ಸ ರಘುನಾಥ ಅಂಕಣ; ಬೇಸ್ತವಾರಕ್ಕೆ ಮೂರು ದಿನ ಮುಂಚೆ...
ಮುನಿನಾರಯಣಿ ಅಣ್ಣನ ಸೂಚನೆಗೆ ಕಾಯದೆ ಆ ರಾತ್ರಿಯೇ ಟಮುಕು ಹಾಕಿದ. ಪಾರ್ಟಿನ ಖಾಯಷ್ ದಾರರು ಮಾತುಕತೆ, ಚರ್ಚೆ ನಡೆಸಿ ಅಣಿಯಾಗಲಿ ಎಂಬುದು ಅವನ ಮುಂದಾಲೋಚನೆ.
ಟಮುಕು ಕೇಳುವುದರೊಂದಿಗೆ ನಾಟಕದ ಮಾತುಗಳಿಗೆ ಉಸಿರು ಬಂದಿತು. ಬೀರಣ್ಣನ ಮನೆಯಲ್ಲಿ ನಾಟಕದ ಮಾತು ಹೊರಟು, ಸುನಂದಾಳಿಗೇ ಸದಾರಮೆ ಪಾರ್ಟು ಕೊಡುವರೇನೊ ಎಂದು ಬೀರಣ್ಣನೆಂದಾಗ, ಅವನ ಮಗ ಸೋಮೇಶನ ಚಿತ್ತದಲ್ಲಿ ಸುನಂದಾಳ ಸೆರಗಿನ ಗಾಳಿ ಬೀಸತೊಡತು. ಅವಳನ್ನು ಒಲಿಸಿಕೊಳ್ಳಲು ಸದಾರಮೆ ಡ್ರೆಸ್ಸಿನ ಖರ್ಚು ತನ್ನದೇ ಎಂದು ತಿಳಿಸಬೇಕೆಂದುಕೊಂಡ.
ಶಿವರಾತ್ರಿ ಕಳೆದ ವಾರಕ್ಕೆ ಸದಾರಮೆ ನಾಟಕ
ಸರಕಾರಿ ನೌಕರಿಯಲ್ಲಿದ್ದ ಅಣ್ಣಂದಿರಿಬ್ಬರು ಕಳಿಸುತ್ತಿದ್ದ ಹಣದಿಂದಾಗಿ ಅವನಲ್ಲಿ ಹುಂಬತನದ ಮೋಜು ಮೆರೆಯುತ್ತಿತ್ತು. ಅವರು ಗುಟ್ಟಿನಿಂದ ತಿಂದುಳಿದ ಎಂಜಲ ಎಂಜಲಿನಲ್ಲಿ ಮೋಜು ಮಾಡುತ್ತಿದ್ದ ನಾಲ್ಕು ಜನ ಅವನ ಹಿಂದಿದ್ದರು. ಅವರು ಇವನ ಹುಂಬತನಕ್ಕೆ ನೀರೆರೆಯುತ್ತಿದ್ದರು. ಅಷ್ಟಕ್ಕೇ ಅವನು ಹೀರೋ ಎಂದುಕೊಂಡು ಬೀಗುತ್ತಿದ್ದ. (ಇದನ್ನು ನನಗೆ ಹೇಳಿದ್ದು ಬೋಡೆಪ್ಪ, ಪಿಲ್ಲಣ್ಣ. ನಾನು ಯಾರೆಂದು ಮುಂದೆ ಹೇಳಲಿದ್ದೇನೆ). ಮರುದಿನ ಮಧ್ಯಾಹ್ನ ಸೋಮೇಶ ಬಾಗಿಲಲ್ಲಿ ನಿಂತಿದ್ದಾಗ ಮುನೆಕ್ಕ ಬಟ್ಟೆಗಳ ಮಕ್ಕರಿ ಹೊತ್ತು ಒಗೆಯಲು ಕೆರೆಯ ದಿಕ್ಕು ಹಿಡಿದಿದ್ದನ್ನು ನೋಡಿದ. ಇದೇ ಸರಿಯಾದ ಸಮಯವೆಂದು ಒಳಗೆ ಹೋಗಿ ಷರ್ಟು ಹಾಕಿಕೊಂಡು ಮುನೆಕ್ಕನ ಅಂಗಡಿಯತ್ತ ಹುರುಪಿನಿಂದ ಹೊರಟ.
ಗಿರಾಕಿಗಳಿಲ್ಲದ್ದರಿಂದ ಸುನಂದಾ ಹೆಂಗಸರ ಲೆಕ್ಕದ ಪುಸ್ತಕ ಹಿಡಿದು ಕೂಡುತ್ತ, ಕಳೆಯುತ್ತ ಕುಳಿತಿದ್ದಳು. ಸೋಮೇಶ ಅವಳ ಮುಂದೆ ನಿಂತು ನಕ್ಕ. ಸಹಜವಾಗಿಯೇ ಅವಳೂ ನಕ್ಕಳು. ಅವನಿಗೆ ಅಷ್ಟೇ ಸಾಕಾಯಿತು. ಒಳಗೆ ಹೋಗಿ ನಿನಗೆ ಏನೋ ಹೇಳಬೇಕು ಬಾ ಅಂದ. ಅಲ್ಲಿಂದಲೇ ಹೇಳೆಂದಳು. ಬಾ ಎಂದರೆ ಬರಬೇಕು ಅಂದ. ಅವಳು ಏಳಲ್ಲಿಲ್ಲ. ಇವನ ಹುಂಬತನ ಕೆರಳಿತು. ಬಾ ಎಂದರೆ ಬರಬೇಕು ಎಂದು ಹೋಗಿ ಅವಳ ಕೈ ಹಿಡಿದೆಳೆದ. ಅವಳು ನೋವಿನಿಂದ ಅಯ್ಯೋ ಎಂದಳು.
