬರಬೇಕು ಎಂದು ಹೇಳಿ ಕಳುಹಿಸಿಕೊಟ್ಟ ಕೂಡಲೇ ಮೆದುಳಿನಲ್ಲಿ ಬೆಳಕು ಕಂಡಿತು. ಸೀದಾ ಗೆಳೆಯರನ್ನು ಹುಡುಕಿಕೊಂಡು ಹೊರಟ. ಎಲ್ಲರೂ ಮುನೆಕ್ಕನ ಅಂಗಡಿಯಲ್ಲಿ ಕುಳಿತು ಹರಟುತ್ತಿದ್ದರು. ಅವರ ಜೊತೆ ಕೂಡಿಕೊಂಡವನು, ನಮ್ಮ ಊರಿನಲ್ಲಿ ಹತ್ತನೇ ತರಗತಿ, ಪಿಯುಸಿ ಓದುತ್ತಿರುವ ಮಕ್ಕಳು ಎಷ್ಟು ಎಂದು ಕೇಳಿದ. ಎಲ್ಲರೂ ಮನಸ್ಸಿನಲ್ಲೆ ಎಣಿಸತೊಡಗಿದರು.
ಕಡೆಗೆ ಹತ್ತನೆ ತರಗತಿಯವರು ಒಂಬತ್ತು, ಪಿಯುಸಿಯವರು ಮೂವ್ವರು ಎಂದು ತಿಳಿಯಿತು. ಅವರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದರೆ ಹೇಗೆ ಅಂದ. ಈ ಹಿಂದೆ ಎಂದೂ ಇಲ್ಲದ್ದು ಏನಿವಾಗ ಅಂದ ಪಿಲ್ಲಣ್ಣ. ಮಕ್ಕಳಿಂದ ತಿಳಿದ ವಿಷಯ, ತನ್ನ ಮನಸ್ಸಿಗೆ ಬಂದ ವಿಚಾರವನ್ನು ತಿಳಿಸಿ, ಊರಿನವರಿಗೆ ಮಕ್ಕಳ ಮೂಲಕವೇ ಸಮಸ್ಯೆಯ, ಪರಿಹಾರದ ಮನವರಿಕೆ ಮಾಡಿಕೊಡೋಣ ಎಂದ. ಅದೂ ಆಗಲಿ ಎಂಬ ಸಮ್ಮತಿ ಸಿಕ್ಕಿತು.
ಅಲ್ಲಿಯೇ ಯಾರು ಯಾರೆಂದು ಪಟ್ಟಿ ತಯಾರಾಯಿತು. ಪ್ರಬಂಧದ ವಿಷಯವನ್ನು ನರಸಿಂಗರಾಯ ಹೇಳುತ್ತಿದ್ದಾಗ, ಬರೆದುಕೊಳ್ಳುವಂತೆ ರಂಗ ಸುನಂದಾಳಿಗೆ ಹೇಳಿದ. ಅವಳು ತೆಲುಗು ಅಕ್ಷರಗಳಲ್ಲಿ ಬರೆಯುತ್ತಾಳೆ. ನೀನೇ ಬರಕೊ ಅಂದ ರಂಗನಿಗೆ. ನಂಗೆ ಬರೆಯೋದೆ ಮರ್ತು ಹೋಗಿದೆ ಮಾರಾಯ ಅಂದ ಅವನು. ಬೇಗ ಕನ್ನಡದಲ್ಲಿ ಬರೆಯೋದನ್ನು ಕಲಿ ತಾಯಿ ಅಂದ ಬೋಡೆಪ್ಪ ಕಾಗದ ಪೆನ್ನನ್ನು ಅವಳ ಕೈಯಿಂದ ತೆಗೆದುಕೊಂಡು ಬರೆಯತೊಡಗಿದ. 1. ಕೆರೆಗಳ ನಿರ್ಮಾಣಕ್ಕಿದ್ದ ಕಾರಣಗಳು, 2. ನೀರಗಂಟಿ ಪದ್ಧತಿಯ ಅನುಕೂಲಗಳು, 3. ಗ್ರಾಮಸ್ಥರು ಕರ್ತವ್ಯವಾಗಿ ನಿರ್ವಹಿಸುತ್ತಿದ್ದ ಕೆರೆಗಳ ಕಾರ್ಯಗಳು, 4. ವರ್ತಮಾನದಲ್ಲಿ ಕೆರೆಗಳ ನಿರ್ವಹಣೆಯ ಸಮಸ್ಯೆ ಹಾಗೂ ಪರಿಹಾರ.
