ಸಣ್ಣ ಕಥೆಗಳ ಸರಣಿ: ಗೋಪಾಲ - ಲಕ್ಷ್ಮಿಯರ ದೂತನಾಗಿ ನರಸಿಂಗರಾಯ
ನಾಲಕ್ಕನೆಯ ತರಗತಿಯವರೆಗೂ ಸರಿಯಾಗಿ ಮಣ್ಣು ಹೊರದ ಮುನೆಂಕಟಪ್ಪನೋರ ಗೋಪಾಲನನ್ನು ಓದಲು ಒತ್ತಾಯಿಸದ ಮನೆಯವರು, ಕುರಿಗಳೊಂದಿಗೆ ದನಗಳನ್ನೂ ಕೂಡಿಸಿ ಕಾಯಲು ಹಾಕಿದ್ದರಿಂದ ಕಲಿತಿದ್ದ ಮೂರು ಅಕ್ಷರಗಳನ್ನೂ ಸರಸ್ವತಿಗೇ ವಾಪಸ್ಸು ಮಾಡಿಬಿಟ್ಟಿದ್ದ.
ಯಾವಾಗ ಎಸ್ ಎಲ್ಸಿ ಲಕ್ಷ್ಮಿಯೆಂದು ಊರಿನಲ್ಲಿ ಕರೆಸಿಕೊಂಡಿದ್ದ ಲಕ್ಷ್ಮಿಯ ಮೇಲೆ ಮನಸ್ಸು ಬಿತ್ತೋ ಆಗ, ಇವಳಿಗೆ ಕಾಗದ ಬರೆಯುವಷ್ಟು, ಅವಳು ಬರೆದುದನ್ನು ಓದುವಷ್ಟಾದರೂ ಕಾಗುಣಿತ ಕಲಿಯಬೇಕಿತ್ತು ಅನ್ನಿಸಿತು. ಬಹಳಾನೇ ಬೇಜಾರು ಆಯಿತು. ಆಗ ಅವನ ಮನಸ್ಸಿಗೆ ಕಂಡವನು ನರಸಿಂಗರಾಯ.
ಅವನೇ ತನ್ನ ದನಗಳೊಂದಿಗೆ ನರಸಿಗರಾಯ ದನ ಮೇಯಿಸುತ್ತಿದ್ದಲ್ಲಿಗೆ ಬಂದು ಪರಿಚಯವನ್ನು ದೋಸ್ತಿಗೆ ತಿರುಗಿಸಿಕೊಂಡ. ಮಾಲೂರಿನಲ್ಲದ್ದ ಟೆಂಟಿಗೆ ಕರಕೊಂಡು ಹೋಗಿ ಸಿನೆಮಾ ತೋರಿಸಿದ. ಗುರುಪ್ರಸಾದ್ ಹೋಟಲಿನಲ್ಲಿ ಘಮಘಮಾ ಮಸಾಲೆದೋಸೆ, ಜಾಮೂನು ಕೊಡಿಸಿದ. ಅವನನ್ನು ಮೆಚ್ಚಿಸಿದ.
ಹೊರಟಾನೊ ನರಸಿಂಗರಾಯ ಶಕುಂತಲೆಯ ಅನ್ವೇಷಣೆಗೆ
ಎಸ್ ಎಲ್ಸಿ ಲಕ್ಷ್ಮಿಯನ್ನು ಪ್ರೀತಿಸೋ ವಿಷಯ ಹೇಳಿ, ಒಂದು ಪ್ರೇಮಪತ್ರ ಬರೆದುಕೊಡಲು ಅಂಗಲಾಚಿದ. ಇದೂ ಒಂದು ಅನುಭವವೇ ಅಂದುಕೊಂಡು ಒಪ್ಪಿದ. ಓದಿದ್ದ ಶಕುಂತಲಾ - ದುಶ್ಯಂತರ ಭೇಟಿಯ ಪ್ರಸಂಗವನ್ನು ನೆನಪಿಸಿಕೊಂಡು, ಮಾರೆಮ್ಮನಿಗೆ ದೀಪಗಳನ್ನು ಹೊರುವಾಗ ತೊಟ್ಟಿದ್ದ ಕೆಂಪು ಲಂಗ, ರವಿಕೆ, ಸೊಂಟದಿಂದ ರವಿಕೆಯ ಮೇಲೆ ಹಾಕಿಕೊಂಡಿದ್ದ ಬಿಳಿಯ ದಾವಣಿಯಲ್ಲಿ ಲಕ್ಷ್ಮಿಯನ್ನು ಕಂಡ ಗೋಪಾಲನು ಹೇಳಿದ್ದನ್ನು ಸಮನ್ವಯಗೊಳಿಸಿ ಪತ್ರ ಬರೆದು, ನಿನ್ನ ಪ್ರೇಮಕ್ಕಾಗಿ ಕಾದಿರುವ ಗೋಪಾಲನೆಂಬ ದುಶ್ಯಂತ ಎಂದು ಮುಗಿಸಿದ.