ಒಗೆಯಲು ತೆಗೆದುಕೊಂಡು ಹೋಗಲು ಮರೆತಿದ್ದ ತನ್ನ ರವಿಕೆಯನ್ನು ತೆಗೆದುಕೊಂಡು ಹೋಗಲು ಮನೆಗೆ ಮರಳಿದ್ದ ಮುನೆಕ್ಕ ಅದನ್ನು ಹುಡುಕಿಕೊಂಡು ರೂಮಿನಿಂದ ಹೊರಬಂದಾಗ ಈ ದೃಶ್ಯವನ್ನು ಕಂಡಳು. ಹಿಂದೊಮ್ಮೆ ಹೀಗೆಯೇ ತನ್ನ ಕೈ ಹಿಡಿದಿದ್ದ. ಉಗಿದು ಉಪ್ಪುಹಾಕಿ ಅಟ್ಟಿದ್ದಳು. ಅಂದಿನ ಸಿಟ್ಟು ಮರಕಳಿಸಿತು, ನೆತ್ತಿಗೇರಿತು. ಅವನು ಹಿಡಿದ ಕೈ ಬಿಡದೆ ಎಳೆಯುತ್ತಿದ್ದ. ತಕ್ಷಣಕ್ಕೆ ಕೈಗೆ ಸಿಕ್ಕಿದ ಪೊರಕೆ ಎತ್ತಿಕೊಂಡು ರಪರಪ ಬಾರಿಸಿದಳು.
ಸುನಂದಾ ತೆರೆದ ಮುನೆಕ್ಕನ ಲೆಕ್ಕದ ಖಾತೆಗಳು
ಬೀಡಿಕಟ್ಟಿಗಾಗಿ ಆಗಲೇ ಬಂದ ಬೀರಣ್ಣ ನೋಡಿ ಕೆಂಡವಾದ. ಒಳ ನುಗ್ಗಿ ಮಗನನ್ನು ಬಿಡಿಸಿಕೊಂಡು, ನಾಟಕದ ರಂಡೆ ಜೊತೆ ಸೇರಿಕೋಡು ಸಂಸಾರಸ್ತರ ಮಕ್ಕಳ ಮಾನ ಕಳೆಯೋಳಾದೆಯೇನೆ ಮುನಿ ಎಂದು ಕೈಯೆತ್ತಿದ. ಮುನೆಕ್ಕನ ಕೈಲಿದ್ದ ಪೊರಕೆ ಮೇಲೇರಿತು. ಕೂಗಲಾ ಜನಾನ ಎಂದಳು. ಬೀರಣ್ಣ ಕೊಂಚ ತಣ್ಣಗಾಗಿ ಪೊರಕೇಲಿ ಹೊಡೆಯೋ ಅಂಥದ್ದೇನಾಯ್ತು ಅಂದ.
ನನ್ನ ಮನೆ ಪೊರಕೆ ಮುಟ್ಟೋಕು ಲಾಯಕ್ಕಿಲ್ಲದ ಈ ನನ್ನ ಬಟ್ಟೆ ನಮ್ಮ ಹುಡುಗಿ ಕೈ ಹಿಡಿದು ಎಳೀತಾನೆ ಅಂದ್ರೆ... ನನ್ನ ಕೈಗೆ ಪೊರಕೆ ಬದಲು ಚಪ್ಲಿ ಸಿಕ್ಕಿದ್ರೆ... ಅಂದು ಗುಟುರು ಹಾಕಿದಳು. ಸುನಂದಾ ಮಂಡಿಗಳ ನಡುವೆ ತಲೆಯಿಟ್ಟು ಬಿಕ್ಕುತ್ತಿದ್ದಳು. ಅಂಗಡಿಯತ್ತ ಪೂಜಾರರ ಲಕ್ಷ್ಮೀನಾರಾಯಣ ಬರುತ್ತಿರುವುದನ್ನು ಬೀರಣ್ಣ ನೋಡಿದ. ಅವನ ಬಾಯಿಗೆ ಬಿದ್ದರೆ ಊರಿನ ಮಾತಾಗಿಬಿಡುವುದೆಂದು ಹೆದರಿದ. ಮುನೆಕ್ಕನಿಗೆ ಕೈ ಮುಗಿದು, ಹೊಟ್ಟೇಲಿ ಹಾಕ್ಕೊ. ಇವನು ನಿಮ್ಮ ಮನೆ ಕಡೆ ತಲೆಯಿಟ್ಟು ಮಲಗೋಕೂ ಬಿಡಲ್ಲ' ಎಂದು ಗೋಗರೆದು ಮಗನನ್ನು ಎಳೆದುಕೊಂಡು ಬಿರಬಿರ ಹೋರಟು ಹೋದ.