ಓದಲು ಬಾರದ ಮಾತಂಗಿಗೆ ಬರೆದ ಪ್ರೇಮ ಪತ್ರ ಸಿಕ್ಕಿದ್ದು ದನದ ಕೊಟ್ಟಿಗೆಯಲ್ಲಿ
ದುರದೃಷ್ಟ ಅನ್ನುವುದು ಶನಿಕಾಟದ ಒಂದು ಭಾಗವೇ ಇರಬೇಕು. ಅಲ್ಲವಾದರೆ ತನಗೆಂದುಕೊಂಡ ಹೆಣ್ಣುಗಳು ದೂರಾಗುವುದೆಂದರೇನು? 'ಏಳು ದಿನ ಶನಿ ಮಹಾತ್ಮನಿಗೆ ಕರಿ ಎಳ್ಳಿನ ದೀಪ ಹಚ್ಚಿ ಬಾ' ಎಂದು ಗೆಳೆಯರು ಪರಿಹಾರಕ್ಕೆ ಸಲಹೆ ಕೊಡುತ್ತಾರೆ. ಇದೆಲ್ಲ ನಂಬುವಂಥದ್ದಲ್ಲ. ಎಲ್ಲಿಯೋ ಯಾವಳೋ ಇದ್ದೇ ಇರುತ್ತಾಳೆ. ಅವಳನ್ನು ಹುಡುಕುವಾಗ, ಅವಳು ಸಿಗುವವರೆಗೆ ಹೀಗೇ ಎಂದುಕೊಂಡ.
ಅಮ್ಮನ ನಂಬಿಕೆಗಳನ್ನು ಗೌರವಿಸುವ ಮನಸ್ಸು. ಅದೂ ಒಂದನ್ನು ಮಾಡಿದರೆ ಹೋಗೋದೇನಿದೆ ಅಂದಿತು. ಒಳಗಾರೋ ನಕ್ಕರು. ಅದು ತಾನೆ ಎಂದು ತಿಳಿದು ಜೋರಾಗಿಯೇ ನಕ್ಕಾಗ ಅಂಗಳದಲ್ಲಿದ್ದ ಅಪ್ಪಯ್ಯ ಹುಬ್ಬೇರಿಸಿ ನೋಡಿದ. ಏನೋ ನೆನಪಾಗಿ ನಗು ಬಂತು ಎಂದು ದನಗಳಿಗೆ ಹುಲ್ಲು ಹಾಕಲು ಕೊಟ್ಟಿಗೆಗೆ ಹೋದ.
ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ
ಅಮ್ಮ ಮುಡಿಸಿಟ್ಟಿದ್ದ ಲಾಟೀನು ಕೊಟ್ಟಿಗೆಯ ಮೂಲೆ ಮೂಲೆಗೂ ಮಂದಬೆಳಕು ಹರಡಿತ್ತು. ಹುಲ್ಲನ್ನು ತಬ್ಬಿಗೆ ತೆಗೆದುಕೊಳ್ಳುವಾಗ ಮಡಚಿದ ಕಾಗದವೊಂದು ಕೆಳಗೆ ಬಿತ್ತು. ದನಗಳ ಮುಂದೆ ಹುಲ್ಲು ಚೆಲ್ಲಿ ಬಂದು ಕೈಗೆತ್ತಿಕೊಂಡು ಮಡಿಕೆ ಬಿಚ್ಚಿ, ಲಾಟೀನಿನ ಬೆಳಕಿಗೆ ಹಿಡಿದ. 'ಮುದ್ದು ಮುದ್ದು ಮಾತಂಗಿಗೆ ಮುತ್ತಿನೊಂದಿಗೆ, ಮದುವೆ ಗೊತ್ತಾದ ಮೇಲೆ ಬರೀತಿರೊ ನಾಲ್ಕನೇ ಕಾಗದ. ನಿನ್ನಿಂದ ಒಂದೇ ಒಂದು ಕಾಗದವಿಲ್ಲ. (ಅರೇ, ನಾನೊಂದು ಹುಚ್ಚು. ನಿನಗೆ ಓದಲು ಬಾರದಲ್ಲ. ಇನ್ನು ಬರೆಯುವುದಾದರೂ ಹೇಗೆ. ಆದರೂ ಬರೆಯದಿರಲಾಗದೆ ಬರೆದಿರುವೆ.)