ಓದಿ ಹೇಳಿದಾಗ ಗೋಪಾಲನಿಗೆ ಅರ್ಥವಾದದ್ದೆಷ್ಟೊ? ಚೆನ್ನಾಗಿದೆ. ಆದರೆ ಈ ದುಶ್ಯಂತ ಯಾರು ಎಂದ. ಅವನಿಗೆ ಆ ಕಥೆ ಹೇಳಿದ.
ಮರುದಿನ ಗೋಪಾಲ ಪತ್ರವನ್ನು ನರಸಿಂಗರಾಯನಿಗೆ ಕೊಟ್ಟು, ಇದನ್ನು ಅವಳಿಗೆ ನೀನೇ ಕೊಡಬೇಕೆಂದು ಕೈ ಹಿಡಿದು ಬೇಡಿದ. ಅವಳೇನಾದರೂ ಅಂದುಬಿಟ್ಟರೆ ಎಂಬ ಹಿಂಜರಿಕೆ. ಅವಳ, ತನ್ನ ಮನೆಯವರಿಗೆ ತಿಳಿದರೆ ನನ್ನ ಗತಿಯೇನು ಎಂದು ಭಯ ಹುಟ್ಟಿತು.
ಗುಟ್ಟಾಗಿ ಕೊಡೋದಲ್ವ. ಅವಳಿಗೂ ನನ್ನಲ್ಲಿ ಮನಸಿದೆ ಅನ್ನಿಸಿದೆ ಎಂದೆಲ್ಲ ಪರಿಪರಿಯಾಗಿ ಬೇಡಿದ. ಮನಸ್ಸಿನಲ್ಲಿ ಹುಟ್ಟಿದ ಹುಂಬತನ, ಇದೂ ಒಂದು ಅನುಭವವಾಗಿ ಬಿಡಲಿ ಅನ್ನಿಸಿ ಒಪ್ಪಿ, ಅಳುಕು, ಭಯಗಳ ಮುಂದಕ್ಕೆ ಧೈರ್ಯವನ್ನು ತಂದು ಗೋಪಾಲ ಕೊಟ್ಟಿದ್ದೆಂದು ಒತ್ತಿ ಹೇಳಿ ಅವಳಿಗೆ ಕೊಟ್ಟು, ಕ್ಷಣವೂ ನಿಲ್ಲದೆ ಬಂದುಬಿಟ್ಟ.
ಏನೇನಾಗುವುದೋ ಎಂದು ನಿರೀಕ್ಷಿಸಿದ. ಎರಡು ದಿನವಾದರೂ ನಿಶ್ಶಬ್ದ. ಗೋಪಾಲ ಮತ್ತೆ ಬರೆಸಿ ಕೊಡಿಸಿದ. ಲಕ್ಷ್ಮಿ ಎರಡು ಪತ್ರಕ್ಕೂ ಮೌನ. ಮೂರನೆಯ ಪತ್ರ ಕೊಟ್ಟಾಗ: 'ಎಷ್ಟು ಚೆಂದ ಬರೀತೀಯ! ಲವ್ ಮಾಡೋ ಧಂ ನಿಂಗಿಲ್ವ? ಐ ಲವ್ ಯು ನರಸಿಂಗ' ಎಂದಳು. ನರಸಿಂಗರಾಯ ನಡುಗಿದ, ಬೆವೆತ. ಅಲ್ಲಿಂದ ಓಡಿಬಿಟ್ಟ. ಇದಾದ ಎರಡು ತಿಂಗಳಿಗೆ ನರಸಿಂಗರಾಯ ಲಕ್ಷ್ಮಿಯ ಮದುವೆ ಊಟ ಮಾಡಿ ಬಂದ. ಗೋಪಾಲ ವಿರಹದಲ್ಲಿ ಬೆಂದ.