ಸ ರಘುನಾಥ ಅಂಕಣ; ನಗೆ ಮೊಗದ ಚಲ್ಲಾಪುರಮ್ಮನೆಷ್ಟು ಸುಂದರ!
ಕಷ್ಟ ಇದೆ. ಅವರಿಂದ ಇದಾಗಲ್ಲ ಅಂದ ಪಿಲ್ಲಣ್ಣ. ನಾವೆಲ್ಲ ಹೇಳಿಕೊಡೋಣ. ಹತ್ತನೆಯ ತರಗತಿಯವರ ಮೂರು ಗುಂಪು, ಮೊದಲ ಮೂರು ವಿಷಯಗಳು ಅವರಿಗೆ. ಪಿಯುಸಿಯವರದೊಂದು ಗುಂಪು. ಅವರಿಗೆ ನಾಲ್ಕನೆಯ ವಿಷಯ ಎಂದು ನಿರ್ಣಯಿಸಿದ ನರಸಿಂಗರಾಯ, ನಾಳೆ ಸಾಯಂಕಾಲಕ್ಕೆ ಅವರನ್ನೆಲ್ಲ ನಮ್ಮ ಮನೆಗೆ ಕರೆತರುವ ಕೆಲಸವನ್ನು ನರಸಿಂಗರಾಯ ಪಿಲ್ಲಣ್ಣ, ರಂಗರಿಗೆ ವಹಿಸಿದ.
ಅಂದುಕೊಂಡ ಹಾಗೆ ಎಲ್ಲ ಸೇರಿದರು. ಅಮ್ಮಯ್ಯ ಅವರಿಗೆಲ್ಲ ಮೆಣಸಿನಕಾಯಿ ಬಜ್ಜಿ ಕರಿದು, ಹೆಸರುಬೇಳೆಯ ಬೆಲ್ಲದ ಪಾಯಸ ಮಾಡಿ ಕೊಟ್ಟಳು. ಅವರು ತಿನ್ನುತ್ತ ಕುಡಿಯುತ್ತಿರುವಾಗ ನರಸಿಂಗರಾಯ ವಿಷಯ ತಿಳಿಸಿ, ಇವತ್ತು ಶನಿವಾರ. ಮುಂದಿನ ಭಾನುವಾರ ಪ್ರಬಂಧ ಸ್ಪರ್ಧೆ. ನಾವು ಹೇಳುವುದನ್ನು ಅರ್ಥ ಮಾಡಿಕೊಂಡು ಬರೆದು ಓದಬೇಕು. ಬೇಕೆನಿಸಿದರೆ ನಿಮ್ಮ ಮೇಷ್ಟ್ರುಗಳನ್ನು ಕೇಳಿ ಎಂದ. ಹುಡುಗಿಯೊಬ್ಬಳು ನಮಗಿರೋರೆಲ್ಲ ಮಿಸ್ಸುಗಳೇ ಅಂದಳು. ಅವರನ್ನೇ ಕೇಳಿ ಅಂದ ಪಿಲ್ಲಣ್ಣ. ಹುಡುಗನೊಬ್ಬ ಥಟ್ಟನೆ, ನಮ್ಮದು ಸ್ಕೂಲಲ್ಲ ಅಣ್ಣ ಕಾಲೇಜು ಅಂದು ಕಿಸಕ್ಕನೆ ನಕ್ಕ. ಈಗ ನಕ್ಕವನು ಅಪ್ಪಯ್ಯ.
ಜಡ್ಜುಗಳು ಯಾರಪ್ಪ ನರಸಿಂಗ ಅಂದ ಅಪ್ಪಯ್ಯ. ನೀನೊಬ್ಬ, ನಿನ್ನ ಜೊತೆಗೆ ನಮ್ಮೂರು ಶಾಲೆಯ ಇಬ್ಬರು ಮೇಷ್ಟ್ರುಗಳು ಅಂದ ನರಸಿಂಗರಾಯ.