'ಮಾತಂಗಿ, ನಾನೀಗ ಕಾಶ್ಮೀರದ ಗಡಿಯಲ್ಲಿದ್ದೇನೆ. ಚಳಿ ಎಷ್ಟೆಂದರೆ, ನೀನಿಲ್ಲಿ ಇದ್ದಿದ್ದರೆ ಗಟ್ಟಿಯಾಗಿ ಅಪ್ಪಿಕೊಂಡು ಕೌದಿ ಹೊದ್ದು ಮಲಗಿಬಿಡುತ್ತಿದೆ. ನೀನಿಲ್ಲವಾಗಿ ಸಪ್ಲೆ ಮಾಡಿದ ರಮ್ಮಿನಲ್ಲಿ ಒಂದು ಕ್ವಾರ್ಟರ್ ಏರಿಸಿ, ಮೈ ಬೆಚ್ಚಗೆ ಮಾಡಿಕೊಳ್ಳುತ್ತೇನೆ. ನಿನ್ನ ಕಪ್ಪು ತುಟಿ ಕೆಂಪೇರುವಂತೆ ಮುತ್ತು ಕೊಟ್ಟಂತೆ ಊಹಿಸಿಕೊಂಡಾಗ ಎಂಥದೋ ಹಿತದಲ್ಲಿ ನಿದ್ದೆ ಬರುತ್ತದೆ. ನಮ್ಮೂರ ಚೌಡೇಶ್ವರಿಯಾಣೆ ನಿನ್ನನ್ನು ಇಲ್ಲಿಗೆ ಕರೆತಂದ ಮೇಲೆ ಗುಂಡು ಹಾಕೊಲ್ಲ. ನಿನ್ನ ಕೈ ಬಳೆಯಾಣೆ ಇದು ಸತ್ಯ. ಏಕೆಂದರೆ ಚಳಿಗೆ ಕಾವು ಕೊಡಲು ನೀನಿರುವಿಯಲ್ಲ.
'ಮಾತಂಗಿ ಚೆನ್ನೆ, ಮದುವೆಗೆಂದು ಹತ್ತು ದಿನಗಳ ರಜೆ ಸ್ಯಾಂಕ್ಷನ್ ಮಾಡಿಸಿಕೊಂಡಿರುವೆ. ಇರಲು ಮನೆ ಸಿಕ್ಕಿದೆ. ನಿನಗೆ, ಅತ್ತೆಗೆ ಮಿಲಿಟರಿ ಕ್ಯಾಂಟೀನಲ್ಲಿ ಕಾಶ್ಮೀರಿ ಉಣ್ಣೆ ಶಾಲು ತೆಗೆದುಕೊಂಡಿರುವೆ. ಹೆಚ್ಚಿಗೆ ತರಲು ನನಗಿರುವುದು ನೀವಿಬ್ಬರೇ ಅಲ್ಲವೆ. ನೀಲಿ ಶಾಲು ನಿನಗೆ. ಅದು ನಿನಗೆ ಚೆನ್ನಾಗಿ ಮ್ಯಾಚಾಗುತ್ತೆ. ಅದರ ಅಂಚಿನಲ್ಲಿ ಗುಲಾಬಿ ಹೂಗಳಿವೆ. ಅವು ನಿನ್ನ ಮುಖದಂತೆ ಅರಳಿವೆ. ಅದನ್ನು ನೀನು ಹೊದ್ದಾಗ ಕಣ್ತುಂಬ ನೋಡಿ ತಬ್ಬಿಕೊಂಡಂತೆ ನಿನ್ನೆ ರಾತ್ರಿ ಕನಸು ಕಂಡೆ.
'ಬಂಗಾರಪೇಟೆವರೆಗೆ ರೈಲು. ಅಲ್ಲಿಂದ ಬಸ್ಸು. ಬುರ್ರನೆ ಬಂದುಬಿಡುತ್ತೆ ಮಾತಂಗಿ. ಯೂನಿಫಾರಂನಲ್ಲಿ ಬಂದು ನನ್ನ ಬೇಗಮ್ಮಳಿಗೆ ಸೆಲ್ಯೂಟ್ ಹೊಡೆಯುವೆ. ಮಾತಂಗಿ ಚಿನ್ನ, 'ಆಹಾ ನನ್ ಮದುವೆಯಂತೆ, ಓಹೋ ನನ್ ಮದುವೆಯಂತೆ,... '
ನರಸಿಂಗರಾಯ ಮನದುಂಬಿ ನಕ್ಕ. ಕೊನೆಯಲ್ಲೊಂದು ವಿಷಾದದ ಅಲೆ. 'ಏನೋ ನಿಂದು ಸಾಯಂಕಾಲದಿಂದ ಹುಚ್ಚು ನಗು?' ಅನ್ನುತ್ತಲೇ ಹಾಲು ಕರೆಯಲು ಅಮ್ಮ ಕೊಟ್ಟಿಗೆಗೆ ಬಂದಳು. ಕಾಗದ ಅವಳ ಕೈಗೆ ಕೊಟ್ಟ. ಓದಿಕೊಂಡು ಅವಳೂ ನಕ್ಕಳು. ಪಾಪ, ಹುಚ್ಚುಮುಂಡೇದು. ಓದೋಕೆ ಬರೊಲ್ಲ. ಇಲ್ಲಿ ಬೀಳಿಸಿಕೊಂಡಿದ್ದಾಳೆ.
ಅವಳಿಗೆ ಓದಲು ಬರದು ಅಂತ ತಿಳಿದೂ ಆ ಹುಚ್ಚು ಮುಂಡೇದು ಬರೆದಿದೆ. ಹೇಗೂ ಮದುವೆಗೆ ಹೋಗ್ತೀವಲ್ಲ, ಗಂಡಿಗೆ ಕೊಡೊ ಪಂಚೇಲಿಟ್ಟು ಅವನಿಗೇ ಕೊಡೋಣ. ಪ್ರಸ್ತದ ರಾತ್ರಿ ಅವನೇ ಓದಿ ಅವಳಿಗೆ ಹೇಳಲಿ ಎಂದು ಅಮ್ಮ ತನ್ನ ಸಹಜ ರಸಿಕ ನಗೆ ನಕ್ಕಳು.