ನನ್ನೀ ವಿರಹ ವೇದನೆಗೆ ಹಿತದ ಮದ್ದು ನೀನು, ವೈದ್ಯ ನೀನು...
ಪ್ರಿಯ ವಿರಹಿ ವಸಂತ,
ಅಲ್ಲಿ ನೀನು ಹೇಗೇಯೋ ಹಾಗೆಯೇ ಇಲ್ಲಿ ನಾನಿರುವೆ.
ಬರೆದಾದ ಮೇಲೆ 'ಪ್ರಿಯ ವಿರಹಿ ವಸಂತ' ಎಂದದ್ದು ಸರಿಯೇ ಎಂಬ ಪ್ರಶ್ನೆ ಹುಟ್ಟಿತು. ಬರೆಯುವುದನ್ನು ನಿಲ್ಲಿಸಿ ಯೋಚಿಸಿದೆ. ನೀನಂತೂ ಪ್ರಿಯನೇ. ಈಗ ವಿರಹಿಯೂ ಆಗಿರುವೆ. ಆದುದರಿಂದ ಸರಿ ಎನಿಸಿತು.
ವಿರಹ ಎಷ್ಟು ತರಹವೋ ಹೇಳಲಾರೆ. ಆದರೆ ಅದು ನಿನ್ನ ನೆನಪಿನ ರೂಪದಲ್ಲಿ ನನ್ನನ್ನು ಕಾಡುತ್ತಿದೆ, ಬೇಯಿಸುತ್ತಿದೆ, ಕುದಿಸುತ್ತಿದೆ. ತವರಿನ ಸುಖವೇನೋ ನಾನು ಮುಳುಗುವಷ್ಟಿದೆ. ಅದು ನನ್ನ ಕಣ್ಣೀರನ್ನು ತಡೆಯದಾಗಿದೆ. ನಿನ್ನ ನೆನಪಿನೊಡನೆ ಸೂರ್ಯೋದಯವಾಗುತ್ತಿದೆ. ನಿನ್ನದೇ ನೆನಪಿನಲ್ಲಿ ರಾತ್ರಿಯೂ ಹಗಲಿನಂತಾಗಿದೆ. ನಿದ್ದೆ ನಿನ್ನ ನೆನಪನ್ನು ಕದಿಯುವುದೆಂದು ಅಂಜಿಕೆಯಲ್ಲಿ ಎಚ್ಚರಗೊಳ್ಳುತ್ತಿರುತ್ತೇನೆ.
ನೆನಪುಗಳು ವಿರಹ ಅನ್ನುವುದು ಜ್ವಾಲೆಯ ಲೇಖನಿಯಿಂದ ಬರೆದ ಕಾವ್ಯ. ನೂರು ಮರಗಳ ಎಲೆಗಳೆಲ್ಲಾ ಒಟ್ಟಿಗೆ ಗಾಳಿ ಬೀಸಿದರೂ ಅದು ಆರುವುದಿಲ್ಲ. ಆ ಜ್ವಾಲೆ ಆರುವುದು ನಮ್ಮ ಮಿಲನದಲ್ಲಿ. ನನ್ನೀ ವಿರಹ ವೇದನೆಗೆ ಹಿತದ ಮದ್ದು ನೀನು. ವೈದ್ಯ ನೀನು. ಹಿತ ಕೊಡುವ ತಂಗಾಳಿ ನೀನು.
ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು
ಅಗಲಿ ಇರುವ ದಿನಕ್ಕೊಂದು ಮುತ್ತು ಎಂದು ನೀನು ಕೊಟ್ಟಿದ್ದು ಎಷ್ಟು ಮುತ್ತೆಂದು ಈಗ ಎಣಿಸುವಾಗ ಲೆಕ್ಕ ತಪ್ಪುತ್ತಿದೆ. ಎಣಿಸುವ ಪ್ರತಿ ದಿನವೂ ಹೀಗೆಯೇ ಆಗುತ್ತಿದೆ. ನೀನಾದರೂ ಹೇಳಬಲ್ಲೆಯ? ನಾನು ಕೊಸರಿ ಕೊಸರಿ ಕೊಟ್ಟಿದ್ದು ಮೂರೇ ಮೂರು ಮುತ್ತು. ಆಗ ನೀನು ಇದೇ ಮುನ್ನೂರಿನಷ್ಟು ಎಂದೆ. ನಾನಾಗ ಎಷ್ಟು ಸಂಭ್ರಮಿಸಿದೆನೆಂದು ಮಾತುಗಳಲ್ಲಿ ಹೇಳಲಾರೆ.
