ಸುನಂದಾಳ ರೂಪಿನ ಬೆಳದಿಂಗಳು...
ಮನೆ ಮನೆಯಲ್ಲೂ ಸುನಂದಾ ಮುನೆಕ್ಕನ ಮನೆಯಲ್ಲಿರುವ ಮಾತು. ಅವಳು ಬಂದಿರುವುದೇಕೆ? ನಾಟಕದಲ್ಲಿನ ಪಾತ್ರಕ್ಕಂತೂ ಅಲ್ಲ. ನಾಟಕದ ಬಗ್ಗೆ ಇನ್ನೂ ಕೊನೆಯ ಮಾತೇ ಆಡಿಲ್ಲ. ಇಲ್ಲೆಯೇ ಇದ್ದುಬಿಡುವಳೆಂಬ ಮಾತು ನಿಜವೆ? ಏತಕ್ಕೆಂದು ಇದ್ದಾಳು? ಅವಳಿಗೇನಿದೆ ಇಲ್ಲಿ? ಅಪ್ಪಯ್ಯನೇ ಕರೆಸಿರುವುದೆಂಬುದು ನಿಜವೇ? ಇದರಲ್ಲಿ ದುಗ್ಗಪ್ಪನ ಪಾತ್ರವೀದ್ದೀತೆ? ಇದ್ದರೆ ಅವಳನ್ನು ಕರೆಸುವ ಉದ್ದೇಶವೇನಿದ್ದೀತು? ನರಸಿಂಗರಾಯ ಅವಳೊಡನೆ ಪಾರ್ಟು ಕಟ್ಟದವನು.
ಅವಳ ಮೇಲೆ ಮನಸಾಗಿ ಕರೆಸಿಕೊಂಡಿರಬಹುದೆ? ಅವನಿಗೂ ಮುನೆಕ್ಕನಿಗೂ ಭೋ ವಿಶ್ವಾಸ. ಮುನೆಕ್ಕನನ್ನು ಮುಂದೆ ಹಾಕಿ ಕರೆಸಿಕೊಂಡಿದ್ದಾನೆ? ಮುನೆಕ್ಕನ ಮನೆಯಲ್ಲಿರಿಸುವ ಹುನ್ನಾರು ಅವನದೇನೊ? ಪ್ರಶ್ನೆಗಳು ಸುತ್ತಿ ಸುತ್ತಿ ಅವನ ಸುತ್ತಲೇ ಅಲೆದಾಡಿದವು. ಅಪ್ಪಯ್ಯನ ಹೆಸರು ಕೆಟ್ಟಂತೆಯೇ ಇನ್ನು. ಮಗನೇ ಹೀಗಾದ ಮೇಲೆ ಇನ್ನು ಯಾರಿಗೆ ನ್ಯಾಯ ಹೇಳಿಯಾನು? ಪಾಪದ ಜೀವವಾಗಿಬಿಟ್ಟ ಅಪ್ಪಯ್ಯ.
ನರಸಿಂಗರಾಯನಿಗೆ ಸುಳಿವು ಸಿಗದ ಮಂಥನ...
ಈ ಮಾತು, ಅದಕ್ಕೆ ಹೊರಡುತ್ತಿದ್ದ ಪ್ರತಿಕ್ರಿಯೆಗಳಿಗೆ ಸರಿಯಾದ ಉತ್ತರ ಸಿಗದೆ ಅದಷ್ಟೋ ಮನಸ್ಸುಗಳು ಒದ್ದಾಡುತ್ತಿದ್ದವು. ಅಲ್ಲಿ ಸುನಂದಾಳ ರೂಪಿನ ಬೆಳದಿಂಗಳಿದು ಕಾಡತೊಡಗಿತು.
ಹಲವರ ಎದೆಗಳಲ್ಲಿ ಸುನಂದಾಳ ಮೇಲಿನ ಮೋಹದ ಬಯಕೆಯ ಉಸಿರಾಟ ನಡೆಯುತ್ತಿತ್ತು. ಅಂಗಡಿಯ ಮುಂದೆ ಓಡಾಡಿದರೂ, ಇಣುಕಿದರೂ ಅವಳ ದರ್ಶನವಿಲ್ಲ. ಅಂಗಡಿಗೆ ಹೋದರೂ ಮುನೆಕ್ಕನ ಕೈಗೆ ದುಡ್ಡು ಹಾಕಿ ಬರುವುದಾಯಿತಷ್ಟೆ. ಇಂದಲ್ಲ ನಾಳೆ ಸುನಂದಾ ಗಲ್ಲಾಪೆಟ್ಟಿಗೆ ಮುಂದೆ ಕೂರುತ್ತಾಳೆಂಬ ನಿರೀಕ್ಷೆಯಲ್ಲಿ ದಿನಕ್ಕೊಂದು ಸಲವಾದರೂ ಅಂಗಡಿಗೆ ಹೋಗಿ, ಧ್ವನಿ ಪರಿಚಯವಾಗಿರಲೆಂದು ಗಟ್ಟಿ ಧ್ವನಿಯಲ್ಲಿ ಕೇಳಿ, ಏನಾದರೊಂದನ್ನು ಕೊಳ್ಳುತ್ತಿದ್ದರು.
