ಹಗುರಾಯಿತು ಮನ, ಜೇನಾಯಿತು ಭಾವ
ಅಪ್ಪ, ಅಮ್ಮ, ಮುನೆಕ್ಕ ಮಾಡಿದ ಗುಟ್ಟು ಏನೇ ಆಗಲಿ, ನರಸಿಂಗರಾಯನ ಮನದಲ್ಲಿದ್ದ ಭಾವನೆಗೆ ನವಿಲು ಬಂದಿತ್ತು. ಅದು ಗರಿಗೆದರಿ ಕೆದರಿ ಕುಣಿಯಿತು. ಸುನಂದಾ ಬಂದರೆ, ಅಪ್ಪನಿಗೆ ಸೂಕ್ಷ್ಮವಾಗಿ ತಿಳಿಸಿ, ಅವಳಿಗೆ ಸದಾರಮೆ ಪಾತ್ರ ಕೊಡುವುದು, ನಾಟಕಕ್ಕೆ ಹೊಸ ರೂಪಕೊಡಲು ಮುವ್ವರು ಕೂಡಿ ಚರ್ಚಿಸುವುದು, ಅವನು ಮಾರ್ಪಾಡುಗಳನ್ನು ತಿಳಿಸಿದರೆ ಮಾಡಿಕೊಳ್ಳುವುದು, ನಂತರ ಪಾತ್ರದಾರರ ಸಮಾವೇಶ, ಆಯ್ಕೆ ಎಂದೆಲ್ಲ ಆಲೋಚಿಸಿಕೊಂಡಿದ್ದ. ಅಂದುಕೊಂಡಂತೆ ನೆರವೇರುವ ಸೂಚನೆಯಾಗಿ ಸುನಂದಾ ಬಂದಿದ್ದಳು. ಅಲ್ಲ, ಕರೆತಂದ್ದರು.
ಸುನಂದಾ ಮುನೆಕ್ಕನ ಮನೆಗೆ ಹೋಗಿದ್ದಳು. ನರಸಿಂಗರಾಯ ತನ್ನ ಮನದಲ್ಲಿದ್ದುದನ್ನು ಅಪ್ಪನಿಗೆ ಅಮ್ಮನ ಎದುರೇ ಹೇಳಿದ. ಅಪ್ಪ ಒಂದೇ ಮಾತಿನಲ್ಲಿ ಹೇಳಿದ 'ಬೇಷಕ್ ಮಗನೆ' ನರಸಿಂಗರಾಯ ಮನದಲ್ಲಿ ಹಗುರಾಯಿತು ಮನ, ಜೇನಾಯಿತು ಭಾವ ಅಂದುಕೊಂಡ. ಅಷ್ಟೇ. ಇದನ್ನೇ ಸದಾಮೆಗೆ ರಾಜಕುಮಾರನ ಜೊತೆ ಹಾಡಲು ಯುಗಳ ಗೀತೆಗೆ ಪಲ್ಲವಿ ಮಾಡಿಕೊಳ್ಳಬೇಕೆನಿಸಿತು. ಕೂಡಲೇ ಹುಣಿಸೆ ತೋಪಿಗೆ ಹೊರಟ.
ಕರೆದಿದೆ
ಹೂದೋಟ
ಹಾಡಲು
ಸುಖಗೀತ
ಪರಿಮಳ
ಭರಿತ
ಭಾವ
ತುಂಬಲು
ಅನುರಾಗ
ಪ್ರೀತಿಯ
ಮಳೆಯಲಿ
ಇನಿಯ
ನೆನೆಯಲು
ಈ
ಹೃದಯ
ಸಂಜೆಯ
ಬಾನಿನ
ಕೆಂಪು
ನಿನ್ನ
ಕೆನ್ನೆಯಲರಳಿದ
ಅಲರು
ಓಹೋ
ಇನಿಯ
ನೀನೇ
ಚಂದಿರ
ಆಹಾ
ನಲ್ಲೆ
ನೀನೇ
ನೈದಿಲೆ
ಗೆಜ್ಜೆ ಕಾಲ್ಗಳ ದನಿಯನು ತೋರುತಾ...
'ಭರಿತ, ಅಲರು' ಶಬ್ದಗಳು ಜನರಿಗೆ ಅರ್ಥವಾಗುವುವೆ ಅನ್ನುವ ಸಂಶಯವನ್ನು ನರಸಿಂಗರಾಯನ ಮನಸ್ಸು ಹುಟ್ಟಿಸಿತು. 'ತುಂಬಿದ, ಸುಮವು' ಎಂದು ಮಾಡಿದರೆ ಹೇಗೆ ಅನ್ನಿಸಿತು. ಆದರೆ ಮನಸ್ಸು ಒಪ್ಪುತ್ತಿರಲಿಲ್ಲ. ಅಪ್ಪನನ್ನು ಕೇಳುವುದು, ಅವನು ಬದಲಿಸೆಂದರೆ ಬದಲಿಸುವುದೆಂದುಕೊಂಡ. ಅಪ್ಪನನ್ನು ಕೇಳಿದಾಗ ಬ್ರಾಕೆಟ್ಟಿನಲ್ಲಿಟ್ಟಿರು. ಪ್ರಾಕ್ಟೀಸು ಮಾಡಿಸುವಾಗ ನೋಡೋಣ ಎಂದ. ನರಸಿಂಗರಾಯ ಹಾಗೆಯೆ ಮಾಡಿದ.