ವಸಂತ, ಮಲ್ಲಿಗೆಯ ಮಧ್ಯೆ ಮಧ್ಯೆ ದವನ, ಮರುಗಗಳ ಕೂಡಿಸಿ ಮಾಲೆ ಕಟ್ಟುತ್ತಿದ್ದಳು ಅಮ್ಮ. ನೋಡುತ್ತಿದ್ದ ನನಗೆ ನೀನು ದವನದ ತೋಟದ ಬಗ್ಗೆ ಬರೆದ ಪತ್ರ ನೆನಪಾಗಿ, ಓದಬೇಕೆಂಬ ಆಸೆ ಹುಟ್ಟಿತು. ರೂಮಿಗೆ ಹೋಗಲು ಮೇಲೆದ್ದೆ. ಅಮ್ಮ ಹೂ ಮುಡಿದು ಹೋಗೆಂದು ಕೈ ಹಿಡಿದು ಜಗ್ಗಿದಳು. ನಿರಾಸೆಯಿಂದ ಕಣ್ಣಲ್ಲಿ ನೀರಾಡಿತು. ಅಳುವಂಥ ಮಾತು ನಾನೇನಾಡಿದೆನೆ ಅಮ್ಮ ಎಂದು ತಾಯಿ ನೊಂದಳು.
ಯಾಕೋ ಕಾಣೆ, ನಿನ್ನ ನೆನಪಾದರೆ ಸಾಕು ಅಳು ಬಂದುಬಿಡುತ್ತದೆ. ಅಮ್ಮನಿಗೆ ಅರ್ಥವಾದಂತಿತ್ತು. ಹೋಗು. ಏನನಿಸಿತೋ ಅದನ್ನು ಮಾಡು ಹೋಗೆಂದಳು. ರೂಮಿಗೆ ಓಡಿಬಿಟ್ಟೆ.
ಮದುವೆಗಿನ್ನು ಸಮಯವಿದೆಯೆಂದು ಅಪ್ಪ-ಅಮ್ಮನೂ ರೇಗಿಸುವರು ವಸಂತ
ರಾತ್ರಿ ಅಮ್ಮ ಬಂದು ಪಕ್ಕ ಮಲಗಿದಳು. ಹುಚ್ಚು ಹುಡುಗಿ. ಹೀಗಾಗುವುದು ಸಹಜ. ನಾನು ಅನುಭವಿಸಿದ್ದೇ ನಿನ್ನದೂ ಸಹ. ಇನ್ನೆಷ್ಟು ದಿನ? ವಾರ -ಹತ್ತು ದಿನ. ವಸಂತನೇ ವಾಸಿ. ತಾಳ್ಮೆಯಿಂದ ಇದ್ದಾನೆ. ಆಷಾಢದ ಒಂದು ದಿನ ಸಂಜೆ ಏಳರ ಹೊತ್ತಿಗೆ ನಿಮ್ಮಪ್ಪ ಕಳ್ಳನಂತೆ ಬಂದು ನಮ್ಮ ಹಿತ್ತಲಿನಲ್ಲಿ ಪ್ರತ್ಯಕ್ಷವಾಗಿದ್ದರು. ಇದನ್ನು ಕಂಡ ನಮ್ಮ ಅಮ್ಮ, ನಮ್ಮಪ್ಪನಿಗೆ ತಿಳಿಸಿ, ಮನೆಯೊಳಕ್ಕೆ ಕರೆದುಕೊಂಡರು. ನನ್ನೊಡನೆ ರೂಮಿನಲ್ಲಿದ್ದು, ಊಟೋಪಾಚಾರವಾದ ನಂತರ ಕಡೆಯ ಬಸ್ಸಿಗೆ ಹೊರಟು ಹೋದರು.
ಈ ವಿಷಯವನ್ನು ನಾವೆಲ್ಲ ಗುಟ್ಟು ಮಾಡಿದೆವು. ಅಮ್ಮನ ಮುಸಿಮುಸಿ ನಗೆ, ಅಪ್ಪನ ಅದೊಂದು ರೀತಿಯ ನೋಟ, ಅಣ್ಣ ತಲೆಯಾಡಿಸಿದ್ದು, ಅತ್ತಿಗೆಯ ತುಂಟ ಮಾತುಗಳಿಂದ ನಾನು ನಾಚಿದ್ದಲ್ಲದೆ ಅಳುವೂ ಬಂದಿತ್ತು. ಆ ಮೇಲೆ ಮನೆ ಮಂದಿ ಸಮಾಧಾನ ಮಾಡಿದರು. ಅದರಲ್ಲಿಯೂ ತುಂಟತನ ಇಲ್ಲದಿರಲಿಲ್ಲ. ಆಷಾಢವೆಂದರೆ ಹೊಸ ದಂಪತಿಗೆ ಹೀಗೆಯೇ ಎಂದಾಗ ನಗು ಬಂದು, ನನ್ನ ವಸಂತ ಹೀಗೆ ಮಾಡದಿರಲಿ ದೇವರೇ ಎಂದು ಪ್ರಾರ್ಥಿಸಿದೆ. ಆದರೆ ನೀನೂ ಹೀಗೆ ಮಾಡಲೆಂದು ಮನಸ್ಸು ಹಂಬಲಿಸಿತು, ವಸಂತ.