ತನ್ನ ಅಂಗಡಿಯತ್ತ ತಲೆ ತಿರುಗಿಸಿಯೂ ನೋಡದಿದ್ದ ಕೆಲವು ಪಡ್ಡೆ ಹೈಕಳೂ ಅಂಗಡಿಗೆ ಬರುವುದನ್ನು ಗಮನಿಸಿದ ಮುನೆಕ್ಕ ಮುಸಿಮುಸಿ ನಕ್ಕಳು. ಅವರಿಗೆ ಬೇಕಿದ್ದ ಸಿಗರೇಟು, ಜರದಾ ತನ್ನ ಅಂಡಿಯಲ್ಲಿದ್ದರೂ ಸಾಯಂಕಾಲ ಮಾಲೂರು ಪೇಟೆಗೆ ಹೋಗಿ, ಗುರುಪ್ರಸಾದ್ ಹೋಟಲಿನಲ್ಲಿ ಮಸಾಲೆ ತಿಂದು, ಗ್ರೀನ್ ಟೀಯನ್ನೋ ಲಿಂಬೂ ಟೀಯನ್ನೋ ಕುಡಿದು, ಹಾಗೆಯೆ ಬಾಲಾಜಿ ಟಾಕೀಸಿನಲ್ಲಿ ಫಸ್ಟ್ ಷೋ ಪಿಚ್ಚರ್ ನೋಡಿಕೊಂಡು ಬರುತ್ತಿದ್ದವರು ಅಂಗಡಿಗೆ ಬರಲು ಮೊದಲಿಟ್ಟವರಾಗಿ ವ್ಯಾಪಾರ ಕೊಂಚ ಹೆಚ್ಚಿತ್ತು. ಇದು ನಿನ್ನ ಗಮಲಿನಿಂದ ನೋಡು. ನಾಯಿಗಳು ಹೊಸಿಲು ದಾಟಬಾರದು, ಹುಷಾರು ಎಂದು ಸುನಂದಾಳಿಗೆ ಹೇಳುತ್ತಲೇ ಒಂದು ದಿನ ಸುನಂದಾಳನ್ನು ಗಲ್ಲದ ಮುಂದೆ ಕೂರಿಸಿಯೇ ಬಿಟ್ಟಳು.
ಸುನಂದಾ ಅಂಗಡಿಯ ಗಲ್ಲಾ ಮುಂದೆ ಕುಳಿತಳು. ಇದಕ್ಕಾಗಿ ಕಾದಿದ್ದವರಿಗೆ ಖುಷಿಯ ಬಾಗಿಲು ತೆರೆದುಕೊಂಡಿತು. ಮುನೆಕ್ಕನಿದ್ದಾಗ ಬೀಡಿ ಕಟ್ಟು ತೆಗೆದುಕೊಳ್ಳುತ್ತಿದ್ದ ಪಡ್ಡೆಗಳು, ಸುನಂದಾಳಿದ್ದಾಗ ಸಿಗರೇಟು ಪ್ಯಾಕು ಕೇಳುತ್ತಿದ್ದರು. ಆಗ ಮುನೆಕ್ಕನಿಗೆ ನಗುವಿನ ಮೇಲೆ ನಗು ಬಂದು ಕೂರುತ್ತಿತ್ತು. 'ಕಾಸುಗಳು ಬಿಚ್ಚಲಿ ನನ್ನ ಬಟ್ಟೆಗಳು' ಎಂದು ಮನಸ್ಸಿನಲ್ಲೇ ಬೈದುಕೊಳ್ಳುತ್ತಿದ್ದಳು.
ಗೆಜ್ಜೆ ಕಾಲ್ಗಳ ದನಿಯನು ತೋರುತಾ...
'ಸುನಂದಾ ಬೇಕಂತಲೇ ನನ್ನ ಕೈ ಮುಟ್ಟಿದಳು', 'ನನ್ನ ಕೈಯನ್ನೇ ಹಿಡಿದುಕೊಂಡಳು', 'ನನ್ನ ಕೈ ಬೆರಳನ್ನು ಗಿಲ್ಲಿದಳು' ಎಂಬಂತಹ ಮಾತುಗಳು ಗುಂಪುಗಳಲ್ಲಿ ಹರಿದಾಡಿ, ಇಂತಹ ಅವಕಾಶ ವಂಚಿತರ ಹೊಟ್ಟೆ ಉರಿಸುತ್ತಿದ್ದವು. 'ಸುನಂದಾ ನನಗೆ ಕಣ್ಣು ಹೊಡೆದಳು' ಎಂಬುವವರೆಗೆ ಮಾತಿನ ಧೂಳೆದ್ದಿತು. ಇಂತಹವರು ಯಾರೆಂದು ತಿಳಿದುಕೊಂಡಿದ್ದ ಮುನೆಕ್ಕ, ಅವರು ಅಂಗಡಿಗೆ ಬಂದಾಗ 'ಮಾತು ಶಾನೆ ಆದಂಗಿದೆ. ಬೀದೀಲಿ ಚಡ್ಡಿ ಬಿಚ್ಚಾಕೇನು ಹುಷಾರ್!' ಅನ್ನುತ್ತಿದ್ದಳು. ಆ ಮಾತು ಸಿಡಿಲಾಗುವ ಗುಡುಗೆಂದು ತಿಳಿದಿದ್ದರಿಂದ ಅವರು ಅಂಗಡಿಯ ದಾರಿ ಮರೆತರು.
ಮುನೆಕ್ಕನಿಗೀಗ ಅಂಗಡಿ ಬಾಗಿಲು ಹಾಕಿ ಸರಕು ತರಲು ಹೋಗಬೇಕಿರಲ್ಲಿಲ್ಲ. ಇದರಿಂದಾಗಿ ವ್ಯಾಪಾರವೂ ಹೆಚ್ಚಿತು. ಹಳೆಯ ಬಾಕೀದಾರರಿಗೆ, ಅಂಗಡಿಗೆ ಬಂದಾಗ ನೀನಿರಲಿಲ್ಲವೆಂದು ಹೇಳುವ ನೆಪವಿಲ್ಲದಾಗಿ ಸಾಕಷ್ಟು ಬಾಕಿಯೂ ವಸೂಲಿಯಾಗುತ್ತಿತ್ತು.