ಸದಾರಮೆಯ ಪ್ರಸಾದನ, ವಸ್ತ್ರ ವಿನ್ಯಾಸವೂ ಅದ್ಭುತವಾಗಿರವಾಗಿರಬೇಕು. ಈ ಬಗ್ಗೆ ಪ್ರತ್ಯೇಕವಾಗಿ ಅವಳೊಂದಿಗೆ ಚರ್ಚಿಸಬೇಕು. ಸದಾರಮೆ ಹೆಸರಿಗೆ ತಕ್ಕಂತೆ ರಂಗದ ಮೇಲೆ ಮೆರೆಯಬೇಕು. ಸುನಂದಾಳ ಹೆಸರು ನಾಲ್ಕೂರು ತಲುಪಬೇಕು. ನರಸಿಂಗ ನಾಟಕದಲ್ಲಿ ಅಪ್ಪನಿಗೆ ತಕ್ಕ ಮಗ ಎನಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ನಾಟಕವನ್ನು ಪಾರಾಯಣದಂತೆ ಹಿಡಿದು ಕುಳಿತ. ತೋಚಿದ್ದನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಕಳ್ಳನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅದರಲ್ಲಿ ಕೊಂಚ ಹಾಸ್ಯವಿದ್ದರೆ ಮತ್ತೂ ಕಳೆ. ಹೀಗೆ ಪಾತ್ರ ಪಾತ್ರದ ಬಗ್ಗೆಯೂ ಯೋಚಿಸುತ್ತಿದ್ದ. ಈವರೆಗೆ ತನ್ನೂರಲ್ಲಿ ಮಾತ್ರ ಆಡಿ ಸುಮ್ಮನಾಗುತ್ತಿದ್ದರು. ಈ ಸಲ ನೋಡಲು ಬಂದ ಪರ ಊರಿನವರೂ ಆಡಲು ಕರೆಯಬೇಕು. ಸದಾರಮೆ ನಾಟಕವೆಂದರೆ ಮಲಿಯಪ್ಪನಹಳ್ಳಿಯವರದೇ ಎಂದಾಗಬೇಕು. ಉತ್ಸಾಹಕ್ಕೆ ಕಟ್ಟೆ ಸಿಕ್ಕದೆ ಹರಿಯತೊಡಗಿತು. ಇದನ್ನೆಲ್ಲ ಸುನಂದಾಳೊಂದಿಗೆ ಹಂಚಿಕೊಳ್ಳಬೇಕು ಅಂದುಕೊಂಡ.
ನಾಟಕದಲ್ಲಿ ಹೆಚ್ಚಿಗೆ ಸಂಭಾಷಣೆ ಇಡುವುದೇ? ಪದ್ಯಗಳನ್ನೇ? ಎಂಬ ಜಿಜ್ಞಾಸೆ ಪ್ರಾರಂಭವಾಯಿತು. ಹಳ್ಳಿ ಜನ ಇಂದಿಗೂ ಪದ್ಯ, ಹಾಡುಗಳನ್ನೇ ಹೆಚ್ಚಿಗೆ ಬಯಸುವುದು. ನಾಟಕದ ಮೇಷ್ಟ್ರಿಗೆ ಸರಿಯಾಗಿ ಸಂಗೀತ ಬರದೇನೊ. ಅದಕೇ ಮಾತುಗಳು ತುಂಬವ್ನೆ ಎಂಬ ಮಾತು ಪ್ರೇಕ್ಷಕರಿಂದ ಬಂದುಬಿಟ್ಟರೆ? ಬರುವುದೇನು, ತಾನು ಬಲ್ಲಂತೆ ಹೀಗಾದುದೂ ಇದೆ. ನರಸಿಂಗರಾಯನಿಗೆ ಸಂಭಾಷಣೆಗಳನ್ನು ಪ್ರಧಾನವಾಗಿಸುವ ಧೈರ್ಯ ಬರಲಿಲ್ಲ. ಮುಂದೆ ಆಡುವುದಾದರೆ ಆಗ ಧೈರ್ಯ ಮಾಡುವ ಅಂದುಕೊಂಡ.
ಸುನಂದಾಳ ನಿರ್ಗಮನದಿಂದ ಬಿಮ್ಮೆಂದ ಮನಸುಗಳು
ಕಳ್ಳನ ಪಾತ್ರ ಸದಾರಮೆ, ರಾಜಮಾರ್ತಾಂಡರ ಪಾತ್ರದಷ್ಟೇ ಮುಖ್ಯವಾದುದು. ಅದಕ್ಕೆ ಒಂದು ಹಾಸ್ಯ ಭರಿತ ಪದ್ಯಕ್ಕಿಂತ ಹಾಡೇ ಸರಿಯಾದುದು ಎಂಬ ತೀರ್ಮಾನಕ್ಕೆ ಬಂದ. ಅದು ಸರಳವಾಗಿರಬೇಕು, ಅದು ಅವನ ಪ್ರವೇಶದ ಹಾಡಾಗಿರಬೇಂದು ಬಯಸಿದ. ಅಪ್ಪನ ಪುಸ್ತಕದಲ್ಲಿದ್ದ ಹಾಡೂ ಚೆನ್ನಾಗಿಯೇ ಇತ್ತು. ಆದರೆ ಹೊಸ ಹಾಡಾದರೆ ಚೆನ್ನವೆಂದು ಅನ್ನಿಸಿತು.